My Blog List

Friday, April 30, 2010

ಇಂದಿನ ಇತಿಹಾಸ History Today ಏಪ್ರಿಲ್ 30

ಇಂದಿನ ಇತಿಹಾಸ

ಏಪ್ರಿಲ್ 30

ಪತ್ನಿಯ ಕೊಲೆ ಆಪಾದನೆ ಮೇರೆಗೆ ಗಲ್ಲು ಶಿಕ್ಷೆಗೆ ಗುರಿಯಾದ ಸ್ವಾಮಿ ಶ್ರದ್ಧಾನಂದ ಆಲಿಯಾಸ್ ಮುರಳಿ ಮನೋಹರ ಮಿಶ್ರಾನ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತು. ಸ್ವಾಮಿ ಶ್ರದ್ಧಾನಂದನಿಗೆ 2006ರಲ್ಲಿ ಕರ್ನಾಟಕ ಹೈಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

2009: ಅಕ್ರಮವಾಗಿ 1.50 ಕೋಟಿ ರೂಪಾಯಿಯನ್ನು ಕೊಲ್ಲಿ ರಾಷ್ಟ್ರ ಶಾರ್ಜಾಗೆ ಸಾಗಿಸಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಆದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದರು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಇಂಬಿಯಾಜ್ ಮತ್ತು ಖಾಜಾ ಮೊಯಿನ್ದುದೀನ್ ಬಂಧಿತರು. ಆರೋಪಿಗಳಿಬ್ಬರು ಒಯ್ಯುತ್ತಿದ್ದ ಬ್ಯಾಗನ್ನು ತಪಾಸಣೆಗೆ ಒಳಪಡಿಸಿದಾಗ ಹಣ ಪತ್ತೆಯಾಯಿತು. ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದ ಹಣ ಸಾಗಣೆಯನ್ನು ಡಿಆರ್‌ಐ ಅಧಿಕಾರಿಗಳು ಪತ್ತೆ ಮಾಡಿದರು.

2009: ಇಂಧನ ಕೊರತೆಯಿಂದ ಬಳಲುತ್ತಿರುವ ರಾಜ್ಯಕ್ಕೆ ಮಹಾರಾಷ್ಟ್ರದ 800 ಕಿ.ಮೀಗಳಷ್ಟು ದೂರದ ದಾಬೋಲ್‌ನಿಂದ ಕೊಳವೆ ಮಾರ್ಗದ ಮೂಲಕ ನೈಸರ್ಗಿಕ ಅನಿಲವನ್ನು ಪೂರೈಕೆ ಮಾಡುವ ಮಹತ್ವದ ಯೋಜನೆಗೆ ಅಂಕಿತ ಬಿದ್ದಿತು. ಈ ಮಹತ್ವದ ಒಪ್ಪಂದಕ್ಕೆ ಭಾರತ ಅನಿಲ ಪ್ರಾಧಿಕಾರದ (ಜಿಎಐಎಲ್) ಮಾರುಕಟ್ಟೆ ನಿರ್ದೇಶಕ ಬಿ.ಸಿ.ತ್ರಿಪಾಠಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಧಾಕರ್‌ರಾವ್ ಸಹಿ ಹಾಕಿದರು. ಪರಿಸರ ಹಾಗೂ ಆರ್ಥಿಕ ಕಾರಣಗಳಿಂದಾಗಿ ನೈಸರ್ಗಿಕ ಅನಿಲವನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಪ್ರಾಧಿಕಾರದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಯು.ಡಿ.ಚೌಬೇ, ದಾಬೋಲ್‌ನಲ್ಲಿ ಇಂಧನ ಘಟಕ ಕಾರ್ಯಾರಂಭ ಮಾಡಿದ ಬಳಿಕ ವರ್ಷಕ್ಕೆ ಕನಿಷ್ಠ 2.9 ದಶಲಕ್ಷ ಟನ್‌ಗಳಷ್ಟು ಅನಿಲ ರಾಜ್ಯಕ್ಕೆ ಲಭ್ಯವಾಗುವುದು ಎಂದರು.

2009: ಭಾರತೀಯ ವಾಯು ಪಡೆಯ ಅತ್ಯಾಧುನಿಕ ಯುದ್ಧವಿಮಾನ ಸುಖೋಯ್-30 ಮೊಟ್ಟಮೊದಲ ಬಾರಿಗೆ ರಾಜಸ್ಥಾನದ ಜೈಸಲ್ಮೇರ್ ಗೆ ಸಮೀಪ ಅಪಘಾತಕ್ಕೆ ಈಡಾಗಿ ಇಬ್ಬರು ಪೈಲಟ್‌ಗಳ ಪೈಕಿ ಒಬ್ಬರು ಮೃತರಾದರು. ಪುಣೆ ಘಟಕಕ್ಕೆ ಸೇರಿದ ಸುಖೋಯ್ ವಿಮಾನ ಇಲ್ಲಿಗೆ ಸಮೀಪದಲ್ಲಿರುವ ರಾಜಮಾತಾಯಿ ಗ್ರಾಮದ ಬಳಿ ಬೆಳಿಗ್ಗೆ 10.20ಕ್ಕೆ ಅಭ್ಯಾಸ ನಡೆಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತು.

2009: ಎಲ್‌ಟಿಟಿಇ ನಾಯಕರನ್ನು, ಅದರಲ್ಲೂ ಮುಖ್ಯವಾಗಿ ಅದರ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಅವರನ್ನು ಜೀವಂತ ಸೆರೆ ಹಿಡಿಯುವ ತನಕ ಅಥವಾ ಆತನನ್ನು ಕೊಲ್ಲುವವರೆಗೂ ತಮಿಳು ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ನಿಲ್ಲದು ಎಂದು ಶ್ರೀಲಂಕಾ ಸ್ಪಷ್ಟಪಡಿಸಿತು. ತಮಿಳು ಉಗ್ರರು ಸಂಪೂರ್ಣ ಸೋಲೊಪ್ಪಿಕೊಳ್ಳುವ ಹಂತದಲ್ಲಿರುವ ಈ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾಗಿ ಕದನ ವಿರಾಮಕ್ಕೆ ಆಗ್ರಹಿಸಿದ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಮಿಲಿಬಾಂಡ್ ಮತ್ತು ಇತರ ನಿಯೋಗ ಸದಸ್ಯರಿಗೆ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆಯವರ ಸೋದರ ರಕ್ಷಣಾ ಕಾರ್ಯದರ್ಶಿ ಗೊಟಭಯಾ ರಾಜಪಕ್ಸೆ ಈ ಸ್ಪಷ್ಟನೆ ನೀಡಿದರು.

2009: ವಿಶ್ವದ 9 ರಾಷ್ಟ್ರಗಳ 148 ಮಂದಿಯಲ್ಲಿ ಹಂದಿ ಜ್ವರ ದೃಢಪಟ್ಟಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತು. ಅಮೆರಿಕವೊಂದರಲ್ಲೇ 91 ಮಂದಿಯಲ್ಲಿ ರೋಗ ಕಾಣಿಸಿಕೊಂಡು, ಒಬ್ಬ ಮೃತನಾಗಿದ್ದಾನೆ. ಮೆಕ್ಸಿಕೊದಲ್ಲಿ 26 ಮಂದಿ ರೋಗಪೀಡಿತರಾಗಿ, 7 ಮಂದಿ ಅಸುನೀಗಿದ್ದಾರೆ. ಆಸ್ಟ್ರಿಯದಲ್ಲಿ ಒಬ್ಬರು, ಕೆನಡಾದಲ್ಲಿ 13 ಮಂದಿ, ಜರ್ಮನಿ, ನ್ಯೂಜಿಲೆಂಡ್‌ನಲ್ಲಿ ತಲಾ ಮೂವರು, ಇಸ್ರೇಲ್‌ನಲ್ಲಿ ಇಬ್ಬರು, ಸ್ಪೇನ್‌ನಲ್ಲಿ ನಾಲ್ವರು ಹಾಗೂ ಬ್ರಿಟನ್‌ನ ಐದು ಮಂದಿಯಲ್ಲಿ ಹಂದಿ ಜ್ವರ ದೃಢಪಟ್ಟಿದೆ ಎಂದು ಸಂಸ್ಥೆ ಹೇಳಿತು. ಆದರೆ ಅನಧಿಕೃತ ವರದಿಗಳ ಪ್ರಕಾರ ಒಟ್ಟು 171 ಜನರು ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ್ದಾರೆ ಎಂದು ಹೇಳಲಾಯಿತು. ಇವರಲ್ಲಿ ಅಮೆರಿಕದ ಒಬ್ಬ ಬಿಟ್ಟರೆ ಉಳಿದವರೆಲ್ಲರೂ ಮೆಕ್ಸಿಕೊದವರು.

2009: ಪಾಕಿಸ್ಥಾನದ ಬಂದರು ನಗರ ಕರಾಚಿಯಲ್ಲಿ ಜನಾಂಗೀಯ ಘರ್ಷಣೆಯಲ್ಲಿ ಕನಿಷ್ಠ 27 ಜನರು ಮೃತರಾಗಿ 36ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಉರ್ದು ಮಾತನಾಡುವ ಮುತ್ತಾಹಿದಾ ಖ್ವಾಮಿ ಚಳವಳಿ (ಎಂಕ್ಯೂಎಂ) ಕಾರ್ಯಕರ್ತರು ಮತ್ತು ಅಲ್ಪಸಂ ಖ್ಯಾತ ಪಸ್ತೂನರ ನಡುವೆ ಜನಾಂಗೀಯ ಸಂಘರ್ಷ ಉಂಟಾಯಿತು. ಖ್ವಾಜಾ ಅಜ್ಮೇರ್ ನಗರದ ಬಳಿ ಬಂದೂಕುಧಾರಿಗಳು ಇಬ್ಬರ ಎಂಕ್ಯೂಎಂ ಬೆಂಬಲಿಗರನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಂತರ ಕರಾಚಿ ನಗರದಾದ್ಯಂತ ಹಿಂಸಾಚಾರ ಹಬ್ಬಿತು.

2009: ಭಾರತದ ರಕ್ಷಣಾ ನೆಲೆಗಳ ಬಗ್ಗೆ ಮಹತ್ವದ ಮಾಹಿತಿಗಳನ್ನು ತನ್ನ ರಾಷ್ಟ್ರಕ್ಕೆ ರವಾನಿಸುತ್ತಿದ್ದ ಪಾಕಿಸ್ಥಾನದ ವ್ಯಕ್ತಿಯೊಬ್ಬನಿಗೆ ಹೈದರಾಬಾದಿನ ನ್ಯಾಯಾಲಯ 14 ವರ್ಷಗಳ ಕಠಿಣ ಸಜೆ ವಿಧಿಸಿತು. ಮಲಿಕ್ ಅರ್ಷದ್ ಮಹಮೂದ್ (45) ಶಿಕ್ಷೆಗೆ ಒಳಗಾದವನು. ಅಧಿಕೃತ ದಾಖಲೆಗಳಿಲ್ಲದೆ ರಾಷ್ಟ್ರಕ್ಕೆ ನುಸುಳಿದ್ದ ಈತ ಮುಖ್ಯವಾಗಿ ನಗರದ ಸುತ್ತಮುತ್ತ ಇರುವ ರಕ್ಷಣಾ ನೆಲೆಗಳ ಕುರಿತು ಪಾಕಿಸ್ಥಾನಕ್ಕೆ ಇ-ಮೇಲ್ ಮೂಲಕ ಮಾಹಿತಿ ರವಾನಿಸುತ್ತಿದ್ದ. 2004ರ ಮಾರ್ಚ್ 8ರಂದು ಈತನನ್ನು ಬಂಧಿಸಿದ್ದ ಇಲ್ಲಿನ ಪೊಲೀಸರು ಅಪರಾಧದ ಸಂಚು ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿದ್ದರು. ವಿಚಾರಣೆ ನಡೆಸಿದ ಮೊದಲನೇ ಹೆಚ್ಚುವರಿ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶರು ತೀರ್ಪು ನೀಡಿದರು. ಮಲಿಕ್‌ಗೆ ಹಣಕಾಸು ಒದಗಿಸಲು ನೆರವಾದ ಆರೋಪ ಹೊತ್ತಿದ್ದ ನಗರದ ಯುವಕ ಮಿಲಿಂದ್ ದತ್ತಾತ್ರೇಯ ಎಂಬಾತನನ್ನು ನ್ಯಾಯಾಲಯ ಇದೇ ಸಂದರ್ಭದಲ್ಲಿ ಖುಲಾಸೆಗೊಳಿಸಿತು.

2008: ಕಳಸಾ-ಬಂಡೂರಿ ನಾಲಾ ಯೋಜನೆಯ ಕಾಮಗಾರಿ ಸ್ಥಗಿತಗೊಳಿಸಲು ಪಣತೊಟ್ಟ ಗೋವಾ ಸರ್ಕಾರದ ಮತ್ತೊಂದು ಪ್ರಯತ್ನ ವಿಫಲವಾಯಿತು. ವಿವಾದ ಇತ್ಯರ್ಥವಾಗುವವರೆಗೆ ನೀರು ಬಳಸುವುದಿಲ್ಲ ಎಂಬುದಾಗಿ ಕರ್ನಾಟಕ ಮಾಡಿದ ಪ್ರಮಾಣವನ್ನು ಒಪ್ಪಿಕೊಂಡ ಸುಪ್ರೀಂಕೋರ್ಟ್ ಕಾಮಗಾರಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು. `ಸದ್ಯಕ್ಕೆ ನೀರನ್ನು ಬಳಸುವ ಉದ್ದೇಶ ಕರ್ನಾಟಕಕ್ಕೆ ಇಲ್ಲದೇ ಇರುವ ಕಾರಣ ಕಾಮಗಾರಿಗೆ ತಡೆಯಾಜ್ಞೆ ನೀಡುವುದು ಸರಿಯಾಗದು. ಆದರೆ ಯೋಜನೆಯ ಅನುಷ್ಠಾನಕ್ಕೆ ಪೂರ್ವದಲ್ಲಿ ಕೇಂದ್ರ ಅರಣ್ಯ ಇಲಾಖೆಯ ಅನುಮತಿಯನ್ನು ಕರ್ನಾಟಕ ಪಡೆಯಬೇಕು' ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿಗಳಾದ ಆರ್.ವಿ. ರವೀಂದ್ರನ್ ಮತ್ತು ಜೆ.ಬಿ.ಪಾಂಚಾಲ್ ಅವರನ್ನು ಒಳಗೊಂಡ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿತು.

2008: ಇಂಗ್ಲೆಂಡಿನಲ್ಲಿ ವಿಶೇಷವಾಗಿ ಆರೋಗ್ಯ ಇಲಾಖೆಯಲ್ಲಿ ಭಾರತೀಯ ವೈದ್ಯರ ನೇಮಕಾತಿಗೆ ಸಂಬಂಧಿಸಿದಂತೆ ನಡೆದ ಕಾನೂನು ಸಮರದಲ್ಲಿ 'ಹೌಸ್ ಆಫ್ ಲಾರ್ಡ್ಸ್' ಭಾರತೀಯರ ಪರ ಧ್ವನಿ ಎತ್ತಿತು. ಇಂಗ್ಲೆಂಡಿನಲ್ಲಿ ವೈದ್ಯರನ್ನು ನೇಮಕ ಮಾಡಿಕೊಳ್ಳುವಾಗ ಮೊದಲ ಪ್ರಾಶಸ್ತ್ಯವನ್ನು ಯುರೋಪ್ ಮಂದಿಗೇ ನೀಡಬೇಕು. ಒಂದು ವೇಳೆ ಅಲ್ಲಿ ಅರ್ಹರು ಸಿಗದಿದ್ದರೆ ಮಾತ್ರ್ರ ಏಷ್ಯಾ ಮಂದಿ ಅಥವಾ ಭಾರತೀಯರಿಗೆ ಅವಕಾಶ ನೀಡಬೇಕೆಂದು ಇಂಗ್ಲೆಂಡಿನ ಆರೋಗ್ಯ ಇಲಾಖೆಯು 2006ರ ಏಪ್ರಿಲಿನಲ್ಲಿ ಸುತ್ತೋಲೆ ಕಳುಹಿಸಿತ್ತು. ಆಗ ಭಾರತೀಯ ಮೂಲದ ವೈದ್ಯರ ಬ್ರಿಟನ್ ಸಂಸ್ಥೆಯು ಈ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಲೇರಿತ್ತು. ಕೊನೆಗೆ ಇದು ಇಂಗ್ಲೆಂಡಿನ ಪ್ರತಿಷ್ಠಿತ ಶಾಸನ ಸಭೆಯಲ್ಲಿ ಚರ್ಚೆಗೆ ಬಂದು, ಆರೋಗ್ಯ ಇಲಾಖೆಯ ನಿರ್ಧಾರ ತಪ್ಪು ಎಂಬ ತೀರ್ಮಾನ ಹೊರಬಂದಿತು.

2008: ಶಂಕಿತ ಟಿಬೆಟ್ ಸ್ವಾತಂತ್ರ್ಯ ಹೋರಾಟಗಾರನೊಬ್ಬನನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಚೀನಾದ ವಾಯುವ್ಯ ಪ್ರದೇಶದಲ್ಲಿ ನಡೆಯಿತು. ಟಿಬೆಟ್ ಸ್ವಾತಂತ್ರ್ಯ ಹೋರಾಟಗಾರರೊಬ್ಬರನ್ನು ಹತ್ಯೆ ಮಾಡಿರುವುದನ್ನು ಇದೇ ಮೊದಲ ಬಾರಿ ಸರ್ಕಾರ ಅಧಿಕೃತವಾಗಿ ಪ್ರಕಟಿಸಿತು.

2008: ಮಲೇರಿಯಾ ರೋಗ ಪತ್ತೆಗೆ ಇನ್ನು ಗಂಟೆಗಟ್ಟಲೆ ಕಾಯಬೇಕಿಲ್ಲ. ಕೇವಲ ಒಂದು ನಿಮಿಷದೊಳಗೇ ಮಲೇರಿಯಾ ಪತ್ತೆ ಮಾಡಬಲ್ಲ ತಂತ್ರಜ್ಞಾನವೊಂದನ್ನು ಸಂಶೋಧಿಸಿರುವುದಾಗಿ ಅಮೆರಿಕದ ವಿಜ್ಞಾನಿಗಳು ಪ್ರಕಟಿಸಿದರು. ಈ ಹೊಸ ತಂತ್ರಜ್ಞಾನವನ್ನು ಬಳಸಿ ಮಾಡಲಾದ ಪರೀಕ್ಷೆಗಳು ಈ ಹಿಂದಿನ `ರೋಗ ಪತ್ತೆ' ಪರೀಕ್ಷೆಯಷ್ಟೇ ಸಮರ್ಥ ಫಲಿತಾಂಶ ನೀಡಿವೆ ಎಂದು `ಬಯೊಫಿಸಿಕಲ್ ಜರ್ನಲ್' ಪ್ರಕಟಿಸಿತು. ಎಕ್ಸ್ಟರ್ ವಿವಿ ಮತ್ತು ಕೊವೆನ್ಟ್ರಿ ವಿವಿಯ ಸಂಶೋಧಕರನ್ನೊಳಗೊಂಡ ಅಂತಾರಾಷ್ಟ್ರೀಯ ತಂಡ ಸಂಶೋಧಿಸಿದ ಈ ತಂತ್ರಜ್ಞಾನದಲ್ಲಿ ರಕ್ತದಲ್ಲಿ ಇರುವ ಮಲೇರಿಯಾದ ಪರಾವಲಂಬಿ ಜೀವಿ `ಹೆಮೊಜೊಯಿನ್' ಪತ್ತೆ ಮಾಡಲು ಮ್ಯಾಗ್ನೆಟೊ -ಆಪ್ಟಿಕ್ ತಂತ್ರಜ್ಞಾನವನ್ನು ಬಳಸಲಾಯಿತು. ಈ ವಿಧಾನದಲ್ಲಿ ಹೆಮೊಜಾಯಿನ್ಗಳು ಬೆಳಕಿನ ಕಿರಣಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಪಡೆದಿವೆ. ಈ ಅಂಶದಿಂದಾಗಿ ರಕ್ತದಲ್ಲಿರುವ ಮಲೇರಿಯಾದ ಪರಾವಲಂಬಿ ಜೀವಿ ಹೆಮಾಜಾಯಿನನ್ನು ಸುಲಭವಾಗಿ ಪತ್ತೆ ಮಾಡಬಹುದು ಎಂದು ಸಂಶೋಧನೆ ತಿಳಿಸಿತು. ಇದಿಷ್ಟೇ ಅಲ್ಲದೆ ಮಲೇರಿಯಾವನ್ನು ಕೇವಲ ಒಂದು ನಿಮಿಷದೊಳಗೆ ಪತ್ತೆ ಮಾಡುವ ಸಾಧನವೊಂದನ್ನೂ ಕೂಡಾ ಈ ತಂಡ ಕಂಡುಹಿಡಿದಿದೆ. ಈ ಹೊಸ ಸಲಕರಣೆ ರಕ್ತದಲ್ಲಿರುವ ಮಲೇರಿಯಾದ ಪರೋಪಜೀವಿಯನ್ನು ಪತ್ತೆ ಮಾಡಲು ಉಪಯೋಗಿಸುವ ಆರ್ ಡಿ ಟಿ ಎನ್ನುವ ರಾಸಾಯನಿಕ ವಾಹಕಕ್ಕಿಂತ ವಿಭಿನ್ನವಾಗಿ ಕೆಲಸ ಮಾಡುವುದು.

2008: ಪತ್ನಿಯ ಕೊಲೆ ಆಪಾದನೆ ಮೇರೆಗೆ ಗಲ್ಲು ಶಿಕ್ಷೆಗೆ ಗುರಿಯಾದ ಸ್ವಾಮಿ ಶ್ರದ್ಧಾನಂದ ಆಲಿಯಾಸ್ ಮುರಳಿ ಮನೋಹರ ಮಿಶ್ರಾನ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತು. ನ್ಯಾಯಮೂರ್ತಿ ಬಿ.ಎನ್. ಅಗರ ವಾಲ್, ಜಿ.ಎಸ್. ಸಿಂಘ್ವಿ ಹಾಗೂ ಆಫ್ತಾಬ್ ಅವರನ್ನೊಳಗೊಂಡ ಪೀಠವು ಪ್ರಕರಣಕ್ಕೆ ಕುರಿತಂತೆ ಉಭಯತ್ರರ ವಾದ ವಿವಾದಗಳನ್ನು ಆಲಿಸಿತು. ಸ್ವಾಮಿ ಶ್ರದ್ಧಾನಂದನಿಗೆ 2006ರಲ್ಲಿ ಕರ್ನಾಟಕ ಹೈಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. 1991ರಲ್ಲಿ ಸ್ವಾಮಿ ಶ್ರದ್ಧಾನಂದ ತನ್ನ ಪತ್ನಿ ಶಕೀರಾಳನ್ನು ಕೊಲೆ ಮಾಡಿ ನೆಲದಲ್ಲಿ ಹೂತು ಹಾಕಿದ್ದ. ಈಕೆಯ ಪುತ್ರಿ ನೀಡಿದ ದೂರಿನ ಅನುಸಾರ ಮೂರು ವರ್ಷಗಳ ನಂತರ ದೇಹವನ್ನು ಪತ್ತೆಹಚ್ಚಿ ಪ್ರಕರಣದ ವಿಚಾರಣೆ ನಡೆಸಲಾಗಿತ್ತು.

2008: `ಎಲ್ ಎಸ್ ಡಿ' ಔಷಧಿಯನ್ನು ಕಂಡು ಹಿಡಿದು `ಕುಖ್ಯಾತಿ'ಗೆ ಪಾತ್ರರಾಗಿದ್ದ ಆಲ್ಬರ್ಟ್ ಹಾಫ್ಮನ್ (102) ಸ್ವಿಟ್ಜರ್ಲೆಂಡಿನ ಬಾಸೆಲ್ನಲ್ಲಿ ಹಿಂದಿನ ದಿನ ಹೃದಯಾಘಾತದಿಂದ ನಿಧನರಾದರು. ಇವರು ಕಂಡು ಹಿಡಿದ ಅಮಲು ಬರಿಸುವ ಈ `ಎಲ್ ಎಸ್ ಡಿ' ಮಾದಕ ಮದ್ದನ್ನು ಅರವತ್ತರ ದಶಕದಲ್ಲಿ ಜಗತ್ತಿನಾದ್ಯಂತ ಯುವಜನರು ಬಳಸತೊಡಗಿದ್ದರು. ಹೀಗಾಗಿ ಬಹಳಷ್ಟು ದೇಶಗಳಲ್ಲಿ ಇದನ್ನು ನಿಷೇಧಿಸಲಾಗಿತ್ತು.

2008: ಮೇವು ಹಗರಣಕ್ಕೆ ಸಂಬಂಧಿಸಿ 35 ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದ ಸಿಬಿಐ ವಿಶೇಷ ನ್ಯಾಯಾಲಯ, ಇವರಲ್ಲಿ 22 ಮಂದಿಗೆ ಮೂರರಿಂದ ಆರು ವರ್ಷಗಳ ತನಕ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಇದಲ್ಲದೆ, ಈ ಎಲ್ಲ 22 ಆರೋಪಿಗಳಿಗೂ ರೂ 3 ಲಕ್ಷದಿಂದ ರೂ 1.2 ಕೋಟಿ ತನಕ ದಂಡವನ್ನೂ ವಿಧಿಸಿ ಸಿಬಿಐ ನ್ಯಾಯಾಧೀಶ ಮನೋರಂಜನ್ ಕಾವಿ ಅವರು ತೀರ್ಪು ಪ್ರಕಟಿಸಿದರು. ನ್ಯಾಯಾಲಯವು ಹಿಂದಿನ ದಿನವಷ್ಟೇ ಇತರ 11 ಆರೋಪಿಗಳಿಗೆ ಮೂರರಿಂದ ಏಳು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಿತು. ಇತರ ಇಬ್ಬರು ಆರೋಪಿಗಳಿಗೆ ಜೈಲು ಮತ್ತು ದಂಡ ಶಿಕ್ಷೆ ವಿಧಿಸಿ ಸಿಬಿಐ ನ್ಯಾಯಾಧೀಶರು ಏಪ್ರಿಲ್ 23ರಂದು ತೀರ್ಪು ನೀಡಿದ್ದರು.

2008: ಸಂಸತ್ತಿನಲ್ಲಿ ಲೋಕಸಭಾ ಸದಸ್ಯರ ನಡವಳಿಕೆಗೆ ಸಂಬಂಧಿಸಿದಂತೆ ಸಂಸದೀಯ ಸಮಿತಿ ಕೆಲವು ನೀತಿ ಸಂಹಿತೆಗಳನ್ನು ಶಿಫಾರಸು ಮಾಡಿದ್ದು ಸದಸ್ಯರು ಇವುಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತಾಗಬೇಕು ಎಂದು ಅಭಿಪ್ರಾಯಪಟ್ಟಿತು. ಈ ಕುರಿತಾದ ತನ್ನ ಎರಡನೇ ವರದಿಯನ್ನು ವಿ. ಕಿಶೋರ್ ಚಂದ್ರ ದೇವ್ ನೇತೃತ್ವದ ಸಮಿತಿಯು ಈದಿನ ಲೋಕಸಭೆಗೆ ಸಲ್ಲಿಸಿತು. ನೀತಿ ಸಂಹಿತೆ ಉಲ್ಲಂಘಿಸಿದವರಿಗೆ ನಾಲ್ಕು ವಿಧವಾದ ಶಿಕ್ಷೆ ನೀಡಬೇಕು ಎಂದು ವರದಿ ಹೇಳಿತು. ನೀತಿ ಸಂಹಿತೆ ಪಾಲನೆ ಮಾಡದೆ ಹೋದ ಸದಸ್ಯರನ್ನು ಕಲಾಪದಿಂದ ಅಮಾನತುಗೊಳಿಸಿ ಅವರನ್ನು ಸದನದಿಂದ ಹೊರಗೆ ಎತ್ತಿಹಾಕುವುದು ಈ ಶಿಕ್ಷೆಯಲ್ಲಿನ ಅತ್ಯುಗ್ರ ಕ್ರಮವಾಗಿದ್ದು, ಎಚ್ಚರಿಕೆ ನೀಡುವುದು, ವಾಗ್ದಂಡನೆ ವಿಧಿಸುವುದು ಮತ್ತು ನಿರ್ದಿಷ್ಟ ಅವಧಿವರೆಗೆ ಅಮಾನತುಗೊಳಿಸುವಂತಹ ಮೂರು ಕ್ರಮಗಳು ಶಿಕ್ಷೆಯ ಮತ್ತಿತರ ಮೂರು ಸ್ವರೂಪದವುಗಳು.

2008: ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ಮಾಜಿ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅವರು ನಿರ್ದೇಶಕ ರವಿ ಟಂಡನ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಅಕಾಡೆಮಿ ಪುರಸ್ಕಾರ ಪ್ರದಾನ ಮಾಡಿದರು.

2007: ದೇಶದಲ್ಲಿ ಇದೇ ಪ್ರಪ್ರಥಮ ಬಾರಿಗೆ ಮಹಿಳಾ ನೌಕರರನ್ನು ರಾತ್ರಿ ವೇಳೆಯಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲು ರಾಜ್ಯ ಸರ್ಕಾರವು ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ- 1961ಕ್ಕೆ ತಿದ್ದುಪಡಿ ಮಾಡಿತು. ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 2007ನ್ನು ರಾಜ್ಯಪಾಲರ ಒಪ್ಪಿಗೆ ಪಡೆದ ಬಳಿಕ ಈದಿನ ರಾಜ್ಯಪತ್ರದಲ್ಲಿ (ಗೆಜೆಟ್) ಇದನ್ನು ಪ್ರಕಟಿಸಲಾಯಿತು. ಕಾನೂನು 15 ದಿನಗಳಲ್ಲಿ ಜಾರಿಗೆ ಬರುವುದು. ರಾತ್ರಿ ವೇಳೆ ಮಹಿಳೆಯನ್ನು ದುಡಿಸಿಕೊಳ್ಳುವುದು ಅಪರಾಧ ಎಂಬ ಕಾನೂನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಪ್ರಥಮ ರಾಜ್ಯವಾಗಲಿದ್ದು, ಕಾಯ್ದೆ ಜಾರಿಯ ಬಳಿಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯ ಅಡಿಯಲ್ಲಿ ಬರುವ ಅಂಗಡಿ, ವಾಣಿಜ್ಯ ಸಂಸ್ಥೆಗಳಲ್ಲಿ ಮಹಿಳಾ ನೌಕರರು ರಾತ್ರಿ 8 ಗಂಟೆಯ ಬಳಿಕ ದುಡಿಯವಂತಿಲ್ಲ. ಮುದ್ರಣ ಮಾಧ್ಯಮ, ಖಾಸಗಿ ಸಂಸ್ಥೆಗಳು, ಕಚೇರಿಗಳು, ಹೋಟೆಲುಗಳು ಮತ್ತು ಮನರಂಜನಾ ಸಂಸ್ಥೆಗಳಲ್ಲಿ ರಾತ್ರಿ 8 ಗಂಟೆ ಬಳಿಕ ಮಹಿಳೆಯರನ್ನು ದುಡಿಸಿಕೊಂಡರೆ ಅಪರಾಧವಾಗುತ್ತದೆ. ಕಾನೂನು ಉಲ್ಲಂಘನೆಗೆ 6 ತಿಂಗಳು ಶಿಕ್ಷೆ, 10ರಿಂದ 20ಸಾವಿರ ರೂ ದಂಡ ವಿಧಿಸಬಹುದಾಗಿದೆ. ಐಟಿ ಮತ್ತು ಬಿಟಿ ಕ್ಷೇತ್ರವು 2002ರಲ್ಲೇ ರಿಯಾಯ್ತಿ ಪಡೆದ ಕಾರಣ ಈ ಕ್ಷೇತ್ರವನ್ನು ಕಾಯ್ದೆಯಿಂದ ಹೊರಗಿಡಲಾಯಿತು.

2007: ಕರ್ನಾಟಕದ 10 ಜಿಲ್ಲೆಗಳ 68 ತಾಲ್ಲೂಕುಗಳ ಆಯ್ದ ಹೋಬಳಿಗಳಲ್ಲಿ ಹವಾಮಾನ ಅಧಾರಿತ ಕೃಷಿ ವಿಮೆ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿತು. ಕರ್ನಾಟಕವಲ್ಲದೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳ್ಳುವುದು.

2007: ಜಗತ್ತಿನ ಅರ್ಧದಷ್ಟು ಭಾಗಕ್ಕೆ ಪೆಗಾಸಸ್ ಮೈನೈರ್ ಜಿಟಿ 450 ಮೈಕ್ರೋಲೈಟ್ ವಿಮಾನದ ಮೂಲಕ ಸುತ್ತು ಹಾಕುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ಬ್ರಿಟನ್ನಿನ ಅಂಧ ವಿಮಾನಯಾನಿ ಮೈಲ್ಸ್ ಹಿಲ್ಟನ್ ಬಾರ್ಬರ್ ತನ್ನ ಸಹ ಚಾಲಕ ರಿಚರ್ಡ್ ಮೆರೆಡಿತ್ ಹಾರ್ಡಿ ಜೊತೆಗೆ ಸಿಡ್ನಿಯ ಬ್ಯಾಂಕ್ಸ್ ಟೌನ್ ವಿಮಾನ ನಿಲ್ದಾಣಕ್ಕೆ ವಾಪಸಾದರು. ಮಾರ್ಚ್ 7ರಂದು ಲಂಡನ್ ಸಮೀಪದ ಬ್ರಿಗ್ಗಿನ್ ಹಿಲ್ ಏರ್ ಫೀಲ್ಡ್ ನಿಂದ 55 ದಿನಗಳ ತಮ್ಮ ಯಾನ ಆರಂಭಿಸಿದ್ದ ಅವರು ವಿಶ್ವದ 21 ರಾಷ್ಟ್ರಗಳ ಮೇಲೆ ಹಾರಾಡಿದರು.

2006: ಆಫ್ಘಾನಿಸ್ಥಾನದ ತಾಲೀಬಾನ್ ಉಗ್ರರು ತಾವು ಅಪಹರಿಸಿ ಒತ್ತೆ ಇಟ್ಟುಕೊಂಡಿದ್ದ ಭಾರತದ ಹೈದರಾಬಾದ್ ಮೂಲದ ದೂರಸಂಪರ್ಕ ಎಂಜಿನಿಯರ್ ಕೆ. ಸೂರ್ಯನಾರಾಯಣ (41) ಅವರನ್ನು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬರ್ಬರವಾಗಿ ಕೊಂದುಹಾಕಿದರು. ಅಪಹರಣಗೊಂಡಿದ್ದ ಸ್ಥಳಕ್ಕೆ ಅತಿ ಸಮೀಪದಲ್ಲೇ ಈ ಕೃತ್ಯ ನಡೆಯಿತು. ಜಬುಲ್ ಪ್ರಾಂತ್ಯದ ಕ್ವಾಲತ್ ಹಾಗೂ ಘಜ್ನಿ ಮಧ್ಯೆ ಹಳ್ಳವೊಂದರಲ್ಲಿ ಸೂರ್ಯನಾರಾಯಣ ಅವರ ರುಂಡವಿಲ್ಲದ ದೇಹ ಬೆಳಿಗ್ಗೆ ಪತ್ತೆಯಾಗಿ ಅವರ ಹತ್ಯೆ ಘಟನೆ ಬೆಳಕಿಗೆ ಬಂತು. ಸೂರ್ಯನಾರಾಯಣ ಅವರು ಬಹರೇನ್ ಮೂಲದ ಅಲ್- ಮೊಯ್ಡ್ ಕಂಪನಿಗಾಗಿ ಕೆಲಸ ಮಾಡುತಿದ್ದು, ಈ ಕಂಪನಿ ಆಘ್ಘಾನಿಸ್ಥಾನದ ಟೆಲಿಕಾಂ ಕಂಪನಿಗಾಗಿ ಕೆಲಸ ಮಾಡುತ್ತಿತ್ತು. ಉಗ್ರರು ಮೇ 28ರಂದು ಸೂರ್ಯನಾರಾಯಣ ಅವರನ್ನು ಅಪಹರಿಸಿದ್ದರು..

1945: ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಮತ್ತು ಆತನ ಪತ್ನಿ ಇವಾ ಬ್ರೌನ್ ಬರ್ಲಿನ್ನಿನ ಚಾನ್ಸಲರಿ ಕಟ್ಟಡದ ತಳಭಾಗದ ಬಂಕರಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು.

1870: ಚಲನಚಿತ್ರ ನಿರ್ದೇಶಕ ಧುಂಡಿರಾಜ್ ಗೋವಿಂದ್ `ದಾದಾಸಾಹೇಬ್' ಫಾಲ್ಕೆ (1870-1944) ಜನ್ಮದಿನ. ಭಾರತೀಯ ಚಿತ್ರೋದ್ಯಮದ ಜನಕ ಎಂದೇ ಖ್ಯಾತರಾದ ಇವರು ಭಾರತದ ಮೊತ್ತ ಮೊದಲ ಮೂಕಿ ಚಿತ್ರ `ರಾಜಾ ಹರಿಶ್ಚಂದ್ರ'ವನ್ನು ನಿರ್ಮಿಸಿದರು.

1927: ಎಂ. ಫಾತಿಮಾ ಬೀವಿ ಜನ್ಮದಿನ. ಇವರು ಭಾರತದ ಸುಪ್ರೀಂಕೋರ್ಟ್ ನ್ಯಾಯಾಧೀಶಕ್ಕೆ ಸ್ಥಾನಕ್ಕೆ ಏರಿದ ಮೊತ್ತ ಮೊದಲ ಭಾರತೀಯ ಮಹಿಳೆ.

1944: ಖ್ಯಾತ ನೃತ್ಯಪಟು ಸೋನಾಲ್ ಮಾನ್ ಸಿಂಗ್ ಹುಟ್ಟಿದ ದಿನ. ಇವರು ಭರತನಾಟ್ಯ, ಕೂಚಿಪುಡಿ ಮತ್ತು ಒಡಿಸ್ಸಿ ನೃತ್ಯಗಳಲ್ಲಿ ಪ್ರಾವೀಣ್ಯ ಪಡೆದಿರುವ ವ್ಯಕ್ತಿ.

1789: ಜಾರ್ಜ್ ವಾಷಿಂಗ್ಟನ್ ಅವರು ಅಮೆರಿಕದ ಪ್ರಪ್ರಥಮ ಅಧ್ಯಕ್ಷರಾದರು.

1993: ಮಹಿಳಾ ಟೆನಿಸ್ ಪಟು ಮೋನಿಕಾ ಸೆಲೆಸ್ ಗೆ ಜರ್ಮನಿಯ ಹ್ಯಾಂಬರ್ಗಿನಲ್ಲಿ ಟೆನಿಸ್ ಪಂದ್ಯ ನಡೆಯುತ್ತಿದ್ದಾಗ ವ್ಯಕ್ತಿಯೊಬ್ಬ ಹಿಂದಿನಿಂದ ಚೂರಿ ಹಾಕಿದ. ಮೋನಿಕಾ ವಿರುದ್ಧ ಸೆಣಸುತ್ತಿದ್ದ ಸ್ಟೆಫಿ ಗ್ರಾಫ್ ಅಭಿಮಾನಿ ತಾನೆಂದು ಹೇಳಿಕೊಂಡ ಆ ವ್ಯಕ್ತಿಯನ್ನು ನಂತರ ದಂಡನೆಗೆ ಗುರಿಪಡಿಸಲಾಯಿತು.

Thursday, April 29, 2010

ಇಂದಿನ ಇತಿಹಾಸ History Today ಏಪ್ರಿಲ್ 29

ಇಂದಿನ ಇತಿಹಾಸ

ಏಪ್ರಿಲ್ 29
ಲಿಮ್ಕಾ ದಾಖಲೆಗೆ ವಾರೆವ್ವಾ...
ವ್ಯಂಗ್ಯಚಿತ್ರಕಾರ ವಸಂತ ಹೊಸಬೆಟ್ಟು ಅವರು ಕನ್ನಡದ ದಿನ ಪತ್ರಿಕೆಯೊಂದರಲ್ಲಿ ಪ್ರತಿ ಬುಧವಾರ ಬರೆಯುವ 'ವಾರೆವ್ವಾ...' ಅಂಕಣ ಲಿಮ್ಕಾ ದಾಖಲೆ ಸೇರಿತು. ವ್ಯಂಗ್ಯ ಚಿತ್ರಗಳ ಇತಿಹಾಸ ಮತ್ತು ವ್ಯಂಗ್ಯ ಚಿತ್ರಕಾರರ ಮಾಹಿತಿ ನೀಡುವ ಈ ಅಂಕಣ 2004 ಡಿ. 1ರಿಂದ ಪ್ರತಿ ಬುಧವಾರ ನಿರಂತರವಾಗಿ ಪ್ರಕಟವಾಗುತ್ತಿದೆ.

ಲಿಮ್ಕಾ ದಾಖಲೆಗೆ ವಾರೆವ್ವಾ...
2009: ವ್ಯಂಗ್ಯಚಿತ್ರಕಾರ ವಸಂತ ಹೊಸಬೆಟ್ಟು ಅವರು ಕನ್ನಡದ ದಿನ ಪತ್ರಿಕೆಯೊಂದರಲ್ಲಿ ಪ್ರತಿ ಬುಧವಾರ ಬರೆಯುವ 'ವಾರೆವ್ವಾ...' ಅಂಕಣ ಲಿಮ್ಕಾ ದಾಖಲೆ ಸೇರಿತು. ವ್ಯಂಗ್ಯ ಚಿತ್ರಗಳ ಇತಿಹಾಸ ಮತ್ತು ವ್ಯಂಗ್ಯ ಚಿತ್ರಕಾರರ ಮಾಹಿತಿ ನೀಡುವ ಈ ಅಂಕಣ 2004 ಡಿ. 1ರಿಂದ ಪ್ರತಿ ಬುಧವಾರ ನಿರಂತರವಾಗಿ ಪ್ರಕಟವಾಗುತ್ತಿದೆ. ಈ ಮಾದರಿಯ ಸುದೀರ್ಘ ಅಂಕಣ ಇನ್ನೆಲ್ಲೂ ದಾಖಲಾಗಿಲ್ಲ ಎಂದು ಲಿಮ್ಕಾ ಬುಕ್ ಮಂಡಳಿ ಶ್ಲಾಘಿಸಿತು.

2009: 'ರಾಖಿ ಕಾ ಸ್ವಯಂವರ್' ಎಂಬ ರಿಯಾಲಿಟಿ ಷೋ ಮೂಲಕ ತನ್ನ ಪ್ರಿಯಕರನನ್ನು ಆಯ್ಕೆ ಮಾಡಲು ಹೊರಟ ನಟಿ ರಾಖಿ ಸಾವಂತ್‌ಗೆ 20 ದಿನಗಳಲ್ಲಿ 12,515 ಮಂದಿ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿ ಅರ್ಜಿ ರವಾನಿಸಿದ್ದನ್ನು ಈದಿನ ನವದೆಹಲಿಯಲ್ಲಿ ಬಹಿರಂಗ ಪಡಿಸಲಾಯಿತು.

2009: ದೇಶದ ರಾಜಧಾನಿ ದೆಹಲಿಯಲ್ಲಿ ಉಷ್ಣಾಂಶ ಬುಧವಾರ 43.5 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತು. ಕಳೆದ 50 ವರ್ಷಗಳ ಅವಧಿಯ ಏಪ್ರಿಲ್ ತಿಂಗಳಲ್ಲಿಯೇ ಅತಿ ಹೆಚ್ಚಿನ ತಾಪಮಾನ ಇದು. ಇದಕ್ಕೂ ಮೊದಲು ಅಂದರೆ 1958ರ ಏಪ್ರಿಲ್‌ನಲ್ಲಿ ನಗರದ ಉಷ್ಣಾಂಶ 43.7 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಅದುವೇ ಆವರೆಗಿನ ಗರಿಷ್ಠ ಉಷ್ಣಾಂಶದ ದಾಖಲೆಯಾಗಿತ್ತು.

2009: ಮಹತ್ವದ ನಿರ್ಧಾರವೊಂದರಲ್ಲಿ ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್) ಆಟಗಾರರ ಮೇಲೆ ಹೇರಲಾಗಿದ್ದ ನಿಷೇಧವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೆರವುಗೊಳಿಸಿತು. ಆದರೆ ಮೇ 31ರೊಳಗೆ ಐಸಿಎಲ್‌ನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಅದು ಆಟಗಾರರಿಗೆ ಸೂಚಿಸಿತು.

2009: ಭಾರತದ ಐಟಿ ಉದ್ಯಮದ ಚಟುವಟಿಕೆಗಳ ಕೇಂದ್ರ ಎಂದು ಖ್ಯಾತಿ ಗಳಿಸಿದ ಬೆಂಗಳೂರು, ಪ್ರಸ್ತುತ ದೇಶದಲ್ಲಿರುವ ಉತ್ತಮ ಜೀವನ ಮಟ್ಟದ ಮೊದಲನೇ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಬದುಕಲು ಯೋಗ್ಯವಾದ ಉತ್ತಮ ಜೀವನ ಮಟ್ಟದ ನಗರಗಳ ಈ ವರ್ಷದ ವಿಶ್ವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 142ನೇ ಸ್ಥಾನ ಪಡೆಯಿತು. ನವದೆಹಲಿ 145ನೇ ಸ್ಥಾನ ಪಡೆದರೆ, ಕಳೆದ ವರ್ಷ 142ನೇ ಸ್ಥಾನದಲ್ಲಿದ್ದ ಮುಂಬೈ 148ನೇ ಸ್ಥಾನಕ್ಕಿಳಿಯಿತು. ವಿಶ್ವದ ವಿವಿಧ ನಗರಗಳ ಜೀವನ ಮಟ್ಟವನ್ನು ದಾಖಲಿಸುವ 2009ರ 'ದಿ ಕ್ವಾಲಿಟಿ ಆಫ್ ಲಿವಿಂಗ್ ರಿಪೋರ್ಟ್' ಪ್ರಕಾರ, ಮುಂಬೈ ಮೇಲಿನ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಮುಂಬೈ ನಗರದ ಶ್ರೇಯಾಂಕದಲ್ಲಿ ಇಳಿಕೆಯಾಯಿತು. ಆದರೂ ದೇಶದ ಆರ್ಥಿಕ ರಾಜಧಾನಿ ಎಂಬ ಖ್ಯಾತಿಯ ಮುಂಬೈ ನಗರ, ಈ ನಗರಗಳ ಪಟ್ಟಿಯಲ್ಲಿ 152ನೇ ಸ್ಥಾನದಲ್ಲಿರುವ ಚೆನ್ನೈ ನಗರಕ್ಕಿಂತ ಮುಂದಿತ್ತು.

2009: ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಹಾಗೂ ಆತನ ಸಹಚರರು ಜಲಾಂತರ್ಗಾಮಿ ನೌಕೆಗಳ ಮೂಲಕ ತಪ್ಪಿಸಿಕೊಳ್ಳುವ ಮಾಹಿತಿಯ ಬೆನ್ನುಹತ್ತಿ ತಮಿಳು ಉಗ್ರರ ಪ್ರದೇಶಗಳ ಮೇಲೆ ದಾಳಿ ನಡೆಸಿದ ಲಂಕಾ ನೌಕಾ ಪಡೆಗಳು ಎಲ್‌ಟಿಟಿಇಯ ಆರು ಹಡಗುಗಳನ್ನು ನಾಶಪಡಿಸಿ, ರೆಕ್ತಾವೈಕ್ಕಲ್ ಕೋಟೆ ಪ್ರದೇಶವನ್ನು ವಶಪಡಿಸಿಕೊಂಡವು.

2009: ಹಂದಿಜ್ವರ ಮೊದಲಿಗೆ ಪತ್ತೆಯಾದ ಮೆಕ್ಸಿಕೊ ದೇಶದಲ್ಲಿ ಮೃತರ ಸಂಖ್ಯೆ 159ಕ್ಕೆ ಏರಿತು. ಈವರೆಗೆ ದೇಶದಲ್ಲಿ 2498 ಶಂಕಿತ ಹಂದಿಜ್ವರ ಪ್ರಕರಣಗಳು ಪತ್ತೆಯಾದವು.

2009: ಎಲ್‌ಟಿಟಿಇ ನಾಯಕ ವಿ. ಪ್ರಭಾಕರನ್ ಮತ್ತು ಗುಪ್ತದಳ ಮುಖ್ಯಸ್ಥ ಪೊಟ್ಟು ಅಮ್ಮನ್ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಸಂಚು ರೂಪಿಸಿದ್ದುದಾಗಿ ಪ್ರಭಾಕರನ್ ನಿಕಟವರ್ತಿ ಮತ್ತು ಪ್ರಸ್ತುತ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ ಸರ್ಕಾರದಲ್ಲಿ ರಾಷ್ಟ್ರೀಯ ಏಕೀಕರಣ ಸಚಿವರಾದ ಕರುಣಾ ಅಮ್ಮನ್ ತಿಳಿಸಿದರು. 'ಸಂಘಟನೆಯ ಯಾರೊಬ್ಬರ ಗಮನಕ್ಕೂ ತಾರದೆ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ಇಬ್ಬರೇ ಸದ್ದಿಲ್ಲದೆ ಪಿತೂರಿ ಹೆಣೆದಿದ್ದರು. ಅಂತಹ ಪ್ರತಿಕೂಲ ಕ್ರಮಗಳನ್ನು ನಾನು ಯಾವಾಗಲೂ ವಿರೋಧಿಸುತ್ತಿದ್ದೆ' ಎಂದು 2004ರಲ್ಲಿ ಎಲ್‌ಟಿಟಿಇಯಿಂದ ಹೊರಬಂದ ಅದರ ಪೂರ್ವ ಪ್ರಾಂತ್ಯ ಕಮಾಂಡರ್ ಆಗಿದ್ದ ಕರುಣಾ ವಿವರಿಸಿದರು.

2009: ಅಮೆರಿಕದ ಪ್ರತಿಷ್ಠಿತ 'ಹೂವರ್' ಪ್ರಶಸ್ತಿಯನ್ನು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಸ್ವೀಕರಿಸಿದರು. ಈ ಪ್ರಶಸ್ತಿ ಸ್ವೀಕರಿಸಿದ ಏಷ್ಯಾದ ಪ್ರಥಮ ವ್ಯಕ್ತಿ ಕಲಾಂ.

2008: ಮಗಳನ್ನೇ 24 ವರ್ಷಗಳ ಕಾಲ ನೆಲಮಾಳಿಗೆಯಲ್ಲಿ ಸೆರೆಯಲ್ಲಿಟ್ಟು ಆಕೆಗೆ 7 ಮಕ್ಕಳನ್ನು ಕರುಣಿಸಿದ ಆಸ್ಟ್ರಿಯದ ಅಮಸ್ಟಿಟೆನ್ನಿನ ಕ್ರೂರ ತಂದೆ ಜೋಸೆಫ್ ಫ್ರಿಜ್ಜಿ (73) ಕುರಿತು ಮತ್ತಷ್ಟು ಮಾಹಿತಿಗಳು ಪತ್ತೆಯಾದವು. `ನನ್ನ ಮಗಳಿಗೆ ಜನಿಸಿದ ಮಗುವೊಂದು ಹುಟ್ಟಿದ ತತ್ ಕ್ಷಣವೇ ಸತ್ತಾಗ ಅದನ್ನು ನಾನೇ ಕೈಯಾರೆ ಸುಟ್ಟೆ' ಎಂದು ಜೋಸೆಫ್ ತಪ್ಪೊಪ್ಪಿ ಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು. ತನ್ನ ತಂದೆಯ ಮಕ್ಕಳಿಗೇ ತಾಯಿಯಾಗಿರುವ 42ರ ಹರೆಯದ ಎಲಿಜಬೆತ್ 1984ರಿಂದ ಮನೆಯ ನೆಲಮಾಳಿಗೆಯಲ್ಲಿ ಸೆರೆಯಾಗಿದ್ದಾಳೆ. ಆಕೆಯ 7 ಮಕ್ಕಳಲ್ಲಿ ಮೂರು ಮಕ್ಕಳು ಇದುವರೆಗೂ ಬೆಳಕನ್ನೇ ಕಾಣದೇ ಸೆರೆಯಲ್ಲಿದ್ದರೆ, ಉಳಿದ ನಾಲ್ಕು ಮಕ್ಕಳಲ್ಲಿ ಒಂದು ಹುಟ್ಟಿದ ತತ್ ಕ್ಷಣವೇ ತೀರಿಕೊಂಡಿದೆ. ಇನ್ನುಳಿದ ಮೂರು ಮಕ್ಕಳು ತಂದೆ ಜೋಸೆಫ್ ಮತ್ತು ಆತನ ಪತ್ನಿ ರೋಸ್ ಮೇರಿ ಬಳಿ ಇದ್ದಾರೆ. ಎಲಿಜಬೆತ್ತಳ ಹಿರಿಯ ಮಗಳು ಉಸಿರಾಟದ ತೀವ್ರ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾದಾಗ, ಅನುಮಾನಗೊಂಡ ವೈದ್ಯರು ಆಕೆಯ ಕುಟುಂಬದ ಮಾಹಿತಿ ಕೇಳಿದಾಗ ಈ ಪ್ರಕರಣ ಬಯಲಿಗೆ ಬಂದಿತು. ಜನ ನಿಬಿಡ ಸ್ಥಳದಲ್ಲಿರುವ ಆ ನೆಲಮಾಳಿಗೆಯಲ್ಲಿ ಇಂತಹದ್ದೊಂದು ಘಟನೆ ನಡೆದಿರುವುದು ಯಾರ ಗಮನಕ್ಕೂ ಬಂದಿಲ್ಲ ಎನ್ನುವುದೇ ಅಶ್ಚರ್ಯ ಎಂದು ಆಸ್ಟ್ರಿಯದ `ಡೆರ್ ಸ್ಟ್ಯಾಂಡರ್ಡ್' ಪತ್ರಿಕೆಯಲ್ಲಿ ವಿಶ್ಲೇಷಕಿ ಪೆಟ್ರಾ ಸ್ಟುಬೆರ್ ದಿಗ್ಭ್ರಮೆ ವ್ಯಕ್ತಪಡಿಸಿದರು.

2008: ಟಿಬೆಟ್ ರಾಜಧಾನಿ ಲ್ಹಾಸಾದಲ್ಲಿ 1989ರಿಂದ ಚೀನಾ ಸರ್ಕಾರದ ವಿರುದ್ಧ ಬೌದ್ಧ ಭಿಕ್ಕುಗಳ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ 17 ಮಂದಿಗೆ ಮೂರು ವರ್ಷ ಜೀವಾವಧಿಯವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಲ್ಹಾಸಾದ ಜನತಾ ನ್ಯಾಯಾಲಯವು ಈದಿನ ಈ ಶಿಕ್ಷೆಯನ್ನು ಪ್ರಕಟಿಸಿದೆ ಎಂದು ಚೀನಾ ಸರ್ಕಾರದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ ಹುವಾ ವರದಿ ಮಾಡಿತು. ಕಳೆದ ಮಾರ್ಚ್ ತಿಂಗಳಲ್ಲಿ ಲ್ಹಾಸಾ ಮತ್ತು ಇತರ ಕಡೆಗಳಲ್ಲಿ ಚೀನಾ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದ ಹಿಂಸಾಚಾರದಲ್ಲಿ 20 ಮಂದಿ ಸತ್ತಿದ್ದರು. ಇದಕ್ಕೆ ದಲೈ ಲಾಮ ಕಾರಣ ಎಂಬುದು ಚೀನಾ ಸರ್ಕಾರದ ಅರೋಪ. ಆದರೆ ದೇಶ ಭ್ರಷ್ಟರಾಗಿ ಭಾರತದಲ್ಲಿರುವ ದಲೈ ಲಾಮ ಈ ಆಪಾದನೆಯನ್ನು ನಿರಾಕರಿಸಿದ್ದರು.

2008: ಸುಮಾರು 26 ತಾಲಿಬಾನಿಗಳನ್ನು ಆಘ್ಘಾನಿಸ್ಥಾನದ ಮಿಲಿಟರಿ ಕಾರ್ಯಪಡೆ ಹತ್ಯೆ ಮಾಡಿತು.

2008: ಪಾಕಿಸ್ಥಾನಕ್ಕೆ ಹತ್ತಿರದಲ್ಲಿರುವ ಪೂರ್ವ ಆಘ್ಘಾನಿಸ್ಥಾನದಲ್ಲಿ ಸಂಭವಿಸಿದ ಸ್ಫೋಟವೊಂದರಲ್ಲಿ ಕನಿಷ್ಠ 15 ಮಂದಿ ಆಘ್ಘನ್ನರು ಬಲಿಯಾಗಿ, 25ಮಂದಿ ಗಾಯಗೊಂಡರು ಎಂದು ನ್ಯಾಟೊ ನೇತೃತ್ವದ ಪಡೆಗಳ ವಕ್ತಾರ ತಿಳಿಸಿದರು.

2008: ಕರ್ನಾಟಕದಲ್ಲಿ ಆರು ತಿಂಗಳ ಅವಧಿಗೆ ರಾಷ್ಟ್ರಪತಿ ಆಡಳಿತ ವಿಸ್ತರಿಸುವ ನಿರ್ಣಯವನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದವು.

2008: ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಾಮೀಲಾದ ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಗುರಿಯಾದ ಸರಬ್ಜಿತ್ ಸಿಂಗ್ ಅವರನ್ನು ಭೇಟಿ ಮಾಡಿದ ಕುಟುಂಬದ ಸದಸ್ಯರು ಕ್ಷಮಾದಾನ ದೊರೆಯಬಹುದೆಂಬ ಭರವಸೆಯೊಂದಿಗೆ ಭಾರತಕ್ಕೆ ವಾಪಸಾದರು. ಸರಬ್ಜಿತ್ ಸಿಂಗ್ ಅವರನ್ನು ಪಾಕಿಸ್ಥಾನದಲ್ಲಿ ಭೇಟಿ ಮಾಡಲು ಪತ್ನಿ ಸುಖಪ್ರೀತ್ ಸಿಂಗ್, ಸಹೋದರಿ ದಲ್ಬೀರ್ ಕೌರ್ ಹಾಗೂ ಪುತ್ರಿಯರಾದ ಸ್ವಪನ್ ದೀಪ್ ಮತ್ತು ಪೂನಂ ತೆರಳಿದ್ದರು. ಸರಬ್ಜಿತ್ ಗಲ್ಲು ಶಿಕ್ಷೆ ಜಾರಿಗೆ ಪಾಕಿಸ್ಥಾನ ಸರ್ಕಾರ ಮತ್ತೆ ಮೂರು ವಾರಗಳ ತಡೆಯಾಜ್ಞೆ ನೀಡಿದ್ದು `ಸಕಾರಾತ್ಮಕ ನಿಲುವು' ಎಂದು ಆತನ ಕುಟುಂಬ ಬಣ್ಣಿಸಿತು. 2008ರ ಏಪ್ರಿಲ್ 1ರಂದು ಸರಬ್ಜಿತ್ ನೇಣುಗಂಬಕ್ಕೇರಬೇಕಿತ್ತು. ಆದರೆ ಪಾಕ್ ಸರ್ಕಾರ ಅದನ್ನು 30 ದಿನ ಮುಂದೂಡಿತ್ತು. ಆ ಅವಧಿಯನ್ನು ಮತ್ತೆ ಮೂರು ವಾರಗಳ ಕಾಲ ಮುಂದೂಡಲಾಯಿತು.

2007: ಕಂಡು ಕೇಳರಿಯದ ನೈಜ ಗೋವಿನ ರಥೋತ್ಸವದೊಂದಿಗೆ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಶ್ರೀ ರಾಮಚಂದ್ರಾಪುರ ಮಠವು ಸಂಘಟಿಸಿದ್ದ 10 ದಿನಗಳ ವಿಶ್ವ ಗೋ ಸಮ್ಮೇಳನಕ್ಕೆ ಸಡಗರದ ತೆರೆ ಬಿದ್ದಿತು. ಲಕ್ಷಾಂತರ ಮಂದಿ ಸಂಭ್ರಮೋತ್ಸಾಹದೊಂದಿಗೆ ಗೋ ರಥೋತ್ಸವ ವೀಕ್ಷಿಸಿದರು. ಅಭೂತಪೂರ್ವ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು, ಕಲಾ, ಭಜನಾ, ಸಂಕೀರ್ತನಾ ತಂಡಗಳು ಭಾಗವಹಿಸಿದ್ದವು. ಕುದುರೆ ಸಾರೋಟು, ನಾಲ್ಕು ಆನೆಗಳು, ಸಶಸ್ತ್ರ ದಳದವರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಡೆದ ಗೋ ತುಲಾಭಾರ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ರಾಘವೇಶ್ವರ ಭಾರತೀ ಸ್ವಾಮೀಜಿ, ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಆರೆಸ್ಸೆಸ್ ಸರಸಂಘ ಚಾಲಕ ಕೆ.ಸಿ. ಸುದರ್ಶನ್ ಪಾಲ್ಗೊಂಡಿದ್ದರು.

2007: ಭಾರತದ ಗೌರವ್ ಘಾಯ್ ಅವರು ಬೀಜಿಂಗಿನಲ್ಲಿ ಮುಕ್ತಾಯವಾದ ಐದು ಲಕ್ಷ ಡಾಲರ್ ಬಹುಮಾನ ಮೊತ್ತದ ಪ್ರಥಮ ಫೈನ್ ವ್ಯಾಲಿ ಬೀಜಿಂಗಿನ ಓಪನ್ ಗಾಲ್ಫ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು..

2007: ಉಕ್ಕು ಉದ್ಯಮ ದೊರೆ ಅನಿವಾಸಿ ಭಾರತೀಯ ಲಕ್ಷ್ಮಿ ಮಿತ್ತಲ್ ಅವರು ಸತತ ಮೂರನೇ ವರ್ಷ ಬ್ರಿಟಿನ್ನಿನ ಅತಿ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಿಂದುಜಾ ಸಹೋದರರು ಮತ್ತು ಲಾರ್ಡ್ ಸ್ವರಾಜ್ ಪಾಲ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

2006: ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ನೀಡುವ ಪ್ರತಿಷ್ಠಿತ `ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ' ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕೀಯ ಸಲಹೆಗಾರ ಎನ್.ವಿ. ಜೋಶಿ ಅವರಿಗೆ ಲಭಿಸಿತು. ಇಲ್ಲಿಯವರೆಗೆ ಹಿರಿಯ ಪತ್ರಕರ್ತರಾದ ಎನ್. ಎಸ್. ಸೀತಾರಾಮ ಶಾಸ್ತ್ರಿ, ಅಮ್ಮೆಂಬಳ ಆನಂದ, ಸಿ.ಜಿ.ಕೆ.ರೆಡ್ಡಿ, ಬಾಬು ಕೃಷ್ಣಮೂರ್ತಿ, ಮಿಂಚು ಶ್ರೀನಿವಾಸ, ಎಸ್. ವಿ. ಜಯಶೀಲರಾವ್, ಎಂ.ಬಿ.ಸಿಂಗ್, ಜಿ.ನಾರಾಯಣ, ಎಸ್. ಪಟ್ಟಾಭಿರಾಮನ್, ಸಿ.ವಿ. ರಾಜಗೋಪಾಲ, ಸುರೇಂದ್ರ ದಾನಿ, ತುಮಕೂರಿನ ಪ್ರಜಾ ಪ್ರಗತಿ ಸಂಪಾದಕ ನಾಗಣ್ಣ ಅವರು ಈ ಪ್ರಶಸ್ತಿಯನ್ನು ಪಡೆದಿದ್ದರು.

2001: ಅಮೆರಿಕದ ಕೋಟ್ಯಧೀಶ ಡೆನ್ನಿಸ್ ಟಿಟೋ ಜಗತ್ತಿನಲ್ಲಿ ಮೊತ್ತ ಮೊದಲ ಬಾರಿಗೆ ಖಾಸಗಿಯಾಗಿ ಬಾಹ್ಯಾಕಾಶ ಪ್ರವಾಸ ಕೈಗೊಂಡ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದುಕೊಂಡರು. 60 ವರ್ಷ ವಯಸ್ಸಿನ ಇವರು ಬೈಕನೂರ್ ಬಾಹ್ಯಾಕಾಶ ಕೇಂದ್ರದಿಂದ ರಷ್ಯದ ರಾಕೆಟ್ ಮೂಲಕ 20 ದಶಲಕ್ಷ ಡಾಲರ್ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ `ಮೋಜಿನ ಹಾರಾಟ' ನಡೆಸಿದರು. 2002ರ ಮೇ ತಿಂಗಳಲ್ಲಿ ದಕ್ಷಿಣ ಆಫ್ರಿಕದ ಮಾರ್ಕ್ ಶಟ್ಲ್ ವರ್ತ್ ಎರಡನೇ ಖಾಸಗಿ ಬಾಹ್ಯಾಕಾಶ ಪ್ರವಾಸಿ ಎಂಬ ಹೆಸರಿಗೆ ಪಾತ್ರರಾದರು.

1937: ವ್ಯಾಲೇಸ್ ಕಾರೋಥೆರ್ಸ್ ಆತ್ಮಹತ್ಯೆ ಮಾಡಿಕೊಂಡ. ಇದಕ್ಕೆ ಕೇವಲ ಎರಡು ತಿಂಗಳು ಮೊದಲು ಆತ ನೈಲಾನ್ ಪೇಟೆಂಟ್ ಪಡೆದಿದ್ದ.

1929: ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಸಿಸು ಸಂಗಮೇಶ (29-4-1929ರಿಂದ 29-5-2001) ಅವರು ವಿಜಾಪುರ ಜಿಲ್ಲೆಯ ಬಾಗೇವಾಡಿ ಹತ್ತಿರದ ಯಕನಾಳ ಗ್ರಾಮದಲ್ಲಿ ಸಿದ್ದರಾಮಪ್ಪ-- ಗೌರಮ್ಮ ದಂಪತಿಯ ಮಗನಾಗಿ ಜನಿಸಿದರು. ಅವರ ಮೊದಲಿನ ಹೆಸರು ಸಂಗಮೇಶ ಸಿದ್ದಾಮಪ್ಪನಗೊಂಡ. 80ಕ್ಕೂ ಹೆಚ್ಚು ಕೃತಿಗಳ ಪ್ರಕಟಣೆ ಮೂಲಕ ಶಿಶು ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿರುವ ಸಿಸು ಸಂಗಮೇಶ ಅವರು ಇತರ ವಿಚಾರಗಳಿಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

1848: ಭಾರತದ ಖ್ಯಾತ ವರ್ಣಚಿತ್ರಗಾರ ರಾಜಾ ರವಿ ವರ್ಮ (1848-1912) ಜನ್ಮದಿನ.

1630: ಮರಾಠಾ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ ಅವರು ಈದಿನ ಮಹಾರಾಷ್ಟ್ರದ ಶಿವನೇರಿ ದುರ್ಗದಲ್ಲಿ ಜನಿಸಿದರು.

1236: ಭಾರತದ ಪ್ರಮುಖ ದೊರೆಗಳಲ್ಲಿ ಒಬ್ಬನಾದ ಗುಲಾಮ ಮನೆತನದ ಮೂರನೇ ಇಲ್ತಮಿಷ್ ಮೃತನಾದ. ಇಲ್ತಮಿಷ್ ಗುಲಾಮನಾಗಿ ತನ್ನ ಬದುಕು ಆರಂಭಿಸಿದರೂ ತನ್ನ ಯಜಮಾನ ಕುತ್ಬ್-ಉದ್-ದಿನ್ ಐಬಕ್ನ ಪುತ್ರಿಯನ್ನು ಮದುವೆಯಾದ. ನಂತರ 1211ರಲ್ಲಿ ಐಬಕ್ನ ಉತ್ತರಾಧಿಕಾರಿಯಾದ. ಈತ ದೆಹಲಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅಲ್ಲಿ ಕುತುಬ್ ಮಿನಾರ್ ಕಟ್ಟಿಸಿದ.

Wednesday, April 28, 2010

ಇಂದಿನ ಇತಿಹಾಸ History Today ಏಪ್ರಿಲ್ 28

ಇಂದಿನ ಇತಿಹಾಸ

ಏಪ್ರಿಲ್ 28

ಬೊಫೋರ್ಸ್ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಬದುಕುಳಿದ ಏಕೈಕ ಆರೋಪಿ ಹಾಗೂ ಇಟಲಿಯ ಉದ್ಯಮಿ ಒಟ್ಟಾವಿಯೊ ಕ್ವಟ್ರೋಚಿ ಅವರನ್ನು ಸಿಬಿಐ ಮತ್ತು ಇಂಟರ್‌ಪೋಲ್‌ನ 'ಬೇಕಾದ ವ್ಯಕ್ತಿ' ಪಟ್ಟಿಯಿಂದ ತೆರವುಗೊಳಿಸಲಾಯಿತು. ಇದು ಭಾರತದಲ್ಲಿ ತೀವ್ರ ಸ್ವರೂಪದ ರಾಜಕೀಯ ಸಂಚಲನ ಮೂಡಿಸಿತು.

2009: ಬೊಫೋರ್ಸ್ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಬದುಕುಳಿದ ಏಕೈಕ ಆರೋಪಿ ಹಾಗೂ ಇಟಲಿಯ ಉದ್ಯಮಿ ಒಟ್ಟಾವಿಯೊ ಕ್ವಟ್ರೋಚಿ ಅವರನ್ನು ಸಿಬಿಐ ಮತ್ತು ಇಂಟರ್‌ಪೋಲ್‌ನ 'ಬೇಕಾದ ವ್ಯಕ್ತಿ' ಪಟ್ಟಿಯಿಂದ ತೆರವುಗೊಳಿಸಲಾಯಿತು. ಇದು ಭಾರತದಲ್ಲಿ ತೀವ್ರ ಸ್ವರೂಪದ ರಾಜಕೀಯ ಸಂಚಲನ ಮೂಡಿಸಿತು. ಈಚೆಗಷ್ಟೇ ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರನ್ನು ದೋಷಮುಕ್ತಗೊಳಿಸಿದ್ದ ಸಿಬಿಐ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ನೆರವಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಕ್ಕಾಗಿ ಬಿಜೆಪಿ ಮತ್ತು ಎಡಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕಳೆದ 5 ವರ್ಷಗಳ ಸಿಬಿಐ ಕಾರ್ಯಗಳ ಬಗ್ಗೆ ತಕ್ಷಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದವು. ಕ್ವಟ್ರೋಚಿ ವಿಷಯದಲ್ಲಿ ಸಿಬಿಐ ಈ ಮೊದಲಿನಿಂದಲೂ ಉದಾಸೀನ ಧೋರಣೆಯನ್ನೇ ತಳೆಯುತ್ತ ಬಂದಿತ್ತು. ಭಾರತದ ಹೊರಗೆ ಎರಡು ಬಾರಿ ಕ್ವಟ್ರೋಚಿ ಅವರನ್ನು ಬಂಧಿಸಿದಾಗಲೂ ಅವರನ್ನು ಗಡಿಪಾರು ಮಾಡಿಸಿಕೊಳ್ಳುವಲ್ಲೂ ಸಿಬಿಐ ದಿವ್ಯ ತಾಳಿ, ವೈಫಲ್ಯ ಅನುಭವಿಸಿತ್ತು. ಇದೀಗ ಸಿಬಿಐ ನೀಡಿದ ಸೂಚನೆ ಮೇರೆಗೆ ಇಂಟರ್‌ಪೋಲ್ ತನ್ನ ರೆಡ್‌ಕಾರ್ನರ್ ನೋಟಿಸ್ ಪಟ್ಟಿಯಿಂದ ಕ್ವಟ್ರೋಚಿ ಅವರ ಹೆಸರನ್ನು ತೆಗೆದುಹಾಕಿದ್ದು ಬೆಳಕಿಗೆ ಬಂತು.

2009: ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಭಾಷಣ ಮಾಡುತ್ತಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇಲೆ ಜೆಡಿಎಸ್ ಕಾರ್ಯಕರ್ತನೊಬ್ಬ ಚಪ್ಪಲಿ ಎಸೆದ ಪ್ರಕರಣ ಚನ್ನರಾಯಪಟ್ಟಣದಲ್ಲಿ ನಡೆಯಿತು. ಪ್ರಚಾರ ಭಾಷಣ ಮಾಡುತ್ತಿದ್ದ ಯಡಿಯೂರಪ್ಪ ಅವರ ಮೇಲೆ ಹೊಳೆನರಸೀಪುರ ತಾಲ್ಲೂಕಿನ ಕುಂಚೇವು ಕೋಡಿಹಳ್ಳಿ ಗ್ರಾಮದ ಚಂದ್ರಶೇಖರ್ (33) ಎಂಬಾತ ಚಪ್ಪಲಿ ಎಸೆದ. ಅದು ರಕ್ಷಣಾ ಪರಿಧಿಯೊಳಗೆ ಬಿದ್ದಿತು. ಈ ಅನಿರೀಕ್ಷಿತ ಘಟನೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಭೆಯಲ್ಲಿದ್ದ ಎಲ್ಲರೂ ವಿಚಲಿತರಾದರು. ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆದೊಯ್ದರು.

2009: ತನ್ನ ನೆಲದಿಂದ ತಾಲಿಬಾನ್ ಉಗ್ರರನ್ನು ಹೊರಗಟ್ಟುವ ಕಾರ್ಯವನ್ನು ಪಾಕ್ ರಕ್ಷಣಾಪಡೆಗಳು ತೀವ್ರಗೊಳಿಸಿ ವಾಯವ್ಯ ಪ್ರಾಂತ್ಯದಲ್ಲಿ 70 ಉಗ್ರರನ್ನು ಹತ್ಯೆ ಮಾಡಿದವು. ಪಾಕ್ ರಕ್ಷಣಾ ಪಡೆಗಳು ದಿರ್ ಜಿಲ್ಲೆಯ ಕಾಲ್ಪಾನಿ ಮತ್ತು ಅಕಖೇಲ್‌ದರ ಪರ್ವತಗಳ ಮೇಲೆ ಹೆಲಿಕಾಪ್ಟರ್ ಮೂಲಕ ದಾಳಿ ನಡೆಸಿದ್ದು, ತಾಲಿಬಾನ್ ಉಗ್ರರು ತಾವು ಆಕ್ರಮಿಸಿಕೊಂಡ ಬುನೆರ್ ಮತ್ತು ಇತರೆ ಪ್ರದೇಶಗಳನ್ನು ಬಿಡದೇ ಅನ್ಯ ಮಾರ್ಗವಿಲ್ಲ' ಎಂದು ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಹೇಳಿದರು.

2009: 2011ರ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಗಳು ಭಾರತದಲ್ಲಿ ನಡೆಯಲಿದೆ ಎಂದು ಐಸಿಸಿ ತಿಳಿಸಿತು. ಇದೇ ವೇಳೆ ಭದ್ರತೆಯ ಕಾರಣದಿಂದ ಪಾಕಿಸ್ಥಾನದಲ್ಲಿ ಪಂದ್ಯಗಳನ್ನು ನಡೆಸದಿರಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಲಾಹೋರಿನಲ್ಲಿ ಇದ್ದ ಕೇಂದ್ರ ಕಚೇರಿಯನ್ನು ಮುಚ್ಚಲು ತೀರ್ಮಾನಿಸಲಾಯಿತು.

2009: 64 ಕೋಟಿ ರೂಪಾಯಿಗಳ ಬೊಫೋರ್ಸ್ ಹಗರಣಲ್ಲಿ ಕ್ವಟ್ರೋಚಿ ಅವರು 7.32 ದಶಲಕ್ಷ ಡಾಲರ್ ಲಂಚ ಪಡೆದಿರುವುದು ನಿಜ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸ್ವಿಸ್ ಅಧಿಕಾರಿಗಳು ನೀಡಿದ್ದು, ಅವುಗಳು ಸರ್ಕಾರದ ಬಳಿಯೇ ಇವೆ ಎಂದು ಸಿಬಿಐನ ಮಾಜಿ ನಿರ್ದೇಶಕ ಜೋಗಿಂದರ್ ಸಿಂಗ್ ನವದೆಹಲಿಯಲ್ಲಿ ಹೇಳಿದರು. '1997ರಲ್ಲಿ ನಾನು ಸ್ವಿಸ್ ಬ್ಯಾಂಕ್‌ಗಳಿಂದ 500 ಪುಟಗಳ ದಾಖಲೆಗಳನ್ನು ತಂದಿದ್ದೆ. ನಾನು ಸಿಬಿಐ ನಿರ್ದೇಶಕನಾಗಿ ಅಧಿಕಾರ ಸ್ವೀಕರಿಸಿದಾಗ ಒಂದು ಕೊಠಡಿ ತುಂಬ ಬೊಫೋರ್ಸ್‌ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳಿದ್ದವು. ಆದರೆ ಅದುವರೆಗೆ ಯಾರೊಬ್ಬರೂ ಅದನ್ನು ಮುಟ್ಟಿರಲಿಲ್ಲ' ಎಂದು ಅವರು ತಿಳಿಸಿದರು. 'ಸಿಬಿಐ ಕೂಡ ಸ್ವತಂತ್ರ ತನಿಖಾ ಸಂಸ್ಥೆಯಲ್ಲ, ಸರ್ಕಾರ ಹೇಳಿದ್ದನ್ನು ಅದು ಮಾಡಲೇಬೇಕಾಗುತ್ತದೆ' ಎಂದು ಅವರು ಹೇಳಿದರು.

ಬೊಫೋರ್ಸ್ ಲಂಚ: ಪ್ರಮುಖ ಘಟನಾವಳಿ
1987: ಬೊಫೋರ್ಸ್ ಲಂಚ ಹಗರಣ ಬೆಳಕಿಗೆ
1997: ಸ್ವಿಸ್ ಬ್ಯಾಂಕ್‌ಗಳಿಂದ ಸುಮಾರು 500 ದಾಖಲೆಗಳು ಬಿಡುಗಡೆ. ವರ್ಷಗಳ ಕಾನೂನು ತೊಡಕುಗಳ ಬಳಿಕ ಸಿಬಿಐನಿಂದ ಇಟಲಿ ಉದ್ಯಮಿ ಕ್ವಟ್ರೋಚಿ, ಶಸ್ತ್ರಾಸ್ತ್ರ ವ್ಯಾಪಾರಿ ವಿನ್ ಛಡ್ಡಾ, ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಆಗಿನ ರಕ್ಷಣಾ ಕಾರ್ಯದರ್ಶಿ ಎಸ್. ಕೆ. ಭಟ್ನಾಗರ್ ಮತ್ತು ಇತರ ಹಲವರ ವಿರುದ್ಧ ಪ್ರಕರಣ ದಾಖಲು.

2003: ಹೈಕೋರ್ಟ್ ಆದೇಶದ ಮೇರೆಗೆ ಕ್ವಟ್ರೋಚಿಯ ಎರಡು ಬ್ರಿಟಿಷ್ ಬ್ಯಾಂಕ್ ಖಾತೆಗಳ ಮುಟ್ಟುಗೋಲು.
2004ರ ಫೆ. 5: ರಾಜೀವ್ ಗಾಂಧಿ ಮತ್ತು ಇತರರ ಮೆಲಿನ ಲಂಚ ಆರೋಪಗಳು ದೆಹಲಿ ಹೈಕೋರ್ಟ್‌ನಿಂದ ವಜಾ.
2005ರ ಮೇ 31: ಬ್ರಿಟನ್‌ನ ಸಹೋದರರಾದ ಶ್ರೀಚಂದ್, ಗೋಪಿಚಂದ್ ಮತ್ತು ಪ್ರಕಾಶ್ ಹಿಂದುಜಾ ಅವರ ಮೆಲಿನ ಆರೋಪಗಳೂ ದೆಹಲಿ ಹೈಕೋರ್ಟ್‌ನಿಂದ ವಜಾ.

2009: ಮುಂಬೈ ದಾಳಿಯಲ್ಲಿ ಸಿಕ್ಕಿ ಬಿದ್ದ ಏಕೈಕ ಉಗ್ರ ಅಜ್ಮಲ್ ಕಸಾಬ್ ವಯಸ್ಸು 20 ಅಥವಾ ಅದಕ್ಕಿಂತ ಹೆಚ್ಚು ಎಂಬುದು ಖಂಡಿತ! ದಾಳಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾದ ವೈದ್ಯಕೀಯ ಮಾಹಿತಿಯಿಂದ ಈ ಅಂಶ ದೃಢಪಟ್ಟಿದೆ. ಕಸಾಬ್ ವಯಸ್ಸು ಪತ್ತೆಗಾಗಿ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಆದೇಶಿಸಿದ್ದ ವಿಶೇಷ ನ್ಯಾಯಾಧೀಶ ಎಂ.ಎಲ್.ತಹಿಲಿಯಾನಿ ಅವರು ಈ ವಿಷಯದಲ್ಲಿ ತೀರ್ಪು ನೀಡುವರು ಎಂದು ವಿಶೇಷ ಸರ್ಕಾರಿ ವಕೀಲ ಉಜ್ವಲ್ ನಿಕ್ಕಂ ವಿಚಾರಣೆ ನಂತರ ಸುದ್ದಿಗಾರರಿಗೆ ತಿಳಿಸಿದರು. ತನ್ನ ವಯಸ್ಸು 18 ಎಂದು ಹೇಳಿದ್ದ ಕಸಾಬ್ ತನ್ನನ್ನು ಬಾಲಪರಾಧಿಗಳ ನ್ಯಾಯಾಲಯದಲ್ಲೇ ವಿಚಾರಣೆ ನಡೆಸಬೇಕು ಎಂದು ಕೋರಿದ್ದ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಮುಂಬೈನ ಜೆ.ಜೆ.ಆಸ್ಪತ್ರೆಯ ನಾಲ್ವರು ವೈದ್ಯರ ತಂಡ ಕಸಾಬ್‌ನ ದಂತ ಮತ್ತು ಮೂಳೆಯ ಬೆಳವಣಿಗೆಯನ್ನು ಮುಖ್ಯವಾಗಿ ಪರೀಕ್ಷಿಸಿ ಆತನ ವಯಸ್ಸು 20 ಅಥವಾ ಅದಕ್ಕಿಂತ ಹೆಚ್ಚು ಎಂಬುದನ್ನು ಸಾಬೀತುಪಡಿಸಿದರು.

2009: ವಿಶ್ವದ ಹಲವು ರಾಷ್ಟ್ರಗಳಲ್ಲಿ ಆತಂಕ ತಂದೊಡ್ಡಿದ ಹಂದಿ ಜ್ವರಕ್ಕೆ ಮೆಕ್ಸಿಕೊ ದೇಶವೊಂದರಲ್ಲೇ ಒಟ್ಟು 149 ಮಂದಿ ಬಲಿಯಾದರು.

2008: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈದಿನ ಬೆಳಗ್ಗೆ ಆಕಾಶಕ್ಕೆ ಚಿಮ್ಮಿದ ಇಸ್ರೋದ ಪಿ ಎಸ್ ಎಲ್ ವಿ ರಾಕೆಟ್ ಒಂದೇ ಸಲಕ್ಕೆ 10 ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಬಿಡುವ ಮೂಲಕ ಭಾರತದ ಬಾಹ್ಯಾಕಾಶ ವಿಜ್ಞಾನವು ಐತಿಹಾಸಿಕ ವಿಶ್ವ ದಾಖಲೆಯನ್ನು ನಿರ್ಮಿಸಿತು. 230 ಟನ್ ಅಂದರೆ 50 ಆನೆ ತೂಕದ, 12 ಮಹಡಿ ಎತ್ತರದ ಪಿ ಎಸ್ ಎಲ್ ವಿ ಯು ನಮ್ಮ ದೇಶದ ಒಂದು ನಕ್ಷೆ ಉಪಗ್ರಹ `ಕಾರ್ಟೋಸ್ಯಾಟ್-2ಎ' ಒಂದು ದೂರ ಸಂವೇದಿ ಮಿನಿ ಉಪಗ್ರಹ ಹಾಗೂ ವಿದೇಶಗಳ ಎಂಟು ನ್ಯಾನೋ ಉಪಗ್ರಹಗಳನ್ನು ಹಾಗೂ ಒಂದು ದೂರಸಂವೇದಿ ಉಪಗ್ರಹವನ್ನು ನಿಶ್ಚಿತ ಕಕ್ಷೆಗೆ ಸೇರಿಸಿತು. ಉಡಾವಣಾ ಹಲಗೆ ಮೇಲಿನಿಂದ 9.23ಕ್ಕೆ ಚಿಮ್ಮಿದ ಈ ರಾಕೆಟ್ ಯಾವುದೇ ಆತಂಕಕ್ಕೆ ಎಡೆ ಮಾಡಿಕೊಡದೆ ಸುಮಾರು 14 ನಿಮಿಷಗಳ ಅವದಿಯಲ್ಲಿ 635 ಕಿ.ಮೀ. ದೂರದ `ಪೋಲಾರ್ ಸನ್ ಸಿಂಕ್ರೋನಸ್ ಕಕ್ಷೆ'ಗೆ ಉಪಗ್ರಹಗಳನ್ನು ಹಾರಿಸಿತು. ಈದಿನದ ಉಡಾವಣೆಯೂ ಸೇರಿ ಪಿ ಎಸ್ ಎಲ್ ವಿ 12 ಸಲ ಯಶಸ್ವಿಯಾಗಿ ಉಡಾವಣೆಗಳನ್ನು ಮಾಡಿದೆಯಾದರೂ, ಒಂದೇ ಬಾರಿಗೆ 10 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ್ದು ಇದೇ ಮೊದಲು. ರಷ್ಯಾದ ರಾಕೆಟ್ ಒಂದು ಕಳೆದ ವರ್ಷ ಒಂದೇ ಸಲಕ್ಕೆ 16 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತ್ತಾದರೂ ಅವುಗಳ ಒಟ್ಟು ತೂಕ ಕೇವಲ 300 ಕಿ.ಲೋ. ಮಾತ್ರ. ಆದರೆ ಪಿ ಎಸ್ ಎಲ್ ವಿ ಕಕ್ಷೆಗೆ ಸೇರಿಸಿದ ಉಪಗ್ರಹಗಳ ತೂಕ ಒಟ್ಟು 824 ಕೆ.ಜಿ.

2008: ವೇಗಿ ಎಸ್. ಶ್ರೀಶಾಂತ್ ಅವರ ಕೆನ್ನೆಗೆ ಬಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಭಜನ್ ಸಿಂಗ್ ಅವರ ಮೇಲೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ 11 ಪಂದ್ಯಗಳನ್ನು ಆಡದಂತೆ ನಿಷೇಧ ಹೇರಲಾಯಿತು. ಐಪಿಎಲ್ ಮ್ಯಾಚ್ ರೆಫರಿ ಹಾಗೂ ಮಾಜಿ ಆಟಗಾರ ಫಾರೂಕ್ ಎಂಜಿನಿಯರ್ ಅವರು ಈದಿನ ಮಧ್ಯಾಹ್ನ ನವದೆಹಲಿಯ ಹೋಟೆಲ್ ಒಂದರಲ್ಲಿ ಎರಡು ಗಂಟೆ ಕಾಲ ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬಂದರು. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಭಜ್ಜಿ ಕ್ಷಮೆಯಾಚಿಸಿದರು. ಬಳಿಕ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಭಜ್ಜಿ ಮೇಲೆ ಐಪಿಎಲ್ `ಟ್ವೆಂಟಿ-20' ಟೂರ್ನಿಯ 11 ಪಂದ್ಯಗಳ ನಿಷೇಧದ ತೀರ್ಪನ್ನು ಪ್ರಕಟಿಸಿತು.

2008: ಭಾರತ ಹಾಕಿ ಫೆಡರೇಷನ್ ಅಧ್ಯಕ್ಷ ಕೆ.ಪಿ.ಎಸ್. ಗಿಲ್ ಅವರ ಹದಿನೈದು ವರ್ಷಗಳ ಆಳ್ವಿಕೆಗೆ ಕೊನೆಗೂ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಅಂತ್ಯ ಹಾಡಿತು. ಈದಿನ ನಡೆದ ತುರ್ತು ಸಭೆಯಲ್ಲಿ ಐಒಎ, ಭಾರತ ಹಾಕಿ ಫೆಡರೇಷನನ್ನು ಅಮಾನತು ಮಾಡುವುದರ ಜೊತೆಯಲ್ಲಿ ಒಲಿಂಪಿಯನ್ ಅಸ್ಲಮ್ ಷೇರ್ ಖಾನ್ ಅವರ ನೇತೃತ್ವದಲ್ಲಿ ತಾತ್ಕಾಲಿಕ ಆಯ್ಕೆ ಸಮಿತಿಯನ್ನು ನೇಮಿಸಲಾಯಿತು. ಐ ಎಚ್ ಎಫ್ ಕಾರ್ಯದರ್ಶಿ ಕೆ. ಜ್ಯೋತಿಕುಮಾರನ್ ಅಜ್ಲನ್ ಷಾ ಕಪ್ ಹಾಕಿ ಚಾಂಪಿಯನ್ ಶಿಪ್ಪಿನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಆಯ್ಕೆಗಾಗಿ ಲಂಚ ಸ್ವೀಕರಿಸುತ್ತಿದ್ದಾಗ ಟಿ.ವಿ. ಸ್ಟಿಂಗ್ ಆಪರೇಷನ್ನಿನಲ್ಲಿ ಸಿಕ್ಕಿ ಬಿದ್ದ ಹಿನ್ನೆಲೆಯಲ್ಲಿ ಐಒಎ ತುರ್ತು ಸಭೆ ನಡೆಸಿ ಐ ಎಚ್ ಎಫ್ನ ಪ್ರಸ್ತುತ ಆಡಳಿತ ಮಂಡಳಿಯನ್ನು ಕಿತ್ತೊಗೆಯುವುದಕ್ಕೆ ಸರ್ವಾನುಮತದಿಂದ ಸಮ್ಮತಿಸಿತು.

2008: ಮಲೇಷ್ಯಾದ ಸಂಸತ್ತಿಗೆ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಭಾರತೀಯ ಮೂಲದ 10 ಶಾಸಕರು ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಮಹಿಳೆಯೊಬ್ಬರು ಆಯ್ಕೆಯಾಗಿ ಹೊಸ ಇತಿಹಾಸ ನಿರ್ಮಿಸಿದರು. ಮಾರ್ಚ್ 8ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಯಶಾಲಿಗಳಾಗಿದ್ದ ಭಾರತೀಯ ಮೂಲದ 10ಮಂದಿ ಈದಿನ ಆರಂಭವಾದ ಮಲೇಷ್ಯಾದ ಸಂಸತ್ತಿನ 12ನೇ ಅಧಿವೇಶನದಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಬ್ದುಲ್ಲಾ ಅಹಮದ್ ಬದಾವಿ ನೇತೃತ್ವದ್ಲಲಿ ಆಡಳಿತಾರೂಢ ಬರಿಸಾನ್ ನಾಸಿಯೊನಾಲ್ (ಬಿಎನ್) ಪಕ್ಷ ಮಲೇಷ್ಯಾದ ಇತಿಹಾಸದಲ್ಲೇ ಎರಡನೇ ಬಾರಿಗೆ ಮೂರನೇ ಎರಡರಷ್ಟು ಬಹುಮತ ಗಳಿಸಿತು.

2008: ಪ್ರತಿಷ್ಠಿತ ಫೋರ್ಬ್ಸ್ ಪತ್ರಿಕೆಯ ಪಟ್ಟಿಯಲ್ಲಿ ದಾವೂದ್ ಇಬ್ರಾಹಿಂ ಸ್ಥಾನ ಗಳಿಸಿದ್ದಾನೆ! ಸೌಂದರ್ಯ ಅಥವಾ ಆಕರ್ಷಕ ಪುರುಷ ಎಂಬ ಕಾರಣಕ್ಕಾಗಿ ಅಲ್ಲ, ದೇಶಭ್ರಷ್ಟತೆಯ ಕಾರಣಕ್ಕಾಗಿ. ಫೋರ್ಬ್ಸ್ ತಯಾರಿಸಿದ ವಿಶ್ವದ ಪ್ರಮುಖ ಹತ್ತು ದೇಶಭ್ರಷ್ಟರ ಪಟ್ಟಿಯಲ್ಲಿ ಅಲ್ ಖೈದಾದ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಮೂಲದ ದಾವೂದ್ ಇಬ್ರಾಹಿಂ ಮತ್ತು ಆತನ `ಡಿ' ಕಂಪನಿ ನಾಲ್ಕನೇ ಸ್ಥಾನ ಗಳಿಸಿತು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಎನ್ನಲಾದ ಭೂಗತ ದೊರೆ ದಾವೂದ್ (52) ಈಗ ಪಾಕಿಸ್ಥಾನದಲ್ಲಿ ಇರಬಹುದು ಎಂಬ ಶಂಕೆ ಇದ್ದು, ಈತ ಅಲ್ ಖೈದಾ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಅಮೆರಿಕ ಘೋಷಿಸಿದೆ. ಪೊಲೀಸರಿಗೆ ತನ್ನ ಗುರುತು ಸಿಗಬಾರದೆಂದು ದಾವೂದ್ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರಬಹುದೆಂದೂ `ಫೋರ್ಬ್ಸ್' ಹೇಳಿತು.

2008: ತನ್ನ ಸ್ವಂತ ಮಗಳನ್ನೇ 24 ವರ್ಷಗಳ ಕಾಲ ಮನೆಯಲ್ಲಿ ಸೆರೆಯಾಗಿಟ್ಟು, ಮಗಳಿಗೇ 7 ಮಕ್ಕಳನ್ನು ಕರುಣಿಸಿದ ಆಸ್ಟ್ರೇಲಿಯಾದ 73 ವರ್ಷದ ಜೋಸೆಫ್ ಎಂಬ ತಂದೆಯೊಬ್ಬ ಇದೀಗ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು ತನ್ನ `ಪಾಪಕೃತ್ಯ'ಕ್ಕೆ ಪಶ್ಚಾತ್ತಾಪ ಪಟ್ಟಿದ್ದಾನೆ ಎಂದು ಆಸ್ಟ್ರಿಯಾ ಸುದ್ದಿ ವಾಹಿತಿನಯೊಂದು ವರದಿ ಮಾಡಿತು. ತಂದೆಯಿಂದಲೇ ಮಕ್ಕಳನ್ನು ಪಡೆದಿರುವ ಮಗಳು ಎಲಿಜಬೆತ್ ಫ್ರಿಜ್ ಹಾಗೂ ಆಕೆಯ ಮಕ್ಕಳು ಸೆರೆಯಾಗಿರುವ ಸ್ಥಳವನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ವರದಿ ಹೇಳಿತು.

2008: ಚೀನಾದ ಪೂರ್ವ ಭಾಗದ ಶಾಂಡೊಂಗ್ ಪ್ರಾಂತ್ಯದಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಪಕ್ಷ 60 ಮಂದಿ ಸತ್ತು 400ಕ್ಕೂ ಹೆಚ್ಚು ಮಂದಿ ಗಾಯಗೊಂಡರು. 57 ಜನರು ಸ್ಥಳದಲ್ಲಿಯೇ ಮೃತರಾದರೆ ಮೂವರು ಆಸ್ಪತ್ರೆಯಲ್ಲಿ ಅಸು ನೀಗಿದರು. ಬೀಜಿಂಗಿನಿಂದ ಕ್ವಿಂಗಾಡೊಗೆ ತೆರಳುತ್ತಿದ್ದ ಪ್ರಯಾಣಿಕರ ರೈಲು ಹಳಿ ತಪ್ಪಿ ಯಂತಾಯಿ ರೈಲಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತು.

2008: ಪಾಕಿಸ್ಥಾನದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ನಡೆಸಿದ ಹೋರಾಟಕ್ಕಾಗಿ ಮಾಜಿ ಪ್ರಧಾನಿ ದಿ. ಬೆನಜೀರ್ ಭುಟ್ಟೊ ಅವರಿಗೆ ಪ್ರತಿಷ್ಠಿತ ತಿಪ್ಪೆರರಿ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು. ಭುಟ್ಟೊ ಅವರ ದೀರ್ಘ ಕಾಲದ ನಿಕಟವರ್ತಿ ಬಶೀರ್ ರೈಜಾ ಅವರು ಭುಟ್ಟೊ ಕುಟುಂಬದ ಪರವಾಗಿ ಐರ್ಲೆಂಡಿನಲ್ಲಿ ನಡೆದ ಹೃದಯಸ್ಪರ್ಶಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಂಡರು.

2008: ಕರ್ನಾಟಕದಲ್ಲಿನ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಘವು ಸಲ್ಲಿಸಿದ್ದ `ಸೂತ್ರ'ಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿತು. ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಘವು ವೈದ್ಯಕೀಯ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಳೆದ ವರ್ಷ ಜಾರಿಗೆ ತಂದಿದ್ದ `ಸೂತ್ರ'ವನ್ನೇ ಒಪ್ಪಿಕೊಂಡಿವೆ ಎಂದು ನ್ಯಾಯಮೂರ್ತಿ ಬಿ.ಎನ್.ಅಗರವಾಲ್ ನೇತೃತ್ವದ ನ್ಯಾಯಪೀಠವು ತಿಳಿಸಿತು.

2008: ರೋಗಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಡಾ. ಪ್ರಕಾಶ್ ಕಪಾಟೆ ಅವರಿಗೆ ಒಂದು ವರ್ಷ ಶಿಕ್ಷೆ ಮತ್ತು ಎರಡು ಸಾವಿರ ರೂಪಾಯಿ ದಂಡ ವಿಧಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶ ನೀಡಿತು. ಕ್ಯಾನ್ಸರಿನಿಂದ ಬಳಲುತ್ತಿದ್ದ ಚಿಂತಾಮಣಿಯ ಐಮರೆಡ್ಡಿಹಳ್ಳಿಯ ರಾಮಣ್ಣ ಎಂಬುವರು 2000ನೇ ಸಾಲಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ರಾಮಣ್ಣ ಅವರಿಗೆ ರೆಡಿಯೋಥೆರೆಫಿ ಮಾಡಲು ಪ್ರಕಾಶ್ ಎರಡು ಸಾವಿರ ರೂಪಾಯಿ ಲಂಚ ಕೇಳಿದ್ದರು. ಈ ಬಗ್ಗೆ ರಾಮಣ್ಣ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಒಂದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ್ದ ತನಿಖಾ ತಂಡ ಪ್ರಕಾಶ್ ಅವರನ್ನು ಬಂಧಿಸಿತ್ತು. ಲೋಕಾಯುಕ್ತದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವೈ.ಆರ್. ಜಗದೀಶ್ ವಾದ ಮಂಡಿಸಿದ್ದರು. ವಿಶೇಷ ನ್ಯಾಯಾಧೀಶರಾದ ಆರ್.ಎಂ. ಶೆಟ್ಟರ್ ಅವರು ಮೇಲಿನ ಆದೇಶ ನೀಡಿದರು.

2006: ಎಚ್. ಟಿ. ಮೀಡಿಯಾ ಲಿಮಿಟೆಡ್ ಉಪಾಧ್ಯಕ್ಷೆ ಶೋಭನಾ ಭಾರ್ತಿಯಾ ಮತ್ತು ಪಯೋನೀರ್ ಸಂಪಾದಕ ಚಂದನ್ ಮಿತ್ರ ಅವರನ್ನು ರಾಜ್ಯಸಭಾ ಸದಸ್ಯರಾಗಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯಗಳ ಕೇಂದ್ರ (ಸಿಪಿಐಎಲ್) ತನ್ನ ಅರ್ಜಿಯಲ್ಲಿ ಮೇಲ್ಮನೆಗೆ ಮಾಡಲಾದ ಇವರಿಬ್ಬರ ನಾಮಕರಣ ಸಂವಿಧಾನದ 80 (3) ವಿಧಿಯಡಿಯಲ್ಲಿ ಸೂಚಿತವಾಗಿರುವ ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಮಾಜ ಸೇವೆ ಈ ವರ್ಗಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತ್ತು. ನ್ಯಾಯಮೂರ್ತಿ ರುಮಾ ಪಾಲ್ ನೇತೃತ್ವದ ಪೀಠವು ಸಮಾಜ ಸೇವೆ ಶಬ್ಧದ ಅರ್ಥವ್ಯಾಪ್ತಿ ಇಂತಹ ಪ್ರಕರಣಗಳು ಒಳಗೊಳ್ಳುವಷ್ಟು ವಿಶಾಲವಾಗಿದೆ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದರು.

2006: ಯುತ್ ಐಕಾನ್ ಹೆಸರಿನ ಮೊಹರು ಮಾಡಲಾದ ಸ್ಪೈಟ್ ಬಾಟಲಿಯೊಳಗೆ ಸತ್ತ ಕೀಟಗಳು ಇದ್ದುದಕ್ಕಾಗಿ 1.20 ಲಕ್ಷ ರೂಪಾಯಿಗಳ ಪರಿಹಾರವನ್ನು ಗ್ರಾಹಕನಿಗೆ ನೀಡುವಂತೆ ದೆಹಲಿಯ ಗ್ರಾಹಕ ನ್ಯಾಯಾಲಯವೊಂದು ಕೋಕಾ-ಕೋಲಾ ಕಂಪೆನಿಗೆ ಆದೇಶಿಸಿತು.

2006: ಹೌ ಓಪಲ್ ಮೆಹ್ತಾ ಗಾಟ್ ಕಿಸ್ಡ್, ಗಾಟ್ ವೈಲ್ಡ್ ಅಂಡ್ ಗಾಟ್ ಎ ಲೈಫ್ ಕಾದಂಬರಿ ಕರ್ತೃ ಭಾರತೀಯ ಮೂಲದ ಲೇಖಕಿ ಕಾವ್ಯ ವಿಶ್ವನಾಥನ್ ಕೃತಿಚೌರ್ಯ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಕಾದಂಬರಿ ಪ್ರಕಟಿಸಿದ ಪ್ರಕಾಶನ ಸಂಸ್ಥೆಯ ಲಿಟ್ಲ್ ಬ್ರೌನ್ ಕಾದಂಬರಿಯ ಎಲ್ಲ ಪ್ರತಿಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಲು ನಿರ್ಧರಿಸಿತು.

2006: ಪಣಜಿ ಸಮೀಪದ ವಾಸೊದಲ್ಲಿ ಭಾರತೀಯ ಕರಾವಳಿ ಕಾವಲು ಪಡೆಗೆ ಅತ್ಯಂತ ದೊಡ್ಡದಾದ ಅತ್ಯಾಧುನಿಕ ಕರಾವಳಿ ಕಡಲು ಪಹರೆ ನೌಕೆ 105 ಮೀಟರ್ ಉದ್ದದ ಐಜಿಜಿಎಸ್ ಸಂಕಲ್ಪ ಸೇರ್ಪಡೆಗೊಂಡಿತು.

2006: ಲಾಟರಿ ಟಿಕೆಟ್ಟುಗಳ ಮಾರಾಟದ ಮೇಲೆ ರಾಜ್ಯ ಸರ್ಕಾರಗಳು ತೆರಿಗೆ ವಿಧಿಸುವಂತಿಲ್ಲ ಎಂದು ಭಾರತದ ಸುಪ್ರೀಂಕೋರ್ಟ್ ತೀರ್ಪು ನೀಡಿತು. ನ್ಯಾಯಮೂರ್ತಿ ರುಮಾ ಪಾಲ್ ನೇತೃತ್ವದ ಪಂಚಸದಸ್ಯ ಸಂವಿಧಾನ ಪೀಠವು 1986ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿ ಈ ತೀರ್ಪನ್ನು ನೀಡಿತು. ಲಾಟರಿ ಟಿಕೆಟ್ಟುಗಳ ಮಾರಾಟವನ್ನು ವಸ್ತುಗಳ ಮಾರಾಟಕ್ಕೆ ಸಮಾನವಾಗಿ ನೋಡಲಾಗದು. ಆದ್ದರಿಂದ ಅದರ ಮೇಲೆ ತೆರಿಗೆ ವಿಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಪಂಚಸದಸ್ಯ ಪೀಠ ಹೇಳಿತು. ಲಾಟರಿ ಟಿಕೆಟ್ಟುಗಳ ಮಾರಾಟದ ಮೇಲೆ ತೆರಿಗೆ ವಿಧಿಸಬಹುದು ಎಂದು 1986ರಲ್ಲಿ ನೀಡಲಾಗಿದ್ದ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.

1946: ಭಾಷೆ ಹಾಗೂ ಕೋಶ ವಿಜ್ಞಾನಿ, ಸಂಶೋಧಕ ಪ್ರೊ. ಎ.ವಿ. ನಾವಡ ಅವರು ಮಂಗಳೂರು ಸಮೀಪದ ಕೋಟೆಕಾರಿನಲ್ಲಿ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ- ಪಾರ್ವತಿ ದಂಪತಿಯ ಪುತ್ರರಾಗಿ ಜನಿಸಿದರು.

1945: ಇಟೆಲಿಯ ಸರ್ವಾಧಿಕಾರಿ ಬೆನಿಟೋ ಮುಸ್ಸೋಲಿನಿ ಮತ್ತು ಆತನ ಪ್ರೇಯಸಿ ಕ್ಲಾರಾ ಪೆಟಾಸ್ಸಿಯನ್ನು ಅವರು ರಾಷ್ಟ್ರದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಕೊಲ್ಲಲಾಯಿತು. ತಲೆಕೆಳಗಾಗಿ ನೇತಾಡುತ್ತಿದ್ದ ಅವರ ಶವಗಳು ಮಿಲಾನಿನ ಪಿಯಾಝಾ ಲೊರೆಟೊದಲ್ಲಿ ಪತ್ತೆಯಾದವು.

1937: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ ಜನ್ಮದಿನ. 1979ರಿಂದ ಇತ್ತೀಚೆಗೆ ಅಮೆರಿಕ ಪಡೆಗಳು ದಾಳಿ ನಡೆಸುವವರೆಗೂ ಈತ ಇರಾಕಿನ ಅಧ್ಯಕ್ಷನಾಗಿದ್ದ.

1928: ಇ.ಎಂ. ಶೂಮೇಕರ್ (1928-97) ಹುಟ್ಟಿದ ದಿನ. ಅಮೆರಿಕದ ಖಭೌತ ತಜ್ಞನಾದ ಈತ ಚಂದ್ರನ ಮಣ್ಣಿನ ಪದರ ಹಾಗೂ ಒಡೆದ ಕಲ್ಲುಗಳಿಗೆ `ರಿಗೋಲಿತ್' ಎಂದು ಹೆಸರಿಟ್ಟ. 1994ರಲ್ಲಿ ಗುರುಗ್ರಹಕ್ಕೆ ಡಿಕ್ಕಿ ಹೊಡೆದ ಪಿ/ಶೂಮೇಕರ್-ಲೆವಿ 9 ಧೂಮಕೇತುವನ್ನೂ ಈತ ಸಂಶೋಧಿಸಿದ.

1924: ಕೆನ್ನೆತ್ ಕೌಂಡಾ ಜನ್ಮದಿನ. 1961ರಲ್ಲಿ ಜಾಂಬಿಯಾಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಈತ 1991ರವರೆಗೂ ಅಲ್ಲಿನ ಅಧ್ಯಕ್ಷನಾಗಿದ್ದ.

1865: ಸ್ಯಾಮುಯೆಲ್ ಕ್ಯುನಾರ್ಡ್ 77ನೇ ವಯಸಿನಲ್ಲಿ ಮೃತನಾದ. ಬ್ರಿಟಿಷ್ ವರ್ತಕನಾದ ಈತ ಬ್ರಿಟಿಷ್ ಸ್ಟೀಮ್ ಶಿಪ್ ಕಂಪೆನಿಯ ಸ್ಥಾಪಕ. ಈ ಕಂಪೆನಿಗೆ ಆತನ ಹೆಸರನ್ನೇ ಇಡಲಾಗಿತ್ತು.

Tuesday, April 27, 2010

ಇಂದಿನ ಇತಿಹಾಸ History Today ಏಪ್ರಿಲ್ 27

ಇಂದಿನ ಇತಿಹಾಸ

ಏಪ್ರಿಲ್ 27

ಬಾಲಿವುಡ್ ಖ್ಯಾತ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಫಿರೋಜ್ ಖಾನ್ (70) ಅವರು ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ನಿಧನರಾದರು. 'ಸ್ಟೈಲ್ ಖಾನ್' ಎಂದೇ ಗುರುತಿಸಿಕೊಂಡಿದ್ದ ಫಿರೋಜ್ ಅವರು ಬೆಂಗಳೂರಿನಲ್ಲಿ ಜನಿಸಿದ್ದರು. ಇಲ್ಲಿಯೇ ಶಾಲಾ- ಕಾಲೇಜು ಶಿಕ್ಷಣ ಪೂರೈಸಿ, ಚಿತ್ರರಂಗದಲ್ಲಿ ಯಶಸ್ಸು ಗಳಿಸಲು ಮುಂಬೈಗೆ ತೆರಳಿದ್ದರು. 1960ರಲ್ಲಿ 'ದೀದಿ' ಎಂಬ ಚಿತ್ರದಿಂದ ಚಿತ್ರರಂಗ ಪ್ರವೇಶಿಸಿದ ಅವರು ಎರಡು ವರ್ಷಗಳಲ್ಲಿಯೇ ಹಾಲಿವುಡ್‌ನತ್ತ ಆಕರ್ಷಿತರಾದರು.

2009: ಕೋಳಿ ಜ್ವರದ ನಂತರ ಈಗ ವಿಶ್ವದೆಲ್ಲೆಡೆ ಹಂದಿಜ್ವರದ ಭೀತಿ ವ್ಯಾಪಿಸಿತು. ಉತ್ತರ ಅಮೆರಿಕ ಮತ್ತು ಯೂರೋಪ್‌ನಲ್ಲಿ ಹಂದಿಜ್ವರ ಕಾಣಿಸಿಕೊಂಡಿರುವ ಪರಿಣಾಮ ಬೆಂಗಳೂರು ಸೇರಿದಂತೆ ದೇಶದ ಎಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿಶೇಷ ವೈದ್ಯಕೀಯ ತಪಾಸಣೆಗಾಗಿ ಹೆಚ್ಚುವರಿ ವೈದ್ಯರನ್ನು ನಿಯೋಜಿಸಲಾಯಿತು. ಮೆಕ್ಸಿಕೊ, ಅಮೆರಿಕ, ಕೆನಡಾ, ನ್ಯೂಜಿಲೆಂಡ್, ಸ್ಪೇನ್, ಬ್ರಿಟನ್ ಮುಂತಾದ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರನ್ನು ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ, ಹೈದರಾಬಾದ್, ಕೊಚ್ಚಿ, ಜೈಪುರ, ಪಣಜಿ ಮತ್ತಿತರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.

2009: ಶ್ರೀಲಂಕಾದಲ್ಲಿ ಯುದ್ಧಪೀಡಿತ ಪ್ರದೇಶದಿಂದ ಪಾರಾಗಿ ಬಂದ ಸಾವಿರಾರು ತಮಿಳು ಸಂತ್ರಸ್ತರಿಗೆ ಮಾನವೀಯ ನೆರವು ನೀಡಲು ಭಾರತ 100 ಕೋಟಿ ರೂಪಾಯಿಗಳ ಕೊಡುಗೆ ಘೋಷಿಸಿತು. ತಮಿಳು ಪ್ರತ್ಯೇಕತಾವಾದಿ ಬಂಡುಕೋರ ಸಂಘಟನೆ 'ಎಲ್‌ಟಿಟಿಇ' ವಿರುದ್ಧ ವೈಮಾನಿಕ ದಾಳಿ ಮತ್ತು ಭಾರಿ ಶಸ್ತ್ರಾಸ್ತ್ರಗಳ ಬಳಕೆ ನಿಲ್ಲಿಸುವುದಾಗಿ ಶ್ರೀಲಂಕಾ ಸರ್ಕಾರ ಪ್ರಕಟಿಸಿದ ಬೆನ್ನಲ್ಲೇ ಈ ಕೊಡುಗೆ ಘೋಷಿಸಲಾಯಿತು.

2009: ಶ್ರೀಲಂಕಾದಲ್ಲಿ ಕದನವಿರಾಮ ಘೋಷಿಸಬೇಕೆಂದು ಆಗ್ರಹಿಸಿ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಈದಿನ ಬೆಳಿಗ್ಗೆ ಚೆನ್ನೈಯಲ್ಲಿ 'ಮಿಂಚಿನ' ಉಪವಾಸ ಸತ್ಯಾಗ್ರಹ ಆರಂಭಿಸಿದರೂ, ಸೇನಾ ಕಾರ್ಯಾಚರಣೆ ಕೊನೆಗೊಂಡ ಬಗ್ಗೆ ಲಂಕಾ ಸರ್ಕಾರದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ 6 ಗಂಟೆಗಳ ಬಳಿಕ ಸತ್ಯಾಗ್ರಹವನ್ನು ಕೊನೆಗೊಳಿಸಿದರು. ಶ್ರೀಲಂಕಾದಲ್ಲಿ ಮುಗ್ಧ ತಮಿಳರನ್ನು ಕೊಲ್ಲುತ್ತಿರುವುದನ್ನು ಖಂಡಿಸಿ ಕರುಣಾನಿಧಿ ಅವರು ಯಾವುದೇ ಪೂರ್ವಸೂಚನೆ ನೀಡದೆ ಬೆಳಿಗ್ಗೆ 6.30ಕ್ಕೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಸತ್ಯಾಗ್ರಹ ಕೊನೆಗೊಂಡ ಸುದ್ದಿ ಹೊರಬೀಳುತ್ತಿದ್ದಂತೆಯೇ ಸ್ಥಳದಲ್ಲಿದ್ದ ನೂರಾರು ಡಿಎಂಕೆ ಕಾರ್ಯಕರ್ತರು ಹರ್ಷೋದ್ಗಾರ ಮಾಡಿದರು. ಕೇಂದ್ರ ಸಚಿವ ಟಿ. ಆರ್. ಬಾಲು, ಕರುಣಾ ನಿಧಿ ಅವರ ಪುತ್ರ ಎಂ. ಕೆ. ಅಳಗಿರಿ, ಪುತ್ರಿ ಕನಿಮೋಳಿ, ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಸಹಿತ 300ಕ್ಕೂ ಅಧಿಕ ಡಿಎಂಕೆ ಕಾರ್ಯಕರ್ತರು ಉಪವಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

2009: ಇನ್ನು ಮುಂದೆ ರಾಹುಕಾಲ ನೋಡಲು ಪಂಚಾಂಗ ಅಥವಾ ಕ್ಯಾಲೆಂಡರ್‌ನ ಮೊರೆ ಹೋಗಬೇಕಾದ ಅಗತ್ಯವಿಲ್ಲ. ವಾರದ ಎಲ್ಲ ದಿನಗಳ ರಾಹುಕಾಲದ ಸಮಯವನ್ನು ತೋರುವ ವಿಶಿಷ್ಠ ಗಡಿಯಾರವನ್ನು ತಾವು ಸಿದ್ಧ ಪಡಿಸಿರುವುದನ್ನು ವಿ. ರವಿ ಸುಕುಮಾರನ್ ಬೆಂಗಳೂರಿನಲ್ಲಿ ಬಹಿರಂಗ ಪಡಿಸಿದರು. 'ವಾರದ ಎಲ್ಲ ದಿನಗಳಲ್ಲೂ ರಾಹುಕಾಲ ಬೇರೆ ಬೇರೆ ಸಮಯಕ್ಕೆ ಬರುತ್ತದೆ. ಹಾಗಾಗಿ ಗಡಿಯಾರದಲ್ಲಿ ಸಮಯ ನಮೂದಿಸಿರುವ ಸಂಖ್ಯೆಯ ಪಕ್ಕದಲ್ಲಿಯೇ ರಾಹುಕಾಲದ ಸಮಯವನ್ನೂ ನೀಡಲಾಗಿದೆ. ಇದರಿಂದ ಸುಲಭವಾಗಿ ರಾಹುಕಾಲದ ಸಮಯವನ್ನು ಗುರುತಿಸಬಹುದು' ಎಂದು ರವಿ ಹೇಳಿದರು. 'ಗೋಡೆ ಗಡಿಯಾರದಲ್ಲಿ ಈ ಮಾಹಿತಿಯನ್ನು ಅಳವಡಿಸಿರುವ ರೀತಿಯಲ್ಲೇ ಕೈ ಗಡಿಯಾರಗಳಿಗೂ ಅಳವಡಿಸಬಹುದು. ಇದು ಕಡಿಮೆ ಖರ್ಚಿನ ತಂತ್ರ. ರಾಹುಕಾಲ ಗುರುತಿಸುವ ಗಡಿಯಾರಕ್ಕೆ ಹಕ್ಕು ಸ್ವಾಮ್ಯಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ. ಇದನ್ನು ಇನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ' ಎಂದು ಅವರು ಹೇಳಿದರು. (ವಿವರಗಳಿಗೆ ಮೊಬೈಲ್ 94483 53046).

2009: ಗೋಧ್ರಾ ನರಮೇಧ ನಂತರದ ಕೋಮು ಗಲಭೆಯನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರ 63 ಮಂದಿ ರೂಪಿಸಿದ್ದಾಗಿ ಮಾಜಿ ಸಂಸದರೊಬ್ಬರ ಪತ್ನಿ ಮಾಡಿದ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿಗೆ) ನಿರ್ದೇಶನ ನೀಡಿತು. ಮೂರು ತಿಂಗಳ ಒಳಗಾಗಿ ಈ ಆರೋಪದ ಕುರಿತು ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ನೇತೃತ್ವದ ನ್ಯಾಯಪೀಠ ಆದೇಶಿಸಿತು. ಗುಜರಾತ್‌ನಲ್ಲಿ 2002ರಲ್ಲಿ ನಡೆದ ಈ ಗಲಭೆಯಿಂದ 1044 ಜನರ ಹತ್ಯೆ, 233 ಮಂದಿಯ ಕಣ್ಮರೆ ಹಾಗೂ 1,40,000ಕ್ಕೂ ಹೆಚ್ಚು ಜನ ಮನೆಮಠ ಕಳೆದುಕೊಂಡಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಮೋದಿ ಮತ್ತು ಅವರ ಸಂಪುಟದ ಸಚಿವರು, ಬಿಜೆಪಿ ಶಾಸಕರು, ವಿಎಚ್‌ಪಿ ಕಾರ್ಯಕರ್ತರು, ಆಗಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಇತರ ಪೊಲೀಸ್ ಅಧಿಕಾರಿಗಳು ಗಲಭೆಯಲ್ಲಿ ಭಾಗಿಯಾಗಿದ್ದುದಾಗಿ ಹತ್ಯೆಯಾದ ಕಾಂಗ್ರೆಸ್‌ನ ಮಾಜಿ ಸಂಸದ ಎಹಸಾನ್ ಜಫ್ರಿಯವರ ಪತ್ನಿ ಜಾಕಿಯಾ ನಸೀಂ ಅಹೆಸಾನ್ ಆರೋಪ ಮಾಡಿದ್ದರು.

2009: ಬಾಲಿವುಡ್ ಖ್ಯಾತ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಫಿರೋಜ್ ಖಾನ್ (70) ಅವರು ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ನಿಧನರಾದರು. ಒಂದು ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಸಹೋದರ ರಾದ ಸಂಜಯ್ ಖಾನ್, ಅಕ್ಬರ್ ಖಾನ್, ಪುತ್ರ ನಟ ಫರ್ದೀನ್ ಖಾನ್, ಪುತ್ರಿ ಲೈಲಾ ಮತ್ತು ಅಪಾರ ಬಂಧು ಬಳಗವನ್ನು ಅಗಲಿದರು. 'ಸ್ಟೈಲ್ ಖಾನ್' ಎಂದೇ ಗುರುತಿಸಿಕೊಂಡಿದ್ದ ಫಿರೋಜ್ ಅವರು ಬೆಂಗಳೂರಿನಲ್ಲಿ ಜನಿಸಿದ್ದರು. ಇಲ್ಲಿಯೇ ಶಾಲಾ- ಕಾಲೇಜು ಶಿಕ್ಷಣ ಪೂರೈಸಿ, ಚಿತ್ರರಂಗದಲ್ಲಿ ಯಶಸ್ಸು ಗಳಿಸಲು ಮುಂಬೈಗೆ ತೆರಳಿದ್ದರು. 1960ರಲ್ಲಿ 'ದೀದಿ' ಎಂಬ ಚಿತ್ರದಿಂದ ಚಿತ್ರರಂಗ ಪ್ರವೇಶಿಸಿದ ಅವರು ಎರಡು ವರ್ಷಗಳಲ್ಲಿಯೇ ಹಾಲಿವುಡ್‌ನತ್ತ ಆಕರ್ಷಿತರಾದರು. 'ಟಾರ್ಜನ್ ಗೋಸ್ ಟು ಇಂಡಿಯಾ' ಎಂಬ ಇಂಗಿಷ್ಲ್ ಚಿತ್ರ ನಿರ್ಮಿಸಿ, ಅಭಿನಯಿಸಿದರು. ಮತ್ತೆ ಬಾಲಿವುಡ್‌ಗೆ ಮರಳಿದ ಅವರಿಗೆ 'ಆರ್ಜೂ', 'ಔರತ್', 'ಸಫರ್', 'ಧರ್ಮಾತ್ಮ' ಮತ್ತು 'ಖುರ್ಬಾನಿ' ಚಲನಚಿತ್ರಗಳು ಖ್ಯಾತಿ ತಂದುಕೊಟ್ಟವು. 1970ರಲ್ಲಿ ಅತ್ಯುತ್ತಮ ಪೋಷಕ ನಟನೆಗಾಗಿ ಫಿಲಂಫೇರ್ ಪ್ರಶಸ್ತಿ ಗಳಿಸಿದರು. 2000ದಲ್ಲಿ ಜೀವಮಾನ ಸಾಧನೆಗಾಗಿ ಪ್ರಶಸ್ತಿ ಪಡೆದರು. 1998ರಲ್ಲಿ ಪುತ್ರ ಫರ್ದೀನ್ ಖಾನ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಅವರು 'ಪ್ರೇಮ್ ಅಗನ್' ಮತ್ತು 'ಜಾನಶೀನ್' ಚಲನಚಿತ್ರಗಳನ್ನು ನಿರ್ಮಿಸಿದರು. ಕಾಯಿಲೆಯಿಂದ ಬಳಲುತ್ತಿದ್ದರೂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಅವರು ಅಕ್ಷಯ್ ಕುಮಾರ್ ಅಭಿನಯದ 'ವೆಲ್‌ಕಮ್' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ತಾವು ಅಭಿನಯಿಸಿದ್ದ 'ಖುರ್ಬಾನಿ' ಚಿತ್ರವನ್ನು ಮತ್ತೊಮ್ಮೆ ರಿಮೇಕ್ ಮಾಡಿ, ಫರ್ದೀನ್‌ಖಾನ್‌ಗೆ ಪ್ರಮುಖ ಪಾತ್ರ ನೀಡುವುದು ಫಿರೋಜ್ ಅವರ ಕೊನೆಯ ಆಸೆಯಾಗಿತ್ತು. ಬೆಂಗಳೂರು ಅವರ ಮೆಚ್ಚಿನ ತಾಣವಾಗಿತ್ತು.

2009: ಸರಳ ಹಾಗೂ ನೇರ ನುಡಿಯ ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದ ಹೊಸಪೇಟೆಯ ಮಾಜಿ ಶಾಸಕರಾದ ಜಿ.ಶಂಕರಗೌಡ (73) ಈದಿನ ಬೆಳಗಿನ ಜಾವ ನಿಧನರಾದರು. ಶಾಸಕರಾದರೂ ಜನಸಾಮಾನ್ಯರಂತೆ ತಿರುಗಾಡುವ ಮೂಲಕ ಸರಳತೆಗೆ ಮಾದರಿಯಾದ್ದ ಅವರು, 1983ರಲ್ಲಿ ಕಾಂಗ್ರೆಸ್ ಪಕ್ಷದಿಂದ ಹಾಗೂ 1993ರಲ್ಲಿ ಭಾರತೀಯ ಜನತಾ ಪಕ್ಷದಿಂದ ಮೊದಲಬಾರಿಗೆ ಜಿಲ್ಲೆಯನ್ನು ಪ್ರತಿನಿಧಿಸಿ ವಿಧಾನಸಭೆ ಪ್ರವೇಶಿಸಿ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ನೀಡಿದ್ದರು. ಮೂಲತಃ ಕೃಷಿಕರಾಗಿದ್ದ ಜಿ.ಶಂಕರಗೌಡರು ರೈತಪರವಾಗಿ ಅಪಾರ ಕಾಳಜಿ ಹೊಂದಿದ್ದರು. ಶಿಕ್ಷಣಪ್ರೇಮಿಯೂ ಆಗಿದ್ದ ಇವರು ಮಹಿಳಾ ಕಾಲೇಜು ಪ್ರಾರಂಭಿಸಿದ್ದರು.

2009: ತೆಂಕು ತಿಟ್ಟಿನ ಚಂಡೆ, ಮದ್ದಳೆ ಮಾಂತ್ರಿಕ ಎಂದೇ ಖ್ಯಾತರಾಗಿದ್ದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ (82) ಬೆಂಗಳೂರು ನಗರದ ಕೋರಮಂಗಲದಲ್ಲಿ ಯಕ್ಷಗಾನ ಪ್ರದರ್ಶನ ನೀಡಲು ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲೇ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ, ಐವರು ಪುತ್ರಿಯರು ಹಾಗೂ ಮೂವರು ಪುತ್ರರನ್ನು ಅಗಲಿದರು. ಕೋರಮಂಗಲದ ಬಿಡಿಎ ವಾಣಿಜ್ಯ ಸಂಕೀರ್ಣದ ಬಳಿಯಿರುವ ಎಡನೀರು ಗೋಪಾಲಕೃಷ್ಣ ಸ್ವಾಮಿ ದೇವಾಲಯದಲ್ಲಿ ವಾಸ್ತವ್ಯ ಹೂಡಿದ್ದ ಬಲ್ಲಾಳರು ಈದಿನ ಸಂಜೆ ಯಕ್ಷಗಾನ ಪ್ರದರ್ಶನದಲ್ಲಿ ಭಾಗವಹಿಸಬೇಕಿತ್ತು. ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡ ಕಾರಣ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೊ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಯಿತು. ಸಂಜೆ ಹಿಂತಿರುಗಿದ ಅವರು ದೇವಾಲಯದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದರು. ಸಂಜೆ 6.45ರ ವೇಳೆಗೆ ಪ್ರದರ್ಶನಕ್ಕೂ ಮೊದಲು ಚೌಕಿ ಪೂಜೆ ನಡೆಸುವ ಸಂದರ್ಭದಲ್ಲೇ ಮತ್ತೆ ಎದೆ ನೋವು ಕಾಣಿಸಿಕೊಂಡು ಕುಸಿದುಬಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಕೊನೆ ಉಸಿರೆಳೆದರು. ಬಲ್ಲಾಳರು ಸುಮಾರು 50 ವರ್ಷಗಳಿಗೂ ಹೆಚ್ಚು ಕಾಲ ಚಂಡೆ- ಮದ್ದಳೆ ವಾದಕರಾಗಿ ಸೇವೆ ಸಲ್ಲಿಸಿದ್ದರು. ಅವರಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದ್ದವು.

2009: ಇಸ್ಲಾಮಾಬಾದ್ ನಗರದತ್ತ ಧಾವಿಸಿ ಬರುವ ತಾಲಿಬಾನಿಗಳನ್ನು ತಡೆದು ಹಿಮ್ಮೆಟ್ಟಿಸಬೇಕೆಂದು ಅಮೆರಿಕ ಸರ್ಕಾರವು ಒತ್ತಡ ಹೇರಿದ ಹಿನ್ನೆಲೆಯಲ್ಲಿ ಪಾಕಿಸ್ಥಾನಿ ಸೈನ್ಯವು ವಾಯವ್ಯ ಪ್ರಾಂತ್ಯದ ತಾಲಿಬಾನ್ ನೆಲೆಗಳ ಮೇಲೆ ಪರಿಣಾಮಕಾರಿ ದಾಳಿ ನಡೆಸಿದ್ದು, ಸುಮಾರು 50ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದರು. ಪಾಕ್ ಯೋಧರು ಹೆಲಿಕಾಪ್ಟರ್‌ಗಳ ಮೂಲಕ ಸ್ಫೋಟಕದ ಪುಡಿಗಳನ್ನು ಗಿರಿಕಂದರಗಳ ಮೇಲೆ ಚೆಲ್ಲಿ, ಅಲ್ಲಿ ಅಡಗಿದ್ದ ತಾಲಿಬಾನಿಗಳ ಮೇಲೆ ಇನ್ನಿಲ್ಲದ ಒತ್ತಡ ಹೇರಿದರು.

2009: ನಾಲ್ಕು ತಿಂಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡ್ದಿದ ಪೋಲೆಂಡ್‌ನ ಭೂ ವಿಜ್ಞಾನಿಯೊಬ್ಬರ ತಲೆಯನ್ನು ಕಡಿದ ತಾಲಿಬಾನ್ ಉಗ್ರರು ವಿಜ್ಞಾನಿಯ ದೇಹವನ್ನು ಸರ್ಕಾರಿ ಅಧಿಕಾರಿಗಳಿಗೆ ಒಪ್ಪಿಸ್ದಿದಾರೆ ಎಂದು ಇಸ್ಲಾಮಾಬಾದಿನಲ್ಲಿ ಅಧಿಕಾರಿಗಳು ತಿಳಿಸಿದರು. ಪೋಲೆಂಡ್‌ನ ಜಿಯೋಫಿಜ್‌ಕಾ ಎಂಬ ಕಂಪೆನಿಯ 42 ವರ್ಷದ ಭೂ ವಿಜ್ಞಾನಿ ಪಿಯೋಟರ್ ಸ್ಟಾನ್‌ಜಾಕ್ ಪಾಕಿಸ್ಥಾನದ ರಾಜ್ಯ ಸ್ವಾಮ್ಯದ ತೈಲ ಮತ್ತು ಇಂಧನ ಸಂಶೋಧನಾ ಕಂಪೆನಿಯ ಯೋಜನೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉಗ್ರರು ಕಳೆದ ಸೆಪ್ಟೆಂಬರಿನಲ್ಲಿ ಪಂಜಾಬ್ ಪ್ರಾಂತ್ಯದ ಅಟೋಕ್ ಎಂಬಲ್ಲಿ ಈ ವಿಜ್ಞಾನಿಯನ್ನು ಅಪಹರಿಸಿದ್ದರು. ಅವರ ಬಿಡುಗಡೆ ಸಂಬಂಧ ಪಾಕಿಸ್ಥಾನಿ ಸರ್ಕಾರದೊಂದಿಗೆ ಮಾತುಕತೆ ವಿಫಲಗೊಂಡಾಗ ಫೆಬ್ರುವರಿ 7 ರಂದು ತಾಲಿಬಾನಿಗಳು ವಿಜ್ಞಾನಿಯ ತಲೆ ಕತ್ತರಿಸಿದ್ದರು. 60 ಮಂದಿ ಉಗ್ರರನ್ನು ಬಿಡುಗಡೆಗೊಳಿಸಿದಲ್ಲಿ ಸ್ಟಾನ್‌ಜಾಕ್ ಅವರನ್ನು ಬಿಡುಗಡೆಗೊಳಿಸುವುದಾಗಿ ತಾಲಿಬಾನ್ ಬೇಡಿಕೆ ಇಟ್ಟಿತ್ತು.

2008: ಆಫ್ಘಾನಿಸ್ಥಾನ ಅಧ್ಯಕ್ಷ ಹಮೀದ್ ಕರ್ಜೈ ಅವರ ಹತ್ಯೆಗೆ ಕಾಬೂಲಿನಲ್ಲಿ ತಾಲಿಬಾನ್ ಉಗ್ರಗಾಮಿಗಳು ಗುಂಡು ಮತ್ತು ರಾಕೆಟ್ ದಾಳಿಮೂಲಕ ಯತ್ನಿಸಿದರು. ಆದರೆ ಕರ್ಜೈ ಪ್ರಾಣಾಪಾಯವಿಲ್ಲದೆ ಪಾರಾದರು. ದೇಶದಲ್ಲಿ ಕಮ್ಯುನಿಸ್ಟ್ ಸರ್ಕಾರ ಪತನಗೊಂಡು, ಆಡಳಿತ ಮುಜಾಹಿದೀನ್ ಗಳ ವಶವಾದ 16ನೇ ವರ್ಷಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕರ್ಜೈ ಮತ್ತು ಅವರ ಸಚಿವ ಸಹದ್ಯೋಗಿಗಳು, ರಾಜತಾಂತ್ರಿಕರು, ಉನ್ನತ ಮಟ್ಟದ ಅಧಿಕಾರಿಗಳು, ಮಾಜಿ ಯುದ್ಧ ವೀರರು ಭಾಗವಹಿಸಿದ್ದಾಗ ಈ ದಾಳಿ ನಡೆಯಿತು. ತಕ್ಷಣ ಜಾಗೃತಗೊಂಡ ಸೇನಾ ಸಿಬ್ಬಂದಿ ಕೆಲವು ಶಂಕಿತರನ್ನು ಬಂಧಿಸಿದರು. ದಾಳಿಯಲ್ಲಿ ಒಬ್ಬ ನಾಗರಿಕ ಮೃತನಾಗಿ, ಸಂಸದ ಸೇರಿದಂತೆ 11 ಮಂದಿ ಗಾಯಗೊಂಡರು. ಈ ದಾಳಿಗೆ ತಾನೇ ಕಾರಣ ಎಂದು ಹೊಣೆ ಹೊತ್ತುಕೊಂಡ ತಾಲಿಬಾನ್, ತನ್ನ ಕಡೆಯ ಮೂವರು ಯೋಧರು ಈ ಸಂದರ್ಭದಲ್ಲಿ ಸತ್ತರು.

2008: ಭಾರತೀಯ ಮೂಲದ ಉಕ್ಕು ದೊರೆ ಲಕ್ಷ್ಮಿ ಮಿತ್ತಲ್ ಯೂರೋಪಿನ ಅತ್ಯಂತ ಶ್ರೀಮಂತ ವ್ಯಕ್ತಿ. ಅವರ ಒಟ್ಟು ಆಸ್ತಿ 27.7 ಶತಕೋಟಿ ಪೌಂಡ್ ಮೌಲ್ಯದಷ್ಟಿದ್ದು, ಬ್ರಿಟನ್ನಿನ ಅತಿ ಶ್ರೀಮಂತ ಉದ್ಯಮಿ ಎನ್ನುವ ಹೆಗ್ಗಳಿಕೆಗೆ ಸತತ ನಾಲ್ಕನೇ ವರ್ಷವೂ ಭಾಜನರಾಗಿದ್ದಾರೆ ಎಂದು ವಿಶ್ವದ ಅತಿ ದೊಡ್ಡ ಶ್ರೀಮಂತರ ಪಟ್ಟಿ ಸಿದ್ಧಪಡಿಸಿದ `ಸಂಡೆ ಟೈಮ್ಸ್' ಪತ್ರಿಕೆ ತಿಳಿಸಿತು. ಒಂದು ವರ್ಷದಲ್ಲಿ 8.5 ಶತಕೋಟಿ ಪೌಂಡುಗಳಷ್ಟು ಸಂಪತ್ತು ವೃದ್ಧಿ ಕಂಡ ಮಿತ್ತಲ್, ವಿಶ್ವದ ಕುಬೇರರ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದರು. ಅಂಬಾನಿ ಸಹೋದರರಾದ ಮುಖೇಶ್ ಹಾಗೂ ಅನಿಲ್ ಅವರ ಒಟ್ಟು ಆಸ್ತಿ ಸೇರಿಸಿದರೆ ಅವರೇ ಜಗತ್ತಿನ ಅತಿ ದೊಡ್ಡ ಶ್ರೀಮಂತರಾಗುತ್ತಾರೆ. ಇವರ ಆಸ್ತಿ ಮೌಲ್ಯ 43 ಶತಕೋಟಿ ಪೌಂಡ್. ಇದು ಅಮೆರಿಕದ ವಾಲ್ ಮಾರ್ಟ್ ನ ಒಡೆಯರಾದ ವಾಲ್ಟನ್ ಕುಟುಂಬದ 38.4 ಶತಕೋಟಿ ಪೌಂಡ್ ಹಾಗೂ ಮೈಕ್ರೋಸಾಫ್ಟ್ ನ ಮುಖ್ಯಸ್ಥ ಬಿಲ್ ಗೇಟ್ಸ್ ಅವರ 29 ಶತಕೋಟಿ ಪೌಂಡಿಗಿಂತಲೂ ಹೆಚ್ಚು ಎಂದು ವರದಿ ಹೇಳಿತು.

2008: ಬೆಳಗಾವಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ ಏಳು ವರ್ಷದ ಬಾಲಕ ಅನಿಕೇತ ರಮೇಶ ಚಿಂಡಕ ಬೆಳಗಾವಿಯ ಆದರ್ಶನಗರದಲ್ಲಿ 82 ಟಾಟಾ ಸುಮೋ ವಾಹನಗಳಡಿ ಲಿಂಬೋ ಸ್ಕೇಟಿಂಗ್ ಮೂಲಕ ತೂರಿಬಂದು ದಾಖಲೆ ನಿರ್ಮಿಸಿದನು. ರೋಟರಿ ಕ್ಲಬ್ ಆಫ್ ಬೆಳಗಾವಿ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 57 ಸೆಕೆಂಡುಗಳಲ್ಲಿ 82 ಟಾಟಾ ಸುಮೋ ವಾಹನಗಳಡಿ ತೂರಿಬಂದು ತನ್ನ ಹಿಂದಿನ ದಾಖಲೆಯನ್ನು ಅನಿಕೇತ ಮುರಿದನು. 2007ರ ಫೆಬ್ರುವರಿ 28 ರಂದು ಬೆಳಗಾವಿ ನಗರದಲ್ಲಿ 45.31 ಸೆಕೆಂಡುಗಳಲ್ಲಿ 57 ಟಾಟಾ ಸುಮೋ ವಾಹನಗಳಡಿ ತೂರಿಬಂದು ಬೆರಗುಗೊಳಿಸಿದ್ದ ಬಾಲಕ ಈದಿನ ಮಧ್ಯಾಹ್ನ 53 ಸೆಕೆಂಡುಗಳಲ್ಲಿ 81 ಸುಮೋ ವಾಹನಗಳಡಿ ತೂರಿಬಂದನು. ಬಳಿಕ 82 ವಾಹನಗಳಡಿ ತೂರಿಬಂದು ತನ್ನ ದಾಖಲೆಯನ್ನು ಮತ್ತಷ್ಟು ಎತ್ತರಕ್ಕೆ ಒಯ್ದನು. `ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ' ನಿರ್ದೇಶಕ ಸುರೇಶ ಹರ್ಮಿಲಾ, ಯೋಜನಾ ಅಧಿಕಾರಿ ಎಂ.ಎಸ್. ತ್ಯಾಗಿ ಹಾಗೂ ರೋಲ್ ಬಾಲ್ ಫೆಡರೇಷನ್ ಆಫ್ ಇಂಡಿಯಾ ಕಾರ್ಯದರ್ಶಿ ರಾಜು ದಾಬಡೆ ಅವರು ಅನಿಕೇತ ಚಿಂಡಕ ಸಾಧನೆಯನ್ನು ದಾಖಲು ಮಾಡಿಕೊಂಡರು. ಅನಿಕೇತನ ಪ್ರತಿಭೆಯನ್ನು ಜಗತ್ತಿಗೆ ಸಾರುವ ಉದ್ದೇಶದಿಂದ ನಗರದಲ್ಲಿ ಸುಮಾರು ಒಂದು ಲಕ್ಷ ರೂ. ವೆಚ್ಚದಲ್ಲಿ ಸ್ಕೇಟಿಂಗ್ ಟ್ರ್ಯಾಕ್ ನಿರ್ಮಿಸಲಾಗಿತ್ತು. 100ಕ್ಕೂ ಹೆಚ್ಚು ಸುಮೋ ವಾಹನಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. ಲಿಂಬೋ ಸ್ಕೇಟಿಂಗ್ ದೃಶ್ಯ ವೀಕ್ಷಣೆಗೆ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. ಅನಿಕೇತ ಈ ಕಿರಿಯ ವಯಸ್ಸಿನಲ್ಲೇ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ 300ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾನೆ. ಲಿಂಬೋ ಸ್ಕೇಟಿಂಗ್ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ ಈ ಬಾಲಕನಿಗೆ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

2008: ಚಿತ್ರನಟ ಜೈಜಗದೀಶ್ ಅವರು ಮಡಿಕೇರಿಯಲ್ಲಿ ನಡೆದ ಬಿಜೆಪಿ ಬಹಿರಂಗಸಭೆಯಲ್ಲಿ ಸುಷ್ಮಾ ಸ್ವರಾಜ್ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಬಿಎಸ್ಪಿಯಿಂದ ಮಡಿಕೇರಿ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಜೈಜಗದೀಶ್, `ಬಿ' ಫಾರಂ ಗೊಂದಲದಿಂದ ನಾಮಪತ್ರ ತಿರಸ್ಕೃತವಾದ ಹಿನ್ನೆಲೆಯಲ್ಲಿ ಬಿಜೆಪಿ ಸೇರಿದರು.

2008: ಮೈಸೂರು ನಗರದ ಅಪರಾಧ ಪತ್ತೆ ದಳದ ಪೊಲೀಸರು ಮತ್ತು ಮಣಿಪುರಿ ಪೊಲೀಸರು ಜಂಟಿ ಕಾರ್ಯಾಚರಣೆ ಮೈಸೂರಿನ ವಸತಿ ಗೃಹವೊಂದರಲ್ಲಿದ್ದ 6 ಮಂದಿ ಶಂಕಿತ ಉಲ್ಫಾ ಉಗ್ರಗಾಮಿಗಳನ್ನು ಬಂದಿಸಿದರು. ಈಶಾನ್ಯ ರಾಜ್ಯದ 6 ಮಂದಿಯನ್ನು ವಶಕ್ಕೆ ತೆಗೆದುಕೊಂಡದ್ದನ್ನು ನಗರ ಪೊಲೀಸ್ ಆಯಕ್ತ ಡಾ.ಪಿ.ರವೀಂದ್ರನಾಥ್ ದೃಢಪಡಿಸಿದರು.

2008: ಜಗತ್ತಿನ ಅತಿ ಕಿರಿಯ ಪೈಲಟ್ ಮತ್ತು ಅತಿ ಕಿರಿಯ ಗಗನಯಾತ್ರಿ ಎಂಬ ಕೀರ್ತಿಗೆ ಪಾತ್ರರಾದ ಬೆಂಗಳೂರು ನಗರದ ಶ್ರೀಯಾ ದಿನಕರ್ ಅವರಿಗೆ ಭವಿಷ್ಯದ ಶಿಕ್ಷಣಕ್ಕಾಗಿ ಸ್ಲೋವೆನಿಯಾದ ವರ್ಲ್ಡ್ ಆಫ್ ಆರ್ಟ್ ಯೂರೋಪ್ ಸಂಸ್ಥೆ ಒಂದು ಲಕ್ಷ ಯೂರೋಗಳನ್ನು ದೇಣಿಗೆಯಾಗಿ ನೀಡಿತು. ಬೆಂಗಳೂರಿನ ವರ್ಡ್ ಆರ್ಟ್ಫೌಂಡೇಶನ್ ಮತ್ತು ವರ್ಡ್ ಆಫ್ ಆರ್ಟ್ ಯೂರೋಪ್ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರಿನ ಕಬ್ಬನ್ ಉದ್ಯಾನದ ಬಾಲಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಕಲಾ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಶ್ರೀಯಾ ಬಹುಮಾನದ ಚೆಕ್ ಸ್ವೀಕರಿಸಿದರು. ವರ್ಲ್ಡ್ ಆಫ್ ಆರ್ಟ್ ಯೂರೋಪ್ ನಿರ್ದೇಶಕರಾದ ಮಿಹಾಲಿಯೋ ಲಿಸಾನಿನ್ ಮತ್ತು ಬೊಜಿಕಾ ಹ್ರೊಸೇವೆಕ್ ಬಹುಮಾನದ ಚೆಕ್ ಹಸ್ತಾಂತರಿಸಿದರು. ವರ್ಲ್ಡ್ ಆಫ್ ಆರ್ಟ್ ಯೂರೋಪ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಶ್ರೀಯಾ ದಿನಕರ್ ಪ್ರಥಮ ಬಹುಮಾನ ಗಳಿಸಿದ್ದರು. ಬಹುಮಾನಿತ ಕೃತಿ 77 ಲಕ್ಷ ರೂಪಾಯಿಗೆ ಮಾರಾಟವಾಗಿದ್ದು, ಈ ಹಣವನ್ನು ಅವರು ಸ್ವಯಂಸೇವಾ ಸಂಸ್ಥೆಯೊಂದಕ್ಕೆ ನೀಡಿದ್ದರು.
ಜಗತ್ತಿನ ಕಿರಿಯ ಚಿತ್ರ ನಿರ್ದೇಶಕ ಎಂಬ ಖ್ಯಾತಿ ಪಡೆದಿರುವ ಮಾಸ್ಟರ್ ಕಿಶನ್ ಸೇರಿದಂತೆ ಹಲವು ಕಿರಿಯ ಕಲಾವಿದರಿಗೆ ಈ ಸಂದರ್ಭದಲ್ಲಿ `ಲಿಯೋನಾರ್ಡೊ ಡಾ ವಿಂಚಿ ಅಂತಾರಾಷ್ಟ್ರೀಯ ಕಲಾ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಯಿತು.

2007: ಗಾಲಿ ಕುರ್ಚಿಗೆ ಅಂಟಿಕೊಂಡೇ ಜೀವಿಸುತ್ತಿರುವ ಖಭೌತ ವಿಜ್ಞಾನಿ ಸ್ಟೀಫನ್ ಹಾಕಿನ್ಸ್ ಅವರು `ಬಾಹ್ಯಾಕಾಶದಲ್ಲಿ ತೂಕರಹಿತ ಅನುಭವ'ದ ತಮ್ಮ ಕನಸನ್ನು ನನಸಾಗಿಸಿಕೊಂಡರು. ಫ್ಲಾರಿಡಾ ಮೂಲದ ಜೀರೋ ಗ್ರಾವಿಟಿ ಕಾರ್ಪೊರೇಷನ್ ಬೋಯಿಂಗ್ 747 ವಿಮಾನದಲ್ಲಿ ಶೂನ್ಯ ಗುರುತ್ವಾಕರ್ಷಣೆ ನಿರ್ಮಿಸಿ ಸ್ಟೀಫನ್ ಅವರಿಗೆ ಈ ವಿಶಿಷ್ಟ ಅನುಭವ ದಕ್ಕುವಂತೆ ಮಾಡಿತು. `ವೊರ್ಮಿಟ್ ಕಾಮೆಟ್' ಹೆಸರಿನ ಪರಿವರ್ತಿತ ವಿಮಾನದಲ್ಲಿ ಅಟ್ಲಾಂಟಿಕ್ ಸಾಗರದ ಮೇಲೆ ಸಾಗುವಾಗ ಈ ಅನುಭವವನ್ನು ಹಾಕಿನ್ಸ್ ಪಡೆದರು. 9,754 ಮೀಟರ್ (32,000 ಅಡಿ ಎತ್ತರಕ್ಕೆ ಏರಿ 7315 ಮೀಟರಿನಷ್ಟು ಕೆಳಕ್ಕೆ ವಿಶಿಷ್ಟ ರೀತಿಯಲ್ಲಿ ಬರುವಾಗ ಹಾಕಿನ್ಸ್ ಜೊತೆಗಿದ್ದ ವೈದ್ಯರು ಮತ್ತು ದಾದಿಯರೂ ಈ ತೂಕರಹಿತ ಅನುಭವ ಪಡೆದರು.

2007: ಬ್ರಿಟಿಷರ ಒಡೆದು ಆಳುವ ಕುಟಿಲ ನೀತಿಯಿಂದಾಗಿಯೇ ಗೋಹತ್ಯೆ ಕಾಯ್ದೆ ಜಾರಿಗೆ ಬಂತು ಎಂದು ಸ್ವದೇಶೀ ಬಚಾವೋ ಆಂದೋಲನದ ನೇತಾರ ರಾಜೀವ ದೀಕ್ಷಿತ್ ಶಿವಮೊಗ್ಗದ ಹೊಸನಗರದಲ್ಲಿ ಶ್ರೀರಾಮಚಂದ್ರಾಪುರ ಮಠ ಸಂಘಟಿಸಿದ ವಿಶ್ವ ಗೋ ಸಮ್ಮೇಳನದಲ್ಲಿ ಅಭಿಪ್ರಾಯ ಪಟ್ಟರು. ಸಮ್ಮೇಳನದ ಏಳನೇ ದಿನ ಅವರು ಗೋ ಮಹಿಮಾ ಗೋಷ್ಠಿಯಲ್ಲಿ ಪಾಲ್ಗೊಂಡರು.

2007: ನಕಲಿ ಪಾಸ್ ಪೋರ್ಟ್ ಬಳಸಿ ಮಾನವ ಕಳ್ಳಸಾಗಣೆ ನಡೆಸಿದ ಆರೋಪಕ್ಕೆ ಒಳಗಾದ ತೆಲಂಗಾಣ ರಾಷ್ಟ್ರ ಸಮಿತಿ (ಟಿ ಆರ್ ಎಸ್) ಶಾಸಕ ಕೆ. ಲಿಂಗಯ್ಯ ಅವರು ಹೈದರಾಬಾದಿನ 7ನೇ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ಶರಣಾಗತರಾದರು.

2007: ಕೃಷ್ಣಾ ನದಿ ನೀರು ಬಳಕೆಗೆ ಸಂಬಂಧಿಸಿದಂತೆ ಕರ್ನಾಟಕದ ವಿರುದ್ಧ ಆಂಧ್ರಪ್ರದೇಶ ಸಲ್ಲಿಸಿದ್ದ ಅರ್ಜಿಯನ್ನು ಕೃಷ್ಣಾ ಜಲ ನ್ಯಾಯ ಮಂಡಳಿಯು ವಜಾ ಮಾಡಿತು.

2007: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಬಹಿರಂಗವಾಗಿ ಚುಂಬಿಸಿ ವಿವಾದಕ್ಕೆ ಗುರಿಯಾಗಿದ್ದ ಹಾಲಿವುಡ್ ನಟ ರಿಚರ್ಡ್ ಗೇರ್ ಅವರು ಈ ಘಟನೆಗೆ ಕ್ಷಮೆ ಯಾಚಿಸಿದರು. ಯಾವುದೇ ಮನ ನೋಯಿಸುವಂತಹ ತಪ್ಪು ಮಾಡಿದ್ದರೆ ದಯವಿಟ್ಟು ಕ್ಷಮಿಸಿ ಎಂಬುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದರು.

2007: ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿ ಇ ಟಿ) ತಮಿಳುನಾಡಿನಲ್ಲಿ ರದ್ದು ಪಡಿಸಿದ ತಮಿಳುನಾಡು ಸರ್ಕಾರದ ನಿರ್ಣಯವನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿಯಿತು. ತಮಿಳುನಾಡು ಸರ್ಕಾರವು ಅಂಗೀಕರಿಸಿದ ತಮಿಳುನಾಡು (ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ) ಕಾಯ್ದೆಯ (2006) ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವಾರು ರಿಟ್ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿತು.

2006: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 6000 ಕೋಟಿ ರೂಪಾಯಿ ಅಂದಾಜು ವೆಚ್ಚದ ಬೆಂಗಳೂರು ಮೆಟ್ರೊ ರೈಲು ಯೋಜನೆಗೆ ಕೇಂದ್ರ ಸಚಿವ ಸಂಪುಟ ಮಂಜೂರಾತಿ ನೀಡಿತು. ಇದರೊಂದಿಗೆ 33 ಕಿ.ಮೀ. ಉದ್ದದ ಮೆಟ್ರೊ ರೈಲು ಯೋಜನೆಗೆ ಇದ್ದ ಕೊನೆಯ ಅಡ್ಡಿ ನಿವಾರಣೆ ಆಯಿತು. ಈ ಯೋಜನೆ 2011ಕ್ಕೆ ಪೂರ್ಣಗೊಳ್ಳಬೇಕು.

2006: ಹಿರಿಯ ಸಾಹಿತಿ, ಸಂಶೋಧಕ ಪ್ರೊ. ಎಲ್. ಬಸವರಾಜು ಅವರಿಗೆ ರಾಜ್ಯ ಸರ್ಕಾರದ 2005ನೇ ಸಾಲಿನ ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು.

2006: ನೇಪಾಳದ ಹಿರಿಯ ಮುಖಂಡ ಗಿರಿಜಾ ಪ್ರಸಾದ್ ಕೊಯಿರಾಲ ಅವರು ನೇಪಾಳ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಅವಿರೋಧ ಆಯ್ಕೆಯಾದರು. ಇದೇ ವೇಳೆಯಲ್ಲಿ ಬಾಲಿವುಡ್ ನಟಿ ಮನಿಶಾ ಕೊಯಿರಾಲ ಅವರ ತಂದೆ, ಪ್ರಕಾಶ ಕೊಯಿರಾಲ ಅವರನ್ನು ನೇಪಾಳ ಕಾಂಗ್ರೆಸ್ಸಿನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಯಿತು. ಈ ಇಬ್ಬರೂ ಧುರೀಣರು ಸಮೀಪ ಸಂಬಂಧಿಗಳು.

2006: ಹಿರಿಯ ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರು ಪ್ರತಿಷ್ಠಿತ 2006ನೇ ಸಾಲಿನ ಮಾಸ್ತಿ ಪ್ರಶಸ್ತಿಗೆ ಆಯ್ಕೆಯಾದರು.

2006: ಜಮ್ಮುವಿನ ಭದೇವ್ ವಿಧಾನಸಭಾ ಕ್ಷೇತ್ರಕ್ಕಾಗಿ ನಡೆದ ಉಪ ಚುನಾವಣೆಯಲ್ಲಿ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ದಾಖಲೆ ಜಯ ಸಾಧಿಸಿದರು. ಎದುರಾಳಿ ಬಿಜೆಪಿ ಅಭ್ಯರ್ಥಿ ವಿರುದ್ಧ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದ ಅವರು 66,129 ಮತಗಳ ಪೈಕಿ 62,072 ಮತಗಳನ್ನು ಬಗಲಿಗೆ ಹಾಕಿಕೊಂಡರು.

2006: ಗಂಗೊಳ್ಳಿಯಿಂದ ಮಂಗಳೂರಿನವರೆಗೆ ಅರಬ್ಬಿ ಸಮುದ್ರದಲ್ಲಿ 150 ಕಿ.ಮೀ. ದೂರವನ್ನು ಸತತ 24 ಗಂಟೆಗಳ ಕಾಲ ಈಜಿ ಕ್ರಮಿಸುವ ಮೂಲಕ ಬೆಂಗರೆ ದಯಾನಂದ ಖಾರ್ವಿ ಹೊಸ ದಾಖಲೆ ನಿರ್ಮಿಸಿದರು.

2006: ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐ ಎಲ್) 9069 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಖಾಸಗಿ ಕ್ಷೇತ್ರದಲ್ಲಿನ ಭಾರತೀಯ ಕಂಪೆನಿಯೊಂದು ಗಳಿಸಿದ ಅತ್ಯಧಿಕ ಲಾಭ ಇದು ಎಂದು ಆರ್ ಐ ಎಲ್ ಅಧ್ಯಕ್ಷ , ಆಡಳಿತ ನಿರ್ದೇಶಕ ಮುಖೇಶ ಅಂಬಾನಿ ಮುಂಬೈಯಲ್ಲಿ ಪ್ರಕಟಿಸಿದರು.

1960: ರಕ್ಷಣಾ ಪಡೆಗಳ ಉನ್ನತಾಧಿಕಾರಿಗಳಿಗೆ ತರಬೇತಿ ನೀಡುವ ಸಲುವಾಗಿ ನವದೆಹಲಿಯಲ್ಲಿ ನ್ಯಾಷನಲ್ ಡಿಫೆನ್ಸ್ ಕಾಲೇಜನ್ನು ಆರಂಭಿಸಲಾಯಿತು.

1959: ಕಮಾಂಡರ್ ಕವಾಸ್ ಮಣೇಕ್ ಶಾ ನಾನಾವತಿ ತನ್ನ ಬ್ರಿಟಿಷ್ ಪತ್ನಿ ಸಿಲ್ವಿಯಾಳ ಪ್ರಿಯಕರ ಪ್ರೇಮ್ ಅಹುಜಾನನ್ನು ಗುಂಡಿಟ್ಟು ಕೊಂದ. ಈ ಪ್ರಕರಣ ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿತು. ಇದೊಂದು ಅಪಘಾತ ಎಂದು ಬಿಂಬಿಸಿದ ಪರಿಣಾಮವಾಗಿ ಆತನ ಪರ ಅನುಕಂಪದ ಹೊಳೆ ಹರಿಯಿತು. ಮುಂಬೈ ಸೆಷನ್ಸ್ ಕೋರ್ಟ್ ಆತ ನಿರಪರಾಧಿ ಎಂದೂ ತೀರ್ಪಿತ್ತಿತು. ನಂತರ ಸುಪ್ರೀಂಕೋರ್ಟ್ ಅದನ್ನು ತಳ್ಳಿಹಾಕಿ ನಾನಾವತಿ ಅಪರಾಧಿ ಎಂದು ತೀರ್ಪು ನೀಡಿತು. ಈ ಘಟನೆ ನಡೆಯದೇ ಇರುತ್ತಿದ್ದರೆ ನಾನಾವತಿ ಭಾರತದ ಮೊದಲ ಏರ್ ಕ್ರಾಫ್ಟ್ ಕ್ಯಾರಿಯರ್ ಐ ಎನ್ ಎಸ್ ವಿಕ್ರಾಂತ್ ನ ಮೊದಲ ಕಮಾಂಡರ್ ಆಗುತ್ತಿದ್ದ.

1897: ಅಮೋಘ ಭಾಷಣಕಾರ, ಸಾಹಿತ್ಯ, ಪತ್ರಿಕಾರಂಗಗಳಲ್ಲಿ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸಿದ ತಿರುಮಲೆ ತಾತಾಚಾರ್ಯ ಶರ್ಮ (ತಿ.ತಾ. ಶರ್ಮ) (27-4-1897 ರಿಂದ 20-10-1973) ಅವರು ಚಿಕ್ಕಬಳ್ಳಾಪುರದ ರಾಜಗುರು ಮನೆತನದಲ್ಲಿ ಶ್ರೀನಿವಾಸ ತಾತಾಚಾರ್ಯ- ಜಾನಕಿಯಮ್ಮ ತಿರುಮಲ ದಂಪತಿಯ ಪುತ್ರರಾಗಿ ಈ ದಿನ ಜನಿಸಿದರು.

1896: ನೈಲಾನ್ ಕಂಡು ಹಿಡಿದ ವ್ಯಾಲೇಸ್ ಹ್ಯೂಂ ಕ್ಯಾರೂತರ್ಸ್ ಈ ದಿನ ಜನಿಸಿದರು.

1882: ಅಮೆರಿಕದ ತತ್ವಜ್ಞಾನಿ, ಕವಿ, ಪ್ರಬಂಧಕಾರ ರಾಲ್ಫ್ ವಾಲ್ಡೊ ಎಮರ್ಸನ್ 78ನೇ ವಯಸ್ಸಿನಲ್ಲಿ ಮೆಸಾಚ್ಯುಸೆಟ್ಸಿನ ಕಾಂಕಾರ್ಡಿನಲ್ಲಿ ಮೃತನಾದ.

1857: ಆಧುನಿಕ ಸಂಖ್ಯಾಶಾಸ್ತ್ರದ ಹರಿಕಾರ ಕಾರ್ಲ್ ಪಿಯರ್ಸನ್ ಜನನ.

1521: ಪೋರ್ಚುಗೀಸ್ ಸಂಶೋಧಕ ಫರ್ಡಿನಾಂಡ್ ಮೆಗೆಲ್ಲನ್ ವಿಶ್ವ ಪರ್ಯಟನೆಗಾಗಿ ಹೊರಟಿದ್ದಾಗ ಫಿಲಿಪ್ಪೀನ್ಸ್ ಜನರಿಂದ ಹತನಾದ. ಫಿಲಿಪ್ಪೀನ್ಸಿನಲ್ಲೇ ಆತ ಹತನಾದರೂ ಆತನ ನೌಕೆ ಬಾಸ್ಕಿನ ಜುವಾನ್ ಸೆಬಾಸ್ಟಿಯನ್ ಡೆಲ್ ಕ್ಯಾನೊ ನೇತೃತ್ವದಲ್ಲಿ ಪಶ್ಚಿಮಾಭಿಮುಖವಾಗಿ ಸ್ಪೇನಿನತ್ತ ಯಾನ ಮುಂದುವರಿಸಿ ಜಗತ್ತಿಗೆ ಸುತ್ತು ಹಾಕಿದ ಮೊದಲ ನೌಕೆ ಎಂಬ ಹೆಗ್ಗಳಿಕೆಯನ್ನು ಪಡೆಯಿತು.

Monday, April 26, 2010

ಇಂದಿನ ಇತಿಹಾಸ History Today ಏಪ್ರಿಲ್ 26

ಇಂದಿನ ಇತಿಹಾಸ

ಏಪ್ರಿಲ್ 26

ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಸಭೆಯಲ್ಲಿ ಭಾಷಣ ಮಾಡುತ್ತಿದ್ದ ಪ್ರಧಾನಿ ಮನಮೋಹನ ಸಿಂಗ್ ಅವರತ್ತ ಎಂಜಿನಿಯರಿಂಗ್ ವಿದ್ಯಾರ್ಥಿ ನಗರದ ನಿವಾಸಿ ಹಿತೇಶ್ ಚೌಹಾನ್ ಎಂಬಾತ ಶೂ ಎಸೆದ ಘಟನೆ ಅಹಮದಾಬಾದಿನಲ್ಲಿ ಘಟಿಸಿತು. ಶೂ ಗುರಿ ತಪ್ಪಿ ಪ್ರಧಾನಿ ಭಾಷಣ ಮಾಡುತ್ತಿದ್ದ ವೇದಿಕೆಯ ಸ್ಥಳದಿಂದ ಸುಮಾರು 20 ಅಡಿ ದೂರದಲ್ಲಿ ಬಿದ್ದಿತು. ಇದೇ ವೇಳೆ ಮನಮೋಹನ ಸಿಂಗ್ ಅವರು ಶೂ ಎಸೆದ ಯುವಕನ ಮೇಲೆ ಯಾವುದೇ ಆರೋಪ ದಾಖಲಿಸದಂತೆ ಪೊಲೀಸರಿಗೆ ಸೂಚಿಸಿ, ಯುವಕನನ್ನು ಕ್ಷಮಿಸಿದರು.

2009: ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಸಭೆಯಲ್ಲಿ ಭಾಷಣ ಮಾಡುತ್ತಿದ್ದ ಪ್ರಧಾನಿ ಮನಮೋಹನ ಸಿಂಗ್ ಅವರತ್ತ ಎಂಜಿನಿಯರಿಂಗ್ ವಿದ್ಯಾರ್ಥಿ ನಗರದ ನಿವಾಸಿ ಹಿತೇಶ್ ಚೌಹಾನ್ ಎಂಬಾತ ಶೂ ಎಸೆದ ಘಟನೆ ಅಹಮದಾಬಾದಿನಲ್ಲಿ ಘಟಿಸಿತು. ಶೂ ಗುರಿ ತಪ್ಪಿ ಪ್ರಧಾನಿ ಭಾಷಣ ಮಾಡುತ್ತಿದ್ದ ವೇದಿಕೆಯ ಸ್ಥಳದಿಂದ ಸುಮಾರು 20 ಅಡಿ ದೂರದಲ್ಲಿ ಬಿದ್ದಿತು. ಇದೇ ವೇಳೆ ಮನಮೋಹನ ಸಿಂಗ್ ಅವರು ಶೂ ಎಸೆದ ಯುವಕನ ಮೇಲೆ ಯಾವುದೇ ಆರೋಪ ದಾಖಲಿಸದಂತೆ ಪೊಲೀಸರಿಗೆ ಸೂಚಿಸಿ, ಯುವಕನನ್ನು ಕ್ಷಮಿಸಿದರು. ಅಹಮದಾಬಾದಿನ ಪಲ್ದಿ ಪ್ರದೇಶದಲ್ಲಿನ ಸಂಸ್ಕಾರ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರಸಭೆಯಲ್ಲಿ ಪ್ರಧಾನಿ ಭಾಷಣ ಮಾಡುತ್ತಿದ್ದರು.. ಈ ಸಂದರ್ಭದಲ್ಲಿ ಮಾಧ್ಯಮದವರಿಗಾಗಿ ವ್ಯವಸ್ಥೆ ಮಾಡಲಾಗಿದ್ದ ಆಸನಗಳ 'ಪ್ರೆಸ್ ಗ್ಯಾಲರಿ' ಬಳಿ ಕುಳಿತಿದ್ದ ಸುಮಾರು 20 ವರ್ಷದ ಯುವಕ ತಾನು ತೊಟ್ಟಿದ್ದ ಬಿಳಿ ಬಣ್ಣದ ಸ್ನೀಕರ್ ಶೂ ಅನ್ನು ಪ್ರಧಾನಿ ಅವರತ್ತ ಎಸೆದ. ಇದರಿಂದ ಪ್ರಧಾನಿ ಕೆಲಕ್ಷಣ ಗಲಿಬಿಲಿಗೊಳಗಾದರು. ತಕ್ಷಣವೇ ಪ್ರಧಾನಿಯವರ ವಿಶೇಷ ಭದ್ರತಾ ಪಡೆಯ ಅಂಗರಕ್ಷಕರು ಶೂ ಎಸೆದ ಯುವಕನ ಬಳಿ ಧಾವಿಸಿ ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

2009: 'ಸ್ಲಮ್ ಡಾಗ್ ಮಿಲಿಯನೇರ್' ಚಿತ್ರದ ಬಾಲ ನಟಿ ರುಬಿನಾ ಅಲಿಳನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡಲು ನಡೆದ ಪ್ರಕರಣದಲ್ಲಿ ತಂದೆ ರಫೀಕ್ ಖುರೇಷಿಯ ಪಾತ್ರವೇನೂ ಇಲ್ಲ ಎಂದು ಪೊಲೀಸರು ತಿಳಿಸಿದರು. ತನಿಖೆ ಪೂರ್ಣಗೊಂಡಿದ್ದು ಆತ ತಪ್ಪತಸ್ಥನಲ್ಲ ಎಂಬುದು ದೃಢಪಟ್ಟಿದೆ. ರುಬಿನಾಳ ಮಾರಾಟಕ್ಕೆ ಹಣ ವಿನಿಮಯ ಆಗಿಲ್ಲ. ರಫೀಕ್ ಮುಗ್ಧ ಎಂದು ಹಿರಿಯ ಪೊಲೀಸ್ ಅಧಿಕಾರಿ ರಹೀಂ ಶೇಖ್ ತಿಳಿಸಿದರು. ಬ್ರಿಟನ್ನಿನ ಟ್ಯಾಬ್ಲಾಯಿಡ್ ಪತ್ರಿಕೆಯ ಪತ್ರಕರ್ತರು ಸೌದಿ ಅರೇಬಿಯಾದ ನಕಲಿ ಶೇಖ್‌ ವೇಷದಲ್ಲಿ ತೆರಳಿ, ರುಬಿನಾಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ರಹಸ್ಯ ಕಾರ್ಯಾಚರಣೆ ನಡೆಸಿ, ರಫೀಕ್‌ಗೆ ದೊಡ್ಡ ಮೊತ್ತದ ಆಮಿಷ ಒಡ್ಡಿದ್ದರು. ಮಗಳನ್ನು ರೂ 1.8 ಕೋಟಿಗಳಿಗೆ ಮಾರಾಟ ಮಾಡಲು ರಫೀಕ್ ಮುಂದಾಗಿದ್ದ ಎಂದೂ ಪತ್ರಿಕೆ ವರದಿ ಮಾಡಿತ್ತು.

2009: ಮೆಟ್ರೊ ರೈಲು ನಿಲ್ದಾಣಕ್ಕೆ ಲಾಲ್‌ಬಾಗ್ ಭೂಮಿ ಬಳಕೆಯನ್ನು ಕೈಬಿಡಬೇಕು ಎಂಬ ಆಗ್ರಹ ಬೆಂಗಳೂರಿನಲ್ಲಿ ಈದಿನ ವ್ಯಾಪಕವಾಗಿ ವ್ಯಕ್ತಗೊಂಡಿತು. 'ಹಸಿರು ಉಸಿರು' ಸಂಘಟನೆ ನಗರದಲ್ಲಿ ಹಮ್ಮಿಕೊಂಡ್ದಿದ ಪ್ರತಿಭಟನಾ ರಾಲಿಯಲ್ಲಿ ಪಾಲ್ಗೊಂಡ ನೂರಾರು ಮಂದಿ ಪರಿಸರ ಪ್ರೇಮಿಗಳು, 'ಉಳಿಸಿ ಉಳಿಸಿ ಲಾಲ್‌ಬಾಗ್ ಉಳಿಸಿ', 'ಬದಲಿಸಿ ಬದಲಿಸಿ ಮೆಟ್ರೊ ಮಾರ್ಗ ಬದಲಿಸಿ' ಎಂದು ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಆ ಮೂಲಕ ಪರಿಸರ ನಾಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

2009: ಪ್ರಭಾಕರನ್ ಹಾಗೂ ಆತನ ಪುತ್ರ ಚಾರ್ಲ್ಸ್ ಅಂಟೋನಿಯ ಜನನ ಪ್ರಮಾಣ ಪತ್ರ, ಜನ್ಮಕುಂಡಲಿ ಮತ್ತು ಕುಟುಂಬದ ಸದಸ್ಯರೊಂದಿಗಿನ ಛಾಯಾಚಿತ್ರಗಳ ಆಲ್ಬಂಗಳನ್ನು ಶ್ರೀಲಂಕಾ ಸೇನೆ ವಶಪಡಿಸಿಕೊಂಡಿತು. ಉತ್ತರದ ಯುದ್ಧಪೀಡಿತ ಪ್ರದೇಶ ಗಳಿಂದ ಈ ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಯಿತು. ಈ ಮಧ್ಯೆ ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್‌ಗೆ ಮಧುಮೇಹ ರೋಗವಿರುವುದರಿಂದ ಆತ ಅಂದುಕೊಂಡಷ್ಟು ಸುಲಭವಾಗಿ ಜಲಾಂತರ್ಗಾಮಿ ನೌಕೆ ಮೂಲಕ ಸಮುದ್ರ ಮಾರ್ಗದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಲಂಡನ್ ನ ದಿನಪತ್ರಿಕೆಯೊಂದು ವರದಿ ಮಾಡಿತು. ಆತ ಸೇನೆಗೆ ಶರಣಾಗುವ ಬದಲು ತನ್ನ ಕೊನೆಯ ಕ್ಷಣದವರೆಗೂ ಯುದ್ಧಭೂಮಿಯಲ್ಲೇ ಹೋರಾಟ ಮಾಡುತ್ತಾ ವೀರಮರಣವನ್ನು ಅಪ್ಪಬಹುದು ಎಂದು 'ದಿ ಸಂಡೆ ಟೆಲಿಗ್ರಾಫ್' ಪತ್ರಿಕೆ ಹೇಳಿತು.

2009: ಅನಿವಾಸಿ ಭಾರತೀಯ ಹಾಗೂ ಉಕ್ಕು ದೊರೆ ಶತಕೋಟ್ಯಧಿಪತಿ ಲಕ್ಷ್ಮೀ ಮಿತ್ತಲ್ ಅವರ ನಿವ್ವಳ ಆಸ್ತಿ ಕಳೆದ ಒಂದೇ ವರ್ಷದಲ್ಲಿ ಜಾಗತಿಕ ಹಿಂಜರಿತ ಹಿನ್ನೆಲೆಯಲ್ಲಿ ನಷ್ಟವಾಗಿರುವ ಪ್ರಮಾಣ 16.9 ಶತಕೋಟಿ ಪೌಂಡ್ (ಸುಮಾರು ರೂ.1,20,000 ಕೋಟಿ), ಈ ಮೊತ್ತ ಭಾರತದಲ್ಲಿನ ಅವರ ಎರಡು ಉದ್ದೇಶಿತ ಉಕ್ಕು ಘಟಕಗಳ ವೆಚ್ಚವನ್ನೂ ಮೀರಿಸಿದೆ. ಹೀಗಾಗಿ ಒಂದು ವರ್ಷದಲ್ಲಿ ಹೆಚ್ಚು ಸಂಪತ್ತು ಕಳೆದುಕೊಂಡ ವ್ಯಕ್ತಿ ಮಿತ್ತಲ್ ಎಂದು 'ಸಂಡೆ ಟೈಮ್ಸ್' ಬಣ್ಣಿಸಿತು. ಆದರೂ ಬ್ರಿಟನ್‌ನ ಅತ್ಯಂತ ಶ್ರೀಮಂತ ವ್ಯಕ್ತಿಗಳ ವಾರ್ಷಿಕ ಪಟ್ಟಿಯಲ್ಲಿ 2009ರ ಸಾಲಿನಲ್ಲೂ ಲಕ್ಷ್ಮಿ ಮಿತ್ತಲ್ ಸ್ಥಾನ ಪಡೆದುಕೊಂಡಿದ್ದಾರೆ. ಈ ಪ್ರಕಾರ ಬ್ರಿಟಿಷ್ ಪ್ರಜೆಯಾಗಿ ಅಲ್ಲಿನ ನಿವಾಸಿಯಾಗಿರುವ ಮಿತ್ತಲ್ ಅವರ ಆಸ್ತಿ ಪ್ರಮಾಣ 10.8 ಶತಕೋಟಿ ಪೌಂಡ್‌ಗಳು (ಸುಮಾರು ರೂ 79,000 ಕೋಟಿ). ಸತತವಾಗಿ ಐದನೇ ವರ್ಷಕ್ಕೆ ಮಿತ್ತಲ್ ಬ್ರಿಟನ್‌ನ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಸ್ಥಾನವನ್ನು ಈಗಲೂ ಉಳಿಸಿಕೊಂಡಿದ್ದಾರೆ ಎಂದು ಪತ್ರಿಕೆ ಹೇಳಿತು.

2009: ದಕ್ಷಿಣಾ ಆಫ್ರಿಕಾದಲ್ಲಿ ನಡೆದ 4ನೇ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎಎಸಿ) ಮೂರನೇ ಎರಡರಷ್ಟು ಬಹುಮತ ಪಡೆಯಲು ವಿಫಲವಾದರೂ, 400 ಸದಸ್ಯ ಬಲದ ಸಂಸತ್‌ನಲ್ಲಿ ನಿಚ್ಚಳ ಬಹುಮತ ಸಾಧಿಸಿತು. ಮತ ಎಣಿಕೆ ಕಾರ್ಯ ಪೂರ್ಣಗೊಂಡ ಬಳಿಕ ಹೊರಬಿದ್ದ ಫಲಿತಾಂಶದ ಪ್ರಕಾರ ಜೇಕಬ್ ಜುಮಾ ನೇತೃತ್ವದ ಎಎನ್‌ಸಿ ಪಕ್ಷವು ಸುಮಾರು ಶೇ 65 ಮತಗಳನ್ನು ಪಡೆದು ಆಡಳಿತ ಚುಕ್ಕಾಣಿ ಹಿಡಿಯಲು ಸಜ್ಜಾಯಿತು. ವಿರೋಧ ಪಕ್ಷ ಡೆಮಾಕ್ರೆಟಿಕ್ ಅಲಯಾನ್ಸ್ ಶೇ 16ರಷ್ಟು ಮತ ಗಳಿಸಿತು. ಚುನಾವಣೆಯಲ್ಲಿ 23 ದಶಲಕ್ಷ ಮತದಾರರು ಮತ ಚಲಾಯಿಸಿದ್ದರು. ಒಟ್ಟು ಶೇ. 77.3 ರಷ್ಟು ಮತದಾನವಾಗಿತ್ತು.

2009: ಮಾಸ್ಕೋದಲ್ಲಿ 120 ಮೀಟರ್ ಉದ್ದದ, 400 ಕೆ.ಜಿ. ಭಾರದ ದೈತ್ಯ ಕಬಾಬ್ ತಯಾರಿಸಲಾಯಿತು. ಫ್ರೆಂಡ್‌ಶಿಪ್ ಟಿಕ್ಕಾ ಹೆಸರಿನಲ್ಲಿ ಈ ಕಬಾಬ್ ತಯಾರಿಸಿರುವುದು 80 ಮಂದಿ ಪಾಕ ಪ್ರವೀಣರು ಮತ್ತು 40 ಮಂದಿ ಸಹಾಯಕರು. ರಷ್ಯಾದವರೇ ತಯಾರಿಸಿದ್ದ 71.2 ಮೀಟರ್ ಉದ್ದದ ಕಬಾಬ್ ಈವರೆಗಿನ ಅತಿ ಉದ್ದದ ಕಬಾಬ್ ಎಂದು ದಾಖಲಾಗಿತ್ತು.
ಈಗ ಹೊಸ ಟಿಕ್ಕಾ ಹಳೆ ದಾಖಲೆಗಳನ್ನೆಲ್ಲ ಅಳಿಸಿಹಾಕಿತು.

2009: ಮುಂಬೈ ಇಂಡಿಯನ್ಸ್ ತಂಡದ ನಾಯಕ ಸಚಿನ್ ತೆಂಡೂಲ್ಕರ್ ಹಾಗೂ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದ ನಾಯಕ ಆಡಂ ಗಿಲ್‌ಕ್ರಿಸ್ಟ್ ಅವರ ಮೇಲೆ 20 ಸಾವಿರ ಡಾಲರ್ ದಂಡ ವಿಧಿಸಲಾಯಿತು. ಕಿಂಗ್ಸ್‌ಮೇಡ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಉಭಯ ತಂಡಗಳು ನಿಧಾನಗತಿ ಬೌಲಿಂಗ್ ಪ್ರದರ್ಶನ ನೀಡಿದ್ದರಿಂದ ನಾಯಕರ ಮೇಲೆ ದಂಡ ಹೇರಲಾಯಿತು. ಈ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದವರು 12 ರನ್‌ಗಳಿಂದ ಮುಂಬೈ ತಂಡವನ್ನು ಸೋಲಿಸಿದ್ದರು.

2009: ಆಭರಣ ತಯಾರಿಕಾ ಕ್ಷೇತ್ರದಲ್ಲಿ ವಿಶಿಷ್ಟ ವಿನ್ಯಾಸಗಳು ಮತ್ತು ಸಂಗ್ರಹಕ್ಕಾಗಿ ಹೆಸರಾದ ತನಿಷ್ಕ್ ಒಂದು ಸೆಂ.ಮೀ. ಸುತ್ತಳತೆಯ ಪೆಂಡೆಂಟ್‌ನಲ್ಲಿ ಸಂಪೂರ್ಣ ಭಗವದ್ಗೀತೆಯನ್ನು ಬರೆಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಇದು ವಿಶ್ವದ ಅತ್ಯಂತ ಚಿಕ್ಕ ಗಾತ್ರದ ಭಗವದ್ಗೀತೆಯೂ ಎನಿಸಿತು. 1 ಸೆಂ.ಮೀ. ಸುತ್ತಳತೆಯ ಚಿಪ್‌ನಲ್ಲಿ 24 ಕ್ಯಾರೆಟ್ ಚಿನ್ನದಲ್ಲಿ ಭಗವದ್ಗೀತೆಯ ಎಲ್ಲಾ 18 ಅಧ್ಯಾಯಗಳು (ಸುಮಾರು 700 ಶ್ಲೋಕಗಳು) ಮೂಡಿ ಬಂದಿವೆ. ಈ ಪದಕ ಧರಿಸಿಕೊಂಡರೆ ಅತ್ಯಂತ ಪವಿತ್ರ ಗ್ರಂಥವನ್ನು ಮೈಯಲ್ಲಿ ಧರಿಸಿಕೊಂಡ ಸಂತೃಪ್ತಿ. ಈ ನ್ಯಾನೊ ತಂತ್ರಜ್ಞಾನವನ್ನು ಆವಿಷ್ಕರಿಸಿದವರು ಅಮೆರಿಕದ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಪ್ರೊಫೆಸರ್ ಪವನ್ ಸಿನ್ಹಾ. ಇವರು ಕಾಲು (1/4) ಸೆಂ.ಮೀ. ಸುತ್ತಳತೆಯ ಚಿಪ್‌ನಲ್ಲಿ ಬೈಬಲ್ ರಚಿಸಿ ಈಗಾಗಲೇ ಗಿನ್ನೆಸ್ ದಾಖಲೆ ಬರೆದವರು. ಒಂದು ಹೆಜ್ಜೆ ಮುಂದಕ್ಕೆ ಹೋಗಿ ಭಗವದ್ಗೀತೆಯ ಶ್ಲೋಕಗಳನ್ನೆಲ್ಲಾ ಪದಕದೊಳಗೆ ತುಂಬಿಸುವಲ್ಲಿ ಸಫಲರಾದರು. ಅವರ ಬಳಿಯಲ್ಲೇ ಇದರ ಪೇಟೆಂಟ್ ಇದೆ. ತನಿಷ್ಕ್ ಸಂಸ್ಥೆ ಅವರ ಸಹಯೋಗದೊಂದಿಗೆ ಆರು ಬಗೆಯ ಪೆಂಡೆಂಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಬರಿಗಣ್ಣಿಗೆ ಸಂಸ್ಕೃತದ ಓಂ ಅಕ್ಷರ ಮಾತ್ರ ಕಾಣಿಸುತ್ತದೆ. 20 ಎಕ್ಸ್ ಮೈಕ್ರೊಸ್ಕೋಪ್‌ನಡಿಯಲ್ಲಿ ಸಂಸ್ಕೃತ ಲಿಪಿಯಲ್ಲಿ ಶ್ಲೋಕಗಳನ್ನು ಮೇಲಿನಿಂದ ಕೆಳಗೆ ಸಾಲು ಸಾಲಾಗಿ ಬರೆಯಲಾಗಿದ್ದರೆ, ಇದನ್ನು ಓದಲು 200 ಎಕ್ಸ್ ಮೈಕ್ರೊಸ್ಕೋಪ್‌ನ ಅಗತ್ಯವಿದೆ. ಪೆಂಡೆಂಟ್‌ನ ಬೆಲೆ 13 ರಿಂದ 15 ಸಾವಿರ ರೂಪಾಯಿ.

2008: ಸರ್ಕಾರದ ನಿಷೇಧವನ್ನು ಉಲ್ಲಂಘಿಸಿ ಗೋ ಹತ್ಯೆ ಮಾಡಿ ಅದರ ಮಾಂಸ ಸೇವಿಸುವುದು ಷರಿಯತ್ ಕಾನೂನು ಪ್ರಕಾರ ಅಕ್ರಮ ಎಂದು ಇಸ್ಲಾಂ ಧಾರ್ಮಿಕ ಮಂಡಳಿ ದಾರುಲ್ ಉಲೂಮ್ ಫತ್ವಾ ಹೊರಡಿಸಿತು. ಈ ಸಂಬಂಧ ಮುಜಾಫರ್ ನಗರ ಜಿಲ್ಲೆಯ ಮುಸ್ಲಿಂ ಧರ್ಮಗುರು ಹಾಜಿ ಮೊಹಮ್ಮದ್ ಇಸಾರ್ ಅವರು ಕೇಳಿದ ಪ್ರಶ್ನೆಗೆ ದಾರುಲ್ ಉಲೂಮ್ ಈ ಫತ್ವಾ ಹೊರಡಿಸಿತು.

2008: ಕರ್ನಾಟಕದಲ್ಲಿ ಮೇ 22ರಂದು ನಡೆಯಲಿರುವ ಮೂರನೇ ಹಂತದ 69 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಪ್ರಕ್ರಿಯೆಗೆ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸುವ ಮೂಲಕ ಚಾಲನೆ ನೀಡಿತು. ಉತ್ತರ ಕರ್ನಾಟಕ ಪ್ರದೇಶದ ಬೆಳಗಾವಿ, ಬಾಗಲಕೋಟೆ, ವಿಜಾಪುರ, ಗುಲ್ಬರ್ಗ, ಬೀದರ, ಗದಗ, ಧಾರವಾಡ ಮತ್ತು ಹಾವೇರಿ ಈ ಎಂಟು ಜಿಲ್ಲೆಗಳಲ್ಲಿ ಮೂರನೇ ಹಂತದ ಚುನಾವಣೆ ನಡೆಯುವುದು.

2008: ಜಮ್ಮು ಮತ್ತು ಕಾಶ್ಮೀರದ ನೂತನ ಕಿಶ್ತ್ ವಾರ್ ಜಿಲ್ಲೆಯಲ್ಲಿ ಚೇನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟೆಯಲ್ಲಿನ 390 ಮೆ.ವಾ. ಸಾಮರ್ಥ್ಯದ ಜಲ ವಿದ್ಯುತ್ ಯೋಜನೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರಕ್ಕೆ ಅರ್ಪಿಸಿದರು. 25 ವರ್ಷಗಳ ಹಿಂದೆ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ಅಡಿಗಲ್ಲು ಹಾಕಿದ್ದ ಈ ಯೋಜನೆಯನ್ನು ಉದ್ಘಾಟಿಸಿದ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಅಪರಿಮಿತ ಜಲ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಇದು ಇನ್ನೊಂದು ಮೈಲುಗಲ್ಲು ಎಂದು ಬಣ್ಣಿಸಿದರು. ದುಲ್ ಹಸ್ತಿ ಜಲ ವಿದ್ಯುತ್ ಯೋಜನೆಯು, 1994ರಲ್ಲಿ ಕಾರ್ಯಾರಂಭ ಮಾಡಿದ 360 ಮೆ.ವಾ. ಸಾಮರ್ಥ್ಯದ ಸಲಾಲ್ ಯೋಜನೆಯ ಬಳಿಕ ಚೇನಾಬ್ ನದಿಯ ಮೇಲೆ ನಿರ್ಮಿಸಲಾದ ಎರಡನೆಯ ದೊಡ್ಡ ವಿದ್ಯುತ್ ಯೋಜನೆ. ಇನ್ನೆರಡು ಜಲ ವಿದ್ಯುತ್ ಯೋಜನೆಗಳಾದ 450 ಮೆ.ವಾ. ಸಾಮರ್ಥ್ಯದ ಬಗ್ಲಿಯಾರ್ ಜಲ ವಿದ್ಯುತ್ ಯೋಜನೆ ಮತ್ತು 600 ಮೆ.ವಾ. ಸಾಮರ್ಥ್ಯದ ಸವಾಲ್ ಕೋಟ್ ಜಲವಿದ್ಯುತ್ ಯೋಜನೆಗಳು ರಾಮಬನ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿವೆ.

2008: ಅತಿ ಪ್ರಮುಖರ ಮಕ್ಕಳು ನಡೆಸುವ ಅಪಘಾತ ಪ್ರಕರಣಗಳಿಗೆ ಇದು ಇನ್ನೊಂದು ಸೇರ್ಪಡೆ. ಉತ್ತರ ಪ್ರದೇಶ ಶಾಸಕಿ ಶಾದಬ್ ಫಾತಿಮಾ ಅವರ ಪುತ್ರ ಕಾಸಿಫ್ ಅಬ್ಬಾಸ್ ನಸುಕಿನ ವೇಳೆಯಲ್ಲಿ ಕುಡಿದ ಮತ್ತಿನಲ್ಲಿ ಕಾರನ್ನು ಯದ್ವಾತದ್ವ ಓಡಿಸಿದ ಪರಿಣಾಮವಾಗಿ ಸಂಭವಿಸಿದ ಅಪಘಾತಗಳಲ್ಲಿ ಮೂವರು ಸತ್ತು ಇತರ 9 ಮಂದಿ ಗಾಯಗೊಂಡರು. 17ರ ಹರೆಯದ ಅಬ್ಬಾಸ್ ತನ್ನಮ್ಮನ ಕೆಂಪು ದೀಪದ ಕಾರನ್ನು ಕುಡಿದ ಮತ್ತಿನಲ್ಲಿ ಓಡಿಸುತ್ತಿದ್ದಾಗ ನಿಯಂತ್ರಣ ತಪ್ಪಿ, ವಾಹನವು ಮೂವರ ಮೇಲೆ ಚಲಿಸಿ ಅವರೆಲ್ಲರೂ ಸ್ಥಳದಲ್ಲೇ ಅಸು ನೀಗಿದರು ಎಂದು ಪೊಲೀಸರು ತಿಳಿಸಿದರು.

2008: ದಶಕದ ಹಿಂದೆ ನಾಪತ್ತೆಯಾದ ನಿವೃತ್ತ ಉದ್ಯೋಗಿಯ ಪತ್ನಿಗೆ 50,000 ರೂಪಾಯಿಗಳ ಪರಿಹಾರ ನೀಡುವಂತೆ ಕಲ್ಕತ್ತಾ ಹೈಕೋರ್ಟ್ ಪೂರ್ವ ರೈಲ್ವೇಯ ಕೇಂದ್ರೀಯ ಆಸ್ಪತ್ರೆ ಅಧಿಕಾರಿಗಳಿಗೆ ಆದೇಶ ನೀಡಿತು.
ಕಣ್ಮರೆಯಾದ ವ್ಯಕ್ತಿಯ ಪತ್ತೆ ಬಗ್ಗೆ ನಿರ್ಲಕ್ಷ್ಯ ತಾಳಿದ ಬಿ.ಆರ್. ಸಿಂಗ್ ರೈಲ್ವೇ ಆಸ್ಪತ್ರೆಯ ಆಡಳಿತ ವರ್ಗದ ಅಸಡ್ಡೆಯ ಧೋರಣೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಲಯದ ವಿಭಾಗೀಯ ಪೀಠವು ಪೊಲೀಸರ ಬಳಿ ವ್ಯಕ್ತಿ ಕಾಣೆಯಾಗಿದ್ದಾನೆ ಎಂದು ದಾಖಲಿಸಿ ಸುಮ್ಮನಾಗುವ ಮೂಲಕ ತಮ್ಮ ಕರ್ತವ್ಯ ಮಾಡಿದ್ದೇವೆ ಎಂದು ಅಧಿಕಾರಿಗಳು ಹೇಳುವಂತಿಲ್ಲ ಎಂದು ಅಭಿಪ್ರಾಯ ಪಟ್ಟಿತು. ನ್ಯಾಯಮೂರ್ತಿ ಅಮೃತ್ ತಾಲೂಕ್ದರ್ ಮತ್ತು ಪಿ.ಎಸ್. ಬ್ಯಾನರ್ಜಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಕಾಣೆಯಾಗಿರುವ ವ್ಯಕ್ತಿಯ ಬಗ್ಗೆ ಭಾವಚಿತ್ರ ಸಹಿತವಾಗಿ ಪತ್ರಿಕೆಗಳು ಮತ್ತು ಟೆಲಿವಿಷನ್ನಿನಲ್ಲಿ ಜಾಹೀರಾತುಗಳನ್ನು ನೀಡುವಂತೆಯೂ ಕೋಲ್ಕತ ಪೊಲೀಸ್ ಮತ್ತು ಪಶ್ಚಿಮ ಬಂಗಾಳ ಪೊಲೀಸರಿಗೆ ನಿರ್ದೇಶಿಸಿತು. ನಂದ ಕುಮಾರ ಸರ್ಕಾರ್ ಎಂಬ ಪೂರ್ವ ರೈಲ್ವೇ ನೌಕರ 1993ರಲ್ಲಿ ನಿವೃತ್ತರಾಗಿದ್ದು, ರೈಲ್ವೇ ನಿಯಮಗಳ ಪ್ರಕಾರ ವೈದ್ಯಕೀಯ ಸವಲತ್ತುಗಳಿಗೆ ಅರ್ಹರಾಗಿದ್ದರು. 1999ರ ಸೆಪ್ಟೆಂಬರ್ 22ರಂದು ಅಸ್ವಸ್ಥರಾದಾಗ ಅವರನ್ನು ಬಿ.ಆರ್. ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಟೋಬರ್ 7ರಂದು ಸರ್ಕಾರ್ ಪತ್ನಿ ಶಂಕರಿ ಆಸ್ಪತ್ರೆಗೆ ಬಂದಾಗ ಆತನಿದ್ದ ಮಂಚ ಖಾಲಿಯಾಗಿತ್ತು. ಆಕೆ ತತ್ ಕ್ಷಣವೇ ಆಸ್ಪತ್ರೆಯ ಅಧಿಕಾರಿಗಳನ್ನು ಸಂಪರ್ಕಿಸಿ ವಿಚಾರಿಸಿದಳು. ಆದರೆ ಅಧಿಕಾರಿಗಳು ಸರ್ಕಾರ್ಗೆ ಏನಾಗಿದೆ ಎಂದು ವಿವರಿಸಲು ಸಮರ್ಥರಾಗಲಿಲ್ಲ. ಆ ಬಳಿಕ ತನ್ನ ಪತಿಯ ಪತ್ತೆಗಾಗಿ ಶಂಕರಿ ಅವರು ಕಂಬದಿಂದ ಕಂಬಕ್ಕೆ ಸುತ್ತಿದ್ದಲ್ಲದೆ, ಆಸ್ಪತ್ರೆಗೆ ಹಾಗೂ ರೈಲ್ವೇ ಅಧಿಕಾರಿಗಳಿಗೆ ಹಾಗೂ ನಗರ ಪೊಲೀಸರಿಗೆ ಲಿಖಿತ ಮನವಿಗಳನ್ನೂ ಸಲ್ಲಿಸಿದಳು ಎಂದು ಆಕೆಯ ವಕೀಲ ಇದ್ರಿಸ್ ಅಲಿ ಪ್ರತಿಪಾದಿಸಿದ್ದರು. ಪತಿಯ ಪತ್ತೆಗೆ ವಿಫಲಳಾದಾಗ ಆಕೆ ಹೈಕೋರ್ಟಿನಲ್ಲಿ `ಹೇಬಿಯಸ್ ಕಾರ್ಪಸ್' ಅರ್ಜಿ ಸಲ್ಲಿಸಿದ್ದಳು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ 15 ದಿನಗಳ ಒಳಗಾಗಿ ಪರಿಹಾರ ನೀಡುವಂತೆ ಬಿ.ಆರ್. ಸಿಂಗ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಿಗೆ ಆದೇಶಿಸಿತು.

2008: ಮೊಹಾಲಿಯಲ್ಲಿ ವೇಗಿ ಶ್ರೀಶಾಂತ್ ಕೆನ್ನೆಗೆ ಬಾರಿಸಿದ ಆರೋಪಕ್ಕೆ ಒಳಗಾದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಷೋಕಾಸ್ ನೋಟಿಸ್ ಜಾರಿ ಮಾಡಿತು.

2008: ವಿಶ್ವ ವಿಖ್ಯಾತ ಇಸ್ಲಾಂ ವಿದ್ವಾಂಸ ಮೌಲಾನಾ ಅಂಜರ್ ಷಾ ಕಾಶ್ಮೀರಿ (81) ಅವರು ನವದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ದೀರ್ಘ ಕಾಲದ ಅಸೌಖ್ಯದ ಬಳಿಕ ನಿಧನರಾದರು. ಅಂಜರ್ ಷಾ ಅವರು ದಾರುಲ್ ಉಲೂಮ್ ದೇವಬಂದ್ನ ಇಸ್ಲಾಮಿಕ್ ನ್ಯಾಯ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದರು. `ಹದಿತ್', `ಫಿಕ್' ಮತ್ತು ಇಸ್ಲಾಮಿಕ್ ಕಾನೂನಿನ ಮೇಲೆ ಹಲವು ಪುಸ್ತಕಗಳನ್ನು ರಚಿಸಿದ್ದರು.

2008: ತಂದೆಯೊಬ್ಬ ತನ್ನ ಹದಿನಾಲ್ಕರ ಹರೆಯದ ಮಗಳ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ, ಪ್ರಕರಣ ಬೆಳಕಿಗೆ ಬಂದ ಮೇಲೆ ಆಕೆಯನ್ನು ಮದುವೆಯಾಗುವುದಾಗಿ ಹೇಳಿದ ವಿಲಕ್ಷಣ ಘಟನೆಯೊಂದು ಒರಿಸ್ಸಾದ ಮಲ್ಕನ್ ಗಿರಿಗೆ 70 ಕಿ.ಮೀ. ದೂರದ ಕೂಡುಮುಲುಗುಮ ಗ್ರಾಮದಲ್ಲಿ ಹಿಂದಿನ ದಿನ ರಾತ್ರಿ ನಡೆಯಿತು. ಅತ್ಯಾಚಾರವೆಸಗಿದ ಆರೋಪದ ಮೇಲೆ ಭಗವಾನ್ ಡಕುವಾ (37) ಎಂಬುವನನ್ನು ಮಲ್ಕನ್ ಗಿರಿ ಪೊಲೀಸರು ಬಂಧಿಸಿದರು. ತನ್ನ ಮಗಳ ಬಗೆಗಿನ ಗಂಡನ ವರ್ತನೆಯನ್ನು ಗಮನಿಸಿದ ಪತ್ನಿ ವನಿತ, ಮಗಳನ್ನು ಪ್ರಶ್ನಿಸಿದಾಗ ಆಕೆ `ನಡೆದ ಘಟನೆ'ಯನ್ನು ಬಿಚ್ಚಿಟ್ಟಳು. ವಿಷಯ ತಿಳಿದ ಗ್ರಾಮದ ಮಹಿಳಾ ಸ್ವಸಹಾಯ ಗುಂಪಿನವರು ಮಧ್ಯಪ್ರವೇಶಿಸಿ ಗ್ರಾಮಸಭೆ ಮುಂದೆ ಅತ್ಯಾಚಾರದ ವಿಚಾರವನ್ನು ಮಂಡಿಸಿದರು. ಗ್ರಾಮಸಭೆಗೆ ಹಾಜರಾದ ಡಕುವಾನನ್ನು ಘಟನೆ ಬಗ್ಗೆ ಪ್ರಶ್ನಿಸಿದಾಗ, ಅತ್ಯಾಚಾರವೆಸಗಿದ ಮಗಳನ್ನೇ ಮದುವೆಯಾಗುವ ಬಯಕೆ ವ್ಯಕ್ತಪಡಿಸಿ, ಆಕೆಯನ್ನು ಎರಡನೇ ಪತ್ನಿಯನ್ನಾಗಿ ಸ್ವೀಕರಿಸುವುದಾಗಿ ಹೇಳಿದ. ಗ್ರಾಮಸ್ಥರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸರಿಗೆ ಮುಟ್ಟಿಸಿದರು. ಸ್ವಸಹಾಯ ಗುಂಪಿನ ನಾಯಕಿ ಬಾಲಮಣಿ ನಾಲಿ ಅವರ ಹೇಳಿಕೆ ಮೇರೆಗೆ ಪೊಲೀಸರು ಡಕುವಾನನ್ನು ಬಂಧಿಸಿದರು.

2008: ಹಿರಿಯ ವೃತ್ತಿ ರಂಗ ಕಲಾವಿದೆ ಹಾಗೂ ಖ್ಯಾತ ಹಿಂದೂಸ್ತಾನಿ ಗಾಯಕಿ ಬಳ್ಳಾರಿಯ ಸುಭದ್ರಮ್ಮ ಮನ್ಸೂರು (69) ಅವರನ್ನು 2007ನೇ ಸಾಲಿನ ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಏಣಗಿ ಬಾಳಪ್ಪ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಸುಭದ್ರಮ್ಮ ಅವರ ಹೆಸರನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಶಿಫಾರಸು ಮಾಡಿತು.

2008: ವಿಶ್ವ ಬೌದ್ಧಿಕ ಆಸ್ತಿ ದಿನದ ಪ್ರಯುಕ್ತ ಅಹಮದಾಬಾದಿನಲ್ಲಿ `ಬೌದ್ಧಿಕ ಆಸ್ತಿ ಹಕ್ಕು- ಕಾನೂನು ಹಾಗೂ ಪ್ರಯೋಗ' ಎಂಬ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಬೌದ್ಧಿಕ ಆಸ್ತಿ ಹಕ್ಕು ಪರಿಣತರಾದ ಜತಿನ್ ತ್ರಿವೇದಿ ಹಾಗೂ ಜಿ.ಡಿ.ದೇವ್ ಅವರು ಬರೆದ ಈ ಕೃತಿಯಲ್ಲಿ ಬೌದ್ಧಿಕ ಆಸ್ತಿ ಹಕ್ಕು ಕಾನೂನಿನ ಬಗ್ಗೆ ಭಾರತದ ವಿವಿಧ ನ್ಯಾಯಾಲಯಗಳು ನೀಡಿದ ತೀರ್ಪಿನ ಕುರಿತ ವಿವರಣೆಗಳಿವೆ. ಹಣಕಾಸು ಸಚಿವಾಲಯದ ನೇರ ತೆರಿಗೆ ಸಲಹಾ ಸಮಿತಿಯ ಮಾಜಿ ಸದಸ್ಯ, ಸೆಬಿ ಸೆಕೆಂಡರಿ ಮಾರ್ಕೆಟ್ ಸಲಹಾ ಸಮಿತಿ ಸದಸ್ಯ ಚಿನ್ನುಭಾಯ್ ಶಾ ಈ ಕೃತಿ ಬಿಡುಗಡೆ ಮಾಡಿದರು.

2008: ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಸಮಾಜವಾದಿ ಪಕ್ಷದ ಮುಖಂಡ ರಾಕೇಶ್ ಸಿಂಗ್ ಅಲಿಯಾಸ್ ಪಪ್ಪು ಸಿಂಗ್ ಮತ್ತು ಇತರ ನಾಲ್ವರು ಮೃತಪಟ್ಟ ಘಟನೆ ಉತ್ತರ ಪ್ರದೇಶ ಅಜಂಗಢದ ಜಹನ್ಗಂಜ್ ಪೊಲೀಸ್ ವೃತ್ತ ವ್ಯಾಪ್ತಿಯ ಶಂಶುದ್ದೀನ್ ಪುರದಲ್ಲಿ ಘಟಿಸಿತು.

2007: ಸೇಂಟ್ ಲೂಸಿಯಾದ ಗ್ರಾಸ್ ಐಲೆಟಿನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅನುಭವಿ ವೇಗಿ ಗ್ಲೆನ್ ಮೆಕ್ ಗ್ರಾ ಅವರು ತನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ನೂತನ ವಿಶ್ವಕಪ್ ದಾಖಲೆ ನಿರ್ಮಿಸಿದರು. ಒಂಬತ್ತನೇ ವಿಶ್ವಕಪ್ ಕ್ರಿಕೆಟಿನಲ್ಲಿ `ಶ್ರೇಷ್ಠ ಆಟಗಾರ' ಶ್ರೇಯ ಪಡೆದು ಮುಂಚೂಣಿಯಲ್ಲಿ ನಿಂತಿರುವ ಮೆಕ್ ಗ್ರಾ ಈ ಟೂರ್ನಿಯಲ್ಲಿ 25 ವಿಕೆಟ್ಗಳನ್ನು ಕಬಳಿಸಿ ವಿಶ್ವದಾಖಲೆ ಸ್ಥಾಪಿಸಿದರು. ಶ್ರೀಲಂಕೆಯ ಮುತ್ತಯ್ಯ ಮುರಳೀಧರನ್ (23) ಮತ್ತು ಆಸ್ಟ್ರೇಲಿಯಾದ ಇನ್ನೊಬ್ಬ ಬೌಲರ್ ಶಾನ್ ಟೈಟ್ (23) ಅವರು ಮೆಕ್ ಗ್ರಾ ಜೊತೆಗೆ ಪೈಪೋಟಿಯಲ್ಲಿ ಇರುವ ಇತರ ಪಟುಗಳು.

2007: ಬಹುಸಂಖ್ಯಾತ ಜನರನ್ನು ಕಾಡುವ ಮಧುಮೇಹ ರೋಗಕ್ಕೆ ಕಾರಣವಾಗುವ ವಂಶವಾಹಿಯನ್ನು (ಜೀನ್) ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳ ತಂಡವೊಂದು `ಜನರಲ್ ಸೈನ್ಸ್ ಅಂಡ್ ನೇಚರ್ ಜೆನೆಟಿಕ್ಸ್' ನಿಯತಕಾಲಿಕದಲ್ಲಿ ಪ್ರಕಟಿಸಿತು. ವಿಶ್ವದಲ್ಲಿ ಮಧುಮೇಹದಿಂದ ಬಳಲುತ್ತಿರುವ 20 ಕೋಟಿಗೂ ಅಧಿಕ ಮಂದಿಗೆ ಇದು ವರದಾನ ಆಗಬಲ್ಲುದು.

2007: ರಾಯಚೂರಿನ ಮಾನ್ವಿ ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿ ಕೊಳವೆ ಬಾವಿಯೊಳಕ್ಕೆ ಬಿದ್ದ ಸಂದೀಪ ಕಡೆಗೂ ಜೀವಂತವಾಗಿ ಮೇಲೆ ಬರಲಾಗದೆ ಕೊಳವೆ ಬಾವಿಯಲ್ಲೇ ಅಸು ನೀಗಿದ. ಸತತ 57 ಗಂಟೆಗಳ ರಕ್ಷಣಾ ಕಾರ್ಯಾಚರಣೆ ಕೊನೆಗೂ ಫಲ ನೀಡಲಿಲ್ಲ.

2007: ಭಾರತದರ್ಶನ ಉಪನ್ಯಾಸ ಮಾಲಿಕೆಯಿಂದ ಖ್ಯಾತರಾಗಿದ್ದ ರಾಷ್ಟ್ರೋತ್ಥಾನ ಪರಿಷತ್ ಕಾರ್ಯಕರ್ತ, ಅವಿವಾಹಿತ ವಿದ್ಯಾನಂದ ಶೆಣೈ (56) ಅವರು ಬೆಂಗಳೂರಿನಲ್ಲಿ ನಿಧನರಾದರು. ಶೃಂಗೇರಿ ಪುರಸಭೆಯ ಸದಸ್ಯರೂ ಆಗಿದ್ದ ವಿದ್ಯಾನಂದ ಶೆಣೈ ರಾಜ್ಯದಲ್ಲಿ ಭಾರತ ದರ್ಶನ ಉಪನ್ಯಾಸ ಮಾಲಿಕೆಯ ಮೂಲಕ 1100ಕ್ಕೂ ಅಧಿಕ ಉಪನ್ಯಾಸ ನೀಡಿದ್ದರು. ಅವರು ಹೊರತಂದಿದ್ದ `ಭಾರತ ದರ್ಶನ' ಧ್ವನಿಸುರುಳಿಯ 50,000 ಸೆಟ್ಗಳು ಮಾರಾಟವಾಗಿ ದಾಖಲೆ ನಿರ್ಮಾಣವಾಗಿತ್ತು.

2007: ಮಲೇಶ್ಯಾವು ಈದಿನ ಕ್ವಾಲಾಲಂಪುರದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 45 ವರ್ಷದ ಥಂಕು ಮಿಜಾನ್ ಜೈನಲ್ ಅಬಿದಿನ್ ಅವರನ್ನು ತನ್ನ ನೂತನ ದೊರೆಯಾಗಿ ಘೋಷಿಸಿತು. ತೈಲ ಸಮೃದ್ಧ ತೆರೆಂಗ್ಗನು ರಾಜ್ಯದದವರಾದ ಥಂಕು ಮಿಜಾನ್ ಅವರು ಎರಡನೆಯ ಅತ್ಯಂತ ಕಿರಿಯ ದೊರೆಯಾಗಿದ್ದು ಹೊಸ ತಲೆಮಾರಿನ ಶ್ರದ್ಧಾವಂತ ಮುಸ್ಲಿಮ. ಮಲೇಶ್ಯಾದ ಸಂವಿಧಾನಬದ್ಧವಾದ ವಿಶಿಷ್ಠ ಸರದಿ ದೊರೆತನ ವ್ಯವಸ್ಥೆ ಪ್ರಕಾರ ಥಂಕು ಅವರು ಐದು ವರ್ಷ ಕಾಲ ರಾಜ್ಯಭಾರ ಮಾಡುವರು. ಮಲೇಶ್ಯಾವು ಒಂಬತ್ತು ಮಂದಿ ಸುಲ್ತಾನರನ್ನು ಹೊಂದಿದ್ದು ಪ್ರತಿಯೊಬ್ಬರೂ ಸರದಿಯಂತೆ ಐದು ವರ್ಷಗಳ ಕಾಲ ಆಳ್ವಿಕೆ ನಡೆಸುತ್ತಾರೆ. ಆದರೆ ಈ ಸಲದ ಸುಲ್ತಾನರು ಅತ್ಯಂತ ಯುವ ತಲೆಮಾರಿನವರೂ ಶ್ರದ್ಧಾವಂತ ಮುಸ್ಲಿಮರೂ ಆಗಿರುವುದು ವಿಶೇಷ. 2.60 ಕೋಟಿ ಜನಸಂಖ್ಯೆಯಲ್ಲಿ ಅರ್ಧದಷ್ಟು ಮುಸ್ಲಿಮರನ್ನು ಹೊಂದಿರುವ ಮಲೇಶ್ಯಾ, ಆಧುನಿಕ ರಾಷ್ಟ್ರವಾಗ್ದಿದರೂ, 1980ರಿಂದ ಇಸ್ಲಾಮಿಕ್ ಸಂಪ್ರದಾಯ ಹೆಚ್ಚು ಬಲವಾಗಿ ಬೇರೂರಿದೆ.

2007: ಖ್ಯಾತ ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. 81 ವರ್ಷದ ಸ್ವಾಮಿನಾಥನ್ ಅವರನ್ನು ಈ ತಿಂಗಳ ಆದಿಯಲ್ಲಿ ಮೇಲ್ಮನೆ ಸದಸ್ಯರಾಗಿ ನಾಮಕರಣ ಮಾಡಲಾಗಿತ್ತು. ಅವರು ಇಂಗ್ಲಿಷಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದರು.

2007: ಛತ್ರಪತಿ ಶಿವಾಜಿ ಕುರಿತ ವಿವಾದಾತ್ಮಕ `ಎ ಹಿಂದು ಕಿಂಗ್ ಇನ್ ಇಸ್ಲಾಮಿಕ್ ಇಂಡಿಯಾ' ಪುಸ್ತಕದ ಮೇಲೆ ಮಹಾರಾಷ್ಟ್ರ ಸರ್ಕಾರವು ವಿಧಿಸಿದ್ದ ನಿಷೇಧವನ್ನು ಮುಂಬೈ ಹೈಕೋರ್ಟ್ ತಳ್ಳಿ ಹಾಕಿತು. ಅಮೆರಿಕನ್ ಲೇಖಕ ಜೇಮ್ಸ್ ಲೈನ್ ಈ ಪುಸ್ತಕವನ್ನು ಬರೆದಿದ್ದಾರೆ. ಪುಸ್ತಕದಲ್ಲಿ ಶಿವಾಜಿ ಬಗ್ಗೆ ಕೆಲವು ಟೀಕೆಗಳಿವೆ ಎಂಬ ಕಾರಣಕ್ಕಾಗಿ ಸರ್ಕಾರವು ಅದನ್ನು ನಿಷೇಧಿಸಿತ್ತು. ನ್ಯಾಯಮೂರ್ತಿ ಎಫ್. ಐ. ರೆಬೆಲ್ಲೋ, ನ್ಯಾಯಮೂರ್ತಿ ವಿ.ಕೆ. ತಾಹಿಲ್ ರಮಣಿ ಮತ್ತು ನ್ಯಾಯಮೂರ್ತಿ ಅಭಯ್ ಓಕ್ ಅವರನ್ನು ಒಳಗೊಂಡ ಪೂರ್ಣಪೀಠವು 2004ರಲ್ಲಿ ವಿಧಿಸಲಾದ ನಿಷೇಧವನ್ನು ತಳ್ಳಿಹಾಕಿ ತೀರ್ಪು ನೀಡಿತು.

2006: ಕೊಲಂಬೊ ಸೇನಾ ಮುಖ್ಯ ಕಚೇರಿ ಮೇಲೆ ಮಾನವಬಾಂಬ್ ದಾಳಿ ನಡೆದ ಹಿನ್ನೆಲೆಯಲ್ಲಿ ಶ್ರೀಲಂಕಾ ವಾಯುಪಡೆಯು ಈಶಾನ್ಯ ಪ್ರದೇಶದ ತಮಿಳು ಬಂಡುಕೋರರ ಆಯ್ದ ನೆಲೆಗಳ ಮೇಲೆ ವಾಯುದಾಳಿ ಆರಂಭಿಸಿತು.

2006: ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಪಿ. ವೆಂಕೋಬರಾವ್ (84) ಬೆಂಗಳೂರಿನ ಶ್ರೀರಾಮಪುರದಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ಮಹಾತ್ಮ ಗಾಂಧೀಜಿ ಮತ್ತು ವಿನೋಬಾ ಭಾವೆ ಅವರ ಶಿಷ್ಯರಾಗಿ ಅವರ ಆಶ್ರಮಗಳಲ್ಲಿ ನೆಲೆಸಿದ್ದ ವೆಂಕೋಬರಾವ್ ಕ್ವಿಟ್ ಇಂಡಿಯಾ ಚಳವಳಿ, ವಿನೋಬಾ ಭಾವೆ ಅವರ ಭೂದಾನ ಯಾತ್ರೆಗಳಲ್ಲಿ ಪಾಲ್ಗೊಂಡ್ದಿದರು. ಜೀವನ ಚರಿತ್ರೆ, ಅನುವಾದ, ಕವನ ಪ್ರಾಕಾರಗಳಲ್ಲಿ 25 ಪುಸ್ತಕಗಳನ್ನು ರಚಿಸಿದ್ದು, ಅವರ 1200 ಪುಟಗಳ ಗಾಂಧಿ ಚರಿತ ಮಾನಸ ಗ್ರಂಥಕ್ಕೆ ದೇಜಗೌ ಟ್ರಸ್ಟ್ ವಿಶ್ವ ಮಾನವ ಪ್ರಶಸ್ತಿ ನೀಡಿ ಗೌರವಿಸಿತ್ತು.

2006: ತಮ್ಮ 17ನೇ ವಯಸ್ಸಿನಲ್ಲಿ ಹೌ ಓಪಲ್ ಮೆಹ್ತಾ ಗಾಟ್ ಕಿಸ್ಸಡ್, ಗಾಟ್ ವೈಲ್ಡ್ ಅಂಡ್ ಗಾಟ್ ಎ ಲೈಫ್ ಕಾದಂಬರಿ ಬರೆದು ಅಪಾರ ಖ್ಯಾತಿಯ ಜೊತೆಗೇ ಕೃತಿ ಚೌರ್ಯದ ವಿವಾದದಲ್ಲಿಯೂ ಸಿಲುಕಿದ ಭಾರತೀಯ ಮೂಲದ ಹಾರ್ವರ್ಡ್ ಯುವತಿ ಹಾರ್ವರ್ಡ್ ವಿವಿ ವಿದ್ಯಾರ್ಥಿನಿ ಕಾವ್ಯ ವಿಶ್ವನಾಥನ್ ಅವರು ತಮ್ಮ ಕಾದಂಬರಿಯಲ್ಲಿ ಬೇರೆ ಕಾದಂಬರಿಯ ಕೆಲವೊಂದು ಬರಹಗಳನ್ನು ಬಳಸಿಕೊಂಡಿದ್ದಾಗಿ ಒಪ್ಪಿಕೊಂಡರು. ಓಪಲ್ ಮೆಹ್ತಾ ಪ್ರಕಟಿಸಿದ ಲಿಟಲ್ ಬ್ರೌನ್ ಕಂಪೆನಿಗೆ ಪತ್ರ ಬರೆದ ಇನ್ನೊಂದು ಪ್ರಕಾಶನ ಸಂಸ್ಥೆ ರ್ಯಾಂಡಮ್ ಹೌಸ್ ಓಪಲ್ ಮೆಹ್ತಾ ಹಾಗೂ ಅಮೆರಿಕದ ಬರಹಗಾರ ಮೆಗನ್ ಮ್ಯಾಕ್ ಕ್ಯಾಫರ್ಟಿ ಅವರ ಸ್ಲೊಪ್ಪಿ ಫರ್ಸ್ಟ್ ಮತ್ತು ಸೆಕೆಂಡ್ ಹೆಲ್ಪಿಂಗ್ ನಡುವೆ ಸಾಮ್ಯತೆ ಇದೆ ಎಂದು ಆಕ್ಷೇಪಿಸಿತ್ತು.

2006: ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟದ (ಜಿಸಿಎಂಎಂಎಫ್) ನೂತನ ಅಧ್ಯಕ್ಷರಾಗಿ ಪಾರ್ಥಿ ಭಟೋಲ್ ಆಯ್ಕೆಯಾದರು. 33 ವರ್ಷಗಳಿಂದ ಅಧ್ಯಕ್ಷರಾಗಿದ್ದ ಡಾ. ವರ್ಗೀಸ್ ಕುರಿಯನ್ ಅವರು ಹಿಂದಿನ ತಿಂಗಳು ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2006: ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಜೆ. ಸೊರಾಬ್ಜಿ ಅವರು ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ಚಾರಿಟಬಲ್ ಫೌಂಡೇಷನ್ ಪ್ರಶಸ್ತಿಗೆ ಆಯ್ಕೆಯಾದರು

1992: ಜ್ಞಾನಪೀಠ ಪ್ರಶಸ್ತಿ ವಿಜೇತ ವಿ.ಕೃ. ಗೋಕಾಕ್ ಅವರು ಈದಿನ ನಿಧನರಾದರು.

1986: ಸೋವಿಯತ್ ಒಕ್ಕೂಟದ ಚೆರ್ನೋಬಿಲ್ ಪರಮಾಣು ಸ್ಥಾವರದಲ್ಲಿ ಜಗತ್ತಿನ ಅತಿಭೀಕರ ವಿಕಿರಣ ಸೋರಿಕೆ ದುರಂತ ಘಟಿಸಿತು. ಸ್ಥಾವರದ ರಿಯಾಕ್ಟರಿನಲ್ಲಿ ಸ್ಫೋಟ ಹಾಗೂ ಬೆಂಕಿ ಸಂಭವಿಸಿ ಸೋರಿಕೆಯಾದ ವಿಕಿರಣ ಪರಿಸರವನ್ನು ಸೇರಿ ಕನಿಷ್ಠ 31 ಮಂದಿ ತತ್ ಕ್ಷಣವೇ ಅಸುನೀಗಿದರು.

1955: ಕಲಾವಿದೆ ಜಯಶ್ರೀ ಅರವಿಂದ್ ಜನನ.

1954: ಕಲಾವಿದ ರವೀಂದ್ರ ಕುಮಾರ ವಿ. ಜನನ.

1946: ಭಾರತೀಯ ಕ್ರಿಕೆಟ್ ಅಂಪೈರ್ ವಿ.ಕೆ. ರಾಮಸ್ವಾಮಿ ಜನ್ಮದಿನ.

1937: ಖ್ಯಾತ ಇತಿಹಾಸ ತಜ್ಞ, ಸಂಶೋಧಕ, ಸಾಹಿತಿ, ಪ್ರಾಧ್ಯಾಪಕ ಸೂರ್ಯನಾಥ ಕಾಮತ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಉಪೇಂದ್ರ ಕಾಮತ್- ಪದ್ಮಾವತಮ್ಮ ದಂಪತಿಯ ಪುತ್ರನಾಗಿ ಜನಿಸಿದರು. 70ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಕಾಮತ್ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ವಿವಿಯ ಸಂಶೋಧನಾ ಪ್ರಶಸ್ತಿ, ತುಳು ಅಕಾಡೆಮಿ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿ ಗೌರವಗಳಿಗೆ ಪಾತ್ರರಾಗಿದ್ದಾರೆ.

1937: ಸ್ಪಾನಿಷ್ ಅಂತರ್ಯುದ್ಧದ ಸಂದರ್ಭದಲ್ಲಿ ಜರ್ಮನ್ ವಿಮಾನಗಳು ಗುಯೆರ್ನಿಕಾದ ಬಾಸ್ಕ್ ಟೌನ್ ಮೇಲೆ ದಾಳಿ ನಡೆಸಿದವು. ನಾಗರಿಕ ಪ್ರದೇಶದ ಮೇಲೆ ನಡೆದ ಮೊತ್ತ ಮೊದಲ ಬಾಂಬ್ ದಾಳಿ ಇದು. ಈ ದಾಳಿಯಿಂದ ಆದ ಜೀವಹಾನಿಯನ್ನು ಪಾಬ್ಲೊ ಪಿಕಾಸೋ ತನ್ನ `ಗುಯೆರ್ನಿಕಾ' ಗೋಡೆ ಚಿತ್ರಗಳಲ್ಲಿ ಚಿತ್ರಿಸಿದ್ದಾನೆ.

1931: ಕಲಾವಿದ ವಿ. ರಾಮಸ್ವಾಮಿ ಜನನ.

1927: ಕಲಾವಿದ ಶಿವಪ್ಪ ಎಚ್. ತರಲಘಟ್ಟಿ ಜನನ.

1920: ಭಾರತೀಯ ಗಣಿತ ತಜ್ಞ ಶ್ರೀನಿವಾಸ ರಾಮಾನುಜಂ ಅವರು ತಮ್ಮ 32ನೇ ವಯಸ್ಸಿನಲ್ಲಿ ಕ್ಷಯ ರೋಗಕ್ಕೆ ತುತ್ತಾಗಿ ನಿಧನರಾದರು.

1887: ಮೈಸೂರಿನ ವೀಣಾವಾದನ ಝೇಂಕಾರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದ ವೀಣೆ ವೆಂಕಟಗಿರಿಯಪ್ಪ (26-4-1887ರಿಂದ 30-1-1952) ಅವರು ವೆಂಕಟರಾಮಯ್ಯ- ನರಸಮ್ಮ ದಂಪತಿಯ ಮಗನಾಗಿ ಹೆಗ್ಗಡದೇವನ ಕೋಟೆಯಲ್ಲಿ ಜನಿಸಿದರು. ತಾತ ದೊಡ್ಡ ಸುಬ್ಬರಾಯರಿಂದಲೇ ವೀಣೆ ಪಾಠ ಆರಂಭಿಸಿದ ವೆಂಕಟರಾಮಯ್ಯ ಮುಂದೆ ಮೈಸೂರು ಮಹಾರಾಜರ ಆಸ್ಥಾನ ವಿದ್ವಾಂಸರಾಗಿ ನೇಮಕಗೊಂಡು ಮಹಾರಾಜರ ಪ್ರೋತ್ಸಾಹದಿಂದ ಪಾಶ್ಚಾತ್ಯ ಸಂಗೀತ ಪಿಯಾನೋ, ಕೆರಮಿಮ್ ವಾದನ ಕಲೆಯನ್ನೂ ಕಲಿತು ವೀಣೆಯೊಂದಿಗೆ ಅವುಗಳಲ್ಲೂ ಪ್ರವೀಣರಾದರು.

1806: ಸ್ಕಾಟಿಷ್ ಮತಪ್ರಚಾರಕ ಅಲೆಗ್ಸಾಂಡರ್ ಡಫ್ (1806-78) ಹುಟ್ಟಿದ ದಿನ. ಈತ ಕಲಕತ್ತಾ ವಿಶ್ವವಿದ್ಯಾಲಯ ಸ್ಥಾಪನೆಗೆ ನೆರವಾದ.

Sunday, April 25, 2010

ಇಂದಿನ ಇತಿಹಾಸ History Today ಏಪ್ರಿಲ್ 25

ಇಂದಿನ ಇತಿಹಾಸ

ಏಪ್ರಿಲ್ 25

ಭಾರತೀಯ ಮೂಲದ ಅಮೆರಿಕ ಕಾದಂಬರಿಗಾರ್ತಿ, ಪತ್ರಕರ್ತೆ ಶಾಂತಾ ರಾಮರಾವು (86) ತೀವ್ರ ಅಸ್ವಸ್ಥತೆಯಿಂದ ನ್ಯೂಯಾರ್ಕಿನಲ್ಲಿ ನಿಧನರಾದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತು. ಈಸ್ಟ್ ಆಫ್ ಹೋಮ್, ವ್ಯೆ ಟು ದ ಸೌತ್ ಈಸ್ಟ್, ಮೈ ರಷ್ಯನ್ ಜರ್ನಿ ಇತ್ಯಾದಿ ಕೃತಿಗಳನ್ನು ನೀಡಿದ ಶಾಂತಾ ಅವರ ಆತ್ಮಕತೆ 'ಗಿಫ್ಟ್ಸ್ ಆಫ್ ಪ್ಯಾಸೇಜ್'. ಇ ಎಂ ಫಾಸ್ಟರ್ ಅವರ 'ಎ ಪ್ಯಾಸೇಜ್ ಟು ಇಂಡಿಯಾ' ಕಾದಂಬರಿಯನ್ನು ರಂಗಕ್ಕೆ ಅಳವಡಿಸಿದ ಕೀರ್ತಿ ಶಾಂತಾ ಅವರಿಗೆ ಸಲ್ಲುತ್ತದೆ.

2009: ಸಚಿವರಾದ ಜಿ.ಜನಾರ್ದನರೆಡ್ಡಿ, ಜಿ.ಕರುಣಾಕರರೆಡ್ಡಿ ಮತ್ತು ಬಿ.ಶ್ರೀರಾಮುಲು ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿ (ಓಎಂಸಿ) ಸೇರಿದಂತೆ ನಾಲ್ಕು ಸಂಸ್ಥೆಗಳಿಗೆ ಬಳ್ಳಾರಿ ಅರಣ್ಯ ವಲಯದ ಅಂತರರಾಜ್ಯ ಗಡಿ ಭಾಗದ ಒಂದು ಪ್ರದೇಶದಲ್ಲಿ ನೀಡಲಾಗಿದ್ದ ಐದು ಗಣಿ ಗುತ್ತಿಗೆಗಳನ್ನು ತತ್ ಕ್ಷಣ ಅಮಾನತು ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿತು. ಸಚಿವರ ಮಾಲೀಕತ್ವದ ಓಎಂಸಿ ಅಂತರರಾಜ್ಯ ಗಡಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂಬ ಆರೋಪದ ಬಗ್ಗೆ ಸ್ಪಷ್ಟವಾಗಿ ತಿಳಿಯಲು ಭಾರತೀಯ ಸರ್ವೇ ಇಲಾಖೆ ವತಿಯಿಂದ ಸಮೀಕ್ಷೆ ನಡೆಯಬೇಕಿದೆ. ಗಡಿ ಗುರುತಿಸುವ ಪ್ರಕ್ರಿಯೆ ಅಂತ್ಯಗೊಳ್ಳುವವರೆಗೆ ಎಲ್ಲ ಐದು ಗುತ್ತಿಗೆಗಳನ್ನೂ ಅಮಾನತಿನಲ್ಲಿ ಇಡಬೇಕು ಎಂದು ಕೇಂದ್ರ ಅರಣ್ಯ ಇಲಾಖೆಯ ಹಿರಿಯ ಸಹಾಯಕ ಐಜಿಪಿ ಬಿ.ಕೆ.ಸಿಂಗ್ ಆಂಧ್ರಪ್ರದೇಶದ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿದರು. ಅನಂತಪುರ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಯು ಅಂತರರಾಜ್ಯ ಗಡಿ ಪ್ರದೇಶದಲ್ಲಿ ಗಣಿಗಾರಿಕೆ ನಿಯಂತ್ರಿಸುವಲ್ಲಿ ಲೋಪ ಎಸಗಿರುವ ಸಂಬಂಧ ಕೇಂದ್ರ ಅರಣ್ಯ ಇಲಾಖೆಯ ಬೆಂಗಳೂರು ಪ್ರಾದೇಶಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯು 2009ರ ಜನವರಿ 30ರಂದು ನೀಡಿರುವ ಸ್ಥಳ ಪರಿಶೀಲನಾ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಯಿತು.

2009: ಪ್ರತ್ಯೇಕ ತಮಿಳು ರಾಷ್ಟ್ರ ನಿರ್ಮಾಣ ಸಲುವಾಗಿ ಆರಂಭವಾದ ಎಲ್‌ಟಿಟಿಇ ಹಾಗೂ ಶ್ರೀಲಂಕಾ ಸೇನೆಯ ನಡುವಿನ ಕದನ ಭೀಕರವಾಗಿ ಮುಂದುವರಿಯಿತು. ಯುದ್ಧ ನಿಲ್ಲಿಸುವಂತೆ ಎರಡೂ ಪಡೆಗಳಿಗೆ ವಿಶ್ವಸಂಸ್ಥೆ, ಐರೋಪ್ಯ ಒಕ್ಕೂಟ ರಾಷ್ಟ್ರಗಳು ಸೇರಿದಂತೆ ಹಲವು ರಾಷ್ಟ್ರಗಳು ಒಂದೆಡೆಯಿಂದ ಒತ್ತಡ ಹೇರಿದರೆ, ಮತ್ತೊಂದೆಡೆ ತನ್ನ ಪ್ರದೇಶದಲ್ಲಿರುವ 1.60 ಲಕ್ಷ ನಾಗರಿಕರಿಗೆ ತಕ್ಷಣ ಮಾನವೀಯ ನೆರವು ಸಿಗದೇ ಹೋದರೆ ಅವರು ಬದುಕುಳಿಯುವುದು ಅನುಮಾನ ಎಂದು ಎಲ್‌ಟಿ ಟಿಇ ಆತಂಕ ವ್ಯಕ್ತಪಡಿಸಿತು. . ಇದನ್ನು ಶ್ರೀಲಂಕಾ ಸರ್ಕಾರ ಅಲ್ಲಗಳೆಯಿತು.

2009: ಶಸ್ತ್ರಸಜ್ಜಿತ ತಾಲಿಬಾನ್ ಉಗ್ರರು ಬುನೇರ್ ಜಿಲ್ಲೆಯನ್ನು ಸಂಪೂರ್ಣವಾಗಿ ತೊರೆದರು. ಪಾಕಿಸ್ಥಾನಿ ಅಧಿಕಾರಿಗಳು ಜಿಲ್ಲೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಪಾಕಿಸ್ಥಾನದ ರಾಜಧಾನಿ ಇಸ್ಲಾಮಾಬಾದಿನಿಂದ ಕೇವಲ 100 ಕಿ.ಮೀ ಅಂತರದಲ್ಲಿರುವ ಬುನೇರ್ ಜಿಲ್ಲೆಯ ಮೇಲೆ ಹಿಡಿತ ಸಾಧಿಸಿದ್ದ ತಾಲಿಬಾನ್ ಉಗ್ರರು ಸರ್ಕಾರದ ಜೊತೆಗಿನ ಮಾತುಕತೆಯ ನಂತರ ಹಿಂದಕ್ಕೆ ಸರಿಯಲು ಒಪ್ಪಿಕೊಂಡಿದ್ದರು.

2009: ಫಾರ್ಚೂನ್ 500ರ ಪಟ್ಟಿಯಲ್ಲಿ ಅಮೆರಿಕದ ಹಲವು ಬೃಹತ್ ಕಂಪೆನಿಗಳನ್ನು ಮುನ್ನಡೆಸುವ 15 ಮಹಿಳೆಯರಲ್ಲಿ ಪೆಪ್ಸಿಕೊ ಕಂಪೆನಿಯ ಸಿಇಒ ಭಾರತೀಯ ಸಂಜಾತೆ ಇಂದ್ರಾ ನೂಯಿ ನಾಲ್ಕನೇಯವರಾದರು. 2006ರಲ್ಲಿ ಸಿಇಓ ಆಗಿ ಅಧಿಕಾರ ವಹಿಸಿಕೊಂಡಂದಿನಿಂದ ಇಂದ್ರಾ ನೂಯಿ (53) ಕಂಪೆನಿಯ ಆದಾಯ ಹೆಚ್ಚಿಸುವಲ್ಲಿ ಶ್ರಮಿಸಿದ್ದರು. 2008ರಲ್ಲಿ (ಶೇ10ರಷ್ಟು ಹೆಚ್ಚಳ)43.3 ಶತಕೋಟಿ ಅಮೆರಿಕ ಡಾಲರ್ ಆದಾಯ ಗಳಿಸಿಕೊಡುವುದರೊಂದಿಗೆ ಕಂಪೆನಿಯ ಕುರಿತು ಉತ್ತಮ ಭಾವನೆ ಬೆಳೆಸುವಂತಹ ಹಲವು ಕ್ಷೇತ್ರಗಳಿಗೆ ಅದರ ಕಾರ್ಯವ್ಯಾಪ್ತಿ ವಿಸ್ತರಿಸಿದ್ದಾರೆ ಎಂದು ಮ್ಯಾಗಝೀನ್ ಹೇಳಿತು.

2009: ಭಾರತೀಯ ಮೂಲದ ಅಮೆರಿಕ ಕಾದಂಬರಿಗಾರ್ತಿ, ಪತ್ರಕರ್ತೆ ಶಾಂತಾ ರಾಮರಾವು (86) ತೀವ್ರ ಅಸ್ವಸ್ಥತೆಯಿಂದ ನ್ಯೂಯಾರ್ಕಿನಲ್ಲಿ ನಿಧನರಾದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತು. ಈಸ್ಟ್ ಆಫ್ ಹೋಮ್, ವ್ಯೆ ಟು ದ ಸೌತ್ ಈಸ್ಟ್, ಮೈ ರಷ್ಯನ್ ಜರ್ನಿ ಇತ್ಯಾದಿ ಕೃತಿಗಳನ್ನು ನೀಡಿದ ಶಾಂತಾ ಅವರ ಆತ್ಮಕತೆ 'ಗಿಫ್ಟ್ಸ್ ಆಫ್ ಪ್ಯಾಸೇಜ್'. ಇ ಎಂ ಫಾಸ್ಟರ್ ಅವರ 'ಎ ಪ್ಯಾಸೇಜ್ ಟು ಇಂಡಿಯಾ' ಕಾದಂಬರಿಯನ್ನು ರಂಗಕ್ಕೆ ಅಳವಡಿಸಿದ ಕೀರ್ತಿ ಶಾಂತಾ ಅವರಿಗೆ ಸಲ್ಲುತ್ತದೆ. 1923ರಲ್ಲಿ ಚೆನ್ನೈನಲ್ಲಿ ಜನಿಸಿದ ಶಾಂತಾ ಅವರ ತಂದೆ ಜಪಾನ್ ಮತ್ತು ಅಮೆರಿಕದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.

2009: ಭಾರತವನ್ನು 'ಗೋ ಹತ್ಯೆ ಮುಕ್ತ ರಾಷ್ಟ್ರ' ಎಂದು ಘೋಷಿಸಲು ಎಲ್ಲ ರಾಜಕೀಯ ಪಕ್ಷಗಳು ಮುಂದಾಗಬೇಕು ಎಂದು ಅಖಿಲ ಕರ್ನಾಟಕ ಪ್ರಾಣಿದಯಾ ಸಂಘ ಬೆಂಗಳೂರಿನಲ್ಲಿ ಒತ್ತಾಯಿಸಿತು. 'ಭಾರತೀಯರಿಗೆ ಗೋವುಗಳ ಬಗ್ಗೆ ಪೂಜ್ಯ ಭಾವನೆ ಇದೆ. ಹಾಗಾಗಿ ಗೋ ಹತ್ಯೆಯನ್ನು ಎಲ್ಲರೂ ವಿರೋಧಿಸಬೇಕು. ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ದೇಶವನ್ನು 'ಗೋ ಹತ್ಯೆ ಮುಕ್ತ ರಾಷ್ಟ್ರ'ವನ್ನಾಗಿ ಘೋಷಿಸಲು ಮತದಾರರು ಒತ್ತಡ ಹೇರಬೇಕು' ಎಂದು ಸಂಘದ ಸಮನ್ವಯಾಧಿಕಾರಿ ದಯಾನಂದ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದರು.

2008: ಬಾಲಿವುಡ್ ನಟ ಡಾ. ಶ್ರೀರಾಮ್ ಲಾಗೂ ಅವರಿಗೆ ಮುಂಬೈಯಲ್ಲಿ ಗಾಯಕಿ ಲತಾ ಮಂಗೇಶ್ಕರ್ ಅವರು ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಮಾಡಿದರು.

2008: ಕ್ರಿಕೆಟ್ ಪಂದ್ಯಗಳ ಸಂದರ್ಭದಲ್ಲಿ ಕ್ರೀಡಾಂಗಣಗಳಲ್ಲಿ `ಚಿಯರ್ ಗರ್ಲ್ಸ್' ತಂಡಗಳು ನೃತ್ಯ ಪ್ರದರ್ಶನ ನೀಡುವುದಕ್ಕೆ ನಿಷೇಧ ಹೇರುವ ಯೋಚನೆಯನ್ನು ಮಹಾರಾಷ್ಟ್ರ ಸರ್ಕಾರ ಕೈಬಿಟ್ಟಿತು. `ಅಶ್ಲೀಲ' ಭಾವ-ಭಂಗಿಗಳನ್ನು ತೋರಿದರೆ ಮಾತ್ರ ಕ್ರಮ ಕೈಗೊಳ್ಳುವುದಾಗಿ ಅದು ಎಚ್ಚರಿಸಿತು.

2008: ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎನ್ ಎಫ್ ಡಿ ಸಿ) ಅಧ್ಯಕ್ಷರನ್ನಾಗಿ ಹಿರಿಯ ನಟ ಓಂಪುರಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತು. ಏಪ್ರಿಲ್ 4ರಿಂದ ಅನ್ವಯವಾಗುವಂತೆ ಅವರ ನೇಮಕಾತಿ ಆಗಿದ್ದು, ಮುಂದಿನ ಮೂರು ವರ್ಷಗಳ ಕಾಲ ಅವರು ಈ ಸ್ಥಾನದಲ್ಲಿ ಮುಂದುವರೆಯುವರು. 1980ರ ದಶಕದಿಂದಲೂ ಎನ್ ಎಫ್ ಡಿ ಸಿ ಜತೆಗೆ ಸಂಪರ್ಕ ಇಟ್ಟುಕೊಂಡ ಓಂಪುರಿ ಅವರು, `ಅರ್ಧ ಸತ್ಯ', `ಜಾನೆ ಭಿ ದೋ ಯಾರ್ಹೊ...', `ಮಿರ್ಚ್ ಮಸಾಲಾ', `ಧಾರಾವಿ', `ಭವಾನಿ ಭವಾಯಿ', `ಕರೆಂಟ್' ಮೊದಲಾದ ಚಿತ್ರಗಳಲ್ಲಿ ನಟಿಸಿದವರು. ಈ ಹಿಂದೆ ಅಡಲ್ಯಾಬ್ಸಿನ ಮನಮೋಹನ ಶೆಟ್ಟಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಹೃಷಿಕೇಶ ಮುಖರ್ಜಿ, ಬಾಲಿವುಡ್ಡಿನ ಕನಸಿನ ಕನ್ಯೆ ಹೇಮಾಮಾಲಿನಿ ಅವರು ಎನ್ ಎಫ್ ಡಿ ಸಿ ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

2008: ವಾಯುದಳಕ್ಕೆ ಬೆಂಬಲವಾಗಿ ಕಾರ್ಯ ನಿರ್ವಹಿಸಲು ಭೂಮಿಯಿಂದ ಆಕಾಶದತ್ತ ನಿಗದಿತ ಗುರಿಯತ್ತ ಬಹು ವೇಗವಾಗಿ ಚಿಮ್ಮುವ ಸಾಮರ್ಥ್ಯದ ಕ್ಷಿಪಣಿಗಳನ್ನು ಖರೀದಿಸಲು ಭಾರತೀಯ ಸೇನೆಯು 3,800 ಕೋಟಿ ರೂಪಾಯಿಗಳ ಜಾಗತಿಕ ಟೆಂಡರ್ ಕರೆಯಿತು. ಗಗನದಲ್ಲಿ 8ರಿಂದ 9 ಕಿ. ಮೀ. ಎತ್ತರದಲ್ಲಿ ಹಾರಾಡುವ ಯುದ್ಧ ವಿಮಾನಗಳನ್ನು ಹಾಗೂ ಮಾನವರಹಿತ ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿಗಳು ಹೊಂದಿರುತ್ತವೆ ಎಂದು ಸೇನಾ ಮೂಲಗಳು ತಿಳಿಸಿದವು.

2008: ಇಂಗ್ಲೆಂಡಿನ ಬ್ರಿಸ್ಟಲ್ ನಗರದಲ್ಲಿರುವ ಭಾರತದ ಸಮಾಜ ಸುಧಾರಕ ರಾಜಾರಾಮ್ ಮೋಹನ್ ರಾಯ್ ಅವರ ಸಮಾಧಿ ಪುನರುಜ್ಜೀವನಕ್ಕೆ 165 ವರ್ಷಗಳ ಬಳಿಕ ಚಾಲನೆ ನೀಡಲಾಯಿತು. ಮೆದುಳಿಗೆ ಸಂಬಂಧಿಸಿದ ಕಾಯಿಲೆಗೆ ತುತ್ತಾಗಿ ರಾಜಾರಾಮ್ ಮೋಹನ್ ರಾಯ್ ಅವರು 1833ರ ಸೆಪ್ಟೆಂಬರ್ 27ರಂದು ಬ್ರಿಸ್ಟಲ್ ನಗರದಲ್ಲಿ ಅಸುನೀಗಿದ್ದು ಅವರ ಸಮಾಧಿಯನ್ನು ಇಲ್ಲಿಯೇ ನಿರ್ಮಿಸಲಾಗಿತ್ತು. ರಾಯ್ ಸಮಾಧಿ ಪುನರುಜ್ಜೀವನಕ್ಕಾಗಿ ಕೋಲ್ಕತ ಮಹಾನಗರ ಪಾಲಿಕೆಯು 50 ಸಾವಿರ ಪೌಂಡ್ ಸಂಗ್ರಹಿಸಿ ನೀಡಿತು. ಈ ಸ್ಥಳವು ಬಂಗಾಳ ಹಾಗೂ ಭಾರತದ ಇತರೆಡೆಯಿಂದ ಇಂಗ್ಲೆಂಡಿಗೆ ಬರುವ ಪ್ರವಾಸಿಗರಿಗೆ ಮುಖ್ಯ ದಾರ್ಶನಿಕ ಕೇಂದ್ರವಾಗಿದೆ.

2008: ಭಯೋತ್ಪಾದನೆ ಪರಿಣಾಮವಾಗಿ ಕಣಿವೆಯಿಂದ ಗುಳೇ ಹೋಗಿದ್ದ ಕಾಶ್ಮೀರಿ ವಲಸಿಗರು ಆದಷ್ಟೂ ಬೇಗನೆ ಹಿಂತಿರುಗುವಂತಾಗಲು ಕೇಂದ್ರ ಸರ್ಕಾರವು 1600 ಕೋಟಿ ರೂಪಾಯಿಗಳ ಕೊಡುಗೆಯನ್ನು ಪ್ರಕಟಿಸಿತು. ವಾಪಸಾಗುವ ಕಾಶ್ಮೀರಿಗಳಿಗೆ ವಸತಿ ವ್ಯವಸ್ಥೆ, ನೌಕರಿ ಸವಲತ್ತು ಮತ್ತು ಸಾಲದ ಮೇಲಿನ ಬಡ್ಡಿ ಮನ್ನಾ ಕೂಡಾ ಈ ಕೊಡುಗೆಗಳಲ್ಲಿ ಸೇರಿದೆ.

2008: ದಕ್ಷಿಣ ದೆಹಲಿಯ ಲೋಧಿ ರಸ್ತೆಯಲ್ಲಿರುವ ಕೇಂದ್ರೀಯ ತನಿಖಾ ದಳ (ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್- ಸಿಬಿಐ) ಕಚೇರಿಯಲ್ಲಿ ಈದಿನ ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡಿತು. ಬೆಳಗ್ಗೆ 8.50ರ ಸುಮಾರಿಗೆ ಸಿಜಿಓ ಕಾಂಪ್ಲೆಕ್ಸಿನ ಆರನೇ ಮಹಡಿಯ ಕೊಠಡಿಯೊಂದರಲ್ಲಿ ಈ ಬೆಂಕಿ ಕಾಣಿಸಿಕೊಂಡಿತು. ಬೆಳಗ್ಗೆ 10.05ರ ವೇಳೆಗೆ ಬೆಂಕಿಯನ್ನು ನಿಯಂತ್ರಿಸಲಾಯಿತು.

2008: ಹತ್ತನೇ ದರ್ಜೆಯ ಇಂಗ್ಲಿಷ್ ಬೋರ್ಡ್ ಪರೀಕ್ಷೆಯ ಸುಮಾರು 22,000ಕ್ಕೂ ಹೆಚ್ಚು ಉತ್ತರ ಪತ್ರಿಕೆಗಳು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಮೌಲ್ಯ ಮಾಪನ ಕೇಂದ್ರದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಭಸ್ಮವಾದವು.

2007; ಸೌರವ್ಯೂಹದಿಂದ 20 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿ ಒಂದು ಗ್ರಹವನ್ನು ಖಗೋಳ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದು ಅದರಲ್ಲಿ ಜೈವಿಕಾಂಶ ಇರಬಹುದು ಎಂದು ಪ್ರಕಟಿಸಿದರು. ಹೊಸ ಗ್ರಹವು ಭೂಗ್ರಹಕ್ಕಿಂತ ಐದು ಪಟ್ಟು ದೊಡ್ಡದಾಗಿದ್ದು, ಸೌರವ್ಯೂಹಕ್ಕೆ ಸನಿಹದಲ್ಲಿರುವ ಕೆಂಪು ಕುಬ್ಜ ತಾರೆ ಗ್ಲೆಸೆ-581ನ್ನು ಸುತ್ತುತ್ತಿದೆ, ಇದು ತುಲಾ ನಕ್ಷತ್ರ ರಾಶಿಯಲ್ಲಿದೆ ಎಂದು ಹೊಸ ಗ್ರಹವನ್ನು ಪತ್ತೆ ಹಚ್ಚಿದ ಸ್ವಿಜರ್ಲೆಂಡಿನ ಜಿನೀವಾ ಖಗೋಳಾಲಯದ ವಿಜ್ಞಾನಿಗಳಾದ ಸಿಫೈನ್ ಉಡ್ರಿ ಮತ್ತು ಸಹೋದ್ಯೋಗಿಗಳು ಹೇಳಿದರು.

2006: ಡಕಾಯತಿಯಿಂದ ರಾಜಕೀಯಕ್ಕೆ ಸೇರಿದ್ದ ಚಂಬಲ್ ರಾಣಿ ಕುಖ್ಯಾತಿಯ ಫೂಲನ್ ದೇವಿಯನ್ನು ಹತ್ಯೆಗೈದ ಪ್ರಮುಖ ಆರೋಪಿ ಶೇರ್ ಸಿಂಗ್ ರಾಣಾನನ್ನು ದೆಹಲಿ ಪೊಲೀಸರ ತನಿಖಾ ತಂಡವು ದೆಹಲಿಯಲ್ಲಿ ಬಂಧಿಸಿತು. ತಿಹಾರ್ ಸೆರೆಮನೆಯಿಂದ ಪರಾರಿಯಾಗಿ, ಎರಡು ವರ್ಷಗಳ ಬಳಿಕ ಆರೋಪಿ ಸೆರೆ ಸಿಕ್ಕಿದ. ಫೂಲನ್ ದೇವಿಯನ್ನು ದೆಹಲಿಯಲ್ಲಿ ಅವರ ಮನೆ ಎದುರಲ್ಲಿ 2001ರ ಜುಲೈಯಲ್ಲಿ ಹತ್ಯೆ ಮಾಡಲಾಗಿತ್ತು ಹತ್ಯೆಯಾದ ಎರಡೇ ದಿನದಲ್ಲಿ ಶೇರ್ ಸಿಂಗನನ್ನು ಡೆಹರಾಡೂನಿನಲ್ಲಿ ಪೊಲೀಸರು ಬಂದಿಸಿದ್ದರು. 2004ರಲ್ಲಿ ಆತ ತಿಹಾರ್ ಸೆರೆಮನೆಯಿಂದ ಪರಾರಿಯಾಗಿದ್ದ.

2006: ನೇಪಾಳದ ನೂತನ ಪ್ರಧಾನಿ ಸ್ಥಾನಕ್ಕೆ ನೇಪಾಳಿ ಕಾಂಗ್ರೆಸ್ ಅಧ್ಯಕ್ಷ , ಮಾಜಿ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲ (84) ಅವರನ್ನು ಪ್ರಸ್ತಾಪಿಸಿ ಸಪ್ತಪಕ್ಷ ಮೈತ್ರಿಕೂಟ ನಿರ್ಣಯ ಅಂಗೀಕರಿಸಿತು. 19 ದಿನಗಳ ಪ್ರಜಾಪ್ರಭುತ್ವ ಪರ ಚಳವಳಿಯನ್ನೂ ಹಿಂತೆಗೆದುಕೊಂಡ ಮೈತ್ರಿಕೂಟ, ಸಂಸತ್ತಿಗೆ ಮರುಜೀವ ನೀಡುವುದಾಗಿ ದೊರೆ ಜ್ಞಾನೇಂದ್ರ ಅವರು ನೀಡಿದ ಆಹ್ವಾನಕ್ಕೆ ಒಪ್ಪಿ ಸರ್ಕಾರ ರಚನೆಗೆ ಮುಂದಾಯಿತು.

2006: ಗರ್ಭಿಣಿಯ ಪೋಷಾಕಿನಲ್ಲಿ ಶ್ರೀಲಂಕಾ ಸೇನೆಯ ಕೊಲಂಬೊ ಕೇಂದ್ರ ಕಚೇರಿ ಆವರಣದೊಳಕ್ಕೆ ಪ್ರವೇಶಿಸಿದ ಎಲ್ ಟಿಟಿಇ ಸಂಘಟನೆಯ ಮಹಿಳಾ ಮಾನವ ಬಾಂಬ್ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹತ್ತು ಮಂದಿ ಸೈನಿಕರು ಮೃತರಾಗಿ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಶರತ್ ಫಾನ್ಸೆಕಾ ತೀವ್ರವಾಗಿ ಗಾಯಗೊಂಡರು.

2006: ಲಾಭದ ಹುದ್ದೆ ಹೊಂದಿರುವ ಲೋಕಸಭಾ ಅಧ್ಯಕ್ಷ ಸೋಮನಾಥ ಚಟರ್ಜಿ, ಪಂಜಾಬ್, ಮಧ್ಯಪ್ರದೇಶ, ಒರಿಸ್ಸಾ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಛತ್ತೀಸ್ ಗಢ ಈ 6 ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವ ಪ್ರಣವ್ ಮುಖರ್ಜಿ, ಶರದ್ ಪವಾರ್ ಮತ್ತು ಮೀರಾಕುಮಾರ್ ಸೇರಿದಂತೆ ಒಟ್ಟು 43 ಲೋಕಸಭೆ ಸದಸ್ಯರು ಮತ್ತು 200ಕ್ಕೂ ಹೆಚ್ಚು ಶಾಸಕರ ಹೆಸರನ್ನು ಚುನಾವಣಾ ಆಯೋಗವು ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸಿತು.

2006: ಬಸವ ವೇದಿಕೆಯು ಪ್ರತಿವರ್ಷ ನೀಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಈ ವರ್ಷ ಕೇರಳ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ.ವಿ.ಎಸ್. ಮಳಿಮಠ ಆಯ್ಕೆಯಾದರು. ವಚನ ಸಾಹಿತ್ಯ ಶ್ರೀ ಪ್ರಶಸ್ತಿಗೆ ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಅಜಯಕುಮಾರ್ ಸಿಂಗ್ ಆಯ್ಕೆಯಾದರು.

2006: ಶ್ರೀಶ್ರೀ ರವಿಶಂಕರ ಗುರೂಜಿ ಅವರಿಗೆ ತೈವಾನ್ ಸಾಂಸ್ಕತಿಕ ಮತ್ತು ಮಾನವ ಜೀವನ ಶಿಕ್ಷಣ ಸಂಸ್ಥೆಯು ಫರ್ವೆಂಟ್ ಗ್ಲೋಬಲ್ ಲವ್ ಆಫ್ ಲೈಫ್-2006 ಪ್ರಶಸ್ತಿಯನ್ನು ನೀಡಿತು.

2005: ಜಪಾನಿನ ಆಮ್ ಅಗಾಸಾಕಿ ನಿಲ್ದಾಣದ ಬಳಿ ಪ್ರಯಾಣಿಕ ರೈಲು ದುರಂತದಲ್ಲಿ 107 ಜನರ ಸಾವು.

1982: ಸತ್ಯಜಿತ್ ರೇ ಅವರ `ಶತ್ ರಂಜ್ ಕಿ ಖಿಲಾಡಿ' ಸಿನಿಮಾ ಪ್ರಸಾರದೊಂದಿಗೆ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ವರ್ಣರಂಜಿತ ರಾಷ್ಟ್ರೀಯ ಪ್ರಸಾರ ಆರಂಭವಾಯಿತು.

1973: ಕಲಾವಿದ ರಮೇಶ ಕುಲಕರ್ಣಿ ಜನನ.

1968: ಭಾರತದ ಶಾಸ್ತ್ರೀಯ ಸಂಗೀತಗಾರ ಬಡೇ ಗುಲಾಂ ಅಲಿ ಅವರು ತಮ್ಮ 66ನೇ ವಯಸ್ಸಿನಲ್ಲಿ ಮೃತರಾದರು. ಪಾಟಿಯಾಲ ಘರಾಣಾ ಮತ್ತು ಖಯಾಲ್ ಹಾಡುಗಾರಿಕೆಯನ್ನು ಜನಪ್ರಿಯಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

1945: ವಿಶ್ವಸಂಸ್ಥೆಯ ಸಂಘಟನೆಗಾಗಿ ಸುಮಾರು 50 ರಾಷ್ಟ್ರಗಳ ಪ್ರತಿನಿಧಿಗಳು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಸಭೆ ಸೇರಿದರು.

1926: ಕಲಾವಿದ ಅಂಬಳೆ ಸುಬ್ಬರಾವ್ ಜನನ.

1924: ಕಲಾವಿದ ಎಸ್. ರಾಘವೇಂದ್ರರಾವ್ ಕದಿರೆ ಜನನ.

1922: ಕಲಾವಿದ ಎಂ.ಆರ್. ದೊರೆಸ್ವಾಮಿ ಜನನ.

1916: ಗಮಕ ಗಂಧರ್ವರೆನಿಸಿದ್ದ ಬಿ. ಎಸ್. ಎಸ್. ಕೌಶಿಕ್ ಅವರು ಸುಬ್ಬಯ್ಯ- ಸುಬ್ಬಮ್ಮ ದಂಪತಿಯ ಮಗನಾಗಿ ಕೃಷ್ಣರಾಜಪೇಟೆ ತಾಲ್ಲೂಕು ಹೇಮಗಿರಿ ಕುಪ್ಪಹಳ್ಳಿಯಲ್ಲಿ ಜನಿಸಿದರು.

1859: ಸುಯೆಜ್ ಕಾಲುವೆಗಾಗಿ ಅದರ ಯೋಜಕ ಫರ್ಡಿನಾಂಡ್ ಡಿ ಲೆಸ್ಸೆಪ್ಸ್ ಮಾರ್ಗದರ್ಶನದಲ್ಲಿ ನೆಲ ಅಗೆಯಲು ಆರಂಭಿಸಲಾಯಿತು. ಸರಿಯಾಗಿ 100 ವರ್ಷಗಳ ಬಳಿಕ 1959ರಲ್ಲಿ ಅಟ್ಲಾಂಟಿಕ್ ಸಾಗರಕ್ಕೆ ಗ್ರೇಟ್ ಲೇಕ್ಸ್ ನ್ನು ಸಂಪರ್ಕಿಸುವ ಸೇಂಟ್ ಲಾರೆನ್ಸ್ ಸಮುದ್ರಮಾರ್ಗವನ್ನು (ಸೀವೇ) ರಾಣಿ ಎರಡನೇ ಎಲಿಜಬೆತ್ ಹಾಗೂ ಅಧ್ಯಕ್ಷ ಐಸೆನ್ ಹೊವರ್ ಜಂಟಿಯಾಗಿ ಉದ್ಘಾಟಿಸಿದರು.

Saturday, April 24, 2010

ಇಂದಿನ ಇತಿಹಾಸ History Today ಏಪ್ರಿಲ್ 24

ಇಂದಿನ ಇತಿಹಾಸ

ಏಪ್ರಿಲ್ 24

ಎರಡು ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 73 ಜನರ ಸಾವಿಗೆ ಕಾರಣನಾಗಿದ್ದ ಇರಾಕ್‌ನ ಅಲ್‌ಖೈದಾ ಮುಖ್ಯಸ್ಥನನ್ನು ಬಂಧಿಸಿರುವುದಾಗಿ ಇರಾಕಿ ಸೇನೆ ಹೇಳಿತು. 'ಅಬು ಒಮರ್ ಅಲ್ ಬಾಗ್ದಾದಿಯನ್ನು ಬಾಗ್ದಾದ್‌ನಲ್ಲಿ ಬಂಧಿಸಲಾಗಿದೆ' ಎಂದು ಬಾಗ್ದಾದ್ ಭದ್ರತಾ ವಕ್ತಾರ ಖ್ವಾಸಿಂ ಅಟ್ಟಾ ಹೇಳಿದರು.

2009: ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಮುಖ್ಯ ಆರೋಪಿ ಮೊಹಮ್ಮದ್ ಅಜ್ಮಲ್ ಕಸಾಬ್ ಬಾಲಾಪರಾಧಿಯೇ ಎಂಬುದಾಗಿ ಪತ್ತೆ ಹಚ್ಚಲು ತನಿಖೆ ನಡೆಸುವಂತೆ ಮುಂಬೈ ವಿಶೇಷ ನ್ಯಾಯಾಲಯವು ಆಜ್ಞಾಪಿಸಿತು. ಅಪರಾಧ ಎಸಗಿದ ವೇಳೆಯಲ್ಲಿ ಕಸಾಬ್ 18 ವರ್ಷ ಮೀರಿದ ಯುವಕನಾಗಿದ್ದನೇ ಅಥವಾ ಬಾಲಾಪರಾಧಿಯಾಗಿದ್ದನೇ ಎಂಬುದಾಗಿ ಪತ್ತೆ ಹಚ್ಚಲು ವೈದ್ಯರು ಮತ್ತು ಜೈಲರ್ ಸೇರಿದಂತೆ ವಿವಿಧ ಸಾಕ್ಷಿಗಳನ್ನು ಏಪ್ರಿಲ್ 28ರಂದು ಪರೀಕ್ಷೆಗೆ ಒಳಪಡಿಸಲು ನ್ಯಾಯಾಧೀಶ ಎಂ.ಎಲ್. ತಹಿಲಿಯಾನಿ ಅವರು ಅನುಮತಿ ನೀಡಿದರು. ವಯಸ್ಸಿನ ಪತ್ತೆಗಾಗಿ ಕಸಾಬ್‌ನ ಎಲುಬು ಮತ್ತು ಹಲ್ಲು ಪರೀಕ್ಷೆಯನ್ನು ನಡೆಸುವಂತೆಯೂ ನ್ಯಾಯಾಲಯ ಸೆರೆಮನೆ ಅಧಿಕಾರಿಗಳಿಗೆ ಆದೇಶ ನೀಡಿತು. ಕಸಾಬ್‌ನ ಎಲುಬು ಮತ್ತು ಹಲ್ಲು ಪರೀಕ್ಷೆ ನಡೆಸುವ ವಿಕಿರಣತಜ್ಞ ಮತ್ತು ದಂತ ತಜ್ಞರಿಗೆ ಏಪ್ರಿಲ್ 28ರ ಒಳಗಾಗಿ ವರದಿ ಸಲ್ಲಿಸುವಂತೆಯೂ ನ್ಯಾಯಾಲಯ ನಿರ್ದೇಶನ ನೀಡಿತು. ಬಿಗಿ ಭದ್ರತೆಯ ಅಡಿಯಲ್ಲಿ ಈ ಪರೀಕ್ಷೆಗಳಿಗೆ ಕಸಾಬ್‌ನನ್ನು ಒಳಪಡಿಸಲಾಗುವುದು ಎಂದು ಕಸಾಬ್‌ನ ವಕೀಲ ಅಬ್ಬಾಸ್ ಕಜ್ಮಿ ತಿಳಿಸಿದರು.

2009: ಪಾಕಿಸ್ಥಾನದ ಬುನೇರ್‌ನಿಂದ ಹಿಂದಕ್ಕೆ ಸರಿಯಲು ಮತ್ತು ಕೇವಲ 100 ಕಿ.ಮಿ. ದೂರದಲ್ಲಿರುವ ಇಸ್ಲಾಮಾಬಾದಿನ ಕಡೆಗಿನ ತನ್ನ ಮುನ್ನಡೆಯನ್ನು ನಿಲ್ಲಿಸಲು ತಾಲಿಬಾನ್ ಒಪ್ಪಿದೆ ಎಂದು ಪಾಕಿಸ್ಥಾನದ ಮಾಧ್ಯಮಗಳು ವರದಿ ಮಾಡಿದವು. ಪಾಕಿಸ್ಥಾನವು ಭಾರತದ ಬದಲು ತಾಲಿಬಾನ್ ಕಡೆಗೆ ತನ್ನ ಗಮನ ಹರಿಸಬೇಕು ಎಂಬುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಕಟುವಾಗಿ ತರಾಟೆಗೆ ತೆಗೆದುಕೊಂಡ ಬಳಿಕ ಪಾಕಿಸ್ಥಾನ ಸರ್ಕಾರ ಮತ್ತು ತಾಲಿಬಾನ್ ಸಂಧಾನಕಾರ ಸೂಫಿ ಮೊಹಮ್ಮದ್ ಮಧ್ಯೆ ಈ ಒಪ್ಪಂದ ಏರ್ಪಟ್ಟ ಸುದ್ದಿ ಬಂದಿತು. ಪಾಕಿಸ್ಥಾನವು ಭಾರತ ಕಡೆಗಿನ ತನ್ನ ಗಮನವನ್ನು ಕಡಿಮೆ ಮಾಡಿ ಪಾಕಿಸ್ಥಾನದಲ್ಲಿ ತನ್ನ ಪಾರಮ್ಯ ಸ್ಥಾಪಿಸಲು ಯತ್ನಿಸುತ್ತಿರುವ ಉಗ್ರಗಾಮಿಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಹಿಲರಿ ಕ್ಲಿಂಟನ್ ಆಗ್ರಹಿಸಿದ್ದರು.

2009: ಲಾಲೂ ಪ್ರಸಾದ್ ಅವರು ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ, 1990ರ ದಶಕದ ಆದಿ ಭಾಗದಲ್ಲಿ ಬೆಳಕಿಗೆ ಬಂದ ಮೇವು ಹಗರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು ಪ್ರಕರಣವೊಂದರಲ್ಲಿ 45ಜನ ಆರೋಪಿಗಳಿಗೆ ಶಿಕ್ಷೆ ವಿಧಿಸಿತು. ಈ ಆರೋಪಿಗಳಲ್ಲಿ 14 ಜನರಿಗೆ ಮೂರು ವರ್ಷ ಕಠಿಣ ಸಜೆ ವಿಧಿಸಲಾಯಿತು. ಉಳಿದ 31ಜನ ಆರೋಪಿಗಳ ಶಿಕ್ಷೆಯ ಪ್ರಮಾಣವನ್ನು ಏ 27ರಂದು ಘೋಷಿಸಲಾಗುವುದು ಎಂದು ನ್ಯಾಯಾಧೀಶ ಎ.ಎಚ್. ಅನ್ಸಾರಿ ಅವರು ತಿಳಿಸಿದರು. ಗುಮ್ಲಾ ಖಜಾನೆಯಿಂದ 9.89 ಕೋಟಿ ರೂಪಾಯಿ ಹಣ ತೆಗೆದ ಆರೋಪ ಹೊತ್ತಿದ್ದ ಇಬ್ಬರು ಆರೋಪಿಗಳನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಲಾಯಿತು. ಲಾಲೂ ಪ್ರಸಾದ್ ಅವರೂ 900 ಕೋಟಿ ರೂಪಾಯಿ ಮೇವು ಹಗರಣದಲ್ಲಿ ಆರೋಪಿ.

2009: ಎರಡು ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 73 ಜನರ ಸಾವಿಗೆ ಕಾರಣನಾಗಿದ್ದ ಇರಾಕ್‌ನ ಅಲ್‌ಖೈದಾ ಮುಖ್ಯಸ್ಥನನ್ನು ಬಂಧಿಸಿರುವುದಾಗಿ ಇರಾಕಿ ಸೇನೆ ಹೇಳಿತು. 'ಅಬು ಒಮರ್ ಅಲ್ ಬಾಗ್ದಾದಿಯನ್ನು ಬಾಗ್ದಾದ್‌ನಲ್ಲಿ ಬಂಧಿಸಲಾಗಿದೆ' ಎಂದು ಬಾಗ್ದಾದ್ ಭದ್ರತಾ ವಕ್ತಾರ ಖ್ವಾಸಿಂ ಅಟ್ಟಾ ಹೇಳಿದರು.

2009: ಪಾಕಿಸ್ಥಾನದ ಬುನೆರ್ ಜಿಲ್ಲೆಗೆ ಅಕ್ರಮವಾಗಿ ನುಸುಳಿದ ತಾಲಿಬಾನ್ ಉಗ್ರರನ್ನು ಹೊರಗಟ್ಟುವ ಕಾರ್ಯಾಚರಣೆಯನ್ನು ಸೇನೆ ಆರಂಭಿಸಿತು. ಅಮೆರಿಕದ ಒತ್ತಡಕ್ಕೆ ಮಣಿದ ಪಾಕಿಸ್ಥಾನ ಸರ್ಕಾರ ಸ್ವಾತ್ ಕಣಿವೆ ಮತ್ತು ಬನೆರ್ ಜಿಲ್ಲೆಗಳಲ್ಲಿ ಇರುವ ತಾಲಿಬಾನ್ ಉಗ್ರರನ್ನು ಹೊರದಬ್ಬಲು ಸೇನೆಗೆ ಆದೇಶಿಸಿತು. ದೇಶದ ಗಡಿಯೊಳಗೆ ಅಕ್ರಮವಾಗಿ ನುಸುಳಿದ ತಾಲಿಬಾನ್ ಉಗ್ರರ ಉಪಟಳವನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗುವುದು ಎಂದು ಪಾಕಿಸ್ಥಾನದ ಸೇನಾ ಮುಖ್ಯಸ್ಥ ಅಶ್ಫಕ್ ಪರ್ವೆಜ್ ಕಯಾನಿ ತಿಳಿಸಿದರು.

2009: ದಕ್ಷಿಣ ಆಫ್ರಿಕಾದ ಆಡಳಿರೂಢ ಪಕ್ಷವಾದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎಎನ್‌ಸಿ) ಮೂರನೇ ಎರಡರಷ್ಟು ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಲು ಸಜ್ಜಾಯಿತು. ದೇಶದಲ್ಲಿ ಪ್ರಜಾಪ್ರಭುತ್ವ ಜಾರಿಗೆ ಬಂದ ನಂತರ ನಡೆದ 4ನೇ ಸಾರ್ವತ್ರಿಕ ಚುನಾವಣೆಯಲ್ಲಿ ಎಎನ್‌ಸಿ ಮೂರನೇ ಎರಡರಷ್ಟು ಬಹುಮತ ಸಾಧಿಸಿತು.

2008: ಪುಣೆಗೆ ಸಮೀಪದ ಭಟ್ಗರ್ ಸರೋವರದಲ್ಲಿ ಹಿಂದಿನ ದಿನ ರಾತ್ರಿ ಮದುವೆ ಮುಗಿಸಿ ಬರುತ್ತಿದ್ದ ಜನರನ್ನು ಹೊತ್ತಿದ್ದ ದೋಣಿಯೊಂದು ಮಗುಚಿ ಬಿದ್ದುದರಿಂದ 19 ಮಂದಿ ನೀರುಪಾಲಾದ ದಾರುಣ ಘಟನೆ ನಡೆಯಿತು.ಭೋರ್ ತಾಲ್ಲೂಕಿನ ವೆಲ್ವಂಡ ಹಳ್ಳಿಯಲ್ಲಿ ಮದುವೆ ನಡೆದಿತ್ತು. ವಕಾಂಬಾ ಹಳ್ಳಿಗೆ 28 ಮಂದಿ ದೋಣಿಯಲ್ಲಿ ವಾಪಸ್ ಹೊರಟಿದ್ದರು. ಬಲವಾದ ಗಾಳಿ ಬೀಸಿದ್ದರಿಂದ ದೋಣಿ ಆಯತಪ್ಪಿ ಮಗುಚಿ ಬಿತ್ತು.

2008: ಭಾರತೀಯ ಜನತಾ ಪಕ್ಷದ 68 ಪುಟಗಳ ಚುನಾವಣಾ ಪ್ರಣಾಳಿಕೆಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಪಕ್ಷದ ಹಿರಿಯ ಮುಖಂಡ ಡಾ.ವಿ.ಎಸ್.ಆಚಾರ್ಯ ನೇತೃತ್ವದ ಸಮಿತಿ ತಯಾರಿಸಿದ `ಸಮೃದ್ಧ ಕರ್ನಾಟಕಕ್ಕಾಗಿ ಸಂಕಲ್ಪ- ನಮ್ಮ ಪ್ರಣಾಳಿಕೆ'ಯನ್ನು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಅರುಣ್ ಜೇಟ್ಲಿ ಬಿಡುಗಡೆ ಮಾಡಿದರು.

2008: ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟ ಜೈಜಗದೀಶ್ ಅವರ ನಾಮಪತ್ರ ತಿರಸ್ಕೃತವಾಯಿತು. ರಾಜ್ಯ ವಿಧಾನಸಭೆಗೆ ಮೇ 10 ರಂದು ಮತದಾನ ನಡೆಯುವ 89 ಕ್ಷೇತ್ರಗಳ ನಾಮಪತ್ರಗಳ ಪರಿಶೀಲನೆ ಈದಿನ ನಡೆಯಿತು. ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮುಸ್ತಾಕ್ ಹುಸೇನ್, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟ ಜೈಜಗದೀಶ್ ಅವರ ನಾಮಪತ್ರ ತಿರಸ್ಕೃತವಾದುದು ಬಿಟ್ಟರೆ ಬಹುತೇಕ ಎಲ್ಲ ಪ್ರಮುಖ ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರವಾದವು.

2008: ಇಂಫಾಲ ನಗರದ ಗಣ್ಯಾತಿಗಣ್ಯ ವ್ಯಕ್ತಿಗಳು ವಾಸವಿದ್ದ ಪ್ರದೇಶದಲ್ಲಿ ಬಾಂಬ್ ಸ್ಫೋಟಗೊಂಡು ಮೂವರು ಗಾಯಗೊಂಡರು. ಮಣಿಪುರದ ಮುಖ್ಯಮಂತ್ರಿ ಹಾಗೂ ಪೊಲೀಸ್ ಮುಖ್ಯ ಕಚೇರಿಯಿಂದ ನೂರು ಮೀಟರ್ ದೂರದಲ್ಲಿ ಬಾಂಬ್ ಸ್ಫೋಟಗೊಂಡಿತು. ಪ್ರವಾಸೋದ್ಯಮ ಸಚಿವ ಟಿ.ಹೋಕಿಪ್ಸ್ ಅವರ ಮನೆಯಿಂದ ಅತ್ಯಂತ ಸಮೀಪದಲ್ಲಿ ಅಂದರೆ 50 ಮೀಟರಿನಷ್ಟು ಅಂತರದಲ್ಲಿ ಬಾಂಬ್ ಸ್ಪೋಟಗೊಂಡಿತು. ರಾಜ್ಯಪಾಲರು ಭಾಗವಹಿಸಬೇಕಿದ್ದ ಕಾರ್ಯಕ್ರಮದ ಸಮೀಪದಲ್ಲೂ ಬಾಂಬ್ ಹುದುಗಿಸಿ ಇಡಲಾಗಿತ್ತು, ಆದರೆ ಅದು ಸ್ಫೋಟಗೊಳ್ಳುವಲ್ಲಿವಿಫಲವಾಯಿತು.

2008: ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ನೀಡಲಾಗುವ `ಮಾಸ್ತಿ ಪ್ರಶಸ್ತಿ'ಗೆ ಸಂಶೋಧಕ ಡಾ. ಟಿ.ವಿ.ವೆಂಕಟಾಚಲಶಾಸ್ತ್ರಿ ಅವರು ಆಯ್ಕೆಯಾದರು. 75ರ ಹರೆಯದ ವೆಂಕಟಾಚಲಶಾಸ್ತ್ರಿ ಅವರು ಕನಕಪುರದ ಕಾನಕಾನಹಳ್ಳಿಯಲ್ಲಿ 1933ರಲ್ಲಿ ಜನಿಸಿದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಬಿ.ಎ ಆನರ್ಸ್, ಕನ್ನಡ ಎಂ.ಎ. ಪದವಿ ಗಳಿಸಿದ ಅವರು `ಕನ್ನಡ ನೇಮಿನಾಥ ಪುರಾಣಗಳ ತೌಲನಿಕ ಅಧ್ಯಯನ' ಎಂಬ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. `ಕನ್ನಡ ಛಂದಸ್ಸು', `ಕನ್ನಡ ಚಿತ್ರಕಾವ್ಯ', `ಕನ್ನಡ ಛಂದೋವಿಹಾರ', `ಸಾಹಿತ್ಯ ಮಂಥನ', `ಎಸ್.ಜೆ. ನರಸಿಂಹಾಚಾರ್ಯರ ಕವಿತೆಗಳು' ಕೃತಿಗಳಿಗೆ ಪುರಸ್ಕಾರಗಳು ಸಂದಿವೆ.

2008: ಗಲ್ಲು ಶಿಕ್ಷೆಗೆ ಒಳಗಾಗಿರುವ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಅವರನ್ನು ಭೇಟಿ ಮಾಡಲು ಅವರ ಕುಟುಂಬದ ಸದಸ್ಯರಿಗೆ ಪಾಕಿಸ್ಥಾನ ಸರ್ಕಾರ ಅನುಮತಿ ನೀಡಿತು. ಲಾಹೋರಿನ ಕೋಟ್ ಲಖಪತ್ ಕಾರಾಗೃಹದಲ್ಲಿ ಸರಬ್ಜಿತ್ ಬಂಧಿಯಾಗಿದ್ದು, ಅವರನ್ನು ಭೇಟಿ ಮಾಡುವ ಉದ್ದೇಶದಿಂದ ಅವರ ಕುಟುಂಬದ ಸದಸ್ಯರು ಇಸ್ಲಾಮಾ ಬಾದಿಗೆ ಬಂದಿದ್ದರು. ಸರಬ್ಜಿತ್ ಅವರ ಪತ್ನಿ ಸುಖ್ ಪ್ರೀತ್ ಕೌರ್, ಪುತ್ರಿಯರಾದ ಸ್ವಪ್ನದೀಪ್ ಮತ್ತು ಪೂನಮ್ ಹಾಗೂ ಸಹೋದರಿ ದಲ್ಬೀರ್ ಕೌರ್ ಅವರ ಪತಿ ಬಲದೇವ್ ಸಿಂಗ್ ವಾಘಾ ಗಡಿಯ ಮೂಲಕ ಪಾಕಿಸ್ಥಾನಕ್ಕೆ ಬಂದರು.

2008: ಬ್ರಿಟನ್ನಿನ `ಡೈಲಿ ಟೆಲಿಗ್ರಾಫ್' ಪತ್ರಿಕೆ ಪ್ರಕಟಿಸಿದ ನೂರು ಪ್ರತಿಷ್ಠಿತ ಪ್ರಭಾವಿಗಳ ಪಟ್ಟಿಯಲ್ಲಿ ಐವರು ಭಾರತೀಯರು ಸ್ಥಾನ ಪಡೆದರು. ವೊಡಾಫೋನ್ ಕಂಪೆನಿಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಓ) ಅರುಣ್ ಸರೀನ್ ಅವರು ಬ್ರಿಟನ್ ತಂತ್ರಜ್ಞಾನ ಮತ್ತು ಟೆಲಿಕಾಂ ಉದ್ಯಮದ ಅತ್ಯಂತ ಪ್ರಭಾವಿ ಎಂಬ ಹೆಮ್ಮೆಗೆ ಪಾತ್ರರಾಗುವ ಮೂಲಕ ಪ್ರಥಮ ಸ್ಥಾನ ಪಡೆದರು. ಗೂಗಲ್ ಕಂಪೆನಿಯ ಯುರೋಪ್, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾ ದೇಶಗಳ ವಿಭಾಗೀಯ ಅಧ್ಯಕ್ಷ ನಿಕೇಶ್ ಅರೋರಾ ಎಂಬ ಮತ್ತೊಬ್ಬ ಭಾರತೀಯ ಟೆಲಿಕಾಂ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದರು. ಬ್ಯಾಂಕಿಂಗ್ ಮತ್ತು ವಿಮಾ ಉದ್ಯಮದ ಅನ್ಶು ಜೈನ್ ಆ ರಂಗದ ಪ್ರತಿಷ್ಠಿತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದರೆ, ಬಿ.ಟಿ. ಗ್ರೂಪಿನ ಹಣಕಾಸು ನಿರ್ದೇಶಕ ಹನೀಫ್ ಲಾಲನಿ 22ನೇ ಸ್ಥಾನದಲ್ಲಿ ಮತ್ತು ಕೋಲ್ಟ್ ಟೆಲಿಕಾಂನ ರಾಕೇಶ್ ಭಾಸಿನ್ 75ನೇ ಸ್ಥಾನ ಪಡೆದರು. ಇವರೆಲ್ಲರೂ ಭಾರತೀಯ ಮೂಲದವರು.

2008: ವ್ಯಾಯಾಮದಿಂದ ಹೃದಯಕ್ಕೆ ಸುರಕ್ಷೆ ಸಿಗುತ್ತದೆ. ದೈಹಿಕ ವ್ಯಾಯಾಮ ಹೃದಯದ ಸಂರಚನೆ ಮತ್ತು ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವಾಷಿಂಗ್ಟನ್ನಿನ ಸಂಶೋಧನೆಯೊಂದು ಬಹಿರಂಗಪಡಿಸಿತು. ಸುಮಾರು 90 ದಿನಗಳ ಕಾಲ ಕಠಿಣ ಅಥ್ಲೆಟಿಕ್ ಚಟುವಟಿಕೆಯಲ್ಲಿ ತೊಡಗುವ ವ್ಯಕ್ತಿಗಳ ಹೃದಯ ಮತ್ತು ಅದರ ಕಾರ್ಯದ ಮೇಲೆ ಆದ ಭಾರಿ ಪರಿಣಾಮಗಳನ್ನು ಸಂಶೋಧಕರು ಗುರುತಿಸಿದರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿನ ಅಥ್ಲೆಟಿಕ್ಸ್ ವಿದ್ಯಾರ್ಥಿಗಳ ಎರಡು ಗುಂಪುಗಳನ್ನು ಮಾಡಿ, ಅವರ ಮೇಲೆ ನಡೆಸಿದ ಅಧ್ಯಯನ ಸಹ ಇಂತಹುದೇ ಫಲಿತಾಂಶ ನೀಡಿದೆ. ಈ ಬಗ್ಗೆ ವಾಷಿಂಗ್ಟನ್ನಿನ `ಅಪ್ಲೈಡ್ ಫಿಜಿಯಾಲಜಿ'ಯ ಏಪ್ರಿಲ್ ನಿಯತಕಾಲಿಕದಲ್ಲಿ ವಿಸ್ತೃತ ವರದಿ ಪ್ರಕಟಿಸಲಾಯಿತು.

2007: ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದ ಸೇವ್ ದಿ ಚಿಲ್ಡ್ರನ್ ಇಂಡಿಯಾ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕಿ ವಿಪುಲ ಕದ್ರಿ (71) ಮುಂಬೈಯಲ್ಲಿ ನಿಧನರಾದರು. ಇವರ ಪುತ್ರಿ ಮನಾಶೆಟ್ಟಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಪತ್ನಿ.

2007: ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕು ನೀರಮಾನ್ವಿ ಗ್ರಾಮದಲ್ಲಿ ಮಧ್ಯಾಹ್ನ ಆಟವಾಡಲು ಹೊಲಕ್ಕೆ ಹೋದ ಸಂದೀಪ ಎಂಬ 8 ವರ್ಷದ ಬಾಲಕ ಕೊಳವೆ ಬಾವಿಯೊಳಕ್ಕೆ ಬಿದ್ದ.

2007: ಬೆಂಗಳೂರು ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಹಸ್ರ ಚಂಡಿಕಾ ಯಾಗದ ಪೂರ್ಣಾಹುತಿಯು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆಯಿತು.

2007: ವಿದೇಶೀ ಮತ್ತು ದೇಶೀಯ ಗೋ ತಳಿಗಳ ಜೀನುಗಳು ತೀರಾ ವಿಭಿನ್ನ ಗುಣಗಳನ್ನು ಹೊಂದಿದ್ದು, ಈ ವಿಭಿನ್ನ ತಳಿಗಳ ನಡುವೆ ಸಂಕರ ಸಲ್ಲದು, ಇದರಿಂದ ಮೂಲ ದೇಶೀಯ ಶುದ್ಧ ತಳಿಗಳಿಗೆ ಆಪತ್ತು ಬರುತ್ತದೆ ಎಂದು ಥಾಯ್ಲೆಂಡಿನ ಡಾ. ಡೇವಿಡ್ ಸ್ಟೀವ್ ಹೊಸನಗರದಲ್ಲಿ ನಡೆದ ವಿಶ್ವ ಗೋ ಸಮ್ಮೇಳನದ ಗೋ ವಿಚಾರ ಮಂಥನ ಗೋಷ್ಠಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಾವಯವ ಕೃಷಿ ತಜ್ಞ ಸುಭಾಶ ಪಾಳೇಕರ್ ಅಧ್ಯಕ್ಷತೆ ವಹಿಸಿದ್ದರು.

2006: ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಎಡಬಿಡದೆ ನಡೆದ ಚಳವಳಿಗೆ ನೇಪಾಳದ ರಾಜಸತ್ತೆ ಕೊನೆಗೂ ಮಣಿಯಿತು. ಈ ದಿನ ರಾತ್ರಿ ಟೆಲಿವಿಷನ್ನಿನಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ದೊರೆ ಜ್ಞಾನೇಂದ್ರ 2002ರಲ್ಲಿ ತಾವು ವಿಸರ್ಜಿಸಿದ್ದ ಸಂಸತ್ತಿಗೆ ಮರುಜೀವ ನೀಡಿ ಮತ್ತೆ ಸಮಾವೇಶಗೊಳಿಸುವುದಾಗಿಯೂ, ಮುಷ್ಕರ ನಿರತ ಸಪ್ತಪಕ್ಷಗಳ ಮೈತ್ರಿಕೂಟ ಮಾತುಕತೆಗೆ ಬರಬೇಕು ಎಂದೂ ಆಹ್ವಾನ ನೀಡಿದರು. ಚಳವಳಿ ನಿರತ ಪಕ್ಷಗಳು ಈ ಪ್ರಕಟಣೆಯನ್ನು ಸ್ವಾಗತಿಸಿದವು.

2006: ಲಾಭದ ಹುದ್ದೆ ಹೊಂದಿದ ಕಾರಣಕ್ಕಾಗಿ ರಾಜ್ಯಸಭಾ ಸದಸ್ಯತ್ವದಿಂದ ಅನರ್ಹಗೊಂಡ ಸಮಾಜವಾದಿ ಪಕ್ಷದ ನಾಯಕಿ, ಹಿರಿಯ ಚಿತ್ರನಟಿ ಜಯಾ ಬಚ್ಚನ್ ಅವರು ತಮ್ಮ ವಿರುದ್ಧದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದರು..

2006: ಜಗತ್ತಿನ ಮೊತ್ತ ಮೊದಲ ತದ್ರೂಪಿ ನಾಯಿ ಸ್ನಪ್ಪಿ ಕೊರಿಯಾದ ಸೋಲ್ ನಲ್ಲಿ ತನ್ನ ಮೊದಲ ಹುಟ್ಟುಹಬ್ಬ ಆಚರಿಸಿತು. ಆದರೆ ಈ ನಾಯಿಯನ್ನು ಸೃಷ್ಟಿಸಿದ ವಿಜ್ಞಾನಿಗಳ ತಂಡ ಹಾಗೂ ಅದರ ನಾಯಕ ದಕ್ಷಿಣ ಕೊರಿಯಾದ ಹ್ವಾಂಗ್ ವೂ-ಸಕ್ ಅವರು ವಂಚನೆ ಮತ್ತು ನೈತಿಕತೆಯ ಉಲ್ಲಂಘನೆಗಾಗಿ ವಿಚಾರಣೆಗೆ ಗುರಿಯಾದರು. 2005ರಲ್ಲಿ ದಕ್ಷಿಣ ಕೊರಿಯಾದ ಈ ವಿಜ್ಞಾನಿಗಳ ತಂಡ ತದ್ರೂಪಿ ನಾಯಿ ಸೃಷ್ಟಿಯನ್ನು ಪ್ರಕಟಿಸಿದಾಗ ಟೈಮ್ ನಿಯತಕಾಲಿಕ ಈ ವರ್ಷದ ಅದ್ಭುತ ಸಂಶೋಧನೆಗಳಲ್ಲಿ ಇದು ಒಂದು ಬಣ್ಣಿಸಿತ್ತು. ಹ್ವಾನ್ ಅವರನ್ನು ಆಗ ಕೊರಿಯಾದ ಹೆಮ್ಮೆ ಎಂದು ಬಣ್ಣಿಸಲಾಗಿತ್ತು. ಆದರೆ ವರ್ಷಾಂತ್ಯದ ವೇಳೆಗೆ ಮಾನವ ಭ್ರೂಣ ಸಂಗ್ರಹಕ್ಕೆ ಸಂಬಂಧಿಸಿದಂತೆ ನೈತಿಕತೆಯನ್ನು ಉಲ್ಲಂಘಿಸಿದ ಆರೋಪಕ್ಕೆ ಹ್ವಾನ್ ಮತ್ತು ಅವರ ತಂಡ ಗುರಿಯಾಯಿತು.

2006: ಖ್ಯಾತ ಹಿನ್ನಲೆ ಗಾಯಕ, ಐದು ಫಿಲ್ಮ್ ಫೇರ್ ಪ್ರಶಸ್ತಿಗಳ ವಿಜೇತ ಉದಿತ್ ನಾರಾಯಣ್ ಅವರಿಗೆ ಬಿಹಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಪ್ರಕಾಶ್ ಅವರು ನೋಟಿಸ್ ಕಳುಹಿಸಿ 15 ದಿನಗಳ ಒಳಗಾಗಿ ತಮ್ಮ ಮುಂದೆ ಹಾಜರಾಗಿ ರಂಜನಾ ನಾರಾಯಣ್ ಅವರನ್ನು ತನ್ನ ಪತ್ನಿ ಅಲ್ಲವೆಂದು ಹೇಳಿರುವುದು ಏಕೆ ಎಂದು ವಿವರಣೆ ನೀಡುವಂತೆ ಆಜ್ಞಾಪಿಸಿದರು. ವಾರದ ಹಿಂದೆ ಪಟ್ನಾದ ಐಶಾರಾಮಿ ಹೊಟೇಲ್ ಒಂದರಲ್ಲಿ ಉದಿತ್ ನಾರಾಯಣ್ ತನ್ನ ಪತ್ನಿ ದೀಪಾ ಮತ್ತು ಪುತ್ರ ಆದಿತ್ಯ ಜತೆ ಇದ್ದಾಗ ಅಲ್ಲಿಗೆ ರಂಜನಾ ನುಗ್ಗಿದ್ದರಿಂದ ಉದಿತ್ ನಾರಾಯಣ್ ಇಬ್ಬರನ್ನು ಮದುವೆಯಾದ ವಿಷಯ ಬೆಳಕಿಗೆ ಬಂದಿತ್ತು.

1973: ಕೇಶವಾನಂದ ಭಾರತೀ ಪ್ರಕರಣದಲ್ಲಿ ಭಾರತದ ಸುಪ್ರೀಂಕೋರ್ಟಿನ ಸಂವಿಧಾನ ಪೀಠವು ನೀಡಿದ್ದ ತನ್ನ ಹಿಂದಿನ ತೀರ್ಪನ್ನು ಬದಲಾಯಿಸಿ ಚಾರಿತ್ರಿಕ ತೀರ್ಪು ನೀಡಿತು. ಮೂಲಭೂತ ಹಕ್ಕುಗಳಿಗೆ ಸಂಸತ್ತು ತಿದ್ದುಪಡಿ ತರಲಾಗದು ಮತ್ತು ಅಂತಹ ಯಾವುದೇ ಬದಲಾವಣೆಗಳಿಗೆ ಹೊಸ ಸಂವಿಧಾನಬದ್ಧ ಶಾಸನಸಭೆಯ ರಚನೆಯಾಗಬೇಕು ಎಂಬುದಾಗಿ (ಗೋಲಕನಾಥ್ ಪ್ರಕರಣದಲ್ಲಿ) ಹಿಂದೆ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಬದಲಾಯಿಸಿತು. ಸಂವಿಧಾನದ ಕೆಲವು ಮೂಲಭೂತ ಲಕ್ಷಣಗಳನ್ನು ಮಾತ್ರ ಬದಲಾಯಿಸುವಂತಿಲ್ಲ ಎಂದು ಅದು ಹೇಳಿತು.

1973: ಸಚಿನ್ ತೆಂಡೂಲ್ಕರ್ ಹುಟ್ಟಿದ ದಿನ.

1971: ಕಲಾವಿದ ಶ್ರೀಧರ ಎಸ್. ಚವ್ಹಾಣ್ ಜನನ.

1962: ಕಲಾವಿದೆ ನಿರ್ಮಲ ಕುಮಾರಿ ಜನನ.

1960: ಕಲಾವಿದ ಕೆ.ವಿ. ಅಕ್ಷರ ಜನನ.

1958: ಕಲಾವಿದ ರಾಮಾನುಜನ್ ಜಿ.ಎಸ್. ಜನನ.

1947: ಕಲಾವಿದ ಅಚ್ಯುತರಾವ್ ಪದಕಿ ಜನನ.

1929: ಕನ್ನಡದ ವರನಟ ಡಾ. ರಾಜಕುಮಾರ್ (1929-2006) ಜನ್ಮದಿನ. ಮೂಲತಃ ಮುತ್ತುರಾಜ್ ಎಂಬ ಹೆಸರು ಇದ್ದ ಅವರು ಮುಂದೆ ಕನ್ನಡ ಚಲನಚಿತ್ರ ರಂಗದ ಮೇರು ನಟನಾಗಿ `ರಾಜಕುಮಾರ್' ಎಂಬ ಹೆಸರಿನಿಂದಲೇ ಮನೆ ಮಾತಾದರು. 2006ರ ಏಪ್ರಿಲ್ 12ರಂದು ತಮ್ಮ ಜನ್ಮದಿನಾಚರಣೆಗೆ 11 ದಿನ ಮೊದಲು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.

1927: ಖ್ಯಾತ ಗಾಯಕಿ ಜಯವಂತಿದೇವಿ ಹಿರೇಬೆಟ್ಟು ಅವರು ಪಡುಕೋಣೆ ರಮಾನಂದರಾಯರು- ಸೀತಾದೇವಿ ದಂಪತಿಯ ಮಗಳಾಗಿ ಮಂಗಳೂರಿನಲ್ಲಿ ಜನಿಸಿದರು. ಕರ್ನಾಟಕದ ಪ್ರತಿಷ್ಠಿತ ಪ್ರಶಸ್ತಿಯಾದ ಸಂತ ಶಿಶುನಾಳ ಶರೀಫ ಪ್ರಶಸ್ತಿಯ ಪ್ರಥಮ ಪುರಸ್ಕೃತೆಯಾದ ಈಕೆ ಮಹಾತ್ಮ ಗಾಂಧೀಜಿವರ ಪ್ರಾರ್ಥನಾ ಸಭೆಯಲ್ಲಿ ವಂದೇ ಮಾತರಂ ಹಾಡಿದ್ದರು. ತ್ಯಾಗಯ್ಯ, ಕಲ್ಪನಾ ಚಿತ್ರಗಳಲ್ಲೂ ಹಿನ್ನೆಲೆ ಗಾಯಕರಾಗಿ ಹಾಡಿದ್ದರು. ಆಲ್ ಇಂಡಿಯಾ ರೇಡಿಯೋದಲ್ಲಿ ಅವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮಗಳು ತುಂಬ ಹೆಸರುವಾಸಿ.

1889: ಸರ್ ಸ್ಟಾಫರ್ಡ್ ಕ್ರಿಪ್ಸ್ (1889-1952) ಜನ್ಮದಿನ. ಭಾರತಕ್ಕೆ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಇಂಗ್ಲೆಂಡ್ ಮತ್ತು ಭಾರತದ ಮಧ್ಯೆ ಮಾತುಕತೆ ನಡೆಸುವ ಸಲುವಾಗಿ ಈತನ ನೇತೃತ್ವದಲ್ಲಿ ಭಾರತಕ್ಕೆ ನಿಯೋಗವೊಂದು ಬಂದಿತ್ತು. ಅದಕ್ಕೆ `ಕ್ರಿಪ್ಸ್ ಮಿಷನ್' ಎಂದೇ ಹೆಸರು ಬಂದಿತು.

1800: ಜಗತ್ತಿನಲ್ಲೇ ಅತ್ಯಂತ ದೊಡ್ಡದೆಂದು ಹೆಸರು ಪಡೆದಿರುವ ಯುನೈಟೆಡ್ ಸ್ಟೇಟ್ಸ್ ಲೈಬ್ರರಿ ಆಫ್ ಕಾಂಗ್ರೆಸ್ ವಾಷಿಂಗ್ಟನ್ ಡಿ.ಸಿ.ಯಲ್ಲಿ ಸ್ಥಾಪನೆಯಾಯಿತು.

Advertisement