My Blog List

Saturday, August 16, 2008

Guru Rayara Nene Manave..ಗುರು ರಾಯರ ನೆನೆ ಮನವೇ...!

Guru Rayara Nene Manave..

337th Aradhana Festival of Sri Raghavendra Swamy will be held in Mantralaya on 15 to 21st of August 2008. Devotees also prepared themselves to hold Aradhana Utasava's in about 300 'Brindavan's all over India including 20- 25 Raghavednra Mutts in Bangalore. Poorvaradhane will be held on August 17, Madhyamaradhane on 18th August and Utttararadhane on 19th August. Nethrakere Udaya Shankara sketches about festival and story of Sri Raghavendra Swamiji.

ಗುರು ರಾಯರ ನೆನೆ ಮನವೇ...!

ಆಗಸ್ಟ್ 15ರಿಂದ 21ರವರೆಗೆ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿ ಅವರ 337ನೇ ಆರಾಧನಾ ಉತ್ಸವಕ್ಕೆ ಸಿದ್ದತೆ ನಡೆದಿದ್ದರೆ, ಬೆಂಗಳೂರಿನ ಸುಮಾರು 20-25 ಮಠಗಳೂ ಸೇರಿದಂತೆ ದೇಶಾದ್ಯಂತ ಸುಮಾರು 300ಕ್ಕೂ ಹೆಚ್ಚು 'ಬೃಂದಾವನ'ಗಳಲ್ಲೂ ಸಂಭ್ರಮದ ಆರಾಧನಾ ಉತ್ಸವಾಚರಣೆಗೆ ಭಕ್ತರು ಸಜ್ಜಾಗಿದ್ದಾರೆ. ಆಗಸ್ಟ್ 17, 18 ಮತ್ತು 19ರಂದು ಪೂರ್ವಾರಾಧನೆ, ಮಧ್ಯಮಾರಾಧನೆ, ಉತ್ತರಾರಾಧನೆಯೊಂದಿಗೆ ಉತ್ಸವಕ್ಕೆ ಕಳೆ ಏರುತ್ತದೆ.

ನೆತ್ರಕೆರೆ ಉದಯಶಂಕರ

'ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾ ಯಚ, ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನವೇ'- ಬೆಂಗಳೂರು ನಗರ ಮತ್ತೊಮ್ಮೆ ಈ ಮಂತ್ರದ ಅನುರಣನಕ್ಕೆ ಸಜ್ಜಾಗುತ್ತಿದೆ. ಪ್ರತಿ ಗುರುವಾರ ಈ ಮಂತ್ರದ ಉಚ್ಚಾರಣೆ ಆಗುವುದಾದರೂ ವರ್ಷಕ್ಕೆ ಒಮ್ಮೆ 'ಗುರುರಾಯರ ಆರಾಧನೆ' ಬಂದಾಗ ಈ ಮಂತ್ರೋಚ್ಚಾರಣೆಯ ಸಂಭ್ರಮ ತಾರಕಕ್ಕೆ ಏರುತ್ತದೆ.

ಹೌದು. ಆಗಸ್ಟ್ 15ರಿಂದ 21ರವರೆಗೆ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿ ಅವರ 337ನೇ ಆರಾಧನಾ ಉತ್ಸವಕ್ಕೆ ಸಿದ್ದತೆ ನಡೆದಿದ್ದರೆ, ಬೆಂಗಳೂರಿನ ಸುಮಾರು 20-25 ಮಠಗಳೂ ಸೇರಿದಂತೆ ದೇಶಾದ್ಯಂತ ಸುಮಾರು 300ಕ್ಕೂ ಹೆಚ್ಚು 'ಬೃಂದಾವನ'ಗಳಲ್ಲೂ ಸಂಭ್ರಮದ ಆರಾಧನಾ ಉತ್ಸವಾಚರಣೆಗೆ ಭಕ್ತರು ಸಜ್ಜಾಗಿದ್ದಾರೆ.

ಮಂತ್ರಾಲಯದಂತೆ ಬೆಂಗಳೂರಿನಲ್ಲೂ ಈಗ 'ಗುರುರಾಯರ' ಆರಾಧನಾ ಉತ್ಸವ ವರ್ಷದ ಪ್ರಮುಖ ಉತ್ಸವಗಳಲ್ಲಿ ಒಂದಾಗಿ ಪರಿವರ್ತನೆಗೊಂಡಿದೆ. ಕೆಲವು ಮಠಗಳಲ್ಲಿ ಐದು ದಿನ, ಕೆಲವು ಮಠಗಳಲ್ಲಿ ಮೂರು ದಿನ ಅಂದರೆ ಆಗಸ್ಟ್ 17, 18 ಮತ್ತು 19ರಂದು ವಿಜೃಂಭಣೆಯೊಂದಿಗೆ ಆರಾಧನಾ ಮಹೋತ್ಸವ ನಡೆಯುತ್ತದೆ.

ಶ್ರೀ ರಾಘವೇಂದ್ರ ಸ್ವಾಮೀಜಿ ಅವರು ವೃಂದಾವನಸ್ಥರಾದ 337ನೇ ವರ್ಷವಿದು. ಈ ಸಂದರ್ಭದಲ್ಲಿ ಎಲ್ಲ ವೃಂದಾವನಗಳಲ್ಲೂ ಬೆಳಗ್ಗೆ ಪಾದಪೂಜೆ, ಅಭಿಷೇಕ, ಅಲಂಕಾರ, ಪಂಚಾಮೃತ ಸೇವೆ, ಸಾರ್ವಜನಿಕ ತೀರ್ಥಪ್ರಸಾದ ವಿತರಣೆ ನಡೆದರೆ, ಸಂಜೆ ಸಂಭ್ರಮದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಪಂಡಿತರಿಂದ ಪ್ರವಚನಗಳು ನಡೆಯುತ್ತವೆ. 17ರಂದು ಪೂರ್ವಾರಾಧನೆ, 18ರಂದು ಮಧ್ಯಮರಾಧನೆ, 19ರಂದು ಉತ್ತರಾರಾಧನೆ ನಡೆಯುತ್ತದೆ.

ಉತ್ತರಾರಾಧನೆಯ ದಿನ ಸಂಭ್ರಮದ ರಥೋತ್ಸವದೊಂದಿಗೆ 'ಗುರುರಾಯರ ಆರಾಧನಾ ಉತ್ಸವ'ಕ್ಕೆ ಅಪೂರ್ವ ಕಳೆ ಬರುತ್ತದೆ. ಈ ಅವಧಿಯಲ್ಲಿ ಲಕ್ಷಾಂತರ ಮಂದಿ ಲಗುಬಗೆಯೊಂದಿಗೆ ಬೃಂದಾವನಗಳಿಗೆ ಭೇಟಿ ನೀಡಿ ಗುರುರಾಯರ ಪೂಜಾ ಕೈಂಕರ್ಯ ನಿರತಾಗುವುದರೊಂದಿಗೆ ತಮ್ಮಿಂದ ಸಾಧ್ಯವಿರುವ ಸೇವೆಗಳನ್ನು ಮಾಡಿಸುತ್ತಾರೆ.

ಬೆಂಗಳೂರಿನ ರಾಯರ ಮಠಗಳಲ್ಲಿ ಚಾಮರಾಜಪೇಟೆಯ ಸೀತಾಪತಿ ಅಗ್ರಹಾರದ ರಾಘವೇಂದ್ರ ಸ್ವಾಮಿ ಮಠ ಅತ್ಯಂತ ಹಳೆಯದು. ಈ ಮಠ ಸುಮಾರು 70 ವರ್ಷಗಳಷ್ಟು ಹಿಂದಿನದು ಎಂದು ನೆಟ್ಟಕಲ್ಲಪ್ಪ ಸರ್ಕಲ್ಲಿನ ಗುರುರಾಜ ಅಸೋಸಿಯೇಷನ್ ನಿರ್ದೇಶಕ ಕೃಷ್ಣ ಪ್ರಸಾದ್ ಮತ್ತು ಚಿಕ್ಕಪೇಟೆ ರಾಘವೇಂದ್ರ ಮಠದ ಅರ್ಚಕ ಕೃಷ್ಣಾಚಾರ್ ನೆನಪು ಮಾಡಿಕೊಳ್ಳುತ್ತಾರೆ.

ಗುರುರಾಜ ಅಸೋಸಿಯೇಷನ್ ರಾಯರಮಠ, ಚಿಕ್ಕಪೇಟೆಯ ರಾಘವೇಂದ್ರ ಸ್ವಾಮಿ ಮಠ, ಬಿಇಎಂಎಲ್ ಬಡಾವಣೆ, ಬನ್ನೇರುಘಟ್ಟ ರಸ್ತೆಯ ಹುಳಿಮಾವು, ಜಯವನಗರ, ಕಾಶಿಮಠ ಮತ್ತಿತರ ಮಠಗಳಲ್ಲೆಲ್ಲ ಆರಾಧನೋತ್ಸವದ ಸಂಭ್ರಮ ಕಣ್ಣಿಗೆ ಹಬ್ಬ.

ಸಕಲವನ್ನೂ ನೀಡುವ ಕಲ್ಪವೃಕ್ಷ ಮತ್ತು ಕಾಮಧೇನುವಿನಂತೆ ಶ್ರೀರಾಘವೇಂದ್ರ ಸ್ವಾಮಿಗಳು ಭಕ್ತರ ಎಲ್ಲ ಬೇಡಿಕೆಗಳನ್ನು ಈಡೇರಿಸುವರು ಎಂಬುದು ಭಕ್ತಾದಿಗಳ ನಂಬಿಕೆ. ಐತಿಹ್ಯಗಳ ಪ್ರಕಾರ ರಾಘವೇಂದ್ರ ಸ್ವಾಮಿಗಳು ಆದಿಯಲ್ಲಿ ಬ್ರಹ್ಮದೇವನ ಬಳಿ ಸೇವೆ ಸಲ್ಲಿಸುತ್ತಿದ್ದ ಶಂಕುಕರ್ಣ ಎಂಬ ಸೇವಕ. ಕೃತಯುಗದಲ್ಲಿ ಭಕ್ತ ಪ್ರಹ್ಲಾದನಾಗಿ, ಕಲಿಯುಗದಲ್ಲಿ ವಿಜಯನಗರ ಕಾಲದ ವ್ಯಾಸರಾಯರಾಗಿ ಜನಿಸಿದ ಶಂಕುಕರ್ಣನೇ ಮುಂದೆ ಶ್ರೀ ರಾಘವೇಂದ್ರ ಸ್ವಾಮಿಯಾಗಿ ಜನಿಸಿದರು ಎನ್ನಲಾಗುತ್ತದೆ.

ಕ್ರಿ.ಶ. 1601ರಲ್ಲಿ ತಮಿಳುನಾಡಿನ ಭುವನಗಿರಿಯಲ್ಲಿ ಜನಿಸಿದ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥ. ಸರಸ್ವತಿ ಎಂಬಾಕೆಯನ್ನು ಮದುವೆಯಾಗಿದ್ದ ವೆಂಕಟನಾಥ ಮುಂದೆ ರಾಘವೇಂದ್ರ ಸ್ವಾಮಿಗಳಾಗಿ ದೀಕ್ಷೆ ಪಡೆದಾಗ ಅಗಲಿಕೆಯ ನೋವು ಸಹಿಸಲಾಗದೆ ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಳಂತೆ. ತಮ್ಮ ದೈವೀಶಕ್ತಿಯಿಂದ ರಾಘವೇಂದ್ರ ಸ್ವಾಮಿಗಳು ಆಕೆಯನ್ನು ಸ್ವರ್ಗಕ್ಕೆ ಕಳುಹಿಸಿದರು ಎಂಬುದು ರಾಯರಿಗೆ ಸಂಬಂಧಿಸಿದ ಉಲ್ಲೇಖಗಳಲ್ಲಿ ಒಂದು.

ರಾಘವೇಂದ್ರ ಸ್ವಾಮಿಗಳ ಆಯುಸ್ಸು ಸುಮಾರು 700 ವರ್ಷಗಳು ಎಂಬ ನಂಬಿಕೆ ಇದ್ದು, ಗತಿಸಿರುವ 400 ವರ್ಷಗಳಲ್ಲಿ ಅಪಾರ ಪವಾಡಗಳು ನಡೆದಿರುವ ಉಲ್ಲೇಖಗಳಿವೆ.

ವೆಂಕಣ್ಣನೆಂಬ ಅನಕ್ಷರಸ್ಥ ದನಗಾಹಿಗೆ ರಾಯರ ಸ್ಮರಣೆಯಿಂದ ಸಂದೇಶವೊಂದನ್ನು ಓದಲು ಸಾಧ್ಯವಾಗಿ ಆತನನ್ನು ಅದೋನಿಯ ನವಾಬ ಅದೋನಿಯ ದಿವಾನನ್ನಾಗಿ ನೇಮಿಸಿದ್ದು, ರಾಘವೇಂದ್ರ ಸ್ವಾಮಿಗಳು ತಮಗೆ ನೀಡಲಾದ ಮಾಂಸಾಹಾರವನ್ನು ಹಣ್ಣುಗಳನ್ನಾಗಿ ಪರಿವರ್ತ್ತಿಸಿದ್ದನ್ನು ಕಂಡು ಅದೋನಿಯ ನವಾಬ ಮಂಚಲ ಗ್ರಾಮವನ್ನು ರಾಯರಿಗೆ ಒಪ್ಪಿಸಿದ್ದು, ಅದೇ ಗ್ರಾಮ ಮುಂದೆ ಮಂತ್ರಾಲಯವಾಗಿ ಬೆಳೆದದ್ದು, 1800ರಲ್ಲಿ ಬಳ್ಳಾರಿಯ ಕಲೆಕ್ಟರನಾಗಿ ಬಂದ ಸರ್ ಥಾಮಸ್ ಮುನ್ರೋಗೆ ರಾಯರ ದರ್ಶನವಾಗಿ ಮಂತ್ರಾಲಯ ಮಠಕ್ಕೆ ಅನುಕೂಲವಾಗುವಂತೆ ಆತ ಆದೇಶ ಹೊರಡಿಸಿ ಅದನ್ನು ಗೆಜೆಟ್ಟಿನಲ್ಲಿ ಪ್ರಕಟಿಸಿದ್ದು ಸೇರಿದಂತೆ ರಾಯರ ಪವಾಡಗಳಿಗೆ ಸಂಬಂಧಿಸಿದಂತೆ ನೂರಾರು ಕಥೆಗಳು ಭಕ್ತರ ನಾಲಿಗೆಯಲ್ಲಿ ನಲಿಯುತ್ತವೆ.

1671ರಲ್ಲಿ ರಾಘವೇಂದ್ರ ಸ್ವಾಮಿಗಳು ಮಂತ್ರಾಲಯದಲ್ಲಿ ತಮ್ಮ ಸುತ್ತ ಬೃಂದಾವನ ನಿರ್ಮಿಸುವಂತೆ ಭಕ್ತರಿಗೆ ಆಜ್ಞಾಪಿಸಿದರು. ವೀಣೆ ನುಡಿಸುತ್ತಾ 'ಇಂದು ಎನಗೆ ಗೋವಿಂದ' ಹಾಡುತ್ತಾ ಕುಳಿತ ರಾಘವೇಂದ್ರ ಸ್ವಾಮಿಗಳ ಸುತ್ತ ಬೃಂದಾವನ ನಿರ್ಮಿಸಿ ಗುರುಗಳ ತಲೆಯ ಮೇಲೆ 300 ವಿಷ್ಣು ಸಾಲಿಗ್ರಾಮಗಳನ್ನು ಜೋಡಿಸಲಾಯಿತು. ಮುಂದಿನ 600 ವರ್ಷಗಳ ಕಾಲ ಈ ವೃಂದಾವನದಲ್ಲಿ ಜೀವಂತ ಕುಳಿತೇ ತಮ್ಮ ಕೋರಿಕೆಗಳನ್ನು ಈಡೇರಿಸುತ್ತಾ ಪವಾಡಗಳನ್ನು ಮಾಡುತ್ತಾರೆ ಎಂಬುದು ಭಕ್ತರ ದೃಢ ನಂಬಿಕೆ.

ಈ ನಂಬಿಕೆಯ ಪರಿಣಾಮವಾಗಿಯೇ ವರ್ಷ ವರ್ಷವೂ ನಗರ ನಗರಗಳಲ್ಲಿ ರಾಯರ ಹೊಸ ಹೊಸ ಮಠಗಳು, ಬೃಂದಾವನಗಳು ನಿರ್ಮಾಣಗೊಳ್ಳುತ್ತಿವೆ. ಅಲ್ಲಿ ನಿತ್ಯ ರಾಯರಿಗೆ ಪೂಜೆ ಸಲ್ಲುತ್ತಿದೆ. ರಾಯರು ವೃಂದಾವನಸ್ಥರಾದ ನೆನಪಿನಲ್ಲಿ ಪ್ರತೀವರ್ಷ ಸಂಭ್ರಮದ ಆರಾಧನಾ ಉತ್ಸವ ನಡೆಯುತ್ತದೆ. 'ಓಂ ಶ್ರೀ ರಾಘವೇಂದ್ರಾಯ ನಮಃ' ಮಂತ್ರ ನಿತ್ಯ ಭಕ್ತರ ನಾಲಿಗೆಗಳಲ್ಲಿ ಮಾರ್ದನಿಸುತ್ತದೆ.

ರಾಘವೇಂದ್ರ ಮಠಗಳ ಆಸುಪಾಸಿನಲ್ಲಿ ಸಂತೆಗಳೂ ಸೇರಿ ಸಂಭ್ರಮದ ಜಾತ್ರೆ ನಡೆಯುತ್ತದೆ. ಬೆಂಗಳೂರು ನಗರವೂ ಈ ಸಂಭ್ರಮದಲ್ಲಿ ಮೀಯುತ್ತದೆ.

ಸೌಜನ್ಯ: ಪ್ರಜಾವಾಣಿ

No comments:

Advertisement