My Blog List

Thursday, July 23, 2009

ಇಂದಿನ ಇತಿಹಾಸ History Today ಜುಲೈ 21

ಇಂದಿನ ಇತಿಹಾಸ

ಜುಲೈ 21

ನೇಪಾಳಿ ಕಾಂಗ್ರೆಸ್ಸಿನ ಹಿರಿಯ ಮುಖಂಡ ರಾಮ್ ಬರನ್ ಯಾದವ್ ಅವರು ನೇಪಾಳದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದರು. ಯಾದವ್ ಅವರು ಮಾವೋವಾದಿ ಬೆಂಬಲದಿಂದ ಸ್ಪರ್ಧಿಸಿದ್ದ ರಾಮರಾಜಾ ಪ್ರಸಾದ್ ಸಿಂಗ್ ಅವರನ್ನು ಸೋಲಿಸಿದರು. 594 ಸದಸ್ಯರ ಸಂವಿಧಾನ ರಚನಾ ಸಭೆಯಲ್ಲಿ ಯಾದವ್ ಅವರು 308 ಮತಗಳನ್ನು ಪಡೆದರೆ ಸಿಂಗ್ ಅವರು 282 ಮತಗಳನ್ನು ಗಳಿಸಿದರು.


2008: ನೇಪಾಳಿ ಕಾಂಗ್ರೆಸ್ಸಿನ ಹಿರಿಯ ಮುಖಂಡ ರಾಮ್ ಬರನ್ ಯಾದವ್ ಅವರು ನೇಪಾಳದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದರು. ಯಾದವ್ ಅವರು ಮಾವೋವಾದಿ ಬೆಂಬಲದಿಂದ ಸ್ಪರ್ಧಿಸಿದ್ದ ರಾಮರಾಜಾ ಪ್ರಸಾದ್ ಸಿಂಗ್ ಅವರನ್ನು ಸೋಲಿಸಿದರು. 594 ಸದಸ್ಯರ ಸಂವಿಧಾನ ರಚನಾ ಸಭೆಯಲ್ಲಿ ಯಾದವ್ ಅವರು 308 ಮತಗಳನ್ನು ಪಡೆದರೆ ಸಿಂಗ್ ಅವರು 282 ಮತಗಳನ್ನು ಗಳಿಸಿದರು.

2007: ಭಾರತದ 13ನೇ ರಾಷ್ಟ್ರಪತಿಯಾಗಿ ನಿರೀಕ್ಷೆಯಂತೆ ಯುಪಿಎ- ಎಡಪಕ್ಷಗಳ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅಧಿಕ ಬಹುಮತದಿಂದ ಆಯ್ಕೆಯಾಗುವುದರೊಂದಿಗೆ ದೇಶದ ಅತ್ಯುನ್ನತ ಸ್ಥಾನಕ್ಕೆ ಏರುತ್ತಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1934 ಡಿಸೆಂಬರ್ 19 ರಂದು ಮಹಾರಾಷ್ಟ್ರದ ಜಲಗಾಂವ್ ನಲ್ಲಿ ಜನಿಸಿದ ಪ್ರತಿಭಾ ಅವರು ಜಲಗಾಂವ್ ಎಂ. ಜೆ. ಕಾಲೇಜಿನಲ್ಲಿ ಪದವಿ ಪಡೆದು ನಂತರ ಮುಂಬೈನ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಕಾನೂನು ಪದವಿ ಪಡೆದರು. 1965ರ ಜುಲೈಯಲ್ಲಿ ದೇವಿಸಿಂಗ್ ರಾಣಾಸಿಂಗ್ ಶೆಖಾವತ್ ಅವರ ಜತೆ ವಿವಾಹ. ರಾಜಕೀಯ ಜೀವನ ಆರಂಭಕ್ಕೆ ಮುನ್ನ ಅವರು ಸ್ವಂತ ಊರಿನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. ಮಹಿಳಾ ಹಕ್ಕುಗಳ ಪ್ರತಿಪಾದಕರಾದ ಪ್ರತಿಭಾ ಅವರು ಮಹಿಳೆಯರ ಸ್ಥಾನಮಾನಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡ ಭಾರತದ ನಿಯೋಗದೊಂದಿಗೆ ಆಸ್ಟ್ರೇಲಿಯಾ ಮತ್ತು ಬೀಜಿಂಗ್ ಗೆ ಭೇಟಿ ನೀಡಿದ್ದರು. 1962ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಮಹಾರಾಷ್ಟ್ರ ವಿಧಾನಸಭೆ ಪ್ರವೇಶಿಸಿದರು. 1985ರವರೆಗೆ ಸತತವಾಗಿ ಐದು ಬಾರಿ ಅವರು ಶಾಸಕರಾಗಿ ಆಯ್ಕೆಯಾದರು. ಪ್ರಥಮ ಬಾರಿಗೆ 1967ರಲ್ಲಿ ವಸಂತ್ ರಾವ್ ನಾಯ್ಕ ಸಂಪುಟದಲ್ಲಿ ಉಪಸಚಿವರಾಗಿ ಸಾರ್ವಜನಿಕ ಆರೋಗ್ಯ, ಪಾನ ನಿಷೇಧ, ಪ್ರವಾಸೋದ್ಯಮ, ವಸತಿ, ಸಂಸದೀಯ ವ್ಯವಹಾರಗಳ ಖಾತೆಯನ್ನು ನಿರ್ವಹಿಸಿದರು. ನಂತರ ಸಂಪುಟ ದರ್ಜೆ ಸಚಿವರಾದ ಅವರು ಸಮಾಜ ಕಲ್ಯಾಣ ಖಾತೆಯನ್ನು ನಿರ್ವಹಿಸಿದರು. ನಂತರ ಶಂಕರರಾವ್ ಚವ್ಹಾಣ್ ಮತ್ತು ವಸಂತದಾದಾ ಪಾಟೀಲ್ ಮಂತ್ರಿಮಂಡಲದಲ್ಲೂ ಪುನರ್ವಸತಿ, ಸಾಂಸ್ಕೃತಿಕ ಹಾಗೂ ಶಿಕ್ಷಣ ಸಚಿವರಾದರು. 1977ರಲ್ಲಿ ಕಾಂಗ್ರೆಸ್ಸಿನಲ್ಲಿ ಒಡಕು ಮೂಡಿದಾಗ ರಾಜಕೀಯ ಗುರು ವೈ. ಬಿ. ಚವ್ಹಾಣ್ ಸೇರಿದಂತೆ ಅನೇಕ ಮುಖಂಡರು ದೇವರಾಜ್ ಅರಸು ನೇತೃತ್ವದ ಕಾಂಗ್ರೆಸ್ (ಯು)ಗೆ ಸೇರಿದರೂ ಪ್ರತಿಭಾ ಅವರು ಇಂದಿರಾ ಗಾಂಧಿ ಜತೆ ಉಳಿದರು. 1978ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗ ಜುಲೈ 1979ರಿಂದ ಫೆಬ್ರುವರಿ 1980ರ ವರೆಗೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದರು. ಬಾಬಾ ಸಾಹೇಬ್ ಭೋಂಸ್ಲೆ ಮತ್ತು ವಸಂತದಾದಾ ಪಾಟೀಲ್ ಸಂಪುಟದಲ್ಲಿ ನಗರಾಭಿವೃದ್ಧಿ, ವಸತಿ, ನಾಗರಿಕ ಸರಬರಾಜು ಮತ್ತು ಸಮಾಜ ಕಲ್ಯಾಣ ಸಚಿವರಾಗಿ (1982ರಿಂದ 1985) ಕಾರ್ಯ ನಿರ್ವಹಿಸಿದರು. 1985ರಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದರು. 1986ರಿಂದ 1988ರ ನವೆಂಬರ್ ವರೆಗೆ ರಾಜ್ಯಸಭೆಯ ಉಪಸಭಾಪತಿಯಾಗಿಯೂ ಕಾರ್ಯ ನಿರ್ವಹಿಸಿದರು. 1988ರಿಂದ 1990ರ ವರೆಗೆ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. 1991ರಲ್ಲಿ ಲೋಕಸಭೆಗೆ ಆಯ್ಕೆಯಾದ ಪ್ರತಿಭಾ ಸದನ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1996ರ ನಂತರ ಸಕ್ರಿಯ ರಾಜಕೀಯದಿಂದ ದೂರ ಸರಿದಿದ್ದ ಪ್ರತಿಭಾ ಅವರನ್ನು ಯುಪಿಎ ಸರ್ಕಾರ 2004ರ ನವೆಂಬರಿನಲ್ಲಿ ರಾಜಸ್ತಾನದ ರಾಜ್ಯಪಾಲರನ್ನಾಗಿ ನೇಮಿಸಿತು. ಭಾರಿ ಕುತೂಹಲ ಮೂಡಿಸಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಭಾ ಪಾಟೀಲ್, ಶೆಖಾವತ್ ಅವರಿಗಿಂತ 3 ಲಕ್ಷ 06, 810ರಷ್ಟು ಮೌಲ್ಯದ ಅಧಿಕ ಮತ ಗಳಿಸಿದರು. ಸಂಜೆ 4 ಗಂಟೆಯ ಹೊತ್ತಿಗೆ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಮತ ಎಣಿಕೆ ಆರಂಭವಾದಾಗಿನಿಂದ ಮುನ್ನಡೆ ಸಾದಿಸಿದ್ದ ಪ್ರತಿಭಾ ಪಾಟೀಲ್, ಎಣಿಕೆ ಪೂರ್ಣಗೊಂಡಾಗ ಒಟ್ಟು 6 ಲಕ್ಷ 38,116ರಷ್ಟು ಮೌಲ್ಯದ ಮತ ಪಡೆದರು. ಅವರ ಪ್ರತಿಸ್ಪರ್ಧಿ ಎನ್ಡಿಎ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಭೈರೋನ್ ಸಿಂಗ್ ಶೆಖಾವತ್ 3 ಲಕ್ಷ 31,306 ರಷ್ಟು ಮೌಲ್ಯದ ಮತ ಗಳಿಸಿದರು. ಪ್ರತಿಭಾ ಒಟ್ಟು 2,931 ಮತ ಗಳಿಸಿದರೆ, ಶೆಖಾವತ್ ಅವರಿಗೆ 1,449 ಮತಗಳು ಬಂದವು.

2007: ಅಮಾನತಿನಲ್ಲಿದ್ದ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮೊಹಮ್ಮದ್ ಚೌಧರಿ ಅವರನ್ನು ಮರುನೇಮಕಗೊಳಿಸುವಂತೆ ಪಾಕ್ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಚೌಧರಿ ಅವರು ಈದಿನ ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸಿದರು. ಚೌಧರಿ ಅವರ ಅಮಾನತನ್ನು ಖಂಡಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆದ್ದಿದವು. ಕೆಲವೆಡೆ ನಡೆದ ಪ್ರತಿಭಟನೆಗಳು ಹಿಂಸಾರೂಪವನ್ನೂ ಪಡೆದಿದ್ದವು. ಅಧ್ಯಕ್ಷ ಪರ್ವೇಜ್ ಮುಷರಫ್ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣ ಚೌಧರಿ ಅವರನ್ನು ಅಮಾನತು ಮಾಡಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಫಕೀರ್ ಹುಸೇನ್ ಅವರನ್ನೂ ಸರ್ಕಾರ ಅಮಾನತುಗೊಳಿಸಿತ್ತು. ಹುಸೇನ್ ಅವರನ್ನು ಹುದ್ದೆಗೆ ಮರುನೇಮಕ ಮಾಡುವಂತೆಯೂ ಸುಪ್ರೀಂ ಕೋರ್ಟ್ ಆದೇಶ ನೀಡಿತು.

2007: ವಾಯವ್ಯ ಪಾಕಿಸ್ತಾನದಲ್ಲಿ ಭಾರಿ ಚಂಡಮಾರುತದಿಂದ ಸಂಭವಿಸಿದ ಮಳೆ ಹಾಗೂ ಭೂ ಕುಸಿತಕ್ಕೆ 50 ಮಂದಿ ಬಲಿಯಾದರು. ಎರಡು ಗ್ರಾಮಗಳು ಸಂಪೂರ್ಣ ನಾಮಾವಶೇಷವಾದವು. ಪೇಶಾವರದಿಂದ 150 ಮೈಲು ದೂರದ ದಿರ್ಬಾಲ ಜಿಲ್ಲೆಯಲ್ಲಿರುವ ಈ ಎರಡು ಗ್ರಾಮಗಳಲ್ಲಿ ಕುಸಿದ ಮನೆಗಳ ಅಡಿಯಿಂದ 50 ಶವಗಳನ್ನು ಹೊರತೆಗೆಯಲಾಯಿತು. ಚಂಡಮಾರುತದಲ್ಲಿ ನೂರಾರು ಮಂದಿ ನಾಪತ್ತೆಯಾದರು.

2007: ವಿಶ್ವದ ಪುಸ್ತಕ ಪ್ರಿಯರನ್ನು ಮಾಯಾಜಾಲದಂತೆ ಸೆಳೆದ `ಹ್ಯಾರಿ ಪಾಟರ್' ಪುಸ್ತಕ ಸರಣಿಯ ಏಳನೇ ಹಾಗೂ ಕೊನೆಯ ಆವೃತ್ತಿ `ಹ್ಯಾರಿ ಪಾಟರ್ ಅಂಡ್ ಡೆಥ್ಲಿ ಹ್ಯಾಲೋಸ್' ಪುಸ್ತಕ ವಿಶ್ವದಾದ್ಯಂತ ಈದಿನ ಬಿಡುಗಡೆಯಾಗಿದ್ದು ಎಲ್ಲೆಡೆಗಳಲ್ಲಿ ಬೆಳಿಗ್ಗೆಯಿಂದಲೇ ಬಿಸಿ ದೋಸೆಯಂತೆ ಮಾರಾಟವಾಯಿತು. ಬ್ರಿಟನ್, ಆಸ್ಟ್ರೇಲಿಯಾದ ಸಿಡ್ನಿ, ಸಿಂಗಪುರ, ಭಾರತದ ನವದೆಹಲಿಯಂತಹ ನಗರಗಳಲ್ಲಿ ಬೆಳಗ್ಗೆಯಿಂದಲೇ ಈ ಪುಸ್ತಕ ಕೊಳ್ಳಲು ಪುಸ್ತಕದಂಗಡಿಗಳ ಮುಂದೆ ಜನರ ಸಾಲುಗಳು ಕಂಡು ಬಂದವು.

2006: ಬೆಂಗಳೂರು - ಮೈಸೂರು ಹೆದ್ದಾರಿ ಕಾರಿಡಾರ್ ಯೋಜನೆಯ (ಬಿಎಂಐಸಿ) ಹೆಚ್ಚುವರಿ ಭೂಮಿ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವುದಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿತು.

1999: ಜನತಾದಳವು ಎಚ್.ಡಿ. ದೇವೇಗೌಡ ಅವರ ನೇತ್ವತ್ವದಲ್ಲಿ ವಿಭಜನೆಗೊಂಡಿತು.

1995: ಖ್ಯಾತ ಸಂಗೀತ ನಿರ್ದೇಶಕ ಸಜ್ಜದ್ ಹುಸೇನ್ ನಿಧನ.

1977: ನೀಲಂ ಸಂಜೀವರೆಡ್ಡಿ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದರು.

1956: ಕಛ್ ಪ್ರಾಂತ್ಯದ ರಾಜಧಾನಿಯಾದ ಭುಜ್ನ ಆಗ್ನೇಯಕ್ಕೆ 24 ಮೈಲಿ ದೂರದಲ್ಲಿರುವ ಅಂಜಾರ್ ಪಟ್ಟಣ ಮತ್ತು ಸುತ್ತಮುತ್ತಣ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 87 ಜನ ಸತ್ತು 250ಕ್ಕೂ ಹೆಚ್ಚು ಜನ ಗಾಯಗೊಂಡರು.

1947: ಭಾರತದ ಸಂವಿಧಾನ ಸಮಿತಿಯು ಮೂರು ಬಣ್ಣವುಳ್ಳ ಬಾವುಟವನ್ನು ರಾಷ್ಟ್ರಧ್ವಜವಾಗಿ ಅಂಗೀಕರಿಸಿತು.

1937: ಸಾಹಿತ್ಯ ವಿಮರ್ಶಕ, ಕಲಾಪ್ರೇಮಿ, ಸಂಗೀತ ಪ್ರಿಯ ಕೃಷ್ಣಯ್ಯ ಅವರು ಹುಚ್ಚಯ್ಯ- ಕೆಂಪಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಶಿಸ್ತಿನ ಪ್ರವಚನಕಾರರಾದ ಕೃಷ್ಣಯ್ಯ ಅವರು ಸುಮಾರು 30 ಕೃತಿಗಳು ಪ್ರಕಟವಾಗಿವೆ. ಅವರ ಶೃಂಗಾರ ಲಹರಿಗೆ ಲಲಿತ ಕಲಾ ಅಕಾಡೆಮಿ ಪುರಸ್ಕಾರ, ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.

1937: ಸಾಹಿತಿ ನಾ.ಸು. ಭರತನ ಹಳ್ಳಿ ಜನನ.

1930: ಗೀತ ರಚನೆಕಾರ ಆನಂದ್ ಬಕ್ಷಿ ಜನನ.

1906: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಅಧ್ಯಕ್ಷ ಡಬ್ಲ್ಯೂ.ಸಿ. ಬ್ಯಾನರ್ಜಿ ನಿಧನರಾದರು. 1844ರ ಡಿಸೆಂಬರ್ 29ರಂದು ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತಾ) ಜನಿಸಿದ ಬ್ಯಾನರ್ಜಿ 1885ರಲ್ಲಿ ಮುಂಬೈಯಲ್ಲಿ ನಡೆದ ಕಾಂಗ್ರೆಸ್ಸಿನ ಮೊದಲ ಅಧಿವೇಶನದ ಅಧ್ಯಕ್ಷರಾಗಿದ್ದರು.

1798: ಪಿರಮಿಡ್ ಕಾಳಗದಲ್ಲಿ ನೆಪೋಲಿಯನ್ 60,000 ಮಮೆಲ್ಲೂಕರನ್ನು ಸೋಲಿಸಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement