Monday 4 January 2010

ಇಂದಿನ ಇತಿಹಾಸ History Today ಡಿಸೆಂಬರ್ 07

ಇಂದಿನ ಇತಿಹಾಸ

ಡಿಸೆಂಬರ್ 0 7

ಹವ್ಯಾಸಿ ಸಿನಿಮಾ ನಿರ್ದೇಶಕಿ ಜಿ.ಡಿ.ಜಯಲಕ್ಷ್ಮಿ ಅವರ `ಪೇಪರ್! ಪೇಪರ್!' ಚಿತ್ರ 2007ನೇ ಸಾಲಿನ ಕಾಮನ್ ವೆಲ್ತ್ ಪ್ರಶಸ್ತಿಯ ಪ್ರಮುಖ ಬಹುಮಾನ ಗಳಿಸಿಕೊಂಡಿತು. ಕಾಗದದ ಪುನರ್ ಬಳಕೆ ಕುರಿತು 90 ನಿಮಿಷಗಳ ಈ ಚಿತ್ರವನ್ನು ನಿರ್ಮಿಸಲಾಗಿದೆ.

2008: ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದ ಕುಸಿಯಲ್ಪಟ್ಟ ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನವದೆಹಲಿಯಲ್ಲಿ ಹಲವು 'ಪರಿಹಾರ ಪ್ಯಾಕೇಜ್'ಗಳನ್ನು ಪ್ರಕಟಿಸಿತು. ಮುಖ್ಯವಾಗಿ ಬೇಡಿಕೆ ಹೆಚ್ಚಿಸಲು ಸಂಬಂಧಪಟ್ಟ ಎಲ್ಲ ವಾಣಿಜ್ಯ ರಂಗಗಳಲ್ಲೂ ತೆರಿಗೆ ಕಡಿತ, ರಫ್ತು, ಗೃಹ ನಿರ್ಮಾಣ, ಜವಳಿ ಹಾಗೂ ಮೂಲಭೂತ ಸೌಲಭ್ಯಗಳ ಕ್ಷೇತ್ರಗಳಿಗೆ ಹೆಚ್ಚುವರಿ ಹಣ ಮತ್ತು ಪ್ರೋತ್ಸಾಹಧನ ಮಂಜೂರು ಇತ್ಯಾದಿ ಇವುಗಳಲ್ಲಿ ಸೇರಿವೆ.

2008: ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕಟ್ಟಾಜ್ಞೆ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಲಾಶಯಗಳಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರಾಜ್ಯವ್ಯಾಪಿ ವಿಸ್ತರಿಸುವುದಾಗಿ ಪ್ರಕಟಿಸಿದರು. ಕೃಷ್ಣಾ ನದಿಯಿಂದ ವಿಜಾಪುರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಮೊದಲ ಹಂತದ ಯೋಜನೆಗೆ ವಿಜಾಪುರ ತಾಲ್ಲೂಕು ತಿಕೋಟಾದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. 'ಜಲಾಶಯಗಳಿಂದ ಕೆರೆಗಳಿಗೆ ನೀರು ತುಂಬಿಸುವ ದೇಶದ ಮೊದಲ ಯೋಜನೆಯ ಅನುಷ್ಠಾನಕ್ಕೆ ನಮ್ಮ ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಸಾಧ್ಯವಿರುವೆಡೆ ಜಲಾಶಯಗಳಿಂದ ಕೆರೆಗಳಿಗೆ ನೀರು ಹರಿಸುತ್ತೇವೆ. ಕಡಿಮೆ ಖರ್ಚಿನ ಈ ಯೋಜನೆಯಿಂದ ಹೆಚ್ಚು ಪ್ರದೇಶಕ್ಕೆ ನೀರಾವರಿಯಾಗಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಜತೆಗೆ ಮೀನುಗಾರಿಕೆಯಿಂದ ಒಂದು ಕೆರೆಯಿಂದ ವಾರ್ಷಿಕ ಒಂದು ಲಕ್ಷ ರೂಪಾಯಿ ಆದಾಯವೂ ಬರುತ್ತದೆ' ಎಂದರು.

2008: ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎಂದು ಆರೋಪಿಸಿ ವ್ಯಕ್ತಿಯೊಬ್ಬರನ್ನು ಶಸ್ತ್ರಸಜ್ಜಿತ ನಕ್ಸಲರ ತಂಡವೊಂದು ಗುಂಡಿಕ್ಕಿ ಕೊಂದ ಘಟನೆ ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಶಂಕರನಾರಾಯಣ ಠಾಣೆ ವ್ಯಾಪ್ತಿಯ ಹಳ್ಳಿಹೊಳೆ ಗ್ರಾಮದ ಅಕ್ಷರಪಾಲು ಎಂಬಲ್ಲಿ ಸಂಭವಿಸಿತು. ಮೃತ ವ್ಯಕ್ತಿಯನ್ನು ಬಿಜೆಪಿಯ ಸಕ್ರಿಯ ಕಾರ್ಯಕರ್ತ, ಕೃಷಿಕ ಕೇಶವ ಯಡಿಯಾಳ (63) ಎಂದು ಗುರುತಿಸಲಾಯಿತು. ಸಂಜೆ ಸುಮಾರು 6.30ರಿಂದ 7ರ ಮಧ್ಯೆ ಕೇಶವ ಅವರನ್ನು ಮನೆಯಿಂದ ಹೊರಕ್ಕೆ ಎಳೆದು ತಂದ ನಕ್ಸಲ್ ತಂಡ, ಮನೆಯ ಎದುರಿನ ಮರವೊಂದಕ್ಕೆ ಕಟ್ಟಿಹಾಕಿ ಈ ದುಷ್ಕೃತ್ಯ ಎಸಗಿತು. ತಡೆಯಲು ಬಂದ ಅವರ ಪತ್ನಿ ಕಾಂತಿಮತಿ ಮಗ ಉಪೇಂದ್ರ ಅವರ ಮೇಲೂ ನಕ್ಸಲರು ಹಲ್ಲೆ ನಡೆಸಿ ಗಾಯಗೊಳಿಸಿದರು. ನಂತರ ಕೇಶವ ಅವರ ಜೀಪಿಗೆ ಕಿಚ್ಚಿಟ್ಟ ನಕ್ಸಲರು, ಪರಿಸರದಲ್ಲಿ ಕರಪತ್ರಗಳನ್ನು ಎಸೆದು ಪರಾರಿಯಾದರು.

2008: ಒಂದು ತಿಂಗಳಿನಿಂದ ಕಚೇರಿಗೆ ಗೈರು ಹಾಜರಾಗಿದ್ದ ಹರಿಯಾಣದ ಉಪಮುಖ್ಯಮಂತ್ರಿ ಚಂದರ್ ಮೋಹನ್ ಅವರನ್ನು ಸಂಪುಟದಿಂದ ಕೈಬಿಡಲಾಯಿತು. ಮುಸಲ್ಮಾನ ಧರ್ಮಕ್ಕೆ ಮತಾಂತರ ಹೊಂದಿ ತಾವು ಎರಡನೇ ಮದುವೆಯಾಗಿರುವುದಾಗಿ ಚಂದರ್ ಮೋಹನ್ ಹಿಂದಿ ವಾಹಿನಿಯೊಂದರಲ್ಲಿ ಹೇಳಿಕೆ ನೀಡಿದ ಕೆಲ ಗಂಟೆಗಳಲ್ಲಿ ಅವರನ್ನು ಸಂಪುಟದಿಂದ ತೆಗೆದುಹಾಕಲಾಯಿತು. 50 ದಿನಗಳಿಂದ ಅವರು ಸಂಪುಟ ಸಭೆಗೆ ಹಾಜರಾಗಿರಲಿಲ್ಲ.

2008: ಕಾಲ್‌ಸೆಂಟರ್ ಉದ್ಯೋಗಿಗಳು ಸೇರಿದಂತೆ ಬದಲಾಗುವ ಪಾಳಿಗಳಲ್ಲಿ ಕೆಲಸ ಮಾಡುವವರು ಮಧುಮೇಹ ರೋಗಕ್ಕೆ ತುತ್ತಾಗುವ ಸಾಧ್ಯತೆ ಅತ್ಯಂತ ಹೆಚ್ಚು. ವ್ಯಕ್ತಿಯೊಬ್ಬನ ಸಕ್ಕರೆಯ ಮಟ್ಟ ಆತನ ದೇಹದ ಗತಿ ಹಾಗೂ ನಿದ್ರಾ ಸ್ವರೂಪವನ್ನು ಅವಲಂಬಿಸಿರುತ್ತದೆ ಎಂಬುದನ್ನು ನೂತನ ಸಂಶೋಧನೆಯೊಂದು ಪತ್ತೆ ಹಚ್ಚಿತು. ಮಧುಮೇಹ ಹಾಗೂ ರಕ್ತ ಸಕ್ಕರೆಯ ಮಟ್ಟವನ್ನು ನಿದ್ರಾ ಸಮಸ್ಯೆಗೆ ಪರಿಹಾರ ಹುಡುಕುವ ಮೂಲಕ ಸ್ವಲ್ಪ ಮಟ್ಟಿಗೆ ಬಗೆಹರಿಸಲು ಸಾಧ್ಯ ಎಂಬುದು ಇದರಿಂದ ತಿಳಿದು ಬಂದಿತು. 'ಪಾಳಿಗಳಲ್ಲಿ ದುಡಿಯುವ ಮಂದಿ ಬಹುಬೇಗನೇ ರಕ್ತದೊತ್ತಡ ಹಾಗೂ ಮಧುಮೇಹಕ್ಕೆ ಗುರಿಯಾಗುವುದಕ್ಕೆ ಒತ್ತಡ ಕಾರಣ ಎಂದು ವೈದ್ಯರು ಸಾಮಾನ್ಯವಾಗಿ ಹೇಳುತ್ತಾರೆ. ಆದರೆ ಇದಕ್ಕೆ ಬದಲಾಗುವ ದೇಹದ ಗತಿ ಕಾರಣವಾಗಿರುವ ಸಾಧ್ಯತೆ ಅಧಿಕ' ಎಂದು ಸಂಶೋಧಕರಲ್ಲಿ ಒಬ್ಬರಾದ ಫಿಲಿಪ್ ಫ್ರೋಗ್ಯುಯೆಲ್ ಸುದ್ದಿಸಂಸ್ಥೆಗೆ ನೀಡಿರುವ ಇ- ಮೇಲ್ ಸಂದರ್ಶನದಲ್ಲಿ ಎಚ್ಚರಿಸಿದರು.

2007: ಹವ್ಯಾಸಿ ಸಿನಿಮಾ ನಿರ್ದೇಶಕಿ ಜಿ.ಡಿ.ಜಯಲಕ್ಷ್ಮಿ ಅವರ `ಪೇಪರ್! ಪೇಪರ್!' ಚಿತ್ರ 2007ನೇ ಸಾಲಿನ ಕಾಮನ್ ವೆಲ್ತ್ ಪ್ರಶಸ್ತಿಯ ಪ್ರಮುಖ ಬಹುಮಾನ ಗಳಿಸಿಕೊಂಡಿತು. ಕಾಗದದ ಪುನರ್ ಬಳಕೆ ಕುರಿತು 90 ನಿಮಿಷಗಳ ಈ ಚಿತ್ರವನ್ನು ನಿರ್ಮಿಸಲಾಗಿದೆ. `ಯಾವುದೇ ವಸ್ತುವನ್ನು ವ್ಯರ್ಥ ಮಾಡಬಾರದು, ಎಲ್ಲಾ ವಸ್ತುಗಳನ್ನು ಬಳಸಿಕೊಳ್ಳುವ ಮೂಲಕ ರಕ್ಷಿಸಬೇಕು ಎಂಬ ಭಾರತದ ಸಾಂಪ್ರದಾಯಿಕ ಮೌಲ್ಯಗಳಿಗೆ ಸಂಕೇತವಾಗಿ ಈ ಚಿತ್ರ ನಿಲ್ಲುತ್ತದೆ. ಹನ್ನೊಂದು ವರ್ಷ ಇಂಗ್ಲೆಂಡಿನ ಬಿಬಿಸಿಯಲ್ಲಿ ಕಾರ್ಯ ನಿರ್ವಹಿಸಿದ ಬಳಿಕ ಏಳು ವರ್ಷಗಳಿಂದ ಹವ್ಯಾಸಿ ಚಲನಚಿತ್ರ ನಿರ್ಮಾಪಕಿಯಾಗಿರುವ ಜಯಲಕ್ಷ್ಮಿ ಈ ಚಿತ್ರದ ನಿರ್ಮಾಪಕಿ ಮತ್ತು ನಿರ್ದೇಶಕಿ ಕೂಡ ಆಗಿದ್ದಾರೆ.

2007: ಬೆಂಗಳೂರಿನ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಲ್ಯಾಪ್ರೊಸ್ಕೋಪಿಕ್ ವಿಧಾನದ ಮೂಲಕ ಮೂತ್ರಪಿಂಡವನ್ನು (ಕಿಡ್ನಿ) ಯಶಸ್ವಿಯಾಗಿ ಕಸಿ ಮಾಡಲಾಯಿತು. `ಲ್ಯಾಪ್ರೊಸ್ಕೋಪಿ' ಎಂದರೆ ಶರೀರದಲ್ಲಿ ಚಿಕ್ಕ ರಂಧ್ರ ಕೊರೆದು, ಅದರ ಮೂಲಕ ಶಸ್ತ್ರಚಿಕಿತ್ಸೆ ನಡೆಸುವ ವಿಧಾನ. ಅರ್ಧ ಇಂಚೂ ಇಲ್ಲದ ಚಿಕ್ಕ ಉಪಕರಣವನ್ನು ರಂಧ್ರದ ಮೂಲಕ ಹಾಯಿಸಿ, ರಕ್ತನಾಳಗಳನ್ನು ಬಿಡಿಸಿ ಕಿಡ್ನಿಯನ್ನು ತೆಗೆಯಲಾಗುತ್ತದೆ. ಆಸ್ಪತ್ರೆಯ ಮೂತ್ರಪಿಂಡ ತಜ್ಞ ಡಾ. ಟಿ.ಮನೋಹರ್ ಅವರು ಈ ವಿಧಾನವನ್ನು ಬಳಸಿ ಕಿಡ್ನಿ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಸ್ಪತ್ರೆ ಈದಿನ ಪ್ರಕಟಿಸಿತು. ಸಾಮಾನ್ಯವಾಗಿ, ತೆರೆದ ಶಸ್ತ್ರಚಿಕಿತ್ಸೆ ಮೂಲಕ ಕಿಡ್ನಿಯನ್ನು ತೆಗೆದು ಅವಶ್ಯವಿರುವ ವ್ಯಕ್ತಿಗೆ ಕಸಿ ಮಾಡಲಾಗುತ್ತದೆ. ಆದರೆ ಇದು ಕ್ಲಿಷ್ಟಕರವಾದ ಕಾರಣ ಕಿಡ್ನಿ ದಾನಕ್ಕೆ ಹೆಚ್ಚಿನವರು ಹಿಂದೇಟು ಹಾಕುತ್ತಿದ್ದರು. ಈಗ ಈ ಹೊಸ ವಿಧಾನ ಮೂತ್ರಪಿಂಡ ರೋಗಿಗಳಿಗೆ ಆಶಾಕಿರಣವಾಗಿದ್ದು, ರಾಜ್ಯದ ಮಟ್ಟಿಗೆ ಇದು ಅಪರೂಪದ ಸಾಧನೆ ಎಂದು ಎನ್ನಲಾಗಿದೆ. ಈ ವಿಧಾನದಲ್ಲಿ ಉದರದ ಭಿತ್ತಿಯ ಮೂಲಕ ಪುಟ್ಟ ನಳಿಕೆಯನ್ನು ಹಾಯಿಸಲಾಗುತ್ತದೆ. ಇದರಿಂದ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಉಪಕರಣಗಳ ಚಲನೆಗೆ ಅನುಕೂಲವಾಗುತ್ತದೆ. ಲ್ಯಾಪ್ರೊಸ್ಕೋಪ್ ಜತೆಗೆ ಹೊಂದಿಕೊಂಡಿರುವ ವಿಡಿಯೋ ಕ್ಯಾಮೆರಾದ ಮೂಲಕ ಉದರದೊಳಗೆ ನಡೆಯುವ ಚಟುವಟಿಕೆಗಳನ್ನು ಪರದೆಯಲ್ಲಿ ವೀಕ್ಷಿಸಬಹುದು. ಹೊಟ್ಟೆಯ ಇನ್ನೊಂದು ಬದಿ ಮಾಡಲಾಗಿರುವ ಎರಡೂವರೆ ಇಂಚಿನ ತೂತಿನ ಮೂಲಕ ಕಿಡ್ನಿಯನ್ನು ತೆಗೆಯಲಾಗುತ್ತದೆ. ಈ ವಿಧಾನದಲ್ಲಿ ಕಿಡ್ನಿಯ ದಾನಿ ಕೇವಲ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದರೆ ಸಾಕು. ಒಂದೆರಡು ವಾರಗಳಲ್ಲಿಯೇ ಅವರು ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಬಹುದು ಎಂಬುದು ಆಸ್ಪತ್ರೆಯ ವಿವರಣೆ.

2007: ಕಂಪ್ಯೂಟರ್ ಕಲಿಕೆಗೆ, ಕಾರ್ಯನಿರ್ವಹಣೆಗೆ ಇಂಗ್ಲಿಷ್ ಜ್ಞಾನ ಕಡ್ಡಾಯ ಎಂಬ ಭಾವನೆ ಜನಸಾಮಾನ್ಯರಲ್ಲಿದೆ. ಆದರೆ, ಇಂಗ್ಲಿಷ್ ಗಂಧಗಾಳಿಯಿಲ್ಲದ ಭಾರತೀಯರು ಕಂಪ್ಯೂಟರಿನಲ್ಲಿ ಕೆಲಸ ಮಾಡಬಲ್ಲ ಸಾಫ್ಟವೇರನ್ನು ಇಸ್ರೇಲಿ ಕಂಪೆನಿಯ ಸಹಭಾಗಿತ್ವದಲ್ಲಿ ಭಾರತೀಯ ಸಂಸ್ಥೆಯೊಂದು ಸಿದ್ಧಪಡಿಸಿತು. ಮಾಹಿತಿ ತಂತ್ರಜ್ಞಾನ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಸಿ-ಡಾಕ್ (ಅತ್ಯಾಧುನಿಕ ಕಂಪ್ಯೂಟರ್ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರ) ಹಾಗೂ ಇಸ್ರೇಲಿನ `ಎಫ್ ಟಿ ಕೆ ಟೆಕ್ನಾಲಜೀಸ್' ಜೊತೆಯಾಗಿ ಈ ಹೊಸ ಸಾಫ್ಟವೇರ್ ಸಿದ್ಧಪಡಿಸಿವೆ. ಇಸ್ರೇಲ್ ರಾಜಧಾನಿ ಟೆಲ್ ಅವೀವಿನಲ್ಲಿ ಈದಿನ ಈ ಸಾಫ್ಟವೇರನ್ನು ವಿಧ್ಯುಕ್ತವಾಗಿ ಬಿಡುಗಡೆ ಮಾಡಲಾಯಿತು. ಸಾಫ್ಟವೇರಿನ ಮೊದಲ ಪ್ರತಿಯನ್ನು ಇಸ್ರೇಲಿನಲ್ಲಿ ಭಾರತದ ರಾಯಭಾರಿಯಾಗಿರುವ ಅರುಣ್ ಕುಮಾರ್ ಸಿಂಗ್ ಅವರಿಗೆ ನೀಡಲಾಯಿತು. ಭಾರತದಲ್ಲಿ ಇಂಗ್ಲಿಷ್ ತಿಳಿದವರು ಕೇವಲ ಶೇ 10 ಜನ ಮಾತ್ರ. ಉಳಿದ ಶೇ 90 ಜನರಿಗೆ ಮಾಹಿತಿ ತಂತ್ರಜ್ಞಾನದ ಲಾಭ ಮುಟ್ಟಿಸಲು ಈ ಸಾಫ್ಟವೇರ್ ನೆರವಾಗಲಿದೆ ಎಂಬುದು `ಎಫ್ ಟಿ ಕೆ ಟೆಕ್ನಾಲಜೀಸ್' ಮುಖ್ಯಸ್ಥ ಹಾರೆಲ್ ಕೊಹೆನ್ ಅಭಿಪ್ರಾಯ. ಈ ಹೊಸ ಸಾಫ್ಟವೇರ್ 3,000 ರೂಪಾಯಿಗೆ ಲಭ್ಯವಾಗಲಿದೆ. ಸದ್ಯಕ್ಕೆ ಕನ್ನಡ, ಹಿಂದಿ, ಬಂಗಾಳಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಉರ್ದು ಹಾಗೂ ಪಂಜಾಬಿ ಭಾಷೆಯ ಜನ ಈ ಸಾಫ್ಟವೇರ್ ಬಳಸಬಹುದು. 2009ರ ಹೊತ್ತಿಗೆ ಭಾರತದಲ್ಲಿ ಅಧಿಕೃತವಾಗಿ ಮನ್ನಣೆ ಪಡೆದ ಎಲ್ಲ ಭಾಷೆಗಳಲ್ಲೂ ಈ ಸಾಫ್ಟವೇರ್ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.

2007: ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯವು 64 ಆರೋಪಿಗಳಿಗೆ ಶಿಕ್ಷೆ ವಿಧಿಸಿತು. 24 ಆರೋಪಿಗಳಿಗೆ 3ರಿಂದ 6 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ರಾಂಚಿಯಲ್ಲಿ ತೀರ್ಪು ನೀಡಿತು. ಉಳಿದ ಆರೋಪಿಗಳಿಗೆ ಡಿಸೆಂಬರ್ 12 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿತು. ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಒಟ್ಟು 53 ಪ್ರಕರಣಗಳಲ್ಲಿ 23 ಪ್ರಕರಣಗಳು ಇತ್ಯರ್ಥವಾದವು.

2007: ಇರಾಕಿನ ದಯಾಲ್ ಪ್ರಾಂತ್ಯದ ಮುಕದ್ದಿಯಾ ಅಲ್ ಖೈದಾ ಸಂಘಟನೆ ವಿರುದ್ಧ ರಚಿಸಲಾದ ಜಾಗೃತ ಗುಂಪಿನ ಕಚೇರಿಯ ಮೇಲೆ ಆತ್ಮಾಹುತಿ ದಳದ ಮಹಿಳೆಯೊಬ್ಬಳು ದಾಳಿ ನಡೆಸಿದ್ದರಿಂದ 16 ಮಂದಿ ಮೃತರಾಗಿ, 27 ಜನ ಗಾಯಗೊಂಡರು. ಕಚೇರಿಗೆ ಬಂದ ಆತ್ಮಾಹುತಿ ದಳದ ಈ ಮಹಿಳೆ ತನ್ನ ಕೋಟಿನಲ್ಲಿ ಇಟ್ಟಿದ್ದ ಬಾಂಬನ್ನು ಸ್ಪೋಟಿಸಿದಳು.

2007: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಗರದ ಮಹಾತ್ಮ ಗಾಂಧಿ ರಸ್ತೆಯ ಬಿ. ಆರ್. ವಿ. ಪೆರೇಡ್ ಮೈದಾನದಿಂದ ಎತ್ತರಿಸಿದ (ಎಲಿವೆಟೆಡ್) ರೈಲುಮಾರ್ಗ ನಿರ್ಮಿಸುವುದರಿಂದ ಎಂ.ಜಿ.ರಸ್ತೆಯಲ್ಲಿ ಆಗುವ ಸಂಚಾರ ದಟ್ಟಣೆ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರವು ನಗರ ಸಂಚಾರ ಪೊಲೀಸರಿಗೆ ಸೂಚನೆ ನೀಡಿತು.

2006: ಉತ್ತರಾಂಚಲವನ್ನು ಉತ್ತರ ಖಂಡ ಎಂಬುದಾಗಿ ಪುನರ್ ನಾಮಕರಣ ಮಾಡುವ ಮಸೂದೆಗೆ ಸಂಸತ್ತು ಅಂಗೀಕಾರ ನೀಡಿತು. ಮಸೂದೆಗೆ ಲೋಕಸಭೆ ಡಿಸೆಂಬರ್ 5ರಂದು ಒಪ್ಪಿಗೆ ನೀಡಿತ್ತು. ಲೋಕಸಭೆ ಈದಿನ ಮಸೂದೆಗೆ ಅಂಗೀಕಾರ ನೀಡಿತು.

2006: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಐಎಡಿಎಂಕೆ ಸ್ಥಾಪಕ ದಿವಂಗತ ಎಂ.ಜಿ. ರಾಮಚಂದ್ರನ್ ಪ್ರತಿಮೆಯನ್ನು ಸಂಸತ್ ಭವನದ ಆವರಣದಲ್ಲಿ ಅನಾವರಣಗೊಳಿಸಲಾಯಿತು. ಭಾರತದಲ್ಲಿ ಕಮ್ಯೂನಿಸ್ಟ್ ಚಳವಳಿಯ ನೇತಾರರಾಗಿದ್ದ ಭೂಪೇಶ್ ಗುಪ್ತಾ ಪ್ರತಿಮೆಯನ್ನೂ ಇದೇ ಸಂದರ್ಭದಲ್ಲಿ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅನಾವರಣಗೊಳಿಸಿದರು.

2006: ಕರ್ನಾಟಕದಲ್ಲಿ ವಿಧಾನಸಭೆಗೆ ಈವರೆಗೆ ನಡೆದ ಮರು ಚುನಾವಣೆಗಳಲ್ಲಿ ಅತೀ ಕಡಿಮೆ ಮತಗಳ ಅಂತರದಲ್ಲಿ (257 ಮತಗಳು) ಗೆಲುವು ಸಾಧಿಸಿದ ಕೀರ್ತಿಗೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಭಾಜನರಾದರು. ಪ್ರತಿಷ್ಠಿತ ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ ಜೆಡಿಎಸ್ ನ ಶಿವಬಸಪ್ಪ ಅವರನ್ನು ಸಿದ್ದರಾಮಯ್ಯ ಪರಾಭವಗೊಳಿಸಿದರು. 1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ 24,000ಕ್ಕೂ ಅಧಿಕ ಮತಗಳ ಅಂತರದಿಂದ ಜಯಿಸಿದ್ದುದು ಒಂದು ದಾಖಲೆಯಾಗಿತ್ತು.

2005: ಚೀನಾದ ತಂಗ್ಷಾನ್ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ ಕನಿಷ್ಠ 74 ಕಾರ್ಮಿಕರು ಮೃತರಾಗಿ ಹಲವರು ಗಾಯಗೊಂಡರು. ಸುಮಾರು 30 ಮಂದಿ ಕಣ್ಮರೆಯಾದರು.

1981: ನ್ಯಾಟೋ ಕೂಟದ ಸದಸ್ಯನಾಗಿ ಸ್ಪೇನ್ ದೇಶವು ಸೇರ್ಪಡೆಗೊಂಡಿತು.

1980: ಆಧುನಿಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಡಂಬನೆಗೆ ಹೊಸ ಆಯಾಮವನ್ನು ಸೃಷ್ಟಿಸಿದ ಬಿಚ್ಚು ಮನಸ್ಸಿನ ಧೀಮಂತ ಸಾಹಿತಿ ಬಳ್ಳಾರಿಯ ಬೀಚಿ ಬೆಂಗಳೂರಿನಲ್ಲಿ ನಿಧನರಾದರು.

1955: ಬ್ರಿಟನ್ನಿನ ಲೇಬರ್ ಪಾರ್ಟಿ ನಾಯಕತ್ವಕ್ಕೆ ಕ್ಲೆಮೆಂಟ್ ಅಟ್ಲಿ ರಾಜೀನಾಮೆ ನೀಡಿದರು. ಕಳೆದ 20 ವರ್ಷಗಳಿಂದ ಅಟ್ಲಿ ಲೇಬರ್ ಪಾರ್ಟಿಯ ನಾಯಕರಾಗಿದ್ದರು.

1946: ಸಾಹಿತಿ ಡಾ. ಕೆ.ಎಂ. ರಾಘವ ನಂಬಿಯಾರ್ ಜನನ.

1945: ಸಾಹಿತಿ, ಚಿತ್ರ ಕಲಾವಿದ, ನಾಟಕಕಾರ ಹೀಗೆ ಬಹುಮುಖ ಪ್ರತಿಭೆಯ ಪಿ.ಆರ್. ಆಚಾರ್ಯ (ಆರ್ಯ) ಅವರು ಪಿ. ವಿಠಲಾಚಾರ್ಯ- ರುಕ್ಮಿಣಿ ದಂಪತಿಯ ಮಗನಾಗಿ ಉಡುಪಿಯಲ್ಲಿ ಜನಿಸಿದರು.

1941: ಜಪಾನಿನ ಯುದ್ಧ ವಿಮಾನಗಳು ಪರ್ಲ್ ಬಂದರಿನಲ್ಲಿ ಅಮೆರಿಕಾದ ಪೆಸಿಫಿಕ್ ಪಡೆ ಮೇಲೆ ದಾಳಿ ನಡೆಸಿದವು. ಈ ಕೃತ್ಯವು ಎರಡನೇ ವಿಶ್ವಸಮರಕ್ಕೆ ಪ್ರವೇಶಿಸಲು ಅಮೆರಿಕಾಕ್ಕೆ ಪ್ರೇರಣೆ ನೀಡಿತು.

1937: ಸರ್ ರೋಗರ್ ಲ್ಯೂಮ್ ಲೇ ಅವರು ಅಧಿಕೃತವಾಗಿ ಬಾಂಬೆಯಲ್ಲಿ (ಈಗಿನ ಮುಂಬೈ) ಬ್ರಾಬೋರ್ನ್ ಸ್ಟೇಡಿಯಮ್ಮನ್ನು ಉದ್ಘಾಟಿಸಿದರು. (ಲಾರ್ಡ್ ಬ್ರಾಬೋರ್ನ್ ಅವರು ಈ ವೇಳೆಗೆ ಮುಂಬೈ ಬಿಟ್ಟಿದ್ದರು. ಹಾಗೂ ಬಂಗಾಳದ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇವರ ಹೆಸರಿನಲ್ಲೇ ಈ ಸ್ಟೇಡಿಯಮ್ಮನ್ನು ಸ್ಥಾಪಿಸಲಾಯಿತು).

1935: ಸಾಹಿತಿ ಇಂದಿರಾಕೃಷ್ಣ ಜನನ.

1856: ಈಶ್ವರಚಂದ್ರ ವಿದ್ಯಾಸಾಗರ ಅವರು ಮೊತ್ತ ಮೊದಲ ವಿಧವಾ ಪುನರ್ ವಿವಾಹವನ್ನು ಏರ್ಪಡಿಸಿದರು. ಬಾಲವಿಧವೆ ಕಾಳಿಮತಿ ದೇವಿ ಮತ್ತು ಸಿರಿಸ್ ಚಂದ್ರ ವಿದ್ಯಾರತ್ನ ಅವರ ಮದುವೆ ನಡೆಯಿತು. (1856ರ ಹಿಂದು ಪುನರ್ ವಿವಾಹ ಕಾಯ್ದೆಯ ಅಡಿಯಲ್ಲಿಹಿಂದು ವಿಧವೆಯರ ಮರು ಮದುವೆಗೆ ಅವಕಾಶ ಕಲ್ಪಿಸುವ ಕಾನೂನನ್ನು ಲಾರ್ಡ್ ಕ್ಯಾನಿಂಗ್ 1856ರ ಜುಲೈ ತಿಂಗಳಲ್ಲಿ ಜಾರಿಗೆ ತಂದಿದ್ದ.).

1783: ವಿಲಿಯಂ ಪಿಟ್ ಅವರು ಬ್ರಿಟನ್ನಿನ ಪ್ರಧಾನಿಯಾದರು. 24 ವರ್ಷ ವಯಸ್ಸಿನ ಅವರು ಬ್ರಿಟನ್ನಿನ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಭಾಜನರಾದರು.

1782: ಮುಸ್ಲಿಂ ದೊರೆ ಮೈಸೂರಿನ ಹೈದರಾಲಿ ಚಿತ್ತೂರು ಸಮೀಪದ ಶಿಬಿರವೊಂದರಲ್ಲಿ ಅಸು ನೀಗಿದ. ಫಿರಂಗಿ ಹಾಗೂ ಬಯೋನೆಟ್ಟುಗಳನ್ನು ಹೊಂದಿದ ಮೊತ್ತ ಮೊದಲ ಭಾರತೀಯ ಸೇನಾಪಡೆ ಕಟ್ಟಿದ ಹೆಗ್ಗಳಿಕೆ ಈತನದು.

Saturday 2 January 2010

'ವಿಲ್ ಗ್ರೋ' ಪುರಸ್ಕೃತ 'ಶ್ರೀ' ಪಡ್ರೆ


'ವಿಲ್ ಗ್ರೋ' ಪುರಸ್ಕೃತ 'ಶ್ರೀ' ಪಡ್ರೆ

ಪುತ್ತೂರಿನ 'ಅಡಿಕೆ ಪತ್ರಿಕೆ' ಬಳಗದ ನಾ. ಕಾರಂತ ಪೆರಾಜೆ ಸುಂದರ ಬ್ಲೋಗ್ ಒಂದನ್ನು ಬರೆಯುತ್ತಿದ್ದಾರೆ. ಅವರ 'ಹಸಿರು ಮಾತು' ಡೊಡ್ಡ ಪತ್ರಿಕೆಗಳು ಮಾಡಬೇಕಾದ ಕೆ
ಲಸವನ್ನು ಮಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ದುಡಿಯುತ್ತಾ ಕೃಷಿ ಕ್ಷೇತ್ರದಲ್ಲಿ, ಜಲ ಸಂರಕ್ಷಣೆಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಶ್ರೀಪಡ್ರೆಯಂತಹವರಿಗೆ ಪ್ರಶಸ್ತಿ ಬಂದ ವಿಚಾರ ಈ ಬ್ಲೋಗ್ ಮೂಲಕವೇ ನನಗೆ ಗೊತ್ತಾಯಿತು ಎನ್ನುವುದು ಹೆಮ್ಮೆಯ ವಿಚಾರ.

ಈ ಸುದ್ದಿ ಪ್ರಕಟಿಸಿದ ನಾ. ಕಾರಂತ ಪೆರಾಜೆ ಅವರಿಗೆ ವಂದನೆಗಳನ್ನೂ ಹಾಗೆಯೇ 'ವಿಲ್ ಗ್ರೋ' ಪ್ರಶಸ್ತಿ ಪಡೆದ 'ಶ್ರೀಪಡ್ರೆ' ಹಾಗೂ ಅವರಿಗೂ ಅಭಿವೃದ್ಧಿ- ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪಡೆದ ಅನಿತಾ ಪೈಲೂರು, ರಾಧಾಕೃಷ್ಣ ಎಸ್.ಭಡ್ತಿ, ಜಿ.ಕೃಷ್ಣಪ್ರಸಾದ್ ಅವರಿಗೆ ಅಭಿನಂದನೆಗಳನ್ನೂ ಈ ಮೂಲಕ ವ್ಯಕ್ತ ಪಡಿಸಿತ್ತಿದ್ದೇನೆ.

-ನೆತ್ರಕೆರೆ ಉದಯಶಂಕರ

'ಹಸಿರು ಮಾತು' ವರದಿ ಇಲ್ಲಿದೆ ನೋಡಿ:

'ಶ್ರೀ' ಪಡ್ರೆಯವರಿಗೆ 'ವಿಲ್ ಗ್ರೋ' ಪ್ರಶಸ್ತಿ

ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರಿಗೆ ಪ್ರತಿಷ್ಠಿತ 'ವಿಲ್ ಗ್ರೋ' ಪ್ರಶಸ್ತಿ ಸಂದಿದೆ. ಚೆನ್ನೈಯ ವಿಲ್ಗ್ರೋ ಸಂಸ್ಥೆ (ಹಿಂದೆ ರೂರಲ್ ಇನೊವೇಶನ್ ನೆಟ್ವರ್ಕ್) ಪತ್ರಕರ್ತ ವಿಭಾಗದಲ್ಲಿ ಪಡ್ರೆಯವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿ ಮತ್ತು ಫಲಕಗಳನ್ನೊಳಗೊಂಡಿದೆ.

ಆರು ಮಂದಿ ಪತ್ರಕರ್ತರ ಪೈಕಿ ಅಡಿಕೆ ಪತ್ರಿಕೆಯಲ್ಲಿ ಅನುಶೋಧನೆಗಳಿಗೆ ಕೊಟ್ಟ ಆದ್ಯತೆಗಳಿಗಾಗಿ ಶ್ರೀ ಪಡ್ರೆಯವರಿಗೆ ಈ ಪ್ರಶಸ್ತಿ ಕೊಡಲಾಗಿದೆ. ತೀರ್ಪುಗಾರರ ಮಂಡಳಿಯ ತೀರ್ಮಾನ ಮತ್ತು ಎಸ್ಎಂಎಸ್ - ಹೀಗೆ ಎರಡು ವಿಧಾನಗಳ ಮೂಲಕ ಒಟ್ಟಾರೆಯಾಗಿ ಈ ಆಯ್ಕೆ ನಡೆದಿದೆ.

'ಶ್ರೀ' ಪಡ್ರೆ ಕೇರಳದ ಕಾಸರಗೋಡು ಜಿಲ್ಲೆಯ ವಾಣಿನಗರದ ಕೃಷಿಕ. ಪ್ರವೃತ್ತಿಯಲ್ಲಿ ಕೃಷಿ ಪತ್ರಕರ್ತ. ಅಡಿಕೆ ಪತ್ರಿಕೆಯ ಸ್ಥಾಪಕ ಸಂಪಾದಕ. ಜಲಕೂಟ ಮತ್ತು ಅಡಿಕೆ ಪತ್ರಿಕೆಯ ಆಶ್ರಯದಲ್ಲಿ ದಶಕಕ್ಕೂ ಮಿಕ್ಕಿ ಮಳೆಕೊಯ್ಲಿನ ಬಗ್ಗೆ ಆಧ್ಯಯನ, ಬರವಣಿಗೆ, ದೇಶ-ವಿದೇಶಗಳಲ್ಲಿ ಮಳೆಕೊಯ್ಲಿನ ವಿವರಗಳನ್ನು ಸಂಗ್ರಹಿಸಿ, ಜನರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ. ಇಂಗ್ಲಿಷಿನಲ್ಲೂ ಅಭ್ಯುದಯ
ನುಡಿಚಿತ್ರ್ರ ಬರೆಯುತ್ತಾರೆ.

ಕಾಸರಗೋಡಿನ ಎಂಡೋಸಲ್ಫಾನ್ ದುರಂತವನ್ನು ಹೊರಜಗತ್ತಿಗೆ ತಿಳಿಸಿ ಅದನ್ನು ತಡೆಯುವ ಹೋರಾಟದಲ್ಲಿ ಭಾಗಿ. ನೆಲ-ಜಲ ಉಳಿಸಿ, ಹನಿಗೂಡಿಸುವ ಹಾದಿಯಲ್ಲಿ, ಮತ್ತೆ ರೂಪಾರೆಲ್ ಬತ್ತಲಿಲ್ಲ, ಬಾನಿಗೊಂದು ಆಲಿಕೆ, ಗುಜರಾತಿನ ನೀರ ತಿಜೋರಿ ಟಾಂಕಾ, ನೀರ ನೆಮ್ಮದಿಗೆ ನೂರಾರು ದಾರಿ, ನೀರ ಸಮಸ್ಯೆಗೆ ಇಲ್ಲಿವೆ ಪರಿಹಾರ, ಓಡಲು ಬಿಡದಿರಿ ಮಳೆನೀರ, ರೈನ್ ವಾಟರ್ ಹಾರ್ವೆಸ್ಟಿಂಗ್, ಮಣ್ಣು-ನೀರು ಇತ್ಯಾದಿ ಇವರ ಪ್ರಕಟಿತ ಕೃತಿಗಳು.

'ಗುಡ್ ನ್ಯೂಸ್ ಇಂಡಿಯಾ ಡಾಟ್ ಕಾಂ' ಎಂಬ ಜಾಲತಾಣ ಇವರನ್ನು 'ದ ರೈನ್ ಮ್ಯಾನ ಆಫ್ ಕೆನರಾ ಕೋಸ್ಟ್' ಎಂದು ಬಣ್ಣಿಸಿದೆ. ಅಶೋಕ ಫೆಲೋ ಕೂಡಾ ಆಗಿರುವ ಇವರಿಗೆ ಸಿಕ್ಕಿರುವ ಹತ್ತಾರು ಪ್ರಶಸ್ತಿಗಳಲ್ಲಿ ಗ್ರಾಮೀಣ ವರದಿಗಾಗಿ ಇರುವ ಸ್ಟೇಟ್ಸ್ಮೆನ್ ರಾಷ್ಟ್ರೀಯ ಪ್ರಶಸ್ತಿ, ಪಾವನಾ ಪರಿಸರ ಪ್ರಶಸ್ತಿ, ಕರ್ನಾಟಕ ಸರಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಚರಕ ಪತ್ರಿಕೋದ್ಯಮ ಗುರು ಪ್ರಶಸ್ತಿ ಮುಖ್ಯವಾದುವು.

ಅಭಿವೃದ್ಧಿ- ಪರಿಸರ ಪತ್ರಿಕೋದ್ಯಮ ಪ್ರಶಸ್ತಿ

(ಚಿತ್ರದಲ್ಲಿ - ಅನಿತಾ ಪೈಲೂರು, ರಾಧಾಕೃಷ್ಣ ಎಸ್.ಭಡ್ತಿ, ಜಿ.ಕೃಷ್ಣಪ್ರಸಾದ್)

ರಾಜ್ಯ ಸರಕಾರವು ಕಳೆದ ಮೂರು ವರುಷಗಳ 'ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪ್ರಶಸ್ತಿ'ಗಳನ್ನು ಪ್ರಕಟಿಸಿದೆ. ಪ್ರಶಸ್ತಿಯು ತಲಾ ಐವತ್ತು ಸಾವಿರ ರೂಪಾಯಿ ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ.

ಪ್ರಶಸ್ತಿ ಪುರಸ್ಕೃತರು

ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ : ಟೈಮ್ಸ್ ಆಫ್ ಇಂಡಿಯಾ ಕನ್ನಡ ಆವೃತ್ತಿಯ ಸಂಪಾದಕ ಈಶ್ವರ ದೈತೋಟ (2007), ಧಾರವಾಡ ಆಕಾಶವಾಣಿ ಕೇಂದ್ರದ ಸಹಾಯಕ ನಿಲಯ ನಿರ್ದೆಶಕ ಸಿ.ಯು.ಬೆಳ್ಳಕ್ಕಿ (2008), ಧಾರವಾಡ ಕೃಷಿ ಮಾಧ್ಯಮ ಕೇಂದ್ರದ ಅನಿತಾ ಪೈಲೂರು (2009).

ಪರಿಸರ ಪತ್ರಿಕೋದ್ಯಮ ಪ್ರಶಸ್ತಿ : ಸಹಜ ಸಮೃದ್ಧದ ಮುಖ್ಯಸ್ಥ ಜಿ.ಕೃಷ್ಣಪ್ರಸಾದ್ (2007), ಹಿರಿಯ ಪತ್ರಕರ್ತ ಟಿ.ಆರ್. ಅನಂತರಾಮ (2008), ವಿಜಯಕರ್ನಾಟಕದ ಮುಖ್ಯ ಉಪಸಂಪಾದಕ ರಾಧಾಕೃಷ್ಣ ಎಸ್.ಭಡ್ತಿ (2009)

ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅಧ್ಯಕ್ಷರಾಗಿದ್ದ ಆಯ್ಕೆ ಸಮಿತಿಯಲ್ಲಿ - ಡಾ.ಎ.ಎನ್.ಯಲ್ಲಪ್ಪ ರೆಡ್ಡಿ, ಡಾ.ಎಚ್.ಆರ್.ಕೃಷ್ಣಮೂರ್ತಿ, ದು.ಗು.ಲಕ್ಷ್ಮಣ - ಸದಸ್ಯರು.

ಪ್ರಶಸ್ತಿ ಪುರಸ್ಕೃತರಿಗೆ ಹಾರ್ದಿಕ ಅಭಿನಂದನೆಗಳು.

ಇಂದಿನ ಇತಿಹಾಸ History Today ಡಿಸೆಂಬರ್ 06

ಇಂದಿನ ಇತಿಹಾಸ

ಡಿಸೆಂಬರ್ 06

ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ವಿಧ್ವಂಸಕ ದಾಳಿಯಲ್ಲಿ ಪಾಕಿಸ್ಥಾನದಲ್ಲಿನ ಉಗ್ರಗಾಮಿ ಸಂಘಟನೆಗಳ ಕೈವಾಡದ ಬಗ್ಗೆ ತಳ್ಳಿಹಾಕಲಾಗದಂತಹ ಸಾಕ್ಷ್ಯಾಧಾರಗಳು ಇರುವುದರಿಂದ ಅಲ್ಲಿನ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದರೆ, ಸ್ವತಃ ಕಾರ್ಯಾಚರಣೆಗೆ ಇಳಿಯಬೇಕಾದೀತು ಎಂದು ಅಮೆರಿಕವು ಪಾಕಿಸ್ಥಾನಕ್ಕೆ ತಾಕೀತು ಮಾಡಿತು.

2008: ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ವಿಧ್ವಂಸಕ ದಾಳಿಯಲ್ಲಿ ಪಾಕಿಸ್ಥಾನದಲ್ಲಿನ ಉಗ್ರಗಾಮಿ ಸಂಘಟನೆಗಳ ಕೈವಾಡದ ಬಗ್ಗೆ ತಳ್ಳಿಹಾಕಲಾಗದಂತಹ ಸಾಕ್ಷ್ಯಾಧಾರಗಳು ಇರುವುದರಿಂದ ಅಲ್ಲಿನ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದರೆ, ಸ್ವತಃ ಕಾರ್ಯಾಚರಣೆಗೆ ಇಳಿಯಬೇಕಾದೀತು ಎಂದು ಅಮೆರಿಕವು ಪಾಕಿಸ್ಥಾನಕ್ಕೆ ತಾಕೀತು ಮಾಡಿತು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಅವರು ಇಸ್ಲಾಮಾಬಾದಿಗೆ ನೀಡಿದ್ದ ಭೇಟಿ ಸಂದರ್ಭದಲ್ಲಿ ಈ ಎಚ್ಚರಿಕೆ ನೀಡಿದರು ಎಂದು ಪಾಕಿಸ್ಥಾನದ ಪ್ರಭಾವಿ ದಿನಪತ್ರಿಕೆ 'ಡಾನ್' ವರದಿ ಮಾಡಿತು.

2008: ಮಹಾರಾಷ್ಟ್ರದ ಪಕ್ಷ ನಾಯಕ ನಾರಾಯಣ ರಾಣೆ ಅವರನ್ನು ಕಾಂಗ್ರೆಸ್ ಪಕ್ಷವು ಅಮಾನತುಗೊಳಿಸಿತು. ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದ ರಾಣೆ ತಾವು ಸ್ಪರ್ಧೆಯಲ್ಲಿ ಹಿಂದೆ ಬಿದ್ದಿರುವುದು ಗೊತ್ತಾದಾಗ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಇತರ ಹಲವರ ವಿರುದ್ಧ ಹರಿಹಾಯ್ದಿದ್ಧರು. ಈ ಟೀಕೆಗಳು ಬಂದ ಒಂದು ದಿನದ ಬಳಿಕ ಕಾಂಗ್ರೆಸ್ ಪಕ್ಷವು ಅವರನ್ನು ಅಮಾನತುಗೊಳಿಸವ ಕ್ರಮ ಕೈಗೊಂಡಿತು.

2008: ಅಪಹರಣ ಮತ್ತು ದರೋಡೆ ಪ್ರಕರಣದಲ್ಲಿ ತಪ್ಪಿತಸ್ಥ ಎನಿಸಿದ ಅಮೆರಿಕನ್ ಫುಟ್‌ಬಾಲ್ (ರಗ್ಬಿ) ದಂತಕತೆ ಒ.ಜೆ. ಸಿಂಪ್ಸನ್ ಅವರಿಗೆ ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯ 33 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ತೀರ್ಪು ಪ್ರಕಟಿಸಿದ ಜಿಲ್ಲಾ ನ್ಯಾಯಾಧೀಶರಾದ ಜಾಕೀ ಗ್ಲಾಸ್ ಅವರು ಸಿಂಪ್ಸನ್‌ಗೆ ಕಠಿಣ ಶಿಕ್ಷೆಯನ್ನೇ ವಿಧಿಸಿದರು. ಸಿಂಪನ್ಸ್ 2007ರಲ್ಲಿ ಲಾಸ್ ವೆಗಾಸ್‌ನಲ್ಲಿ ಕ್ರೀಡಾ ಸ್ಮರಣಿಕೆಗಳ ವಿತರಕರಿಬ್ಬರನ್ನು ಅಪಹರಿಸಿ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿದ್ದರು. ಇತರ ಬಂದೂಕುಧಾರಿಗಳು ಕೂಡಾ ಈ ವೇಳೆ ಅವರ ಜೊತೆಗಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಎರಡು ತಿಂಗಳ ಹಿಂದೆ ತೀರ್ಪು ಪ್ರಕಟಿಸಿ ಸಿಂಪ್ಸನ್ ತಪ್ಪಿತಸ್ಥ ಎಂದು ಘೋಷಿಸಿತ್ತು. ಇದೀಗ 61 ರ ಹರೆಯದ ಅವರಿಗೆ ಜೈಲು ಶಿಕ್ಷೆ ವಿಧಿಸಿತು.

2008: ವಿಮಾನಯಾನ ಟರ್ಬೈನ್ ಇಂಧನದ ಬೆಲೆಯನ್ನು ತೈಲ ಮಾರುಕಟ್ಟೆ ಕಂಪೆನಿಗಳು ಕಡಿತಗೊಳಿಸಿರುವುದನ್ನು ಅನುಸರಿಸಿ ಕಿಂಗ್‌ಫಿಶರ್, ಜೆಟ್ ಏರ್‌ವೇಸ್, ಏರ್ ಇಂಡಿಯಾ ಮತ್ತು ಇಂಡಿಗೋ ಸೇರಿದಂತೆ ಎಲ್ಲ ಪ್ರಮುಖ ದೇಶೀಯ ವಿಮಾನಯಾನ ಸಂಸ್ಥೆಗಳು ವಿಮಾನ ಹಾರಾಟಗಳ ಸರ್‌ಚಾರ್ಜ ಕಡಿತಗೊಳಿಸಿದವು. ಇದರಿಂದಾಗಿ ವಿಮಾನಯಾನ ದರ ಅಂದಾಜು 400 ರೂಪಾಯಿಗಳಷ್ಟು ಅಗ್ಗವಾಯಿತು.

2007: ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ಮತಗಟ್ಟೆಯ ಚುನಾವಣಾ ಕರ್ತವ್ಯಗಳಿಗೆ ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿತು. ಈ ಸಂಬಂಧ ದೆಹಲಿ ಹೈಕೋರ್ಟ್ ನೀಡಿದ ತೀರ್ಪನ್ನು ಎತ್ತಿಹಿಡಿದ ನ್ಯಾಯಮೂರ್ತಿಗಳಾದ ಎಸ್.ಬಿ. ಸಿನ್ಹಾ ಮತ್ತು ಎಚ್. ಎಸ್. ಬೇಡಿ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠವು, `ಆದರೆ ರಜೆಯ ಅವಧಿ ಮತ್ತು ಬೋಧನೇತರ ದಿನಗಳಲ್ಲಿ ಮಾತ್ರ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಚುನಾವಣಾ ಕೆಲಸಗಳಿಗೆ ನಿಯೋಜಿಸಬಹುದು' ಎಂದು ಅಭಿಪ್ರಾಯಪಟ್ಟಿತು. ಬೋಧನಾ ಅವಧಿಗಳಲ್ಲಿ ಶಿಕ್ಷಕರನ್ನು ಚುನಾವಣೆ ಕೆಲಸಗಳಿಗೆ ಬಳಸಿಕೊಳ್ಳಬಾರದು. ಆದರೆ ಕಾನೂನಿನಲ್ಲಿ ಅವಕಾಶವಿರುವಂತೆ ಶಿಕ್ಷಕೇತರ ವರ್ಗವನ್ನು ಶಾಲಾ ಕೆಲಸದ ಅವಧಿ ಅಥವಾ ಯಾವುದೇ ಸಮಯದಲ್ಲಾದರೂ ಚುನಾವಣಾ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂದೂ ಪೀಠ ಸ್ಪಷ್ಟಪಡಿಸಿತು. ಲೋಕಸಭೆ, ವಿಧಾನಸಭೆ, ನಗರಾಡಳಿತ, ಗುರುದ್ವಾರ ಮಂಡಳಿ ಮುಂತಾದ ಆಡಳಿತ ಸಂಸ್ಥೆಗಳ ಚುನಾವಣಾ ಕೆಲಸ, ಮತದಾರರ ಪಟ್ಟಿ ಪರಿಷ್ಕರಣೆ, ಪಲ್ಸ್ ಪೋಲಿಯೊ ಕಾರ್ಯಕ್ರಮ, ಜನಸಂಖ್ಯಾ ಗಣತಿ, ಮಲೇರಿಯಾ, ಪರಿಸರ ಮಾಲಿನ್ಯ ಮತ್ತಿತರ ಕ್ಷೇತ್ರಗಳ ಸಮೀಕ್ಷೆ ಇತ್ಯಾದಿ ಕಾರ್ಯಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಲು ಸರ್ಕಾರವು ಸುತ್ತೋಲೆ ಹೊರಡಿಸುತ್ತಿರುವುದನ್ನು ಪ್ರಶ್ನಿಸಿ ಸೇಂಟ್ ಮೇರೀಸ್ ಶಾಲೆಯು ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಇಂತಹ ಕೆಲಸಗಳಿಂದ ಅಪೂರ್ಣ ಬೋಧನೆ, ತರಗತಿಗೆ ವಿದ್ಯಾರ್ಥಿಗಳ ಗೈರು, ಕೆಟ್ಟಫಲಿತಾಂಶ, ಗುಣಮಟ್ಟವಿಲ್ಲದ ಶಿಕ್ಷಣ ಮುಂತಾದ ದುಷ್ಪರಿಣಾಮಗಳನ್ನು ತಡೆಯಲು ಮಧ್ಯಪ್ರವೇಶ ಮಾಡಬೇಕೆಂದು ಅರ್ಜಿದಾರರು ಕೋರಿದ್ದರು.

2007: ವೈರಿ ಕ್ಷಿಪಣಿಗಳನ್ನು ಆಗಸದಲ್ಲೇ ನಾಶ ಪಡಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಒ) ಬಂಗಾಳ ಕೊಲ್ಲಿಯಲ್ಲಿ ದೇಶೀಯವಾಗಿ ನಿರ್ಮಿಸಿದ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು 2ನೇ ಬಾರಿ ಪರೀಕ್ಷೆಗೆ ಒಡ್ಡಿತು. ಈ ಪ್ರಾಯೋಗಿಕ ಪರೀಕ್ಷೆ ಕರಾರುವಾಕ್ಕಾಗಿ ನಡೆದು `ಡಿ ಆರ್ ಡಿ ಒ' ವಿಜ್ಞಾನಿಗಳ ಮುಖದಲ್ಲಿ ಸಂತಸ ಮೂಡಿತು. ಪರೀಕ್ಷೆಯ ಅಂಗವಾಗಿ ಮೊದಲು ಮಾರ್ಪಡಿಸಿದ ಪೃಥ್ವಿ ಕ್ಷಿಪಣಿಯನ್ನು ಬಾಲಸೋರಿನ ಚಂಡಿಪುರದಿಂದ ಹಾರಿಸಲಾಯಿತು. ಅದನ್ನು ಆಗಸದಲ್ಲೇ ನಾಶಪಡಿಸಲು 2 ನಿಮಿಷ 40 ಸೆಕೆಂಡ್ ನಂತರ ಪಕ್ಕದ ಭದ್ರಕ್ ಜಿಲ್ಲೆಯ ವೀಲ್ಹರ್ ದ್ವೀಪದಿಂದ ಮತ್ತೊಂದು ಕ್ಷಿಪಣಿಯನ್ನು (ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ) ಹಾರಿಬಿಡಲಾಯಿತು.

2007: `ಅಕ್ರಮ- ಸಕ್ರಮ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಬದಲಿಗೆ ಡಿಸೆಂಬರ್ 10ರಂದು ಹೈಕೋರ್ಟ್ ನೀಡುವ ನಿರ್ದೇಶನವನ್ನು ಪಾಲಿಸುವುದು' ಎಂದು ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಸರ್ಕಾರದ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಹೇಳಿದರು. ಇದರಿಂದಾಗಿ ಸಕ್ರಮ ಚೆಂಡು ಮತ್ತೆ ನ್ಯಾಯಾಲಯಕ್ಕೆ ಹೊರಳಿದಂತಾಯಿತು.

2007: ರಕ್ತ ಕ್ಯಾನ್ಸರ್ ರೋಗಿಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ನೂತನ ಯೋಜನೆಯನ್ನು `ಡಾಬರ್ ಆಂಕ್ವೆಸ್ಟ್' ದೇಶದಲ್ಲಿಯೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಪರಿಚಯಿಸಿತು. ಸಂಸ್ಥೆಯು ಆಯ್ದ ರೋಗಿಗಳಿಗೆ ನೀಡಲಾಗುವ ಚಿಕಿತ್ಸೆಯ ಉಸ್ತುವಾರಿ ವಹಿಸಿಕೊಳ್ಳುವುದು. ಆದರೆ ಯೋಜನೆಯನ್ನು ಮೂರನೇ ಸಂಸ್ಥೆ ಜಾರಿ ತರಲಿದ್ದು ಆ ಸಂಸ್ಥೆಯೇ ರೋಗಿಗಳನ್ನು ಗುರುತಿಸುವುದು. ಪ್ರಸ್ತುತ ರೋಗ ಪತ್ತೆಗೆ ಸಂಬಂಧಿಸಿದ ಎಲ್ಲ ನಾಲ್ಕು ಪರೀಕ್ಷೆಗಳಿಗೆ ಸುಮಾರು 24 ಸಾವಿರ ರೂಪಾಯಿ ವೆಚ್ಚವಾಗುತ್ತಿದ್ದು, ಈ ಯೋಜನೆಯಡಿ 10,200 ರೂಪಾಯಿಗಳಿಗೆ ಎಲ್ಲ ನಾಲ್ಕೂ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದು.

2007: ಧರ್ಮಪುರಿಯಲ್ಲಿ 2000ರ ಫೆಬ್ರುವರಿಯಲ್ಲಿ ಬಸ್ಸಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣಾಡಿಎಂಕೆ ಪಕ್ಷದ ಮೂವರು ಕಾರ್ಯಕರ್ತರಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಮರಣ ದಂಡನೆಯನ್ನು ಮದ್ರಾಸ್ ಹೈಕೋರ್ಟ್ ಕಾಯಂಗೊಳಿಸಿತು. ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಬಸ್ಸಿಗೆ 2000ದ ಫೆಬ್ರುವರಿಯಲ್ಲಿ ಅಣ್ಣಾಡಿಎಂಕೆ ಕಾರ್ಯಕರ್ತರು ಧರ್ಮಪುರಿಯಲ್ಲಿ ಬೆಂಕಿ ಹಚ್ಚಿದ್ದರು. ಪ್ಲೆಸೆಂಟ್ ಸ್ಟೇ ಹೋಟೆಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ನಾಯಕಿ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ವಿಶೇಷ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿ ಕಾರ್ಯಕರ್ತರು ಬಸ್ಸಿಗೆ ಬೆಂಕಿ ಹಚ್ಚಿದ್ದರು. ಆಗ ವಿಶ್ವ ವಿದ್ಯಾಲಯದ ಮೂವರು ವಿದ್ಯಾರ್ಥಿನಿಯರು ಸಜೀವ ದಹನ ಗೊಂಡಿದ್ದರು.

2007: ಜರ್ಮನಿ ಮೂಲದ ವಿಶ್ವದ ಅತಿ ದೊಡ್ಡ ಖಾಸಗಿ ಕೈಗಾರಿಕಾ ಸಂಸ್ಥೆ ಬಾಷ್, ಭಾರತದಲ್ಲಿನ ತನ್ನ ವಿವಿಧ ಕಾರ್ಯಾಚರಣೆಗಳಲ್ಲಿ ರೂ 850 ಕೋಟಿಗಳಷ್ಟು ಹೆಚ್ಚುವರಿ ಬಂಡವಾಳ ಹೂಡಲು ನಿರ್ಧರಿಸಿತು. ಇದರಿಂದ ಭಾರತದಲ್ಲಿನ ಬಾಷ್ ನ ಒಟ್ಟು ಹೂಡಿಕೆಯು 2010ನೇ ಇಸ್ವಿ ಹೊತ್ತಿಗೆ ರೂ 2,650 ಕೋಟಿಗಳಷ್ಟಾಗಲಿದೆ. ಮೋಟಾರ್ ಇಂಡಸ್ಟ್ರೀಸ್ ಕಂಪೆನಿಯು ಲಿಮಿಟೆಡ್ (ಮೈಕೊ) ಹೆಸರನ್ನು ಬಾಷ್ ಲಿಮಿಟೆಡ್ ಎಂದು ಬದಲಾಯಿಸಲು ಮೈಕೊದ ನಿರ್ದೇಶಕ ಮಂಡಳಿಯು ನಿರ್ಧರಿಸಿತು.

2007: ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನದ ಬಳಿಕ ತಾಂತ್ರಿಕ ಕ್ಷೇತ್ರದಲ್ಲಿ ಮುಂದಿನ ದಿನಗಳು ನ್ಯಾನೊ ತಂತ್ರಜ್ಞಾನದ್ದಾಗಿದ್ದು, ಇದಕ್ಕೆ ಸರ್ಕಾರ, ಸಮಾಜ ಸಜ್ಜಾಗಬೇಕು ಎಂಬ ಸ್ಪಷ್ಟ ಸಂದೇಶದೊಂದಿಗೆ ದೇಶದ ಪ್ರಥಮ ನ್ಯಾನೊ ಸಮ್ಮೇಳನ ಬೆಂಗಳೂರಿನಲ್ಲಿ ಆರಂಭವಾಯಿತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಸಮ್ಮೇಳನವನ್ನು ಉದ್ಘಾಟಿಸಿದರು.

2006: ರಸ್ತೆಬದಿ ಜಗಳ ಸಾವಿನಲ್ಲಿ ಅಂತ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಕ್ರಿಕೆಟಿಗ, ಬಿಜೆಪಿ ಮುಖಂಡ ನವಜೋತ್ಸಿಂಗ್ ಸಿಧು ಅವರಿಗೆ ಪಂಜಾಬ್- ಹರಿಯಾಣ ಹೈಕೋರ್ಟ್ ಮೂರು ವರ್ಷಗಳ ಕಠಿಣ ಸಜೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿತು. ಮತ್ತೊಬ್ಬ ಆರೋಪಿ ರೂಪಿಂದರ್ ಸಿಂಗ್ ಸಂಧು ಅವರಿಗೂ ಇದೇ ಶಿಕ್ಷೆ ವಿಧಿಸಲಾಯಿತು.

2006: ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಸಚಿವರು ಸೇರಿದಂತೆ ಜನ ಪ್ರತಿನಿಧಿಗಳನ್ನು ಕಾನೂನು ವಿಚಾರಣೆಗೆ ಗುರಿಪಡಿಸಲು ಪೂರ್ವಾನುಮತಿಯ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು.

2006: ಜೈನ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಿದ ಹಿರಿಯ ಸಾಹಿತಿ ಎಸ್. ಬಿ. ವಸಂತರಾಜಯ್ಯ ಅವರನ್ನು 2006-07ರ ಸಾಲಿನ `ಚಾವುಂಡರಾಯ ಪ್ರಶಸ್ತಿ'ಗೆ ಕನ್ನಡ ಸಾಹಿತ್ಯ ಪರಿಷತ್ ಆಯ್ಕೆ ಮಾಡಿತು. 15ಕ್ಕೂ ಅಧಿಕ ಜೈನ ಸಾಹಿತ್ಯ ಕೃತಿಗಳನ್ನು ಅವರು ರಚಿಸಿದ್ದಾರೆ.

2006: ಫಿಜಿಯಲ್ಲಿ ಕ್ಷಿಪ್ರಕ್ರಾಂತಿ ನಡೆಸಿದ್ದ ಸೇನಾ ದಂಡನಾಯಕ ಫ್ರಾಂಕ್ ಬೈನಿಮರಮ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಷಿ, ಸಂಸತ್ ವಿಸರ್ಜಿಸುವ ಮೂಲಕ ತಮ್ಮ ಹಿಡಿತ ಭದ್ರಗೊಳಿಸಿದರು.

2005: ರಾಷ್ಟ್ರಧ್ವಜವನ್ನು ವಸ್ತ್ರ ಮತ್ತು ಸಮವಸ್ತ್ರವಾಗಿ ಗೌರವಾರ್ಹ ರೂಪದಲ್ಲಿ ಧರಿಸಲು ಅವಕಾಶ ನೀಡುವ ರಾಷ್ಟ್ರೀಯ ಗೌರವ (ತಿದ್ದುಪಡಿ) ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿತು. ರಾಷ್ಟ್ರಧ್ವಜವನ್ನು ಇನ್ನು ಮುಂದೆ ಉಡುಪು, ಸಮವಸ್ತ್ರದ ಮೇಲೆ ಗೌರವಯುತ ರೀತಿಯಲ್ಲಿ ಬಳಸಿಕೊಳ್ಳಬಹುದು. ಆದರೆ ರಾಷ್ಟ್ರಧ್ವಜವನ್ನು ಸೊಂಟದ ಕೆಳಗೆ ಹಾಗೂ ಕುಷನ್, ಕರವಸ್ತ್ರಗಳು, ನ್ಯಾಪ್ ಕಿನ್, ಒಳ ಉಡುಪು ಮುಂತಾದ ನಿತ್ಯಬಳಕೆಯ ವಸ್ತುಗಳ ಮೇಲೆ ಬಳಸುವಂತಿಲ್ಲ. ಧ್ವಜದ ಮೇಲೆ ಕಸೂತಿ ಅಥವಾ ಮುದ್ರಣ ಮಾಡುವಂತಿಲ್ಲ. ಗೃಹಖಾತೆಯ ರಾಜ್ಯಸಚಿವ ಮಾಣಿಕ್ ರಾವ್ ಗವಿಟ್ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು.

2005: ಸಿಲಿಕಾನ್ ಲೋಹದ ಅಸ್ಪಟಿಕ ರೂಪ (ಎಮಾರ್ಫಸ್ ಸಿಲಿಕಾನ್) ಪತ್ತೆ ಕ್ಷೇತ್ರದಲ್ಲಿ ಹೆಸರು ಮಾಡಿದ ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ಸುಬೇಂದು ಗುಹಾ ಅವರು ಇಂಧನ ಕ್ಷೇತ್ರದ ಪ್ರತಿಷ್ಠಿತ 2005ನೇ ಸಾಲಿನ ಜಾಗತಿಕ ತಂತ್ರಜ್ಞಾನ ಪ್ರಶಸ್ತಿಗೆ ಆಯ್ಕೆಯಾದರು. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆದ ವಿಶ್ವತಂತ್ರಜ್ಞಾನ ಶೃಂಗಸಭೆಯಲ್ಲಿ ಈ ಪ್ರಶಸ್ತಿಯನ್ನು ಪ್ರಕಟಿಸಲಾಯಿತು.

2005: ಕೇಂದ್ರ ಸಂಪುಟಕ್ಕೆ ತಮ್ಮ ರಾಜೀನಾಮೆ ನೀಡುವ ನಿರ್ಧಾರವನ್ನು ಕೇಂದ್ರ ದ ಖಾತಾ ರಹಿತ ಸಚಿವ ಕೆ. ನಟವರ್ಸಿಂಗ್ ಅವರು ನವದೆಹಲಿಯಲ್ಲಿ ನಡುರಾತ್ರಿ ಪ್ರಕಟಿಸಿದರು. ವೋಲ್ಕರ್ ವರದಿ ಹಿನ್ನೆಲೆಯಲ್ಲಿ ಭುಗಿಲೆದ್ದ ಭಾರೀ ವಿವಾದದ ಹಿನ್ನೆಲೆಯಲ್ಲಿ ಇದಕ್ಕೆ ಮೊದಲು ಅವರು ವಿದೇಶಾಂಗ ಖಾತೆಯನ್ನು ಕಳೆದುಕೊಂಡಿದ್ದರು. ಡಿಸೆಂಬರ್ 5 ರ ರಾತ್ರಿ ಕಾಂಗ್ರೆಸ್ ಪಕ್ಷದ ಚಾಲನಾ ಸಮಿತಿಯಿಂದ ಕಿತ್ತು ಹಾಕಲಾಯಿತು. ಕ್ರೊಯೇಷಿಯಾ ರಾಯಭಾರಿಯಾಗಿದ್ದ ಅನಿಲ್ ಮಥೆರಾನಿ ಅವರು ಆಹಾರಕ್ಕಾಗಿ ತೈಲ ಪ್ರಕರಣದ ಮುಖ್ಯ ಫಲಾನುಭವಿ ನಟವರ್ ಸಿಂಗ್ ಎಂಬುದಾಗಿ ಹೇಳಿದ ಹಿನ್ನೆಲೆಯಲ್ಲಿ ನಟವರ್ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದು ವಿರೋಧಪಕ್ಷಗಳು ಸಂಸತ್ತಿನ ಕಲಾಪಗಳನ್ನು ಸ್ಥಗಿತಗೊಳಿಸುತ್ತಾ ಬಂದಿದ್ದವು.

2005: ಇರಾನಿನ ಟೆಹರಾನಿನಲ್ಲಿ ಸೇನೆಯ ಸರಕುಸಾಗಣೆ ವಿಮಾನ 10 ಅಂತಸ್ತಿನ ಕಟ್ಟಡಕ್ಕೆ ಅಪ್ಪಳಿಸಿ 119 ಜನ ಅಸುನೀಗಿದರು. ಪತ್ರಕರ್ತರೇ ಅಧಿಕ ಸಂಖ್ಯೆಯಲ್ಲಿದ್ದ ವಿಮಾನದೊಳಗಿನ 94 ಮಂದಿ ಸತ್ತರೆ, ಕಟ್ಟಡದಲ್ಲಿದ್ದ 25 ಮಂದಿ ಮೃತರಾಗಿ 80ಕ್ಕೂ ಹೆಚ್ಚು ಜನ ಗಾಯಗೊಂಡರು. ಪತ್ರಕರ್ತರು ಬಂಡಾ ಅಬ್ಬಾಸ್ ಪಟ್ಟಣಕ್ಕೆ ಸೇನಾ ಕವಾಯತು ವರದಿಗಾಗಿ ಹೊರಟಿದ್ದರು.

2005: ಪರಿಸರ ಶಿಕ್ಷಣಕ್ಕೆ ಆಂದೋಲನದ ರೂಪ ನೀಡಿದ ಮೈಸೂರಿನ ಪಕ್ಷಿ ತಜ್ಞ ಕೆ. ಮನು ಅವರಿಗೆ ಹಸಿರು ಶಿಕ್ಷಕ ಪ್ರಶಸ್ತಿ ಘೋಷಿಸಲಾಯಿತು. ಪ್ರತಿಷ್ಠಿತ ಸ್ಯಾಂಚುರಿ ಏಷ್ಯಾ ಪತ್ರಿಕೆ ಮತ್ತು ಎಬಿಎನ್ ಆಮ್ರೊ ಬ್ಯಾಂಕಿನ ಸಹಯೋಗದಲ್ಲಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ.

2005: ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಹಿಂದೂಸೇನೆ ಉದಯ. ಭಜರಂಗದಳದಿಂದ ಶಿವಸೇನೆ ಸೇರಿ ಅಲ್ಲಿಂದಲೂ ಹೊರಬಂದ ಪ್ರಮೋದ್ ಮುತಾಲಿಕ್ ಈ ಸೇನೆಯ ಅಧ್ಯಕ್ಷರಾಗಿದ್ದು ಗಾಜಿನಮನೆಯಲ್ಲಿ ಹೊಸ ಪಕ್ಷದ ಉದಯವನ್ನು ಘೋಷಿಸಿದರು.

2001: ಕಾರುಗಳಲ್ಲಿ ಮುಂಭಾಗದಲ್ಲಿ ಕುಳಿತು ಪ್ರಯಾಣ ಮಾಡುವವರು ಸೀಟ್ ಬೆಲ್ಟ್ಗಳನ್ನು ಧರಿಸುವುದು ಕಡ್ಡಾಯ ಎಂದು ಭಾರತದ ಸುಪ್ರೀಂ ಕೋರ್ಟ್ ತೀರ್ಪು ನೀಡಿತು.

1992: ಉತ್ತರ ಪ್ರದೇಶದ ಅಯೋಧ್ಯೆಯ ಬಾಬರಿ ಮಸೀದಿ- ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ತೀವ್ರಗೊಳ್ಳುತ್ತಾ ನಡೆದ ಸರಣಿ ಘಟನೆಗಳು ಈ ದಿನ ಅಯೋಧ್ಯೆಯಲ್ಲಿ ವಿವಾದಿತ ರಾಮಜನ್ಮಭೂಮಿ- ಬಾಬರಿ ಮಸೀದಿ ಕಟ್ಟಡ ಧ್ವಂಸದೊಂದಿಗೆ ಪರ್ಯವಸಾನಗೊಂಡವು.

1956: ಭಾರತೀಯ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷ ಭೀಮರಾವ್ ರಾಮ್ ಜಿ ಅಂಬೇಡ್ಕರ್ ತಮ್ಮ 65ನೇ ವಯಸ್ಸಿನಲ್ಲಿ ನಿಧನರಾದರು. ಇವರು ಭಾರತ ಸರ್ಕಾರದ ಪ್ರಥಮ ಕಾನೂನು ಸಚಿವರಾಗಿದ್ದರು. ಈ ದಿನವನ್ನು ಮಹಾರಾಷ್ಟ್ರದಲ್ಲಿ `ಮಹಾಪರಿನಿವರ್ಾಣ ದಿನ' ಆಗಿ ಆಚರಿಸಲಾಗುತ್ತದೆ.

1955: ಸಾಹಿತಿ ಪೂರ್ಣಿಮಾ ರಾಮಣ್ಣ ಜನನ.

1949: ಸಾಹಿತಿ ಶಿವಳ್ಳಿ ಕೆಂಪೇಗೌಡ ಜನನ.

1947: ಸಾಹಿತಿ ಡಾ. ಡಿ.ಎಸ್. ಜಯಪ್ಪ ಗೌಡರ ಜನನ.

1934: ಪ್ರಾಧ್ಯಾಪಕ, ಜಾನಪದ ತಜ್ಞ, ಮಹಾದೇವಯ್ಯ ಅವರು ರುದ್ರಯ್ಯ- ಹೊನ್ನಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ಜನಿಸಿದರು.

1898: ಜರ್ಮನ್ ಸಂಜಾತ ಛಾಯಾಗ್ರಾಹಕ ಆಲ್ ಫ್ರೆಡ್ ಐಸೆನ್ ಸ್ಟೇಟ್ (1898-1995) ಹುಟ್ಟಿದ ದಿನ. `ಲೈಫ್' ಪತ್ರಿಕೆಗೆ ಇವರು ಒದಗಿಸುತ್ತಿದ್ದ ಛಾಯಾಚಿತ್ರಗಳು ಅಮೆರಿಕಾದ `ಫೊಟೋ ಜರ್ನಲಿಸಂ'ನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು.

1877: ಅಮೆರಿಕನ್ ಸಂಶೋಧಕ ಥಾಮಸ್ ಆಲ್ವಾ ಎಡಿಸನ್ ಅವರಿಂದ ಮೊತ್ತ ಮೊದಲ ಧ್ವನಿ ಮುದ್ರಣ ನಡೆಯಿತು. ನ್ಯೂ ಜೆರ್ಸಿಯ ವೆಸ್ಟ್ ಆರೆಂಜಿನಲ್ಲಿ ನಡೆದ ಪ್ರದರ್ಶನದಲ್ಲಿ ಎಡಿಸನ್ ಫೋನೋಗ್ರಾಫ್ ಎದುರು `ಮೇರಿ ಹ್ಯಾಡ್ ಎ ಲಿಟ್ಲ್ ಲ್ಯಾಂಬ್' ಹಾಡಿದಾಗ ಅದು ಮುದ್ರಣಗೊಂಡು ನಂತರ ಪುನಃ ಆಲಿಸಲು ಸಾಧ್ಯವಾಯಿತು.

1823: ಈ ದಿನ ಜರ್ಮನ್ ಭಾಷಾ ತಜ್ಞ ಮ್ಯಾಕ್ಸ್ ಮುಲ್ಲರ್ (1823-1900) ಜನ್ಮದಿನ. `ದಿ ಸೇಕ್ರೆಡ್ ಬುಕ್ಸ್ ಆಫ್ ಈಸ್ಟ್' ನ್ನು ಸಂಪಾದಿಸಿದ್ದು ಇವರ ಮಹತ್ತರ ಸಾಧನೆ. `ಋಗ್ವೇದ' ಸಂಪಾದಿಸಿದ ಹೆಗ್ಗಳಿಕೆಯೂ ಇವರಿಗಿದೆ.

Friday 1 January 2010

ಇಂದಿನ ಇತಿಹಾಸ History Today ಡಿಸೆಂಬರ್ 05

ಇಂದಿನ ಇತಿಹಾಸ

ಡಿಸೆಂಬರ್ 05

ಮಹಾರಾಷ್ಟ್ರ ಶಾಸಕಾಂಗ ಪಕ್ಷದ ನಾಯಕನ ಹುದ್ದೆಗೆ ಅಶೋಕ್ ಚವಾಣ್ ಅವರನ್ನು ಆಯ್ಕೆ ಮಾಡಿದ ವಿಚಾರವನ್ನು ಹಿರಿಯ ನಾಯಕ ಪ್ರಣವ್ ಮುಖರ್ಜಿ ಅಧಿಕೃತವಾಗಿ ನವದೆಹಲಿಯಲ್ಲಿ ಪ್ರಕಟಿಸಿದರು. ಉಪ ಮುಖ್ಯಮಂತ್ರಿಯಾಗಿ ಎನ್‌ಸಿಪಿಯ ಛಗನ್ ಭುಜಬಲ್ ಅವರು ಆಯ್ಕೆಯಾದರು.

2008: ಮುಂಬೈ ಮೇಲೆ ನಡೆದ ಉಗ್ರರ ದಾಳಿಯ ತನಿಖೆಯಲ್ಲಿ ಪಾಕಿಸ್ಥಾನ ಅಸಹಕಾರ ತೋರಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಭಾರತ ನಿರ್ಧರಿಸಿತು. ಮುಂಬೈ ಮೇಲಿನ ದಾಳಿಯ ಸಂಚು ರೂಪಿಸಿ ಪ್ರಚೋದನೆ ನೀಡಿದ್ದಾರೆ ಎನ್ನಲಾದ ವ್ಯಕ್ತಿಗಳು ಹಾಗೂ ಈ ಹಿಂದೆ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ್ದಾರೆ ಎನ್ನಲಾದ ಉಗ್ರರು ಹಾಗೂ ಭೂಗತ ಪಾತಕಿಗಳನ್ನು ಹಸ್ತಾಂತರಿಸುವಂತೆ ಭಾರತ ಮಾಡಿಕೊಂಡ ಮನವಿಗೆ ಪಾಕಿಸ್ಥಾನ ಉತ್ತರಿಸದ ಕಾರಣ ಹಾಗೂ ತಪ್ಪಿತಸ್ಥರನ್ನು ತನ್ನ ನೆಲದಲ್ಲಿಯೇ ಶಿಕ್ಷಿಸುವುದಾಗಿ ಪಾಕ್ ಸರ್ಕಾರ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಭಾರತ ಈ ನಿರ್ಧಾರ ಕೈಗೊಂಡಿತು.

2008: ಮಹಾರಾಷ್ಟ್ರ ಶಾಸಕಾಂಗ ಪಕ್ಷದ ನಾಯಕನ ಹುದ್ದೆಗೆ ಅಶೋಕ್ ಚವಾಣ್ ಅವರನ್ನು ಆಯ್ಕೆ ಮಾಡಿದ ವಿಚಾರವನ್ನು ಹಿರಿಯ ನಾಯಕ ಪ್ರಣವ್ ಮುಖರ್ಜಿ ಅಧಿಕೃತವಾಗಿ ನವದೆಹಲಿಯಲ್ಲಿ ಪ್ರಕಟಿಸಿದರು. ಉಪ ಮುಖ್ಯಮಂತ್ರಿಯಾಗಿ ಎನ್‌ಸಿಪಿಯ ಛಗನ್ ಭುಜಬಲ್ ಅವರು ಆಯ್ಕೆಯಾದರು. 50 ವರ್ಷದ ಅಶೋಕ್ ಚವಾಣ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರಾಗಿದ್ದ ದಿವಂಗತ ಎಸ್.ಬಿ. ಚವಾಣ್ ಅವರ ಪುತ್ರ.

2008: ಬೈಕ್ ಹ್ಯಾಂಡಲ್ ಹಿಡಿಯದೇ ಬಾಗಲಕೋಟೆಯಿಂದ ಬೆಂಗಳೂರಿನವರೆಗೆ ಪ್ರಯಾಣಿಸುವ ಮೂಲಕ ಇಳಕಲ್ಲಿನ ಈರಣ್ಣ ಜಿ. ಕುಂದರಗಿಮಠ ವಿಶಿಷ್ಟ ಸಾಧನೆ ಮಾಡಿದರು. ಒಟ್ಟು 510 ಕಿ. ಮೀ ದೂರದ ಪ್ರಯಾಣವನ್ನು ಕೇವಲ 11 ಗಂಟೆಯಲ್ಲಿ ಕ್ರಮಿಸಿ ವಿಭಿನ್ನ ರೀತಿಯ ಬೈಕ್ ಸಾಹಸವನ್ನು ಮೆರೆದರು. 'ಬೆಳಿಗ್ಗೆ ಬಾಗಲಕೋಟೆಯಿಂದ ಪ್ರಯಾಣ ಆರಂಭಿಸಿ ರಾತ್ರಿ ವೇಳೆಗೆ ಬೆಂಗಳೂರಿಗೆ ತಲುಪಿದೆ. ಗಂಟೆಗೆ 80 ಕಿ.ಮೀ ವೇಗದಲ್ಲಿ ಬೈಕ್ ಓಡಿಸಿದ ನನಗೆ ನಿರೀಕ್ಷಿತ ಗುರಿ ಸಾಧಿಸಿದರ ಬಗ್ಗೆ ಸಂತಸವಿದೆ' ಎಂದು ಈರಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

2008: ಪಾಕಿಸ್ಥಾನದ ಪೇಶಾವರದ ಷಿಯಾ ಪ್ರಾರ್ಥನಾ ಮಂದಿರವೊಂದರಲ್ಲಿ ಪ್ರಬಲ ಬಾಂಬ್ ಸ್ಫೋಟಿಸಿ 26 ಜನ ಬಲಿಯಾಗಿ 95ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ನಡೆಯಿತು. ನಗರದ ಇಕ್ಕಟ್ಟಾದ ಕುಚಾ ರಿಸಾಲ್ದಾರ್ ಪ್ರದೇಶದ ಇಮಾಮ್ ದರ್ಗಾದ ಸಮೀಪ ವಾಹನವೊಂದರಲ್ಲಿ ಬಾಂಬ್ ಹುದುಗಿಸಿ ಇಡಲಾಗಿತ್ತು.

2008: ಗುಲ್ಬರ್ಗದ 13ರ ಹರೆಯದ ಬಾಲೆ ಸ್ಫೂರ್ತಿ ಜೋಶಿ, ಅಂತಾರಾಷ್ಟ್ರೀಯ ಮಟ್ಟದ ಯುಸಿ ಮಾಸ್ ಅಬ್ಯಾಕಸ್ ಹಾಗೂ ಮೆಂಟಲ್ ಅರಿಥ್‌ಮ್ಯಾಟಿಕ್ ಸ್ಪರ್ಧೆಯಲ್ಲಿ ಚಾಂಪಿಯನ್‌ಶಿಪ್ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಸಾಧನೆ ಮಾಡಿದರು. 'ಮಲೇಷ್ಯಾದ ಕೌಲಾಲಂಪುರದಲ್ಲಿ ಈ ಸ್ಪರ್ಧೆ ನಡೆಯಿತು. ಕೇವಲ ಎಂಟು ನಿಮಿಷದಲ್ಲಿ ಗಣಿತದ 200 ಲೆಕ್ಕಗಳನ್ನು ಬಿಡಿಸಬೇಕಿತ್ತು. ಎಲ್ಲ ಸಮಸ್ಯೆಗಳನ್ನು ಬಿಡಿಸಿ ಒಟ್ಟು 300 ಅಂಕಗಳ ಪೈಕಿ 295 ಅಂಕ ಪಡೆದು ಚಾಂಪಿಯನ್ ಆದೆ' ಎಂದು ಸ್ಫೂರ್ತಿ ಹೆಮ್ಮೆಯಿಂದ ನುಡಿದರು.

2007: ಜಗತ್ತಿನಾದ್ಯಂತ ಎಲ್ಲರ ಗಮನ ಸೆಳೆದು ಆಕರ್ಷಣೆಯ ಕೇಂದ್ರವಾದ ಲಂಡನ್ನಿನ ಸ್ವಾಮಿ ನಾರಾಯಣ ದೇಗುಲವು ಇಂಗ್ಲೆಂಡಿನ `ಹೆಮ್ಮೆಯ ತಾಣ' ಪ್ರಶಸ್ತಿ ಪಡೆಯಿತು. ಆನ್ ಲೈನ್ ಮತದಾನದ ಮೂಲಕ ಈ ಆಯ್ಕೆ ನಡೆದಿದ್ದು, ಫಲಿತಾಂಶಗಳನ್ನು ಈದಿನ ಪ್ರಕಟಿಸಲಾಯಿತು. ಯೂರೋಪಿನಲ್ಲಿ ನಿರ್ಮಾಣವಾದ ಮೊದಲ ಸಾಂಪ್ರದಾಯಿಕ ಹಿಂದೂ ದೇಗುಲವಿದು. ಸ್ವಾಮಿ ನಾರಾಯಣ ದೇಗುಲವನ್ನು ತಮ್ಮ ಹೆಮ್ಮೆಯ ತಾಣವೆಂದು ಆನ್ ಲೈನ್ ಮತದಾನದಲ್ಲಿ ಭಾಗವಹಿಸಿದ್ದ ಬಹುತೇಕ ಲಂಡನ್ ನಿವಾಸಿಗಳು ಒಪ್ಪಿದರು. ರಾಷ್ಟ್ರೀಯ ಮತದಾನದಲ್ಲೂ ಈ ದೇಗುಲಕ್ಕೆ ಮೊದಲ ಸ್ಥಾನ ದೊರಕಿತು.

2007: ರಾಮಜನ್ಮಭೂಮಿ- ಬಾಬ್ರಿ ಮಸೀದಿ ಧ್ವಂಸವಾದ 15 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪ್ರಕರಣದ ವಿಚಾರಣೆ ಉತ್ತರಪ್ರದೇಶದ ರಾಯ್ ಬರೇಲಿಯ ಸಿಬಿಐ ನ್ಯಾಯಾಲಯದಲ್ಲಿ ಈದಿನ ಆರಂಭವಾಯಿತು. ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ, ಬಿಜೆಪಿ ನಾಯಕರಾದ ಮುರಳಿ ಮನೋಹರ ಜೋಷಿ, ವಿನಯ್ ಕಟಿಯಾರ್, ಭಾರತೀಯ ಜನಶಕ್ತಿ ಪಕ್ಷದ ಮುಖ್ಯಸ್ಥೆ ಉಮಾ ಭಾರತಿ, ವಿ ಎಚ್ ಪಿ ನಾಯಕರಾದ ಅಶೋಕ ಸಿಂಘಾಲ್, ಗಿರಿರಾಜ ಕಿಶೋರ್, ವಿಷ್ಣು ದಾಲ್ಮಿಯಾ ಮತ್ತು ಸಾಧ್ವಿ ಋತಂಬರಾ ಅವರನ್ನು ಆರೋಪಿಗಳಾಗಿ ಹೆಸರಿಸಲಾಯಿತು. ಇವರೆಲ್ಲರೂ ಘಟನಾ ಸ್ಥಳದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎಂದು ರಾಮ ಜನ್ಮಭೂಮಿ ಪೊಲೀಸ್ ಠಾಣೆಯ ಆಗಿನ ಮುನ್ಷಿ (ಈಗ ಸಹಾಯಕ ಪೊಲೀಸ್ ಇನ್ ಸ್ಪೆಕ್ಟರ್) ಹನುಮಾನ್ ಪ್ರಸಾದ್ ದಾಖಲಿಸಿದ್ದ ಎಫ್ ಐ ಆರ್ ನ್ನು ಪರಿಶೀಲಿಸಲಾಯಿತು. ತಾವೇ ಈ ವರದಿ ತಯಾರಿಸಿದ್ದಾಗಿ ಹನುಮಾನ್ ಪ್ರಸಾದ್ ಒಪ್ಪಿಕೊಂಡರು. ಆದರೆ ಅವರನ್ನು ಪ್ರಶ್ನಿಸಲು ಸಿಬಿಐಗೆ ನ್ಯಾಯಾಲಯ ಅವಕಾಶ ನೀಡಲಿಲ್ಲ.

2007: ದೇಶದ ಸಂಸತ್ತಿಗೆ ಆಯ್ಕೆಯಾದ `ಮೊದಲ ದಂಪತಿ' ಎಂಬ ಹೆಗ್ಗಳಿಕೆಗೆ ಪಾತ್ರರಾದ ಜೋಕಿಂ ಮತ್ತು ವಯಲೆಟ್ ಆಳ್ವ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಬಿಪಿನ್ ಚಂದ್ರಪಾಲ್ ಅವರ ಭಾವಚಿತ್ರವನ್ನು ಸಂಸತ್ ಸಭಾಂಗಣದಲ್ಲಿ ಈದಿನ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅನಾವರಣಗೊಳಿಸಿದರು. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಿರೋಧ ಪಕ್ಷದ ನಾಯಕ ಎಲ್. ಕೆ. ಅಡ್ವಾಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆಳ್ವ ದಂಪತಿಯ ಭಾವಚಿತ್ರ ರಚಿಸಿದ ಕಲಾವಿದ ಸುಹಾಸ್ ಬಹುಳ್ಕರ್ ಅವರನ್ನು ಪ್ರಧಾನಿ ಸಿಂಗ್ ಹಾಗೂ ಬಿಪಿನ್ ಚಂದ್ರಪಾಲ್ ಅವರ ಭಾವಚಿತ್ರ ರಚಿಸಿದ ಕಲಾವಿದ ಪ್ರೊ. ಜಾಗರ್ ಜಾಹೂರ್ ಅವರನ್ನು ಉಪರಾಷ್ಟ್ರಪತಿ ಅನ್ಸಾರಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಆಳ್ವ ದಂಪತಿ ಮತ್ತು ಬಿಪಿನ್ ಅವರ ಪರಿಚಯವನ್ನು ಒಳಗೊಂಡ ಹಿಂದಿ ಮತ್ತು ಇಂಗ್ಲಿಷ್ ಭಾಷಾ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

2007: ಡಾ.ಶಿವರಾಮ ಕಾರಂತ ಅವರು ರಚಿಸಿರುವ ಏಳು ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶನ ಮಾಡುವ ಮುನ್ನ ಅವರ ಉತ್ತರಾಧಿಕಾರಿ ಬಿ.ಮಾಲಿನಿ ಮಲ್ಯ ಅವರಿಂದ ಹಕ್ಕು ಸ್ವಾಮ್ಯ (ಕಾಪಿ ರೈಟ್) ಪಡೆಯುವುದು ಅಗತ್ಯ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿತು. ಹಕ್ಕು ಸ್ವಾಮ್ಯ ಪಡೆಯುವುದು ಅತ್ಯಗತ್ಯ ಎಂದು 2003ರ ನವೆಂಬರಿನಲ್ಲಿ ಉಡುಪಿಯ ಜಿಲ್ಲಾ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ಹಾಗೂ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜುಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ವಿ.ಜಗನ್ನಾಥನ್ ವಜಾ ಮಾಡಿದರು. (ಭೀಷ್ಮ ವಿಜಯ, ನಳ - ದಮಯಂತಿ (ಕನಕಾಂಗಿ ಕಲ್ಯಾಣ), ಅಭಿಮನ್ಯು ವಧೆ, ಚಿತ್ರಾಂಗದಾ, ಬಬ್ರುವಾಹನ ಕಾಳಗ, ಪಂಚವಟಿ ಹಾಗೂ ಗಯ ಚರಿತಾ ಇವು ಈ ಏಳು ಯಕ್ಷಗಾನ ಪ್ರಸಂಗಗಳು.) ಯಕ್ಷಗಾನವೆಂಬುದು ಬಹು ಪುರಾತನ ಕಲೆ. ಶತಮಾನದ ಇತಿಹಾಸವುಳ್ಳ ಇಂತಹ ಕಲೆಗೆ ಹಕ್ಕು ಸ್ವಾಮ್ಯ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಅನೂರ್ಜಿತಗೊಳಿಸುವಂತೆ ಅವರು ಕೋರಿದ್ದರು. ಮಾಲಿನಿ ಮಲ್ಯ ಅವರ ಪರ ವಾದಿಸಿದ ವಕೀಲ ಟಿ.ಎನ್. ರಘುಪತಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಬೇರೆಯವರು ರಚಿಸಿರುವ ಇದೇ ಪ್ರಸಂಗಗಳನ್ನು ಪ್ರದರ್ಶನ ಮಾಡಬಾರದು ಎಂಬುದು ತಮ್ಮ ಆಶಯವಲ್ಲ. ಬದಲಿಗೆ ಕಾರಂತರು ರಚಿಸಿರುವ ಕೃತಿಗಳ ಪ್ರದರ್ಶನಕ್ಕೆ ಹಕ್ಕು ಸ್ವಾಮ್ಯ ಪಡೆಯುವುದು ಅಗತ್ಯ ಎಂಬುದು ಅವರ ಸ್ಪಷ್ಟನೆಯಾಗಿತ್ತು. `ಈ ಎಲ್ಲ ಪ್ರಸಂಗಗಳು ಪೌರಾಣಿಕ ಹಿನ್ನೆಲೆ ಹೊಂದಿದ್ದರೂ, ಕಾರಂತರು ಅದಕ್ಕೆ ಹೊಸ ರೂಪ ಕೊಟ್ಟಿದ್ದಾರೆ. ಅದಕ್ಕೆ ರಾಗ, ತಾಳದ ಸಂಯೋಜನೆ, ಸಂಗೀತ ರಚನೆ, ರಂಗಸ್ಥಳದ ಕಲ್ಪನೆ ಸೇರಿದಂತೆ ಪ್ರಯೋಗಗಳಿಗೆ ಹೊಸ ಆಯಾಮ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಕ್ಕು ಸ್ವಾಮ್ಯ ಪಡೆಯದೇ ಅದನ್ನು ಪ್ರದರ್ಶನ ಮಾಡುವುದು ಸಲ್ಲದು' ಎಂದು ವಾದಿಸಿದರು. 1997ರ ಡಿಸೆಂಬರ್ ತಿಂಗಳಿನಲ್ಲಿ ಕಾರಂತರು ನಿಧನರಾದರು. ಆದರೆ 1994ರ ಜೂನ್ 18ರಂದು ಉಯಿಲು ಬರೆದಿಟ್ಟಿದ್ದ ಅವರು ಮಾಲಿನಿ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಲಿನಿ ಅವರ ಅನುಮತಿ ಅಗತ್ಯ ಎಂದು ಆದೇಶಿಸುವಂತೆ ಕೋರಿದರು. ಈ ವಾದವನ್ನು ಕೋರ್ಟ್ ಮಾನ್ಯ ಮಾಡಿತು.

2007: ಬಂಧನದಲ್ಲಿದ್ದ ಪಾಕಿಸ್ಥಾನ ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮೊಹಮ್ಮದ್ ಚೌಧುರಿ ಸೇರಿದಂತೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟುಗಳ 37 ನ್ಯಾಯಮೂರ್ತಿಗಳನ್ನು ಪಾಕಿಸ್ಥಾನ ಸರ್ಕಾರ ವಜಾ ಮಾಡಿತು. ಈ ಸಂಬಂಧ ಕಾನೂನು ಸಚಿವಾಲಯ ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿತು. ಅಧ್ಯಕ್ಷ ಪರ್ವೇಜ್ ಮುಷರಫ್ ಹೊರಡಿಸಿರುವ ಸಂವಿಧಾನಿಕ ಆಜ್ಞೆಯ ಅಡಿ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿರುವ ಕಾರಣ ಈ ನ್ಯಾಯಮೂರ್ತಿಗಳನ್ನು ವಜಾಗೊಳಿಸಲಾಯಿತು. ವಜಾಗೊಂಡ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಲ್ಲಿ ಪಾಕಿಸ್ಥಾನದ ಏಕೈಕ ಹಿಂದೂ ನ್ಯಾಯಮೂರ್ತಿ ರಾಣಾ ಭಗವಾನ್ ದಾಸ್ ಸಹ ಒಬ್ಬರು. ಚೌಧುರಿ ಹಾಗೂ ದಾಸ್ ಹೊರತಾಗಿ ಸುಪ್ರೀಂಕೋರ್ಟಿನ ಇನ್ನೂ 11 ನ್ಯಾಯಮೂರ್ತಿಗಳನ್ನು ಕಿತ್ತು ಹಾಕಲಾಯಿತು. ಸಿಂಧ್, ಪಂಜಾಬ್ ಹಾಗೂ ಪೇಶಾವರ ಹೈಕೋರ್ಟುಗಳ 24 ನ್ಯಾಯಮೂರ್ತಿಗಳನ್ನು ಸಹ ವಜಾಗೊಳಿಸಲಾಯಿತು. ವಜಾಗೊಂಡ ನ್ಯಾಯಮೂರ್ತಿಗಳಿಗೆ ಪಿಂಚಣಿ ಇತ್ಯಾದಿ ಯಾವುದೇ ಸೌಲಭ್ಯ ನಿರಾಕರಿಸಲಾಯಿತು.

2007: ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿಯು ಅನಿಲ್ ಕುಂಬ್ಳೆ ಅವರನ್ನು ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಉಳಿಸಿಕೊಂಡಿತು. ಬೆಂಗಳೂರಿನಲ್ಲಿ ದಿಲೀಪ್ ವೆಂಗ್ ಸರ್ಕರ್ ನೇತೃತ್ವದಲ್ಲಿ ಸಭೆ ಸೇರಿದ ಆಯ್ಕೆಗಾರರು ಈ ನಿರ್ಧಾರ ಕೈಗೊಂಡರು.

2005: ಭಾರತೀಯ ಮೂಲದ ವ್ಯಕ್ತಿಗಳ ವಿರುದ್ಧ ಕೊಲೆ ಯತ್ನದ ಆರೋಪ ದಾಖಲಿಸುವುದನ್ನು ಮಲೇಷ್ಯಾ ಆಡಳಿತ ಮುಂದುವರೆಸಿತು. ಈದಿನ ಮತ್ತೆ ಐವರ ವಿರುದ್ಧ ಇಂಥ ಗುರುತರ ಆರೋಪ ದಾಖಲಿಸಲಾಯಿತು. ಇದರಿಂದಾಗಿ ಇಂಥ ಆರೋಪ ಎದುರಿಸುತ್ತಿರುವ ಭಾರತೀಯರ ಸಂಖ್ಯೆ 31 ಕ್ಕೆ ಏರಿತು. ಸರ್ಕಾರದ ನಿಷೇಧದ ಹೊರತಾಗಿಯೂ 2007ರ ನವೆಂಬರ್ 25 ರಂದು ಭಾರತೀಯ ಮೂಲದ ಸಾವಿರಾರು ಜನ ಸಭೆ ಸೇರಿ ಜನಾಂಗೀಯ ಭೇದಭಾವದ ವಿರುದ್ಧ ರ್ಯಾಲಿ ನಡೆಸಿದ್ದರು. ಆ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದರೆಂಬ ಆರೋಪವನ್ನು ಈ 31 ಜನರ ಮೇಲೆ ಹೊರಿಸಲಾಗಿದೆ. ಗರಿಷ್ಠ 20 ವರ್ಷ ಜೈಲುವಾಸದ ಶಿಕ್ಷೆ ವಿಧಿಸಬಹುದಾದ ಅಪರಾಧದ ಆರೋಪ ಹೊತ್ತಿರುವ 31 ಜನರನ್ನು ಈದಿನ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.

2006: ರಾಷ್ಟ್ರವ್ಯಾಪಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಆಪ್ತ ಕಾರ್ಯದರ್ಶಿ ಶಶಿನಾಥ್ ಝಾ ಕೊಲೆ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್ ಅವರಿಗೆ ದೆಹಲಿ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ಐದು ಲಕ್ಷ ರೂಪಾಯಿಗಳ ದಂಡ ವಿಧಿಸಿತು. 12 ವರ್ಷಗಳ ಹಿಂದೆ ಈ ಕೊಲೆ ನಡೆದಿತ್ತು. ಸೊರೇನ್ ಅಪರಾಧಿ ಎಂದು ನ್ಯಾಯಾಲಯ ನವೆಂಬರ್ 28ರಂದು ತೀರ್ಪು ನೀಡಿತ್ತು.

2006: ಬೆಂಗಳೂರು ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ ಇರುವ ಪುಟ್ಟಣ್ಣ ಕಣಗಾಲ್ ಚಿತ್ರಮಂದಿರವನ್ನು ಮಲ್ಟಿಪ್ಲೆಕ್ಸ್ ಕಟ್ಟಡವಾಗಿ ಪರಿವರ್ತಿಸಲು ಮತ್ತು ಜಯನಗರ ವಾಣಿಜ್ಯ ಸಂಕೀರ್ಣವನ್ನು ನವೀಕರಿಸಲು ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿತು. ಈ ಸಲುವಾಗಿ ನಕ್ಷೆ ತಯಾರಿಸುವಂತೆ ಆಯುಕ್ತ ಜೈರಾಜ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

2006: ಫಿಜಿಯಲ್ಲಿ ನಡೆದ ರಕ್ತರಹಿತ ಕ್ಷಿಪ್ರಕ್ರಾಂತಿಯಲ್ಲಿ ಸೇನೆ ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಂಡು, ಪ್ರಧಾನಿ ಲೈಸೆನಿಯಾ ಕರಾಸೆ ಅವರನ್ನು ಪದಚ್ಯುತಿಗೊಳಿಸಿತು. ಕಳೆದ 20 ವರ್ಷಗಳಲ್ಲಿ ಫಿಜಿಯಲ್ಲಿ ನಡೆಯುತ್ತಿರುವ ನಾಲ್ಕನೇ ಸೇನಾ ದಂಗೆ ಇದು. ಬೆಳಿಗ್ಗೆ ಸೇನೆ ಸರ್ಕಾರ ಮತ್ತು ದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ' ಎಂದು ಸೇನಾ ದಂಡನಾಯಕ ಫ್ರಾಂಕ್ ಬೈನಿಮರಮ ಅವರು ಫಿಜಿಯ ರಾಜಧಾನಿ ಸುವಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಫಿಜಿಯ ಈಗಿನ ಕ್ಷಿಪ್ರಕ್ರಾಂತಿಗೆ 2000ನೇ ಇಸ್ವಿಯಲ್ಲಿ ನಡೆದ ಘಟನೆಗೆ ನಂಟು ಹಾಕಲಾಗಿದೆ. ಆಗ ಸ್ಥಳೀಯರು ನಡೆಸಿದ ಕ್ಷಿಪ್ರಕ್ರಾಂತಿ ರಕ್ತಪಾತದಲ್ಲಿ ಅಂತ್ಯಗೊಂಡಿತ್ತು. ಸೇನಾ ದಂಗೆಯೂ ವಿಫಲವಾಗಿತ್ತು. ಬೈನಿಮರಮ ವಿರುದ್ಧವೇ ಸೇನೆಯ ಒಂದು ಭಾಗ ತಿರುಗಿ ಬಿದ್ದಿತ್ತು.. ಆಗ ದಂಗೆ ಎದ್ದ ಸೈನಿಕರ ಮೇಲೆ ಪ್ರಧಾನಿ ಕರಾಸೆ ಮೃದುಧೋರಣೆ ತಾಳಿದ್ದಾರೆ ಎಂಬ ಅಸಹನೆ ಬೈನಿಮರಮ ಅವರಲ್ಲಿತ್ತು ಎಂದು ವಿಶ್ಲೇಷಿಸಲಾಯಿತು.

2006: ವಿಯೆಟ್ನಾಮಿನ ದಕ್ಷಿಣ ಭಾಗಗಳಲ್ಲಿ ಬಲವಾಗಿ ಅಪ್ಪಳಿಸಿದ ಡ್ಯೂರಿಯನ್ ಚಂಡಮಾರುತಕ್ಕೆ ಕನಿಷ್ಠ 38 ಮಂದಿ ಬಲಿಯಾದರು. ಘಟನೆಯಲ್ಲಿ ನೂರಾರು ಮನೆಗಳು ನಾಶವಾದವು.. ಫಿಲಿಪ್ಪೀನ್ಸಿನಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಇದೇ ಚಂಡಮಾರುತ ನೂರಾರು ಮಂದಿಯನ್ನು ಬಲಿ ತೆಗೆದುಕೊಂಡಿತ್ತು. ಭಾರಿ ಮಳೆಯೊಂದಿಗೆ ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಬಂದ ಚಂಡಮಾರುತ, ವಿಯೆಟ್ನಾಮಿನ ಪ್ರಮುಖ ಕೃಷಿ ಪ್ರದೇಶವಾದ ಮೆಕಾಂಗಿನಲ್ಲಿ ಭಾರಿ ಹಾನಿ ಉಂಟುಮಾಡಿತು.

2005: ಇಂಗ್ಲೆಂಡಿನಲ್ಲಿ ಸಲಿಂಗಕಾಮಿಗಳ ಮದುವೆಗೆ ಮಾನ್ಯತೆ ಒದಗಿಸುವ ಸಿವಿಲ್ ಪಾರ್ನರ್ ಶಿಪ್ ಆಕ್ಟ್ ಜಾರಿಗೆ ಬಂದಿತು. ಈ ಕಾಯ್ದೆಯ ಪ್ರಕಾರ ಸಲಿಂಗಕಾಮಿ ಜೋಡಿಗಳು ರಿಜಿಸ್ಟ್ರಾರ್ ಮತ್ತು ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಮದುವೆ ದಾಖಲಾತಿ ಮಾಡಿಕೊಳ್ಳಬಹುದು. ಈ ನೋಂದಣಿ ಅವರಿಗೆ ದಂಪತಿ ಮಾದರಿಯಲ್ಲೇ ಒಬ್ಬನು(ಳು) ಮೃತನಾದರೆ ಆತನ ಜೋಡಿ ಹುಡುಗ(ಗಿ)ನಿಗೆ ಮೃತನ(ಳ) ಪಿಂಚಣಿ, ಆಸ್ಪತ್ರೆ ಹಕ್ಕುಗಳನ್ನು ಒದಗಿಸುತ್ತದೆ. ಜೋಡಿಯ ಮನೆಯಿಂದ ಲಭಿಸುವ ಆಸ್ತಿಗೆ ತೆರಿಗೆ ವಿನಾಯ್ತಿ ಸಿಗುತ್ತದೆ. ವಿಚ್ಛೇದನಾ ನಿಯಮಗಳ ಪ್ರಕಾರ ಅವರು ಈ ದಾಂಪತ್ಯ ಒಪ್ಪಂದವನ್ನು ವಿಸರ್ಜನೆ ಮಾಡಲೂ ಈ ಕಾಯ್ದೆ ಅವಕಾಶ ನೀಡಿದೆ.

2005: ಅಶಿಸ್ತು ಹಾಗೂ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡದ್ದಕ್ಕಾಗಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಯಿತು.

2005: ಇರಾಕಿನ ಆಹಾರಕ್ಕಾಗಿ ತೈಲ ಕಾರ್ಯಕ್ರಮದ ಲಾಭ ಪಡೆದಿದ್ದಾರೆ ಎಂಬುದಾಗಿ ವೋಲ್ಕರ್ ಸಮಿತಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಹೆಚ್ಚಿದ ಒತ್ತಡಕ್ಕೆ ಕೊನೆಗೂ ಮಣಿದ ಕೇಂದ್ರ ಸಚಿವ ಕೆ. ನಟವರ್ ಸಿಂಗ್ ರಾಜೀನಾಮೆ ನೀಡಲು ಮುಂದೆ ಬಂದರು. ಮಾಸ್ಕೊ ಭೇಟಿಯಲ್ಲಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ನಟವರ್ ಸಿಂಗ್ ಪ್ರಧಾನಿ ಪ್ರವಾಸದಿಂದ ವಾಪಸಾದೊಡನೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದರು.

2000: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮಹಮ್ಮದ್ ಅಜರುದ್ದೀನ್ ಮತ್ತು ಅಜಯ್ ಶರ್ಮಾ ಅವರನ್ನು ಮ್ಯಾಚ್ ಫಿಕ್ಸಿಂಗ್ ಮತ್ತು ಲಂಚ ಪಡೆದ ಆರೋಪದಲ್ಲಿ ಇಡೀ ಜೀವಮಾನದ ಅವಧಿಗೆ ಡಿಬಾರ್ ಮಾಡಿತು. ಅಜಯ್ ಜಡೇಜಾ, ಮನೋಜ್ ಪ್ರಭಾಕರ್ ಮತ್ತು ಫಿಸಿಯೋ ಥೆರೆಪಿಸ್ಟ್ ಅಲಿ ಇರಾನಿ ಅವರಿಗೆ ಐದೈದು ವರ್ಷಗಳ ನಿಷೇಧ ವಿಧಿಸಲಾಯಿತು.

1994: ಸಂಸತ್ತಿಗೆ ವಿ.ಪಿ. ಸಿಂಗ್ ರಾಜೀನಾಮೆ ಸಲ್ಲಿಸಿದರು.

1965: ಸಾಹಿತಿ ವಿದ್ಯಾ ಉಮೇಶ್ ಜನನ.

1961: ಸಾಹಿತಿ ಕಬ್ಬಿನಾಲೆ ವಸಂತ ಭಾರಧ್ವಾಜ್ ಜನನ.

1959: ಭಾರತದ ಖ್ಯಾತ ಕ್ರಿಕೆಟ್ ಪಟು ದುಲೀಪ್ ಸಿನ್ಹಜಿ ಅವರು ನಿಧನರಾದರು.

1950: ಶ್ರೀ ಅರವಿಂದ ಘೋಷ್ ಅವರು ತಮ್ಮ 78ನೇ ವಯಸ್ಸಿನಲ್ಲಿ ಪಾಂಡಿಚೇರಿಯಲ್ಲಿ `ಮಹಾಸಮಾಧಿ' ಹೊಂದಿದರು.

1943: ಕಲ್ಕತ್ತ (ಈಗ ಕೋಲ್ಕತ್ತ) ಬಂದರಿನ ಮೇಲೆ ಜಪಾನ್ ವಿಮಾನದಾಳಿ ನಡೆಸಿತು.

1940: ಸಾಹಿತಿ ಗೀತಾ ಸಿ.ವಿ. ಜನನ.

1939: ಸಾಹಿತಿ ಚಿರಂಜೀವಿ ಜನನ.

1932: ನವಾಬ್ ಪಟೌಡಿ ಸೀನಿಯರ್ ಇಂಗ್ಲೆಂಡ್ ಪರವಾಗಿ ತಮ್ಮ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕೆ ಚೊಚ್ಚಲ ಹೆಜ್ಜೆ ಇರಿಸಿದರು. ಭಾರತದ ಇತರ ಇಬ್ಬರು ಕ್ರಿಕೆಟ್ ಪಟುಗಳಾದ ರಣಜಿತ್ ಸಿನ್ಹಜಿ ಮತ್ತು ದುಲೀಪ್ ಸಿನ್ಹಜಿ ಅವರಂತೆ ಶತಕ ಸಿಡಿಸಿದರು.

1913: ಸಾಹಿತಿ ವಿಶಾಲಾಕ್ಷಿ ಲಕ್ಷ್ಮಣಗೌಡ ಜನನ.

1908: ಕಾವ್ಯ, ನಾಟಕ, ಶಿಶುಸಾಹಿತ್ಯ ಇತ್ಯಾದಿ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ದುಡಿದ ಜಿ.ಪಿ. ರಾಜರತ್ನಂ (5-12-1908ರಿಂದ 13-3-1979) ಅವರು ಪಿ. ಗೋಪಾಲಕೃಷ್ಣ ಅಯ್ಯಂಗಾರ್ ಮಗನಾಗಿ ರಾಮನಗರದಲ್ಲಿ ಜನಿಸಿದರು.

1905: ಸ್ವಾತಂತ್ರ್ಯ ಹೋರಾಟಗಾರ ಷೇಕ್ ಮಹಮ್ಮದ್ ಅಬ್ದುಲ್ಲ (1905-1982) ಹುಟ್ಟಿದ ದಿನ. ಕಾಶ್ಮೀರಿಗಳಿಗೆ ವಿಶೇಷ ಹಕ್ಕುಗಳನ್ನು ಪಡೆಯುವ ಸಲುವಾಗಿಯೂ ಹೋರಾಡಿದ ಇವರು ಭಾರತದೊಳಗೇ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಪಡೆಯುವಲ್ಲಿ ಸಫಲರಾದರು.

1901: ವಾಲ್ಟೇರ್ ಎಲಿಯಾಸ್ ಡಿಸ್ನಿ (1901-1966) ಹುಟ್ಟಿದ ದಿನ. `ಮಿಕ್ಕಿ ಮೌಸ್', `ಡೊನಾಲ್ಡ್ ಡಕ್'ಗಳಂತಹ ಕಾರ್ಟೂನ್ ಪಾತ್ರಗಳನ್ನು ನಿರ್ಮಿಸಿದ `ವಾಲ್ಟ್ ಡಿಸ್ನಿ' ಅನಿಮೇಷನ್ ಚಿತ್ರಗಳನ್ನು ಮೊತ್ತ ಮೊದಲಿಗರಾಗಿ ನಿರ್ಮಿಸಿದ ಅಮೆರಿಕನ್.

1776: ಲಂಡನ್ನಿನ ಪಾಲ್ ಮಾಲ್ನಲ್ಲಿ `ಹರಾಜು ಮನೆ' (ಆಕ್ಷನ್ ಹೌಸ್) ಸ್ಥಾಪಿಸಿದ ಮಾಜಿ ನೌಕಾ ಅಧಿಕಾರಿ ಜೇಮ್ಸ್ ಕ್ರಿಸ್ಟೀ ದಿ ಎಲ್ಡರ್ (1730-1803) ತನ್ನ ಮಳಿಗೆಯಲ್ಲಿ ಮೊದಲ ಮಾರಾಟ ನಡೆಸಿದ. ಥಾಮಸ್ ಗೇನ್ಸ್ ಬರೋ, ಸರ್ ಜೊಶುವಾ ರೇನಾಲ್ಡ್ಸ್, ಥಾಮಸ್ ಚಿಪ್ಪಾಂಡೇಲ್ ಅವರಂತಹ ಕಲಾವಿದರಿಗೆ ಜೇಮ್ಸ್ ಗೆಳೆಯನಾದ. ಆತನ `ಹರಾಜುಮನೆ' ಕಲಾಕೃತಿಗಳನ್ನು ಕೊಳ್ಳುವವರು- ಮಾರುವವರಿಗೆ ಕೇಂದ್ರವಾಯಿತು. 1859ರಲ್ಲಿ ಸಂಸ್ಥೆ ಈಗಿನ `ಕ್ರಿಸ್ಟೀ, ಮ್ಯಾನ್ಸನ್ ಅಂಡ್ ವುಡ್ಸ್' ಹೆಸರನ್ನು ಪಡೆದುಕೊಂಡಿತು. 1973ರಲ್ಲಿ ಸಾರ್ವಜನಿಕ ಕಂಪೆನಿಯಾಯಿತು.

1456: ನೇಪಾಳದಲ್ಲಿ ಭೂಕಂಪದಿಂದ 35,000 ಜನ ಮೃತರಾದರು.

Thursday 31 December 2009

ಇಂದಿನ ಇತಿಹಾಸ History Today ಡಿಸೆಂಬರ್ 04

ಇಂದಿನ ಇತಿಹಾಸ

ಡಿಸೆಂಬರ್ 04

ನವದೆಹಲಿಯ ಇತಿಹಾಸ ಪ್ರಸಿದ್ಧ ಕುತುಬ್ ಮೀನಾರಿನ ಮೆಟ್ಟಿಲು ಸಾಲಿನಲ್ಲಿ ನೂಕು ನುಗ್ಗಲು ಸಂಭವಿಸಿ 21 ಮಂದಿ ಶಾಲಾ ಮಕ್ಕಳು ಸೇರಿದಂತೆ ಒಟ್ಟು 45 ಮಂದಿ ಅಸು ನೀಗಿದರು. ಇತರ 21 ಮಂದಿ ಗಾಯಗೊಂಡರು. ವಿದ್ಯುತ್ ವೈಫಲ್ಯದಿಂದ ಉಂಟಾದ ಗಾಬರಿಯಿಂದ ಈ ನೂಕುನುಗ್ಗಲು ಸಂಭವಿಸಿತು.

2008: ರಾಷ್ಟ್ರೀಯ ಭದ್ರತಾ ದಳದ (ಎನ್‌ಎಸ್‌ಜಿ) ಮಾದರಿಯಲ್ಲೇ ಸುಮಾರು 750 ಮಂದಿ ಕಮಾಂಡೊ ಪಡೆ ಮತ್ತು ತ್ವರಿತ ಪ್ರಹಾರ ದಳದ ಆಂತರಿಕ ಭದ್ರತಾ ವಿಭಾಗ ಸ್ಥಾಪಿಸಲು ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತು. ಮುಂಬೈಯಲ್ಲಿ ನಡೆದ ಉಗ್ರರ ದಾಳಿ ನಂತರ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿತು.

2008: ವಿಜಾಪುರ ತಾಲ್ಲೂಕಿನ ಬಗ್ಗಲೇಶ್ವರದ ವೀರಭದ್ರೇಶ್ವರ ಜಾತ್ರೆಯಲ್ಲಿ ವೃದ್ಧ ಪುರವಂತರೊಬ್ಬರು ತಮ್ಮ ಕೆನ್ನೆಯಲ್ಲಿ 2525 ಅಡಿ ಉದ್ದದ ಹಗ್ಗವನ್ನು ತೂರಿಸಿಕೊಳ್ಳುವ ಮೂಲಕ ಸಾಹಸ ಮೆರೆದ ಘಟನೆ ನಡೆಯಿತು. ಬಗ್ಗಲೇಶ್ವರದ ಲಕ್ಷ್ಮಣ ಚಿನ್ನಪ್ಪ ಬೂದಿಹಾಳ (65) ಎಂಬಾತ ಈ ಸಾಹಸಿ. ತಾಯಿಯ ಹರಕೆ ತೀರಿಸಲಿಕ್ಕಾಗಿ ಈ ಭಕ್ತಿ ಸೇವೆ ಮಾಡಿದರು. ಬಗ್ಗಲೇಶ್ವರದ ಶ್ರೀ ಪ್ರಭು ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಅಗ್ನಿ ಹಾಯುವ ಹಾಗೂ ಪುರವಂತರಿಂದ ಸಾಹಸ ಪ್ರದರ್ಶನ ಏರ್ಪಡಿಸಲಾಗಿತ್ತು. ಕಿರುಬೆರಳಿನಷ್ಟು ದಪ್ಪದ 2525 ಅಡಿ ಉದ್ದದ ನೂಲಿನಿಂದ ತಯಾರಿಸಿದ್ದ ಹಗ್ಗ ಇದಾಗಿತ್ತು. ಸೂಜಿಗೆ ದಾರ ಪೋಣಿಸುವಂತೆ ದೊಡ್ಡದಾದ ಶಸ್ತ್ರಕ್ಕೆ ಈ ಹಗ್ಗದ ತುದಿಯನ್ನು ಪೋಣಿಸಲಾಗಿತ್ತು. ಲಕ್ಷ್ಮಣ ಶಸ್ತ್ರದಿಂದ ತನ್ನ ಎಡಭಾಗದ ಕೆನ್ನೆಗೆ ಚುಚ್ಚಿಕೊಂಡು ಹಗ್ಗವನ್ನು ಕೆನ್ನೆಯಲ್ಲಿ ತೂರಿಸಿಕೊಂಡರು. ಅತ್ತ ಕಡೆ ನಾಲ್ಕಾರು ಜನರು ಹಗ್ಗವನ್ನು ಎಳೆದು ಕೊಡುತ್ತಿದ್ದರು. ಈತ ತನ್ನ ಕೆನ್ನೆಯಲ್ಲಿ ತೂರಿದ್ದ ಹಗ್ಗವನ್ನು ತನ್ನ ಎರಡೂ ಕೈಗಳಿಂದ ಹೊರ ಜಗ್ಗುತ್ತಿದ್ದ. ಹೀಗೆ ಕೆನ್ನೆಗೆ ತೂರುತ್ತಿದ್ದ ಹಗ್ಗವನ್ನು ಇನ್ನು ಕೆಲವರು ಸುತ್ತುತ್ತಿದ್ದರು. ಸುಮಾರು 20 ನಿಮಿಷಗಳವರೆಗೆ ನಡೆದ ಈ ರೋಮಾಂಚನಕಾರಿ ಸಾಹಸವನ್ನು ನೋಡಲು ಸಹಸ್ರಾರು ಜನರು ನೆರೆದಿದ್ದರು.
2008: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಸಹೋದರ ಹರದನಹಳ್ಳಿ .ಡಿ. ಬಸವೇಗೌಡ (64) ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.

2008: ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ (ಎಎಐ) ನೂತನ ಅಧ್ಯಕ್ಷರಾಗಿ ವಿ.ಪಿ. ಅಗರವಾಲ್ ಅವರನ್ನು ನೇಮಕ ಮಾಡಲಾಯಿತು.

2007: ದೇಶದ ಎಲ್ಲೆಡೆ ಹರಡುತ್ತಿರುವ ಉಗ್ರರ ದಾಳಿಗಳ ಹಿಂದೆ ಬಲವಾದ ಹಣಕಾಸಿನ ಜಾಲ ಇರಬಹುದು ಎಂಬ ಶಂಕೆ ಇದೀಗ ದೃಢಪಟ್ಟಿದ್ದು, `ಉಗ್ರರಿಗೆ ಷೇರುಪೇಟೆಯ ಮೂಲಕ ಹಣ ದೊರೆಯುತ್ತಿದೆ' ಎಂದು ಹಣಕಾಸು ಸಚಿವ ಪಿ. ಚಿದಂಬರಂ ರಾಜ್ಯಸಭೆಯಲ್ಲಿ ಒಪ್ಪಿಕೊಂಡರು. `ಇಂತಹ ಒಬ್ಬ ವ್ಯಕ್ತಿಯ ಚಟುವಟಿಕೆ ಸರ್ಕಾರದ ಗಮನಕ್ಕೆ ಬಂದಿದ್ದು, ಆ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ' ಎಂದು ಅವರು ಹೇಳಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಅವರು 2007ರ ಫೆಬ್ರುವರಿಯಲ್ಲಿ ಮ್ಯೂನಿಚ್ಚಿನಲ್ಲಿ ನೀಡಿದ ಹೇಳಿಕೆ ಈ ಅನುಮಾನ ಹುಟ್ಟು ಹಾಕಿತ್ತು. `ಹಲವಾರು ಉಗ್ರ ಸಂಘಟನೆಗಳು ಷೇರುಪೇಟೆಯಲ್ಲಿ ಹಣ ತೊಡಗಿಸುವ ಮೂಲಕ ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ನೆಲೆ ಕಂಡುಕೊಳ್ಳುತ್ತಿವೆ. ಮುಂಬೈ ಮತ್ತು ಚೆನ್ನೈ ಷೇರುಪೇಟೆಯಲ್ಲಿ ಬೇನಾಮಿ ಕಂಪೆನಿಗಳ ಹೆಸರಿನಲ್ಲಿ ವಹಿವಾಟು ನಡೆಸುತ್ತಿವೆ' ಎಂಬ ಅವರ ಹೇಳಿಕೆ ಸಾಕಷ್ಟು ಸಂಚಲನ ಉಂಟು ಮಾಡಿತ್ತು. ಚಿದಂಬರಂ ಅವರ ಈದಿನದ ಬಹಿರಂಗ ಹೇಳಿಕೆ ಆ ಶಂಕೆಯನ್ನು ದೃಢಪಡಿಸಿತು.

2007: ಅಕ್ರಮ ಕಟ್ಟಡಗಳ ಸಕ್ರಮದ ವಿವಾದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಸರ್ಕಾರವೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿತು. ಇದರಿಂದಾಗಿ ಪ್ರಕರಣ ಹೈಕೋರ್ಟಿನಿಂದ ಸರ್ಕಾರದ ಅಂಗಳಕ್ಕೆ ಬಂದಿತು. `ಸಕ್ರಮ' ಯೋಜನೆ ಕುರಿತು ರಾಜ್ಯಪಾಲರು ಇನ್ನೊಮ್ಮೆ ಅವಲೋಕನ ಮಾಡುವ ಅಗತ್ಯ ಇದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು.

2007: ನಂದಿಗ್ರಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ವಿಷಾದ ವ್ಯಕ್ತಪಡಿಸಿದರು. `ಅವರದೇ ವಿಧಾನದ ಮೂಲಕ ಅವರಿಗೆ ಪಾಠ ಕಲಿಸಿದ್ದೇವೆ ಎಂಬ ಹೇಳಿಕೆಯನ್ನು ನಾನು ನೀಡಬಾರದಿತ್ತು. ಏಕೆಂದರೆ ಎಲ್ಲ ವರ್ಗಗಳಲ್ಲಿ ಶಾಂತಿ ನೆಲೆಸಬೇಕಾಗಿರುವುದು ಈಗಿನ ಅವಶ್ಯಕತೆ' ಎಂದು ಭಟ್ಟಾಚಾರ್ಯ ಹೇಳಿದರು.

2007: ಕೆಮ್ಮಿನಿಂದ ನರಳುವ ಮಕ್ಕಳಿಗೆ ಸಿರಪ್ ಕುಡಿಸುವ ಬದಲು ಹಳೇ ಜೇನುತುಪ್ಪ ಕುಡಿಸಿ. ಇದು ಈಗ ಜಾಗತಿಕವಾಗಿ ಸಂಶೋಧಕರು ಒಪ್ಪಿಕೊಂಡ ಸತ್ಯ. ಜೇನುತುಪ್ಪವನ್ನು ಹಿಂದಿನಿಂದಲೂ ಸ್ವಸ್ಥ ಆರೋಗ್ಯಕ್ಕೆ ಪೂರಕ ಎಂದು ಭಾರತದಲ್ಲಿ ಭಾವಿಸಲಾಗುತ್ತಿದೆ. ಈಗ ಅದಕ್ಕೆ ಲಂಡನ್ನಿನ ಸಂಶೋಧಕರೂ ಅಧಿಕೃತ ಮುದ್ರೆ ಒತ್ತಿದರು. ಇತ್ತೀಚೆಗೆ ನಡೆದ ಅಧ್ಯಯನವೊಂದರ ಪ್ರಕಾರ ತೀವ್ರ ಕೆಮ್ಮಿನಿಂದ ಬಳಲುತ್ತಿರುವವರು ರಾತ್ರಿ ಮಲಗುವಾಗ ದುಬಾರಿ ಸಿರಪ್ಪುಗಳನ್ನು ಕುಡಿಯುವ ಬದಲಿಗೆ ಜೇನುತುಪ್ಪವನ್ನು ಕುಡಿದರೆ ಹೆಚ್ಚು ನೆಮ್ಮದಿ ಸಿಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟರು.

2007: ಜಪಾನಿನ ಸೇನಾ ತುಕಡಿಗಳು 1937ರ ಡಿಸೆಂಬರ್ 13ರಂದು ಚೀನಾದ ರಾಜಧಾನಿಯನ್ನು ವಶಪಡಿಸಿಕೊಂಡಾಗ ಹುತಾತ್ಮರಾದ 30 ಸಾವಿರ ಚೀನಿಯರ ಪೈಕಿ 13 ಸಾವಿರ ಜನರ ಹೆಸರುಗಳನ್ನು ಎಂಟು ಸಂಪುಟಗಳಲ್ಲಿ ಚೀನಾ ಪ್ರಕಟಿಸಿತು. ಚೀನಾದ ಮೇಲೆ ದಂಡೆತ್ತಿ ಬಂದ ಜಪಾನಿನ ಸೈನಿಕರು 30 ಸಾವಿರ ನಾಗರಿಕರನ್ನು ನಿರ್ದಯವಾಗಿ ಹತ್ಯೆಗೈದರು. ಅವರೆಲ್ಲರ ಹೆಸರುಗಳನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಹೇಳಿತು. `ಜಸ್ಟ್ ಸ್ಟಾರ್ಟ್' ಹೆಸರಿನಲ್ಲಿ ಪ್ರಕಟವಾಗಿರುವ ಎಂಟು ಸಂಪುಟಗಳಲ್ಲಿ ಮೃತಪಟ್ಟವರ ಕುರಿತು ಮಾಹಿತಿಗಳನ್ನು ಒದಗಿಸಲಾಗಿದೆ. ಇನ್ನುಳಿದ ಮಾಹಿತಿಯನ್ನು ಒಟ್ಟು 27 ಸಂಪುಟಗಳಲ್ಲಿ ಹೊರತರಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಸಂಪಾದಕರು ತಿಳಿಸಿದರು.

2006: ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿ ದಲಿತರ ಸಜೀವ ಹತ್ಯಾಕಾಂಡದ ಎಲ್ಲ 32 ಆರೋಪಿಗಳನ್ನೂ ಕೋಲಾರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ವಿರೋಧಿ ವಿಶೇಷ ನ್ಯಾಯಾಲಯವು ಖುಲಾಸೆ ಮಾಡಿತು. ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ ನೀಡಿದ ಕಾರಣ ಆರೋಪಿಗಳ ವಿರುದ್ಧ ದೋಷಾರೋಪ ಸಾಬೀತಾಗಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.

2006: ನಾಡಿನ ಪ್ರಸಿದ್ಧ ಶಾಸ್ತ್ರೀಯ ಸಂಗೀತ ಗಾಯಕ ಪಂ. ಗಣಪತಿ ಭಟ್ಟ ಹಾಸಣಗಿ ಅವರು ಸಂಗೀತ ಕ್ಷೇತ್ರದ ಪ್ರತಿಷ್ಠಿತ ವತ್ಸಲಾಬಾಯಿ ಭೀಮಸೇನ್ ಜೋಶಿ ಪ್ರಶಸ್ತಿಗೆ ಆಯ್ಕೆಯಾದರು. ಪುಣೆಯ ಆರ್ಯ ಸಂಗೀತ ಪ್ರಸಾರಕ ಮಂಡಳಿ ಈ ಪ್ರಶಸ್ತಿಯನ್ನು ನೀಡುತ್ತಿದೆ.

2006: ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆಯಾಮ ನೀಡಿದ ಸಂಸ್ಥೆಗಳಿಗೆ ನೀಡುವ `ಟೆಕ್ನಾಲಜಿ ಪಯೋನೀರ್ಸ್ 2007' ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಿಧಾನವಾಗಿ ಹೆಸರು ಮಾಡುತ್ತಿರುವ ಬೆಂಗಳೂರಿನ `ಸ್ಟ್ರಾಂಡ್ ಲೈಫ್ ಸೈನ್ಸಸ್' ಮತ್ತು ಗ್ರಾಮೀಣ ಪ್ರದೇಶಗಳಿಗೆ ಇಂಟರ್ನೆಟ್ ಸೌಲಭ್ಯ ಕಲ್ಪಿಸುತ್ತಿರುವ `ದೃಷ್ಟಿ' ಈ ಎರಡು ಕಂಪೆನಿಗಳು ಪಡೆದುಕೊಂಡವು. ಜಿನೀವಾದಲ್ಲಿರುವ ವಿಶ್ವ ಆರ್ಥಿಕ ವೇದಿಕೆ ಈ ಪ್ರಶಸ್ತಿಯನ್ನು ಪ್ರಕಟಿಸಿದೆ. ವೇದಿಕೆ ಜಗತ್ತಿನ 47 ಕಂಪೆನಿಗಳನ್ನು ಈ ಪ್ರಶಸ್ತಿಗಾಗಿ ಗುರುತಿಸಿದೆ.

2006: ಎಂ.ಎಲ್.ವಸಂತಕುಮಾರಿ ಸ್ಮಾರಕ ಸಂಗೀತ ಸಭಾ ನೀಡುವ `ಎಂ.ಎಲ್.ವಸಂತಕುಮಾರಿ ಮೆಮೋರಿಯಲ್ ಸಂಗೀತ ಪ್ರಶಸ್ತಿ'ಗೆ ಖ್ಯಾತ ಚಲನಚಿತ್ರ ನಟಿ, ಶ್ರೀಲತಾ ನಂಬೂದರಿ ಆಯ್ಕೆಯಾದರು.

2005: ಸಮಕಾಲೀನ ಕಲಾ ಪರಂಪರಯಲ್ಲಿ ತಮ್ಮದೇ ಆದ ವಿಶಿಷ್ಟ ಪ್ರಯೋಗಗಳ ಮೂಲಕ ಹೆಸರಾಗಿದ್ದ ಕಲಾವಿದ, ಚಿಂತಕ ಹಡಪದ್ ಅವರ ನೆನಪಿಗೆ ನೀಡುವ ನಾಡೋಜ ಎಂ. ಹಡಪದ್ ಪ್ರಶಸ್ತಿ-2005ನ್ನು ಕಲಾವಿದ ಎನ್. ಕೃಷ್ಣಾಚಾರ್ ಅವರಿಗೆ ಹಿರಿಯ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಬೆಂಗಳೂರು ಶೇಷಾದ್ರಿಪುರದ ಕೆನ್ ಕಲಾಶಾಲೆಯಲ್ಲಿ ಪ್ರದಾನ ಮಾಡಿದರು.

2005: ವೋಲ್ಕರ್ ವರದಿಯ ಹಿನ್ನೆಲೆಯಲ್ಲಿ ವಿದೇಶಾಂಗ ಖಾತೆ ಕಳೆದುಕೊಂಡ ಸಚಿವ ನಟವರ್ ಸಿಂಗ್ ವಿರುದ್ಧ ಹೇಳಿಕೆ ನೀಡಿ ಬಿರುಗಾಳಿ ಎಬ್ಬಿಸಿದ ಕ್ರೊಯೇಷಿಯಾದ ಮಾಜಿ ರಾಯಭಾರಿ ಅನಿಲ್ ಮಥೆರಾನಿ ಅವರನ್ನು ಜಾರಿ ನಿರ್ದೇಶನಾಲಯ, ಕೇಂದ್ರ ಗುಪ್ತಚರ ವಿಭಾಗ ಹಾಗೂ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಅಧಿಕಾರಿಗಳ ತಂಡಗಳು ವಿಚಾರಣೆಗೆ ಒಳಪಡಿಸಿದವು.

1993: ಮುಲಯಂ ಸಿಂಗ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

1982: ಚೀನಾದಲ್ಲಿ ಸಂವಿಧಾನ ಅಳವಡಿಸಿಕೊಳ್ಳಲಾಯಿತು.

1981: ನವದೆಹಲಿಯ ಇತಿಹಾಸ ಪ್ರಸಿದ್ಧ ಕುತುಬ್ ಮೀನಾರಿನ ಮೆಟ್ಟಿಲು ಸಾಲಿನಲ್ಲಿ ನೂಕು ನುಗ್ಗಲು ಸಂಭವಿಸಿ 21 ಮಂದಿ ಶಾಲಾ ಮಕ್ಕಳು ಸೇರಿದಂತೆ ಒಟ್ಟು 45 ಮಂದಿ ಅಸು ನೀಗಿದರು. ಇತರ 21 ಮಂದಿ ಗಾಯಗೊಂಡರು. ವಿದ್ಯುತ್ ವೈಫಲ್ಯದಿಂದ ಉಂಟಾದ ಗಾಬರಿಯಿಂದ ಈ ನೂಕುನುಗ್ಗಲು ಸಂಭವಿಸಿತು.

1924: ವೈಸ್ ರಾಯ್ ದಿ ಅರ್ಲ್ ಅಫ್ ರೀಡಿಂಗ್ ಅವರಿಂದ ಬಾಂಬೆಯ (ಈಗಿನ ಮುಂಬೈ) `ಗೇಟ್ ವೇ ಆಫ್ ಇಂಡಿಯಾ' ಉದ್ಘಾಟನೆಗೊಂಡಿತು. ಇಂಡೋ ಸಾರ್ಸನಿಕ್ ಶೈಲಿಯಲ್ಲಿ ನಿರ್ಮಿಸಲಾದ ಇದನ್ನು ದೊರೆ 5ನೇ ಜಾರ್ಜ್ ಮತ್ತು ರಾಣಿ ಮೇರಿ 1911ರ ಡಿಸೆಂಬರಿನಲ್ಲಿ ಬಾಂಬೆಗೆ ನೀಡಿದ ಭೇಟಿಯ ನೆನಪಿಗಾಗಿ ನಿರ್ಮಿಸಲಾಯಿತು. ಇದಕ್ಕೆ 1911ರ ಮಾಚರ್ಿಯಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಶಿಲ್ಪಿ ಜಾರ್ಜ್ ವಿಟ್ಟೆಟ್ ಅವರ ಅಂತಿಮ ವಿನ್ಯಾಸಕ್ಕೆ 1914ರ ಆಗಸ್ಟಿನಲ್ಲಿ ್ಲಮಂಜೂರಾತಿ ದೊರಕಿತ್ತು.

1919: ಭಾರತದ ಮಾಜಿ ಪ್ರಧಾನಿ ಇಂದ್ರ ಕುಮಾರ್ ಗುಜ್ರಾಲ್ ಹುಟ್ಟಿದ ದಿನ. ಅವರು 1997ರ
ಏಪ್ರಿಲ್ನಿಂದ ನವೆಂಬರವರೆಗೆ ಪ್ರಧಾನಿಯಾಗಿದ್ದರು.

1910: ಭಾರತದ ಮಾಜಿ ರಾಷ್ಟ್ರಪತಿ ರಾಮಸ್ವಾಮಿ ವೆಂಕಟ್ರಾಮನ್ ಹುಟ್ಟಿದ ದಿನ. ರಾಜಕಾರಣಿ, ಅಧಿಕಾರಿ ಹಾಗೂ ವಕೀಲರಾಗಿದ್ದ ಅವರು 1987 ಜುಲೈ 25ರಂದು ಭಾರತದ ರಾಷ್ಟ್ರಪತಿಯಾದರು.

1888: ಭಾರತದ ಖ್ಯಾತ ಇತಿಹಾಸಕಾರ ರೊಮೇಶ್ ಚಂದ್ರ ಮಜುಂದಾರ್ (1888-1980) ಹುಟ್ಟಿದ ದಿನ.

1829: ರೆಗ್ಯೂಲೇಷನ್ 17 ಜಾರಿ ಮಾಡುವ ಮೂಲಕ ಲಾರ್ಡ್ ವಿಲಿಯಂ ಬೆಂಟಿಂಕ್ ಭಾರತದಲ್ಲಿ ಸತಿ ಪದ್ಧತಿಯನ್ನು ನಿಷೇಧಿಸಿದ.

1775: ಬ್ರಿಟಿಷ್ ಇತಿಹಾಸಕಾರ ಹಾಗೂ ಪ್ರಬಂಧಕಾರ ಥಾಮಸ್ ಕಾರ್ಲೈಲ್ (1795-1881) ಹುಟ್ಟಿದ ದಿನ. `ಫ್ರೆಂಚ್ ರೆವಲ್ಯೂಷನ್' ಕೃತಿ ಈತನಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು. ಈ ಕೃತಿಯ ಇಡೀ ಮೊದಲ ಸಂಪುಟದ ಹಸ್ತಪ್ರತಿಯನ್ನು ಜಾನ್ ಸ್ಟುವರ್ಟ್ ಮಿಲ್ ಓದಲು ಒಯ್ದು ತನ್ನ ಭಾವೀ ಪತ್ನಿಯ ಕೈಯಲ್ಲಿ ಕೊಟ್ಟಿದ್ದ. ಆಕೆಯ ಸೇವಕಿ ಅದು ನಿರುಪಯುಕ್ತ ಹಾಳೆ ಎಂದು ಭಾವಿಸಿ ಸುಟ್ಟು ಹಾಕಿದಳು! ಹೀಗಾಗಿ ಥಾಮಸ್ ಕಾರ್ಲೈಲ್ ಕೃತಿಯ ಮೊದಲ ಇಡೀ ಸಂಪುಟವನ್ನು ಮತ್ತೆ ಬರೆಯಬೇಕಾಗಿ ಬಂದಿತ್ತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Wednesday 30 December 2009

ಇಂದಿನ ಇತಿಹಾಸ History Today ಡಿಸೆಂಬರ್ 03

ಇಂದಿನ ಇತಿಹಾಸ

ಡಿಸೆಂಬರ್ 03

ಅಮೆರಿಕಾದ ಟೋರಿ ಮರ್ಡನ್ ಅಟ್ಲಾಂಟಿಕ್ ಸಾಗರವನ್ನು ಏಕಾಂಗಿಯಾಗಿ ದಾಟಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಭಾಜನರಾದರು. ಆಫ್ರಿಕಾ ಸಮೀಪದ ಕ್ಯಾನರಿ ದ್ವೀಪಗಳಿಂದ ಹೊರಟು 81 ದಿನಗಳ ಬಳಿಕ ಆಕೆ ಫ್ರೆಂಚ್ ಕ್ಯಾರಿಬಿಯನ್ ದ್ವೀಪವಾದ ಗುವಾಡೆಲೊಪ್ ನ್ನು ತಲುಪಿದರು.

2008: ಮುಂಬೈ ದಾಳಿ ಹಿನ್ನೆಲೆಯಲ್ಲಿ ಲಷ್ಕರ್-ಎ- ತೊಯ್ಬಾ ಮುಖ್ಯಸ್ಥ ಸೇರಿದಂತೆ 20 ಪ್ರಮುಖ ಉಗ್ರರನ್ನು ತನ್ನ ಸುಪರ್ದಿಗೆ ಒಪ್ಪಿಸಬೇಕೆಂಬ ಭಾರತದ ಬೇಡಿಕೆಯನ್ನು ಪಾಕಿಸ್ಥಾನ ಸಾರಾಸಗಟು ತಳ್ಳಿಹಾಕಿತು. ಈ ಮಧ್ಯೆ ಮುಂಬೈ ಘಟನೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಒಂದು ದಿನದ ಭೇಟಿಗಾಗಿ ಆಗಮಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಸಾ ರೈಸ್, ಭಯೋತ್ಪಾದನೆ ನಿಗ್ರಹಿಸಲು ಪಾಕಿಸ್ಥಾನ ಪಾರದರ್ಶಕ ನೀತಿ ಅನುಸರಿಸಬೇಕು, ತುರ್ತಾಗಿ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯ ಪಟ್ಟರು.
2008: ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಖರ್ಚು-ವೆಚ್ಚ ತಗ್ಗಿಸುವ ದೃಷ್ಟಿಯಿಂದ ಅಮೆರಿಕದ ಪ್ರಸಿದ್ಧ ಉಕ್ಕು ಕಾರ್ಖಾನೆ ಆಲ್ಟೋಸ್ ಹಾರ್ನೋಸ್ 12000 ಹುದ್ದೆಗಳನ್ನು ಕಡಿತಗೊಳಿಸಿದೆ ಎಂದು ಪ್ರಕಟಿಸಿತು. ಜಾಗತಿಕ ಅರ್ಥ ವ್ಯವಸ್ಥೆಯ ಕುಸಿತ ಹಾಗೂ ಅಂತಾರಾಷ್ಟ್ರೀಯ ಹಣಕಾಸು ಮಾರುಕಟ್ಟೆಯಲ್ಲಿ ಉಕ್ಕಿಗೆ ಬೇಡಿಕೆ ಕುಸಿದ ಕಾರಣ ಮೂರು ಘಟಕಗಳಲ್ಲಿ ಉಕ್ಕಿನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ಸ್ಟೀಲ್ ಕಾರ್ಪೊರೇಷನ್ ಘೋಷಿಸಿತು. ಸಂಸ್ಥೆಯ ಈ ನಿರ್ಧಾರದಿಂದ ಅಮೆರಿಕ ಸ್ಟೀಲ್ಸ್ ಕೀವ್ಯಾಟಿನ್, ಡೆಟ್ರಾಯಿಟ್ ಮತ್ತು ಸೇಂಟ್ ಲೂಯಿಸ್ ಘಟಕದಲ್ಲಿನ ಕನಿಷ್ಠ 3,500 ನೌಕರರು ಉದ್ಯೋಗ ಕಳೆದುಕೊಳ್ಳುವರು ಎಂದು ಕಂಪೆನಿ ಹೇಳಿತು.

2008: ಕ್ವಾಲಾಂಲಪುರ ನಗರಾಡಳಿತವು ಸುಮಾರು 15 ವರ್ಷಗಳಷ್ಟು ಹಳೆಯ ಹಿಂದೂ ದೇವಾಲಯವನ್ನು ಮಲೇಷ್ಯಾ ಸರ್ಕಾರದ ಆದೇಶದ ಮೇರೆಗೆ ಧ್ವಂಸ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ಆದರೆ ದೇವಾಲಯ ಸ್ಥಳಾಂತರಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಈ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದ ಹಿಂದೂ ಸಮುದಾಯದವರು, ಕಟ್ಟಡ ಕೆಡಹುವ ಕಾಯಿದೆಯಲ್ಲಿ ಏನಿದೆ ಎಂದು ವಿವರಣೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

2008: ಸ್ವರ್ಣ ಮಯೂರ ಸೇರಿದಂತೆ ಎರಡು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಕಜಕಿಸ್ಥಾನಿ ನಿರ್ದೇಶಕ ಸರ್ಜಿ ಡ್ವೊರ್ಟ್‌ಸೆವೊಯ್ ಭಾಜನರಾದರು. ಪಣಜಿ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ತುಲಿಪ್' ಸಿನಿಮಾಕ್ಕೆ ಈ ಗೌರವ ಲಭಿಸಿತು. ಭರವಸೆ ನಿರ್ದೇಶಕ ಪ್ರಶಸ್ತಿ ರೂಪದಲ್ಲಿ 15 ಲಕ್ಷ ರೂಪಾಯಿ ಬಹುಮಾನ ಸಂದರೆ, ಶ್ರೇಷ್ಠ ಚಿತ್ರ ಎಂಬ ಕಾರಣಕ್ಕೆ ಸ್ವರ್ಣ ಮಯೂರ ಲಭಿಸಿತು. ಈ ಪ್ರಶಸ್ತಿಯ ಮೊತ್ತ 50 ಲಕ್ಷ ರೂ. ಆಯ್ಕೆ ಸಮಿತಿ ನೀಡುವ ವಿಶೇಷ ಪ್ರಶಸ್ತಿಯು ಶ್ರೀಲಂಕಾ ನಟಿ ಮಾಲಿನಿ ಪೌನ್ಸೆಕಾ ಅವರಿಗೆ ಸಂದಿತು. 'ಆಕಾಶ ಕುಸುಮ್' ಚಿತ್ರದ ನಟನೆಗೆ ಈ ಸಮ್ಮಾನ ಲಭಿಸಿತು.. ರಜತ ಮಯೂರ ಸ್ಮರಣಿಕೆ ಹಾಗೂ 15 ಲಕ್ಷ ರೂ. ಮೊತ್ತ ಅವರಿಗೆ ಸೇರಿತು.

2008: ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಸಲ್ಲಿಸಿದ ರಾಜೀನಾಮೆ ಪತ್ರವನ್ನು ಅಂಗೀಕರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ ಅವರು ನವದೆಹಲಿಯಲ್ಲಿ ಪ್ರಕಟಿಸಿದರು. ಯುಪಿಎ ಸರ್ಕಾರದಲ್ಲಿನ ಕಾಂಗ್ರೆಸ್ ಮಿತ್ರ ಪಕ್ಷಗಳ ಒತ್ತಡದ ಕಾರಣ ದೇಶ್‌ಮುಖ್ ಅವರನ್ನು ಪದಚ್ಯುತಿಗೊಳಿಸಲಾಯಿತು.

2008: ಮುಂಬೈಯಲ್ಲಿ ಉಗ್ರರ ವಿರುದಟ ಸೆಣಸಾಡಿ ವೀರಮರಣವನ್ನಪ್ಪಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಬೆಂಗ ಳೂರಿನ ಮನೆಗೆ ಭೇಟಿ ನೀಡಿದ ನಂತರ ಅವಮಾನಕರ ಹೇಳಿಕೆ ನೀಡಿ ತೀವ್ರ ವಿವಾದಕ್ಕೆ ಒಳಗಾಗಿದ್ದ ಕೇರಳ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಈದಿನ ತಿರುವನಂತಪುರದಲ್ಲಿ ಕ್ಷಮೆಯಾಚಿಸಿದರು.. ಆದರೆ ಈ ಕ್ಷಮೆಯಾಚನೆ ಹೇಳಿಕೆಯಲ್ಲೂ ಅವರು ತಮ್ಮ ಚೌಕಾಸಿತನ ಮೆರೆಯುವ ಮೂಲಕ ಮತ್ತೊಮ್ಮೆ ವಿರೋಧಿಗಳ ಕೆಂಗಣ್ಣಿಗೆ ಗುರಿಯಾದರು.

2008: ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತ ಸವಿ ನೆನಪಿಗಾಗಿ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಸಂಗೀತ ಶಿಕ್ಷಕ, ಅಂಧ ಸ್ಕೇಟಿಂಗ್‌ ಪಟು ನಾನೂ ಪಾಟೀಲ ಈದಿನ ಗದಗದಿಂದ ಕೊಪ್ಪಳದವರೆಗೆ ಯಶಸ್ವಿ ಸ್ಕೇಟಿಂಗ್ ಯಾತ್ರೆ ಕೈಗೊಂಡರು. ಗದಗ ತೋಂಟದಾರ್ಯ ಮಠದ ಆವರಣದಲ್ಲಿ ಬೆಳಗಿನ ಜಾವ ನಾನೂ ಪಾಟೀಲರ ಯಾತ್ರೆಗೆ ತೋಂಟದ ಡಾ.ಸಿದ್ಧಲಿಂಗ ಸ್ವಾಮೀಜಿ ಹಾಗೂ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹಸಿರು ನಿಶಾನೆ ತೋರಿದರು. ಈದಿನ ಸಂಜೆ 4.25ಕ್ಕೆ ಕೊಪ್ಪಳ ತಲುಪಿದ ನಾನೂ ಪಾಟೀಲ ಅವರಿಗೆ ಮಾರ್ಗ ಮಧ್ಯದ ಗ್ರಾಮಗಳಲ್ಲಿ ಅದೂಟರಿಯ ಸ್ವಾಗತ ದೊರೆಯಿತು. ಯಲಬುರ್ಗಾ ತಾಲ್ಲೂಕಿನ ತಳಕಲ್‌ನಲ್ಲಿ ಶಿಕ್ಷಕರಾಗಿರುವ ಪಾಟೀಲರಿಗೆ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳು ಸಂಭ್ರಮದಿಂದ ಸ್ವಾಗತಿಸಿ ಹುರಿದುಂಬಿಸಿದರು. 1999ರಿಂದ ಸ್ಕೇಟಿಂಗ್ ಗೀಳು ಅಂಟಿಸಿಕೊಂಡ ನಾನೂ ಪಾಟೀಲ್, 2000ನೇ ಇಸ್ವಿಯ ಜನವರಿಯಲ್ಲಿ ಸ್ಕೇಟಿಂಗ್ ಗುರು ಹುಬ್ಬಳ್ಳಿಯ ಈರಣ್ಣ ಕಾಡಪ್ಪನವರ ಮಾರ್ಗದರ್ಶನದಲ್ಲಿ ಕಾರವಾರದವರೆಗೆ ಹೆದ್ದಾರಿಯಲ್ಲಿ ಸ್ಕೇಟಿಂಗ್ ಯಾನ ಮಾಡಿದ ದಾಖಲೆ ಸ್ಥಾಪಿಸಿದ್ದರು. ಕೆಲದಿನಗಳ ಹಿಂದೆ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಕನ್ನಡ ಧ್ವಜದ ಸಮೇತ ಮತ್ತೊಂದು ಯಾತ್ರೆ ಕೈಗೊಂಡಿದ್ದರು.

2008: 94 ವರ್ಷದ ವಯೋವೃದ್ಧ ಸ್ವಾಮೀಜಿಗೆ ಶಸ್ತ್ರಚಿಕಿತ್ಸೆ ನಡೆಸಿ ಮುರಿದ ಮೂಳೆ ಜೋಡಿಸುವಲ್ಲಿ ಹುಬ್ಬಳ್ಳಿ ನಗರದ ಲೈಫ್‌ಲೈನ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾದರು. ಶಿವಮೊಗ್ಗ ಸಮೀಪದ ಕೂಡ್ಲಿ ಅಕ್ಷೋಭ್ಯತೀರ್ಥ ಮಠದ ಪೀಠಾಧಿಪತಿ ರಘುತೀರ್ಥ ಸ್ವಾಮೀಜಿ ಕಾಲು ಜಾರಿ ಬಿದ್ದು ಬಲತೊಡೆಯ ಮೂಳೆ ಮುರಿದಿತ್ತು. ಇವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಡಾ.ಕಲಮದಾನಿ, ಡಾ.ಹರೀಶ ಕನಕಾಪೂರ, ಡಾ.ನಾಗರಾಜ, ಡಾ.ರಾಜೇಶ, ಡಾ. ಶ್ರೀನಿವಾಸ ದೇಶಪಾಂಡೆ ಮೂಳೆ ಜೋಡಿಸುವ ಅಪೂರ್ವ ಸಾಧನೆ ಮಾಡಿದರು.

2007: ಇಂಗ್ಲೆಂಡ್ ತಂಡದ ವಿರುದ್ಧ ಕ್ಯಾಂಡಿಯಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ ಮೂರನೇ ದಿನದ ಆಟದಲ್ಲಿ ಪಾಲ್ ಕಾಲಿಂಗ್ ವುಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ 709ನೇ ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಧಿಕ ವಿಕೆಟ್ ಪಡೆದ ಹಿರಿಮೆಯೊಂದಿಗೆ 'ವಿಶ್ವದಾಖಲೆ' ನಿರ್ಮಿಸಿದರು. ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೆಸರಿನಲ್ಲಿ ಇದ್ದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. 35ರ ಹರೆಯದ ಮುರಳಿ ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸಿನ 89ನೇ ಓವರಿನ (ದಿನದ 10ನೇ ಓವರ್) ನಾಲ್ಕನೇ ಎಸೆತದಲ್ಲಿ ತಮ್ಮ ಫೇವರಿಟ್ ದೂಸ್ರಾ ಎಸೆತ ಪ್ರಯೋಗಿಸಿ ಇಂಗ್ಲೆಂಡ್ ತಂಡದ ಬ್ಯಾಟ್ಸ್ ಮನ್ ಪಾಲ್ ಕಾಲಿಂಗ್ ವುಡ್ ಅವರನ್ನು ಬೌಲ್ಡ್ ಮಾಡಿ ಚರಿತ್ರೆಯೆಡೆಗೆ ಹೆಜ್ಜೆಯಿಟ್ಟರು. ವಿಶ್ವದಾಖಲೆ ಸ್ಥಾಪಿಸಿದ ಬಳಿಕ ಮ್ಯಾಥ್ಯೂ ಹೊಗಾರ್ಡ್ ಅವರನ್ನು ಔಟ್ ಮಾಡಿದ ಮುರಳಿ ಒಟ್ಟು ವಿಕೆಟ್ಟುಗಳ ಸಂಖ್ಯೆಯನ್ನು 710ಕ್ಕೆ ಹೆಚ್ಚಿಸಿದರು. ಲಂಕಾ ಬೌಲರಿಗೆ ಇದು 116ನೇ ಟೆಸ್ಟ್ ಪಂದ್ಯ. ಶೇನ್ ವಾರ್ನ್ ಅವರು 709 ವಿಕೆಟ್ ಪಡೆಯಲು 145 ಟೆಸ್ಟುಗಳನ್ನು ಆಡಿದ್ದರು. ಇಂಗ್ಲೆಂಡಿನ ಮೊದಲ ಇನಿಂಗ್ಸಿನಲ್ಲಿ 55 ರನ್ನುಗಳಿಗೆ 6 ವಿಕೆಟ್ ಪಡೆದ ಮುರಳಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು 61ನೇ ಬಾರಿ ಮಾಡಿದರು. ಅದೇ ರೀತಿ ಟೆಸ್ಟ್ ಪಂದ್ಯದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಅವರು 20 ಬಾರಿ ಮಾಡಿದರು. ಕಳೆದ 15 ವರ್ಷಗಳಿಂದ ಬ್ಯಾಟ್ಸ್ ಮನ್ನರ ನಿದ್ದೆಗೆಡಿಸುತ್ತಿರುವ ಮುರಳಿ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಿರುವುದು ಇದು ಮೂರನೇ ಬಾರಿ. 2004ರಲ್ಲಿ ಮೊದಲ ಬಾರಿ ವೆಸ್ಟ್ ಇಂಡೀಸಿನ ವೇಗದ ಬೌಲರ್ ಕರ್ಟ್ನಿ ವಾಲ್ಷ್ ಅವರನ್ನು ಹಿಂದಿಕ್ಕಿ ವಿಶ್ವದ ಅತಿಹೆಚ್ಚು ವಿಕೆಟ್ ಪಡೆದ ಗೌರವಕ್ಕೆ ಪಾತ್ರರಾಗಿದ್ದರು. ಆ ಬಳಿಕ ವಾರ್ನ್, ಮುರಳಿಯನ್ನು ಹಿಂದಿಕ್ಕಿ ಮುನ್ನಡೆದಿದ್ದರು. ವಾರ್ನ್ ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತಿ ಹೊಂದಿರುವ ಕಾರಣ ಮುರಳಿಯ ದಾಖಲೆಯನ್ನು ಮುರಿಯಲು ಇನ್ನು ಯಾರಿಗೂ ಸುಲಭದಲ್ಲಿ ಸಾಧ್ಯವಿಲ್ಲ. ಚೆಂಡನ್ನು ಮಾರಕ ರೀತಿಯಲ್ಲಿ ತಿರುಗುವಂತೆ ಮಾಡುವ ತಮ್ಮ ಸಾಮರ್ಥ್ಯದಿಂದ ಸ್ಪಿನ್ ಬೌಲಿಂಗಿಗೆ ಹೊಸ ರೂಪವನ್ನೇ ನೀಡಿದ ಮುರಳಿ ಈ ಹಿಂದೆ `ಚಕ್ಕಿಂಗ್' ಆರೋಪಕ್ಕೂ ಗುರಿಯಾಗಿದ್ದರು. 1995ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬೌಲಿಂಗ್ ವೇಳೆ ಚೆಂಡನ್ನು ಥ್ರೋ ಮಾಡುತ್ತಿದ್ದಾರೆ ಎಂದು ಅಂಪೈರ್ ಡೆರೆಲ್ ಹೇರ್ ಏಳು ಬಾರಿ ಮುರಳಿಗೆ ನೋಬಾಲ್ ನೀಡಿದ್ದರು. ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಜಾನ್ ಹೊವಾರ್ಡ್ ಮುರಳಿಯನ್ನು `ಚಕ್ಕರ್' ಎಂದೂ ಕರೆದಿದ್ದರು. ಆದರೆ ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಮುರಳಿ ತಮ್ಮ ವಿಕೆಟ್ `ಬೇಟೆ'ಯ ಕಾಯಕ ಮುಂದುವರೆಸಿದ್ದರು.

2007: ತೈವಾನಿನ `ದಿ ವಾಲ್' ಚಿತ್ರಕ್ಕೆ ಪಣಜಿಯಲ್ಲಿ ನಡೆದ 38ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸ್ವರ್ಣ ಮಯೂರ ಪ್ರಶಸ್ತಿ ಲಭಿಸಿತು. ಪಣಜಿಯ ಕಲಾ ಅಕಾಡೆಮಿ ಸಭಾಂಗಣದಲ್ಲಿ ಜರುಗಿದ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಹಂಗೇರಿಯ ಮಾರ್ತಾ ಮಿಜಾರೋಸ್ ಅಧ್ಯಕ್ಷತೆಯ ತೀರ್ಪುಗಾರರ ಮಂಡಳಿ (ಜ್ಯೂರಿ) ಪ್ರಶಸ್ತಿ ವಿಜೇತ ಚಿತ್ರಗಳ ಹೆಸರು ಪ್ರಕಟಿಸಿತು. ಹಿಂದಿನ ವರ್ಷ ಚೀನಾದ `ದಿ ಓಲ್ಡ್ ಬಾರ್ಬರ್' ಚಿತ್ರ ಸ್ವರ್ಣ ಮಯೂರ ಪಡೆದಿತ್ತು.

2007: ಬೆಂಗಳೂರಿನ `ನಮ್ಮ ಮೆಟ್ರೊ' ಯೋಜನೆಗಾಗಿ ಭೂಮಿ ಕಳೆದುಕೊಂಡ ಭೂ ಮಾಲೀಕರಿಗೆ ಪರಿಹಾರ ನೀಡುವ ಕಾರ್ಯವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸದ್ದಿಲ್ಲದೆ ಆರಂಭಿಸಿತು. ಇಂದಿರಾನಗರದ 100 ಅಡಿ ರಸ್ತೆಯ ನಿವಾಸಿ ನಿವೃತ್ತ ಕಂದಾಯ ಆಯುಕ್ತ ಎಸ್. ವೆಂಕಟೇಶ್ ಅವರು ಪರಿಹಾರ ಪಡೆದ ಮೊದಲ ಭೂಮಾಲೀಕರೆನಿಸಿದರು. ಅವರಿಗೆ ಕೆಐಎಡಿಬಿ 2.69 ಕೋಟಿ ರೂಪಾಯಿ ಚೆಕ್ ನೀಡಿತು. ವೆಂಕಟೇಶ್ ಅವರ 2009 ಚದರ ಅಡಿ ಜಾಗವನ್ನು ಮೆಟ್ರೊ ರೈಲು ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು.

2007: ಅಖಿಲ ಭಾರತ ವೈದ್ಯಕೀಯ ಸಂಸ್ಥೆಯ (ಏಮ್ಸ್) ನಿರ್ದೇಶಕ ಪಿ. ವೇಣುಗೋಪಾಲ್ ಅವರನ್ನು ಆ ಸ್ಥಾನದಿಂದ ಕಿತ್ತೊಗೆದ ಸರ್ಕಾರದ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಅಸಮಾಧಾನ ವ್ಯಕ್ತಪಡಿಸಿತು. ನ್ಯಾಯಮೂರ್ತಿ ತರುಣ್ ಚಟರ್ಜಿ ಮತ್ತು ದಲ್ವೀರ್ ಭಂಡಾರಿ ಅವರಿದ್ದ ಪೀಠವು `ವೇಣುಗೋಪಾಲ್ ಅವರಂತಹ ಗಣ್ಯ ವ್ಯಕ್ತಿಯನ್ನು ಈ ರೀತಿ ಹೀನಾಯವಾಗಿ ನಡೆಸಿಕೊಳ್ಳುವ ಅಗತ್ಯವಿತ್ತೇ' ಎಂದೂ ಪ್ರಶ್ನಿಸಿತು. `ಮುಂದಿನ ಆರು ತಿಂಗಳ ಒಳಗೆ ವೇಣುಗೋಪಾಲ್ ಅವರ ಅಧಿಕಾರವಧಿ ಮುಕ್ತಾಯಗೊಳ್ಳಲಿತ್ತು. ವಾಸ್ತವ ಹೀಗಿರುವಾಗ ಅವರನ್ನು ತತ್ ಕ್ಷಣವೇ ಆ ಹುದ್ದೆಯಿಂದ ಕಿತ್ತೊಗೆಯಲಿಕ್ಕಾಗಿಯೇ `ಏಮ್ಸ್' ಮಸೂದೆಗೇ ತಿದ್ದುಪಡಿ ತಂದದ್ದು ಎಷ್ಟು ಸರಿ ಎಂದೂ ಪೀಠವು ಪ್ರಶ್ನಿಸಿತು.

2007: ಲೇಬರ್ ಪಕ್ಷದ ನಾಯಕ ಕೆವಿನ್ ರುಡ್ ಆಸ್ಟ್ರೇಲಿಯಾದ 26ನೇ ಪ್ರಧಾನಿಯಾಗಿ ಮೆಲ್ಬೋರ್ನಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಒಂಬತ್ತು ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷ, ಜಾನ್ ಹೊವರ್ಡ್ ನೇತೃತ್ವದ ಕನ್ಸರ್ವೇಟಿವ್ ಪಕ್ಷವನ್ನು ಸಂಪೂರ್ಣವಾಗಿ ನೆಲ ಕಚ್ಚಿಸಿತ್ತು. ಹನ್ನೊಂದುವರೆ ವರ್ಷಗಳ ನಂತರ ಲೇಬರ್ ಪಕ್ಷ ಆಸ್ಟ್ರೇಲಿಯಾದಲ್ಲಿ ಅಧಿಕಾರಕ್ಕೆ ಬಂದಿತು. ಕ್ಯಾನ್ ಬೆರಾದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗವರ್ನರ್ ಜನರಲ್ ಮೈಕೆಲ್ ಜೆಫ್ರಿ ಅವರ ಸಮ್ಮುಖದಲ್ಲಿ ಕೆವಿನ್ ರುಡ್ ಹಾಗೂ ಉಪ ಪ್ರಧಾನಿ ಜುಲಿಯಾ ಗಿಲಾರ್ಡ್ ಪ್ರಮಾಣ ವಚನ ಸ್ವೀಕರಿಸಿದರು.

2007: ಚುನಾವಣಾ ಅಧಿಕಾರಿಯೂ ಆದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಮರ್ ಉಝ್ ಜಮಾನ್ ಅವರು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ನಾಮಪತ್ರವನ್ನು ತಿರಸ್ಕರಿಸಿದರು. 2000ನೇ ಇಸ್ವಿಯ ಹೈಜಾಕ್ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದ್ದು ಷರೀಫ್ ನಾಮಪತ್ರ ತಿರಸ್ಕರಿಸಲು ಕಾರಣ ಎಂದು ಹೇಳಲಾಯಿತು. ಹಿಂದಿನ ವಾರ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಕಾರಣ ನೀಡಿ ನವಾಜ್ ಷರೀಫ್ ಸಹೋದರನ ನಾಮಪತ್ರವನ್ನೂ ತಿರಸ್ಕರಿಸಲಾಗಿತ್ತು.

2007: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ `ಯುನೈಟೆಡ್ ರಷ್ಯಾ ಪಾರ್ಟಿ' ಸಂಸದೀಯ ಚುನಾವಣೆಯಲ್ಲಿ ಭಾರಿ ಬಹುಮತ ಗಳಿಸಿತು. ರಷ್ಯಾ ರಾಜಕೀಯದಲ್ಲಿ `ಕಿಂಗ್ ಮೇಕರ್' ಎಂಬ ಬಿರುದು ಪಡೆದ ಪುಟಿನ್ ಈ ಸ್ಥಾನ ಉಳಿಸಿಕೊಂಡರು. ಚುನಾವಣೆಯಲ್ಲಿ ಯುನೈಟೆಡ್ ರಷ್ಯಾ ಪಾರ್ಟಿ, ಸಂಸತ್ತಿನ ಕೆಳಮನೆ (ಡ್ಯೂಮಾ) 450 ಸ್ಥಾನಗಳಲ್ಲಿ 313 ಸ್ಥಾನಗಳನ್ನು ಗೆದ್ದು, ಶೇ 64.1ರಷ್ಟು ಮತಗಳನ್ನು ಪಡೆಯಿತು. ಕಮ್ಯುನಿಸ್ಟ್ ಪಾರ್ಟಿ ಕೇವಲ ಶೇ 11.6ರಷ್ಟು ಮತಗಳನ್ನು ಪಡೆದು, ಅರ್ಧದಷ್ಟು ಸ್ಥಾನಗಳಲ್ಲಿ ಸೋಲನ್ನಪ್ಪಿತು.

2007: ತಾತ್ಕಾಲಿಕ ಸಂಚಾರಿ ಪೀಠ ಸ್ಥಾಪನೆಗೆ ಧಾರವಾಡದ ಕಲಾಭವನದ ಸಮೀಪ ಇರುವ ಜಿಲ್ಲಾ ನ್ಯಾಯಾಲಯವು ಪ್ರಶಸ್ತವಾಗಿದೆ ಎಂದು `ತಾತ್ಕಾಲಿಕ ಪೀಠ ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಿದ ನ್ಯಾಯಮೂರ್ತಿಗಳ ಸಮಿತಿ'ಯು ಮುಖ್ಯ ನ್ಯಾಯಮೂರ್ತಿ ಅವರಿಗೆ ವರದಿ ಸಲ್ಲಿಸಿತು. ಇದರೊಂದಿಗೆ ಉತ್ತರ ಕರ್ನಾಟಕ ಭಾಗದ ಜನತೆಗೆ `ಮರೀಚಿಕೆ'ಯಾಗಿದ್ದ ತಾತ್ಕಾಲಿಕ ಸಂಚಾರಿ ಪೀಠದ ಕನಸು ಬಹುತೇಕ ನನಸಾದಂತಾಯಿತು.

2006: ದೋಹಾ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಭಾರತದ ಮಹಿಳಾ ಆಥ್ಲೀಟ್ ಸೀಮಾ ಅಂಟಿಲ್ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಾ ಕಣದಲ್ಲಿ ಕಾಣಿಸಿಕೊಳ್ಳುವ ಮೊದಲೇ ಉದ್ದೀಪನ ಮದ್ದು ತೆಗೆದುಕೊಂಡದ್ದು ಸಾಬೀತಾಗಿದ್ದು, ಆಕೆಯನ್ನು ಕೂಟದಿಂದಲೇ ವಾಪಸ್ ಕಳುಹಿಸಲು ತಂಡದ ಆಡಳಿತ ತೀರ್ಮಾನಿಸಿತು.

2006: ಭಾರತದ ಖ್ಯಾತ ಚಿತ್ರಕಾರ ರಾಜಾ ರವಿವರ್ಮ ನಿಧನದ ಶತಮಾನದ ಬಳಿಕ ಅವರ ಅಪರೂಪದ ಚಿತ್ರಪಟ (ಸ್ಕೆಚ್ ಬುಕ್) ತಿರುವನಂತಪುರದಲ್ಲಿ ಪತ್ತೆಯಾಯಿತು. ಹಿಂದೂ ದೇವಾನುದೇವತೆಗಳು ಹಾಗೂ ಪೌರಾಣಿಕ ಪ್ರಸಂಗಗಳ ಬಗ್ಗೆ ರವಿವರ್ಮ ಬರೆದ ಚಿತ್ರಗಳು ಇಂದಿಗೂ ಅತ್ಯುತ್ತಮ ಎಂಬ ಹೆಗ್ಗಳಿಕೆಯನ್ನು ಹೊಂದಿವೆ.

2005: ಅಂತಾರಾಷ್ಟ್ರೀಯ ಖ್ಯಾತಿಯ ಪೊಗೊ ಟಿವಿ ಚಾನೆಲಿನ ಪ್ರತಿಷ್ಠಿತ `ಅಮೇಜಿಂಗ್ ಕಿಡ್ಸ್ ಪ್ರಶಸ್ತಿ'ಗೆ ಕನ್ನಡಿಗ ಬಾಲಕ ಶಶಾಂಕ ಎಂ. ಕಾಶಿ ಆಯ್ಕೆಯಾದ. ಬೆಂಗಳೂರಿನ ನಂದಿನಿ ಬಡಾವಣೆಯ ಪ್ರೆಸಿಡೆನ್ಸಿ ಶಾಲೆಯ 4ನೇ ತರಗತಿ ವಿದ್ಯಾಥರ್ಿ ಶಶಾಂಕ ಮೂಲತಃ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಹೊಡಬಟ್ಟೆ ಗ್ರಾಮದವನು. ಪೊಗೊ ಚಾನೆಲ್ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ಪೈಕಿ ಯಕ್ಷಗಾನ ನೃತ್ಯವನ್ನು ಪ್ರದರ್ಶಿಸಿ ಶಶಾಂಕ್ ಈ ಪ್ರಶಸ್ತಿಯನ್ನು ಗೆದ್ದುಕೊಂಡ.

2005: ಹಿರಿಯ ರಾಜಕಾರಣಿ, ಮಾಜಿ ಸಂಸದ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ವಿ. ಕೃಷ್ಣರಾವ್ (82) ಬೆಂಗಳೂರಿನಲ್ಲಿ ನಿಧನರಾದರು. 1972ರಲ್ಲಿ ಗೌರಿ ಬಿದನೂರು ಕ್ಷೇತ್ರದಿಂದ ವಿಧಾನಸಭೆಗೆ ಗೆದ್ದ ಅವರು ನಂತರ ಲೋಕಸಭೆಗೆ 1984-1996ರ ನಡುವಣ ಅವಧಿಯಲ್ಲಿ ಸತತ ಮೂರುಬಾರಿ ಗೆದ್ದಿದ್ದರು. ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹರಾವ್ ಅವರ ನಿಕಟವರ್ತಿ. 1992-95ರ ಅವಧಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಆರ್. ಎಲ್. ಜಾಲಪ್ಪ ಅವರನ್ನು ಎರಡು ಬಾರಿ ಪರಾಭವಗೊಳಿಸಿದ್ದರು. 1941-1976ರವರೆಗಿನ ಅವಧಿಯಲ್ಲಿ 35 ವರ್ಷ ಸ್ಥಳೀಯ ಗ್ರಾಮಪಂಚಾಯತ್ ಅಧ್ಯಕ್ಷರಾಗಿ, ಬಳಿಕ ಎಪಿಎಂಸಿ ಅಧ್ಯಕ್ಷರಾಗಿ, ಭೂ ಬ್ಯಾಂಕ್ ನಿರ್ದೇಶಕರಾಗಿ, ಗೌರಿಬಿದನೂರು ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

2005: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಅವರು ಏಷ್ಯಾ ಕ್ರಿಕೆಟ್ ಮಂಡಳಿ (ಎಸಿಸಿ) ಹಾಗೂ ಏಷ್ಯಾ ಕ್ರಿಕೆಟ್ ಕಾರ್ಪೊರೇಷನ್ನಿಗೆ (ಎಎಪಿಸಿ) ರಾಜೀನಾಮೆ ನೀಡಿದರು.

2005: ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರು ವಿಜಯ ಕರ್ನಾಟಕ ಪತ್ರಿಕೆಯ ಅತಿಥಿ ಸಂಪಾದಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಮೂಲಕ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗ ಒಂದಕ್ಕೆ ನಾಂದಿ ಹಾಡಿದರು. ಬ್ರಿಟಿಷ್ ಪತ್ರಿಕೋದ್ಯಮದಲ್ಲಿ ಇಂತಹ ಪ್ರಯೋಗ ನೂರಾರು ವರ್ಷಗಳಿಂದ ಇದ್ದರೂ ಭಾರತದಲ್ಲಿ ಜಾರಿಗೆ ಬಂದದ್ದು ಕಡಿಮೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಸಾನಿಯಾ ಮಿರ್ಜಾ, ಕಾದಂಬರಿಕಾರ ವಿಕ್ರಂ ಸೇಠ್. ಇನ್ಫೋಸಿಸ್ಸಿನ ನಾರಾಯಣಮೂರ್ತಿ ಅವರನ್ನು ಅತಿಥಿ ಸಂಪಾದಕರನ್ನಾಗಿ ಕರೆಸಿ ಅವರಿಂದ ಆಯಾ ದಿನದ ಸಂಚಿಕೆಗಳನ್ನು ಮಾಡಿಸಿತ್ತು. ಎಕನಾಮಿಕ್ ಟೈಮ್ಸ್ ನಂತರ ಹಣಕಾಸು ಸಚಿವ ಚಿದಂಬರಂ ಅವರನ್ನು ಅತಿಥಿ ಸಂಪಾದಕರನ್ನಾಗಿ ಆಹ್ವಾನಿಸಿತ್ತು.

1999: ಅಮೆರಿಕಾದ ಟೋರಿ ಮರ್ಡನ್ ಅಟ್ಲಾಂಟಿಕ್ ಸಾಗರವನ್ನು ಏಕಾಂಗಿಯಾಗಿ ದಾಟಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಭಾಜನರಾದರು. ಆಫ್ರಿಕಾ ಸಮೀಪದ ಕ್ಯಾನರಿ ದ್ವೀಪಗಳಿಂದ ಹೊರಟು 81 ದಿನಗಳ ಬಳಿಕ ಆಕೆ ಫ್ರೆಂಚ್ ಕ್ಯಾರಿಬಿಯನ್ ದ್ವೀಪವಾದ ಗುವಾಡೆಲೊಪ್ ನ್ನು ತಲುಪಿದರು.

1984: ಈದಿನ ಭಾರತದ ಪಾಲಿಗೆ ಹೃದಯ ವಿದ್ರಾವಕ ದುರಂತದ ದಿನ. ಭೋಪಾಲಿನ ಯೂನಿಯನ್ ಕಾರ್ಬೈಡ್ ಕೀಟನಾಶಕ ತಯಾರಿ ಕಾರ್ಖಾನೆಯ ಘಟಕದಿಂದ ಮಿಥೈಲ್- ಐಸೊಸಯನೇಟ್ ವಿಷಾನಿಲ ಸೋರಿಕೆಯಾಯಿತು. ಸೋರಿಕೆಯಾದ 40 ಟನ್ನಿಗೂ ಹೆಚ್ಚಿನ ವಿಷಾನಿಲ 40 ಚದರ ಕಿ.ಮೀ.ವರೆಗೆ ವ್ಯಾಪಿಸಿತು. 4000 ಮಂದಿ ಅದನ್ನು ಸೇವಿಸಿ ತತ್ ಕ್ಷಣವೇ ಅಸು ನೀಗಿದರು. ಇತರ 5 ಲಕ್ಷ ಮಂದಿ ವಿವಿಧ ಕಾಯಿಲೆಗಳಿಗೆ ತುತ್ತಾಗಿ ನರಳಿದರು. 1989ರಲ್ಲಿ ಯೂನಿಯನ್ ಕಾರ್ಬೈಡ್ 47ಕೋಟಿ ಡಾಲರುಗಳನ್ನು ಭಾರತ ಸರ್ಕಾರಕ್ಕೆ ಪರಿಹಾರ ರೂಪದಲ್ಲಿ ನೀಡುವುದಾಗಿ ಒಪ್ಪಿತು. ಇದಕ್ಕೆ ಪ್ರತಿಯಾಗಿ ಸರ್ಕಾರವು ಕಂಪೆನಿ ಹಾಗೂ ಅದರ ಅಧ್ಯಕ್ಷರ ವಿರುದ್ಧ ಹೂಡಲಾಗಿದ್ದ ಎಲ್ಲ ಕ್ರಿಮಿನಲ್ ಖಟ್ಲೆಗಳನ್ನು ಹಿಂತೆಗೆದುಕೊಳ್ಳಲು ಒಪ್ಪಿತು.

1967: ದಕ್ಷಿಣ ಆಫ್ರಿಕಾದ ಕೇಪ್ ಟೌನಿನಲ್ಲಿ ಡಾ. ಕ್ರಿಸ್ಟಿಯನ್ ಬರ್ನಾರ್ಡ್ ನೇತೃತ್ವದಲ್ಲಿ ಸರ್ಜನ್ ಗಳು ಮೊತ್ತ ಮೊದಲ ಮಾನವ ಹೃದಯ ಕಸಿ ಮಾಡಿದರು. ಹೃದಯ ಕಸಿ ಮಾಡಿಸಿಕೊಂಡ ಲೂಯಿ ವಾಶ್ಖನ್ ಸ್ಕಿ ಹೊಸ ಹೃದಯದೊಂದಿಗೆ 18 ದಿನಗಳ ಕಾಲ ಬದುಕಿದರು. ಅಪಘಾತದಲ್ಲಿ ಮೃತರಾದ ಡೆನಿಸ್ ದರ್ವಾಲಿ ಎಂಬವರ ಹೃದಯವನ್ನು ಈ ಕಸಿಗಾಗಿ ಪಡೆದುಕೊಳ್ಳಲಾಗಿತ್ತು.

1936: ಸಾಹಿತಿ ಲೀಲಾವತಿ ತೋರಣಗಟ್ಟಿ ಜನನ.

1934: ಸಾಹಿತಿ ಸೋಮಶೇಖರರಾವ್ ಎಚ್. ಜಿ. ಜನನ.

1934: ನಟ, ನಾಟಕಕಾರ, ಕಾದಂಬರಿಕಾರ ನವರತ್ನರಾಂ (3-12-1934ರಿಂದ 17-101991) ಅವರು ನವರತ್ನ ರಾಮರಾವ್ ಮತ್ತು ಪುಟ್ಟಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1926: ಅಗಾಥಾ ಕ್ರಿಸ್ಟೀ ತಮ್ಮ ಬೆರ್ಕ್ಷೈರಿನ ನಿವಾಸದಿಂದ ನಾಪತ್ತೆಯಾದರು. 10 ದಿನಗಳ ಬಳಿಕ ಯಾರ್ಕ್ ಷೈರಿನ ಆರೋಗ್ಯ ಕೇಂದ್ರವೊಂದರಲ್ಲಿ ಬೇರೆ ಹೆಸರಿನಲ್ಲಿ ಆಕೆ ಪತ್ತೆಯಾದರು. ತಾನು ಮರೆವಿಗೆ ಒಳಗಾದುದಾಗಿ ಆಕೆ ಹೇಳಿಕೊಂಡರು. ಆದರೆ ತನ್ನ ಪತಿ ಬೇರೊಬ್ಬ ಮಹಿಳೆಯ ಮನೆಗೆ ಆಗಾಗ ಹೋಗುತ್ತಿದ್ದುದನ್ನು ಗಮನಿಸಿ ಪ್ರತೀಕಾರ ತೀರಿಸಿಕೊಳ್ಳಲು ಆಕೆ ನಾಪತ್ತೆಯಾದಳು ಎಂದು ಶಂಕಿಸಲಾಯಿತು. ಈ ಘಟನೆಗೆ ಸಮರ್ಪಕ ವಿವರಣೆ ಲಭಿಸಲೇ ಇಲ್ಲ.

1923: ಸಾಹಿತಿ ವಿ.ಜಿ. ಭಟ್ಟ ಜನನ.

1889: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧ ಖುದೀರಾಮ್ ಬೋಸ್ (1889-1908) ಅವರು 1889ರ ಈ ದಿನ ಜನಿಸಿದರು. ಮ್ಯಾಜಿಸ್ಟ್ರೇಟ್ ಕಿಂಗ್ಸ್ ಫೋರ್ಡ್ ಮೇಲೆ ಬಾಂಬ್ ದಾಳಿ ನಡೆಸಿದ್ದಕ್ಕಾಗಿ ಬೋಸ್ ಅವರನ್ನು 1908ರಲ್ಲಿ ಗಲ್ಲಿಗೇರಿಸಲಾಯಿತು.

1884: ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ (1884-1963) ಹುಟ್ಟಿದ ದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Fashion TV Live

Guest Book .. Entirely for You..!

Visit over?..See.. Now you became a Twinkle Star !